ರಾಮಕುಂಜ: ಶ್ರೀ ಮಹಾಗಣಪತಿ ಸೇವಾ ಸಮಿತಿ ಗಣೇಶನಗರ ಕೊಯಿಲ-ರಾಮಕುಂಜ ಇದರ ವತಿಯಿಂದ 45ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆ.27 ಮತ್ತು 28ರಂದು ರಾಮಕುಂಜ ಗಣೇಶನಗರ ಶ್ರೀ ಮಹಾಗಣಪತಿ ಓಂ ಕ್ರೀಡಾಂಗಣದ ದಿ| ಆರ್ವಾರ ಸುಬ್ಬಣ್ಣ ಶೆಟ್ಟಿ ನಿರ್ಮಿತ ಶ್ರೀ ಮಹಾಗಣಪತಿ ಕಟ್ಟೆಯಲ್ಲಿ ನಡೆಯಿತು.

ಆ.27ರಂದು ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಶ್ರೀ ಮಹಾಗಣಪತಿ ದೇವರ ಪ್ರತಿಷ್ಠೆ, ಉಷ:ಕಾಲ ಪೂಜೆ ನಡೆಯಿತು. ಬಳಿಕ ಶ್ರೀ ಮಹಾಗಣಪತಿ ಹೋಮ, ಭಜನೆ,ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು. ಅಪರಾಹ್ನ ಶ್ರೀ ದೇವರಿಗೆ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ಶ್ರೀ ಮಹಾಗಣಪತಿ ದೇವರಿಗೆ ರಂಗಪೂಜೆ ನಡೆಯಿತು. ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ನಿವೃತ್ತ ಮುಖ್ಯಗುರು ಕೆ.ಯಶವಂತ ರೈ ಧಾರ್ಮಿಕ ಉಪನ್ಯಾಸ ನೀಡಿದರು. ಹಿರಿಯ ವೈದಿಕರಾದ ಶ್ರೀಕಾಂತ ಕಲ್ಲೂರಾಯ ಬಾಜಳ್ಳಿ ಅಧ್ಯಕ್ಷತೆ ವಹಿಸಿದ್ದರು. ರಾಮಕುಂಜ ಹಾಲು ಉತ್ಪಾದಕರ ಸಹಕಾರ ಸಂಘದ ನಿವೃತ್ತ ಕಾರ್ಯದರ್ಶಿ ಚಿತ್ತರಂಜನ್ ರಾವ್, ಪಾಕತಜ್ಞ ಶ್ರೀಧರ ಬಟ್ಟೋಡಿ, ನಾಟಿವೈದ್ಯೆ ರೇವತಿ ವಳೆಂಜ, ಪ್ರಸೂತಿತಜ್ಞೆ ಜಾನಕಿ ಅಲೆಕ್ಕ, ನಾಟಿ ವೈದ್ಯ ಕೊಟ್ಯಪ್ಪ ಪೂಜಾರಿ ಖಂಡಿಗ ಅವರನ್ನು ಸನ್ಮಾನಿಸಲಾಯಿತು. ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಶರತ್ ಕೆದಿಲ ಸ್ವಾಗತಿಸಿದರು. ಹರ್ಷಿತ್ ಉರ್ಕ ವಂದಿಸಿದರು. ಮಧುಶ್ರೀ ನಿರೂಪಿಸಿದರು.
ಆ.28ರಂದು ಬೆಳಿಗ್ಗೆ ಶ್ರೀ ಮಹಾಗಣಪತಿ ದೇವರ ಉಷ:ಕಾಲ ಪೂಜೆ, ಶ್ರೀ ಮಹಾಗಣಪತಿ ಹೋಮ, ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ವಿದ್ಯಾರ್ಥಿಗಳಿಂದ ಕಾರ್ಯಕ್ರಮ ವೈವಿಧ್ಯ, ಧರ್ಮಪಾಲ ರಾವ್ ಕಜೆ ಪ್ರಾಯೋಜಕತ್ವದಲ್ಲಿ ಕಬಡ್ಡಿ ಪಂದ್ಯಾಟ ನಡೆಯಿತು. ಸಂಜೆ ಶ್ರೀ ಮಹಾಗಣಪತಿ ದೇವರ ಶೋಭಾಯಾತ್ರೆ ಆತೂರಿನಿಂದ ಕೆಮ್ಮಾರದವರೆಗೆ ವಿವಿಧ ಭಜನಾ ತಂಡ, ಚೆಂಡೆ, ಟ್ಯಾಬ್ಲೋ ಜೊತೆ ಸಾಗಿ ಕೆಮ್ಮಾರ ಹೊಳೆಯಲ್ಲಿ ಜಲಸ್ತಂಭನ ಮಾಡಲಾಯಿತು.