ನೆಲ್ಯಾಡಿ: ಬಜತ್ತೂರು ಗ್ರಾ.ಪಂ.ನ 2024-25ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಕೇಂದ್ರದ 15ನೇ ಹಣಕಾಸು ಯೋಜನೆ ಮತ್ತು ರಾಜ್ಯ ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮಸಭೆ ಗ್ರಾ.ಪಂ.ಸಭಾಭವನದಲ್ಲಿ ನಡೆಯಿತು.
ಕೃಷಿ ಅಧಿಕಾರಿ ಯಶಸ್ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಉದ್ಯೋಗ ಖಾತರಿ ಯೋಜನೆಯ ತಾಲೂಕು ಸಂಯೋಜಕ ಚಂದ್ರಶೇಖರ ಅವರು ಯೋಜನೆಯ ಕುರಿತು ಮಾಹಿತಿ ನೀಡಿ, ಗ್ರಾಮಸ್ಥರು ಯೋಜನೆಯ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡು ಕಾಮಗಾರಿ ಅನುಷ್ಠಾನಗೊಳಿಸಬೇಕು ಎಂದು ಹೇಳಿದರು.
ಗ್ರಾ.ಪಂ.ಅಧ್ಯಕ್ಷ ಗಂಗಾಧರ ಪಿ.ಎನ್.ಅವರು ಮಾತನಾಡಿ, ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮಸ್ಥರಿಗೆ ತಮ್ಮ ಸ್ವಂತ ಜಮೀನಿನಲ್ಲಿ ಕೆಲಸ ನಿರ್ವಹಿಸಲು ಅವಕಾಶವಿದೆ. ಯೋಜನೆಯ ಬಗ್ಗೆ ಗ್ರಾ.ಪಂ.ನಿಂದ ಮಾಹಿತಿ ಪಡೆದುಕೊಂಡು ಸದುಪಯೋಗ ಪಡೆದುಕೊಳ್ಳುವಂತೆ ಹೇಳಿದರು. ತಾಂತ್ರಿಕ ಸಹಾಯಕರಾದ ಶ್ರೀಲಕ್ಷ್ಮೀ, ಪ್ರಶಾಂತಿ ಬಿ.ಎಸ್.ಮಾಹಿತಿ ನೀಡಿದರು.

ಗ್ರಾ.ಪಂ.ಉಪಾಧ್ಯಕ್ಷೆ ವಿಮಲ, ಸದಸ್ಯರಾದ ಸ್ಮಿತಾ, ಪ್ರೆಸಿಲ್ಲಾ ಡಿ.ಸೋಜ, ರತ್ನ, ಯಶೋಧ, ಮಾಧವ ಪೂಜಾರಿ, ಗಂಗಾಧರ ಕೆ.ಎಸ್., ಸಂತೋಷ್ಕುಮಾರ್ ಪಿ., ಮೋನಪ್ಪ ಗೌಡ, ಉಮೇಶ್ ಒಡ್ರಪಾಲು, ಪ್ರೇಮಾ ಬಿ., ಭಾಗೀರಥಿ, ವಿಮಲ ಉಪಸ್ಥಿತರಿದ್ದರು. ಗ್ರಾಮ ಸಂಪನ್ಮೂಲ ವ್ಯಕ್ತಿಗಳಾದ ರಮೇಶ, ಕೌಶಲ್ಯ ಬಿ., ಹೇಮಲತಾ, ಕಾರ್ತಿಕ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ಪಿಡಿಒ ಚಂದ್ರಮತಿ ಕೆ.,ಸ್ವಾಗತಿಸಿ, ನಿರೂಪಿಸಿದರು. ಕಾರ್ಯದರ್ಶಿ ಕೊರಗಪ್ಪ ನಾಯ್ಕ್ ಕೆ.ವಂದಿಸಿದರು. ಗ್ರಾ.ಪಂ.ಸಿಬ್ಬಂದಿಗಳು ಸಹಕರಿಸಿದರು.
56.84 ಲಕ್ಷ ರೂ.ಖರ್ಚು
2024-25ನೇ ಸಾಲಿನಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 157 ಕಾಮಗಾರಿಗಳು ನಡೆದಿದ್ದು 40,09,361 ರೂ.ಕೂಲಿ ಹಾಗೂ 16,75,617 ರೂ. ಸಾಮಾಗ್ರಿ ಮೊತ್ತ ಸೇರಿ ಒಟ್ಟು ರೂ.56,84,988 ರೂ.ಖರ್ಚು ಆಗಿದೆ. 11,489 ಮಾನವ ದಿನ ಸೃಜನೆಯಾಗಿದೆ.
ಕೇಂದ್ರ/ರಾಜ್ಯ ಹಣಕಾಸು ಯೋಜನೆ ಖರ್ಚು:
2024-25ನೇ ಸಾಲಿನ ಕೇಂದ್ರ ಸರಕಾರದ 15ನೇ ಹಣಕಾಸು ಯೋಜನೆಯಡಿ 29 ಕಾಮಗಾರಿ ನಡೆದಿದ್ದು 40,99,518 ರೂ.ಖರ್ಚು ಆಗಿದೆ. ಕಳೆದ 5 ವರ್ಷಗಳ ಅವಧಿಯಲ್ಲಿ ರಾಜ್ಯ ಹಣಕಾಸು ಯೋಜನೆಯಡಿ ಜಿ.ಪಂ.ನ 71,670 ರೂ.ಅನುದಾನದಲ್ಲಿ 1 ಕಾಮಗಾರಿ ಹಾಗೂ ತಾ.ಪಂ.ನ 11,38,579 ರೂ.ಅನುದಾನದಲ್ಲಿ 11 ಕಾಮಗಾರಿ ನಡೆದಿದೆ ಎಂದು ಸಭೆಗೆ ಮಾಹಿತಿ ನೀಡಲಾಯಿತು.