





ಅಡಿಕೆಯನ್ನು ಗೊನೆಯಿಂದ ಬಿಡಿಸುವ, ಕಾಳುಮೆಣಸು ಸ್ವಚ್ಛಗೊಳಿಸುವ ಯಂತ್ರ ಲೋಕಾರ್ಪಣೆ
ಬೀರಮಲೆಯಲ್ಲಿರುವ ಪ್ರಜ್ಞಾ ಆಶ್ರಮಕ್ಕೆ ನೆಟ್ ಬೇಲಿ ಕೊಡುಗೆ


ಹುಟ್ಟುಹಬ್ಬದಲ್ಲಿ ಬೆಳಕನ್ನು ನೀಡುವ ಸಂದೇಶ ಮಾದರಿ – ಡಾ.ಶ್ರೀಪ್ರಕಾಶ್
ಕೇಶವರ ದೂರದೃಷ್ಟಿ ಸಮಾಜಕ್ಕೆ ಆದರ್ಶ – ಸತೀಶ್ ಭಟ್
ಅನೇಕರ ಜೀವನದಲ್ಲಿ ಬೆಳಕು ನೀಡಿದವರು ಕೇಶವರು -ಝೇವಿಯರ್ ಡಿಸೋಜ
ಸಮಾಜದಲ್ಲಿ ಪ್ರೀತಿಯಿಂದ ಗೆಲ್ಲಲು ಸಾಧ್ಯ -ಶಿವರಾಮ ಏನೆಕಲ್ಲು
ಕೇಶವಣ್ಣನಿಂದ ಸಮಾಜಕ್ಕೆ ಮಾದರಿ ಕೊಡುಗೆ – ಪ್ರಮೋದ್ ಕೆ ಕೆ
ದೇವರು ಮೆಚ್ಚುವ ಕೆಲಸ -ಚೇತನ್ ಆನೆಗುಂಡಿ
ನನಗಿರುವ ಯೋಗ ಬೇರೆ ಯಾರಿಗೂ ಇಲ್ಲ -ಕೇಶವ ಅಮೈ
ಮಾಲಕ ಕಾರ್ಮಿಕರ ಬೇಧಭಾವ ಇಲ್ಲದ ಸಂಸ್ಥೆ -ಮನೋಜ್





ಪುತ್ತೂರು: ‘ಮನುಷ್ಯನ ದೇಹಕ್ಕೆ ಸಾವು ಬರುತ್ತದೆ. ಆದರೆ, ಕಣ್ಣಿಗೆ ಸಾವಿಲ್ಲ. ಸತ್ತ ನಂತರ ಕಣ್ಣುಗಳನ್ನು ಸಂರಕ್ಷಿಸಿ ಸಕಾಲದಲ್ಲಿ ದಾನ ಮಾಡಿದರೆ ಮತ್ತೊಬ್ಬರ ಬಾಳಿನ ಅಂಧಕಾರ ಹೋಗಲಾಡಿಸಬಹುದು’. ನೇತ್ರದಾನಕ್ಕೆ ಮುಂದಾಗುವ ಜತೆಗೆ ಇತರರನ್ನೂ ಪ್ರೇರೇಪಿಸಿದರೆ ಅಂಧತ್ವ ನಿವಾರಿಸಬಹುದು. ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಮೂಲಕ ತಮ್ಮ ಅಂತರಂಗದಲ್ಲಿ ದೃಷ್ಟಿಯನ್ನು ಹೊಂದಿರುವ ಎಸ್.ಆರ್.ಕೆ.ಲ್ಯಾಡರ್ಸ್ನ ಮಾಲಕ ಕೇಶವ ಅಮೈ ಅವರ ಹುಟ್ಟು ಹಬ್ಬದ ಸಲುವಾಗಿ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳು ಸಹಿತ ಶಿಬಿರಕ್ಕೆ ಬಂದವರ ಪೈಕಿ ಸುಮಾರು 66 ಮಂದಿ ನೇತ್ರದಾನ ಪತ್ರಕ್ಕೆ ಸಹಿ ಹಾಕಿ ಮಾಲಕರ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ. ಈ ಕಾರ್ಯಕ್ರಮ ಎಲ್ಲರಿಗೂ ಮಾದರಿ ಕಾರ್ಯಕ್ರಮವಾಗಿ ಮೂಡಿ ಬಂದಿದೆ.
