ಪುತ್ತೂರು: ಶ್ರೀ ಪ್ರಗತಿ ವಿಸ್ತಾರ ಏವಿಯೇಷನ್ ಹಾಗೂ ಮ್ಯಾನೆಜ್ಮೆಂಟ್ ಕಾಲೇಜಿನಲ್ಲಿ ಓಣಂ ಹಾಗೂ ಶಿಕ್ಷಕರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಧ್ಯಾಕ್ಷರು, ಪ್ರಾಂಶುಪಾಲರು, ಆಡಳಿತ ಅಧಿಕಾರಿಗಳು, ಅಧ್ಯಾಪಕರು ಹಾಗೂ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದರು. ವಿದ್ಯಾರ್ಥಿಗಳು ಉತ್ಸಾಹದಿಂದ ಪೂಕಳಂ ಸ್ಪರ್ಧೆಯಲ್ಲಿ ಪಾಲ್ಗೊಂಡು, ವಿವಿಧ ಬಣ್ಣದ ಹೂಗಳಿಂದ ಆಕರ್ಷಕ ವಿನ್ಯಾಸಗಳನ್ನು ಮಾಡಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಪೂಕಳಂ ವಿನ್ಯಾಸಗಳು ಸೃಜನಶೀಲತೆ ಹಾಗೂ ತಂಡದ ಏಕತೆಯನ್ನು ತೋರಿಸಿತು. ಉತ್ತಮ ಪೂಕಳಂಗಳಿಗೆ ಬಹುಮಾನಗಳನ್ನು ನೀಡಲಾಯಿತು. ತದನಂತರ ವಿದ್ಯಾರ್ಥಿನಿಯರು ಕೇರಳದ ಸಾಂಪ್ರದಾಯಿಕ ತಿರುವಾದಿರಂ ನೃತ್ಯವನ್ನು ಪ್ರದರ್ಶಿಸುವ ಮೂಲಕ ಹಬ್ಬದ ಮೆರುಗನ್ನು ಹೆಚ್ಚಿಸಿದರು.

ಹಬ್ಬದ ವಿಶೇಷ ಆಕರ್ಷಣೆಯಾಗಿ ಓಣಂ ಸದ್ಯವನ್ನು ಆಯೋಜಿಸಲಾಗಿತ್ತು. ಸಾಂಪ್ರದಾಯಿಕ ರುಚಿಕರ ಅಡುಗೆಗಳೊಂದಿಗೆ ಎಲ್ಲರೂ ಒಟ್ಟಾಗಿ ಕೂತು ಊಟ ಮಾಡಿದರು. ಈ ಮೂಲಕ ಒಗ್ಗಟ್ಟಿನ ಸಹಕಾರದ ಹಾಗೂ ಸಾಂಸ್ರೃತಿಕ ವೈವಿಧ್ಯದ ಸಂದೇಶವನ್ನು ಹಬ್ಬವು ಸಾರಿತು. ಕಾರ್ಯಕ್ರಮದ ಅಂಗವಾಗಿ ಇದೇ ವೇಳೆ ಶಿಕ್ಷಕರ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಯಿತು. ವಿದ್ಯಾರ್ಥಿಗಳು ತಮ್ಮ ಗುರುಗಳಿಗಾಗಿ ಹಲವು ಮನರಂಜನೆ ಸ್ಪರ್ಧೆಗಳನ್ನು ಹಾಗೂ ಸಾಂಸ್ರೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ಜೊತೆಗೆ, ಅವರ ತ್ಯಾಗ ಮತ್ತು ಮಾರ್ಗದರ್ಶನವನ್ನು ವಿದ್ಯಾರ್ಥಿಗಳು ಕೊಂಡಾಡಿದರು.