ನ.7ರಂದು ಎಸ್ಆರ್ಕೆ ಲ್ಯಾಡರ್ಸ್ನ ಮಾಲಕ ಕೇಶವ ಅಮೈ ಅವರ ಹುಟ್ಟುಹಬ್ಬದ ಸಲುವಾಗಿ ಸಂಸ್ಥೆಯಲ್ಲಿ ಬೆಳಗ್ಗೆ ನೇತ್ರದಾನ ನೋಂದಾವಣೆ ಶಿಬಿರ ಮತ್ತು ಅಡಿಕೆಯನ್ನು ಗೊನೆಯಿಂದ ಬಿಡಿಸುವ, ಕಾಳುಮೆಣಸು ಸ್ವಚ್ಛ ಮಡುವ ಯಂತ್ರ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ಬಳಿಕ ಬೀರುಮಲೆಯಲ್ಲಿರುವ ಪ್ರಜ್ಞಾ ಆಶ್ರಮಕ್ಕೆ ನೆಟ್ ಬೇಲಿ ಕೊಡುಗೆಯನ್ನು ಉದ್ಘಾಟಿಸಲಾಯಿತು. ನಿವೃತ್ತ ಯುವಜನಸೇವಾ ಕ್ರೀಡಾಧಿಕಾರಿ ಮಾಧವ ಬಿ.ಕೆ ಅವರು ಬೇಲಿ ಉದ್ಘಾಟನೆ ನೆರವೇರಿಸಿದರು. ಬೆಳಗ್ಗೆ ಎಸ್ಆರ್ಕೆ ಸಂಸ್ಥೆಯಲ್ಲಿ ಶಿಬಿರದ ಉದ್ಘಾಟನೆ ಕಾರ್ಯಕ್ರಮ ನಡೆಯಿತು.

ಹುಟ್ಟುಹಬ್ಬದಲ್ಲಿ ಬೆಳಕನ್ನು ನೀಡುವ ಸಂದೇಶ ಮಾದರಿ:
ರೋಟರಿ ಕ್ಲಬ್ ಪುತ್ತೂರು ಇದರ ಅಧ್ಯಕ್ಷ ಡಾ.ಶ್ರೀಪ್ರಕಾಶ್ ಅವರು ಮಾತನಾಡಿ, ಬದುಕನ್ನು ನೋಡುವ ದೃಷ್ಟಿ ಒಬ್ಬೊಬ್ಬರದ್ದು ಒಂದೊಂದು ರೀತಿಯಲ್ಲಿರಬಹುದು. ಆದರೆ ತಾನು ಚೆನ್ನಾಗಿರಬೇಕು, ಇತರರು ಚೆನ್ನಾಗಿರಬೇಕೆಂಬ ಆಲೋಚನೆ ಕೇಶವರದ್ದು. ಹಾಗಾಗಿ ಅವರು ತನ್ನ ಹುಟ್ಟುಹಬ್ಬದಲ್ಲಿ ಬದುಕಲ್ಲಿ ಬೆಳಕನ್ನು ನೀಡುವ ಸಂದೇಶ ನೀಡಿದ್ದಾರೆ. ಪ್ರಸಾದ್ ನೇತ್ರಾಲಯದ ಮೂಲಕ ದೃಷ್ಟಿ ಕೊಡುವ ನಿಟ್ಟಿನಲ್ಲಿ ನೇತ್ರದಾನದ ನೋಂದಾವಣೆ ಮಾಡುವ ಕಾರ್ಯಕ್ರಮ ಎಲ್ಲರಿಗೂ ಮಾದರಿ ಎಂದ ಅವರು ನೇತ್ರದಾನ ಯಾವ ರೀತಿ ಮಾಡಬಹುದು ಮತ್ತು ಯಾರೆಲ್ಲ ನೇತ್ರದಾನ ಮಾಡಬಹುದು ಹಾಗು ಅದಕ್ಕೆ ಯಾವೆಲ್ಲ ಕಂಡೀಷನ್ ಗಳಿವೆ ಎಂಬ ಕುರಿತು ಮಾಹಿತಿ ನೀಡಿದರು. ಒಬ್ಬ ವ್ಯಕ್ತಿ ತನ್ನ ದೇಹದ ಯಾವುದೇ ಭಾಗ ದಾನ ಮಾಡಿದರೂ ಅದು ಯಾವುದು ಕೊನೆಯಾಗುವುದಿಲ್ಲ ಎಂದರು.
ಕೇಶವರ ದೂರದೃಷ್ಟಿ ಸಮಾಜಕ್ಕೆ ಆದರ್ಶ:
ರಾಜ್ಯಪ್ರಶಸ್ತಿ ವಿಜೇತ ಶಿಕ್ಷಕ ಸತೀಶ್ ಭಟ್ ಅವರು ಮಾತನಾ,ಡಿ ಕೇಶವ ಅಮೈ ಅವರ ದೂರ ದೃಷ್ಟಿ ಸಮಾಜಕ್ಕೆ ಆದರ್ಶ. ಸಮಾಜಮುಖಿಯಾಗಿ ಹೇಗೆ ಕೆಲಸ ಮಾಡುತ್ತೆವೋ ಅಷ್ಟನ್ನು ನಾವು ಬದುಕಿನಲ್ಲಿ ಕಂಡುಕೊಳ್ಳುತ್ತೇವೆ. ತಮ್ಮ ಜೀವನದದಲ್ಲಿ ಕೇಶವರು ಮಾತ್ರವಲ್ಲ ಅವರ ಸಿಬ್ಬಂದಿಗಳನ್ನು ಬೆಳೆಸಿದ್ದಾರೆ. ಅಂತಹ ಮಾಲಕರ ಚಿಂತನೆ ದೊಡ್ಡ ವಿಷಯ. ನಾನು ಪೊರೆ ಚಿಕಿತ್ಸೆ ಮಾಡಿ ಸ್ವಲ್ಪ ಸಮಯ ಪಟ್ಟ ಅನುಭವನ್ನು ನೋಡಿದರೆ ಕೇಶವರು ಅದನ್ನು ಮೀರಿ ನಿಂತು ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇಂತಹ ಕಾರ್ಯಕ್ರಮ ಸಮಾಜಕ್ಕೆ ಲಾಭವಾಗಲಿ ಎಂದರು.
ಅನೇಕರ ಜೀವನದಲ್ಲಿ ಬೆಳಕು ನೀಡಿದವರು ಕೇಶವರು:
ಅಡಿಕೆಯನ್ನು ಗೊನೆಯಿಂದ ಬಿಡಿಸುವ ಯಂತ್ರವನ್ನು ಲೋಕಾರ್ಪಣೆ ಮಾಡಿದ ಮಹಿಳಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಝೇವಿಯರ್ ಡಿ ಸೋಜ ಅವರು ಮಾತನಾಡಿ, ಕೇಶವ ಅಮೈ ಅವರ ಸಂಪರ್ಕಕ್ಕೆ ಬಂದಾಗ ಮಾತ್ರ ಅವರ ಬಗ್ಗೆ ಗೊತ್ತಾಗುವುದು. ಆಗ ನಮ್ಮಲ್ಲಿ ಸಾಕಷ್ಟು ಬದಲಾವಣೆ ಆಗುತ್ತದೆ. ಮಾನವೀಯ ವರ್ತನೆ ಎಲ್ಲ ಕಡೆ ಸಾದ್ಯವಿಲ್ಲ ಆದರೆ ಅದನ್ನು ಮೀರಿ ಕೆಲಸ ಮಾಡಲು ಕೇಶವ ಅವರು ಮಾದರಿಯಾಗಿದ್ದಾರೆ. ಕೇಶವ ಅವರು ಅನೇಕರ ಜೀವನದಲ್ಲಿ ಬೆಳಕಾಗಿದ್ದಾರೆ ಎಂದರು.
ಸಮಾಜದಲ್ಲಿ ಪ್ರೀತಿಯಿಂದ ಗೆಲ್ಲಲು ಸಾಧ್ಯ :
ಕಾಳುಮೆಣಸು ಸ್ವಚ್ಚಗೊಳಿಸುವ ಯಂತ್ರವನ್ನು ಲೋಕಾರ್ಪಣೆ ಮಾಡಿದ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಶಿವರಾಮ ಏನೆಕಲ್ಲು ಅವರು ಮಾತನಾಡಿ, ಶಿಷ್ಯಂದಿರು ಉನ್ನತ ಸ್ಥಾನಕ್ಕೆ ತನ್ನನ್ನು ತೊಡಗಿಸಿಕೊಂಡಾಗ ನಾವು ದೂರದಿಂದ ನೋಡಿ ಸಂತೋಷ ಪಡುತ್ತೇವೆ. ಇವತ್ತು ಕೇಶವರು ಸಾಕ್ಷಿಯಾಗಿದ್ದಾರೆ. ಆತನ ಸಾಧನೆಯಿಂದಾಗಿ ಭಾಗವಹಿಸುವ ಯೋಗ ನಮಗೂ ಬಂದಿದೆ. ಉಳಿದವರ ಕಷ್ಟಗಳಿಗೆ ನೆರವಾಗುವ ಮೂಲಕ ಕೇಶವರು ಸಮಾಜದಲ್ಲಿ ಗರ್ವದಿಂದ ಗೆಲ್ಲಲು ಸಾಧ್ಯವಿಲ್ಲ. ಪ್ರೀತಿಯಿಂದ ಗೆಲ್ಲಲು ಸಾಧ್ಯ ಎಂದು ತೋರಿಸಿಕೊಟ್ಟಿದ್ದಾರೆ. ಅವರ ಎಲ್ಲಾ ಸಮಾಜಮುಖಿ ಗುಣಗಳು ನಮಗೆ ಮಾದರಿ ಎಂದರು.

ಕೇಶವಣ್ಣನಿಂದ ಸಮಾಜಕ್ಕೆ ಮಾದರಿ ಕೊಡುಗೆ:
ನೇತ್ರದಾನದ ಪ್ರಥಮ ನೋಂದಾವಣೆ ಮಾಡಿಕೊಂಡ ಸುಬ್ರಹ್ಮಣ್ಯ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಪ್ರಮೋದ್ ಕೆ.ಕೆ ಅವರು ಮಾತನಾಡಿ, ಕೇಶವಣ್ಣ ಅವರು ಸಮಾಜಕ್ಕೆ ಮಾದರಿ ಕೆಲಸ ಮಾಡಿ ತಮ್ಮ ಜೀವನದ ಸಾರ್ಥಕತೆಯನ್ನು ಕಂಡು ಕೊಂಡಿದ್ದಾರೆ. ಅವರ ಒಡನಾಟದಿಂದ ನಾವೆಲ್ಲ ಒಳ್ಳೆಯ ಕೆಲಸ ಮಾಡೋಣ. ಇವತ್ತು ದೇಶದಲ್ಲಿ 18ಲಕ್ಷ ಅಂದರಿದ್ದಾರೆ. ಅವರಲ್ಲೂ 10ಲಕ್ಷ ಮಂದಿ ಮಕ್ಕಳು. ಅವರ ಬಗ್ಗೆ ನಾವು ಚಿಂತೆ ಮಾಡಿ ನೇತ್ರದಾನಕ್ಕೆ ನೋಂದಣೆ ಮಾಡೋಣ ಎಂದರು.
ದೇವರು ಮೆಚ್ಚುವ ಕೆಲಸ:
ಸ್ಪಂದನಾ ಸಮುದಾಯ ಸಹಕಾರಿ ಸಂಘದ ಉಪಾಧ್ಯಕ್ಷ ಚೇತನ್ ಆನೆಗುಂಡಿ ಅವರು ಮಾತನಾಡಿ, ನಮಗಿಂತ ಭಿನ್ನವಾಗಿ ಅಲೋಚನೆ ಮಾಡುವವರು ಕೇಶವಣ್ಣ. ಅವರ ನೇತೃತ್ವದಲ್ಲಿ ನಡೆದ ರಜತ ಸಂಭ್ರಮ ಈಗಲೂ ಮನಸ್ಸಿನಲ್ಲಿದೆ. ಅವರ ಯೋಜನೆ ನಮಗೆ ಊಹಿಸಲು ಸಾಧ್ಯವಿಲ್ಲ. ಇವತ್ತು ದೇವರು ಮೆಚ್ಚುವ ಕೆಲಸ ಮಾಡಿದ್ದಾರೆ. ಅವರ ಆಲೋಚನೆಯಿಂದ ಸಮಾಜಕ್ಕೆ ಇನ್ನಷ್ಟು ಕೊಡುಗೆ ಸಿಗಲಿ ಎಂದು ಹೇಳಿದರು.
ನನಗಿರುವ ಯೋಗ ಬೇರೆ ಯಾರಿಗೂ ಇಲ್ಲ:
ಎಸ್ಆರ್ಕೆ ಲ್ಯಾಡರ್ಸ್ ಮಾಲಕ ಕೇಶವ ಅಮೈ ಅವರು ಮಾತನಾಡಿ, ಎಸ್.ಆರ್.ಕೆ. ಪರಿವಾರ ಒಂದು ಯೋಗ. ಇಂತಹ ಆತ್ಮೀಯ, ಹಿತೈಷಿಗಳು, ಮಿತ್ರರು, ಬಂಧುಗಳನ್ನು ಪಡೆದಿರುವ ನನಗೆ ಚೆನ್ನಾಗಿರುವ ಯೋಗ ಇದೆ. ಹುಟ್ಟು ಹಬ್ಬದ ದಿನ ಸಮಾಜಮುಖಿ ಕಾರ್ಯದ ಕುರಿತು ಟೀಮ್ ಎಸ್ಆರ್ಕೆ ಆಲೋಚನೆ ಹೊರತು ನನ್ನ ಆಲೋಚನೆ ಅಲ್ಲ. ಈ ಯೋಜನೆ, ಯೋಚನೆಯ ಕ್ರೆಡಿಟ್ ಅವರಿಗೆ ಸೇರಿದ್ದು ಎಂದರು.
ಮಾಲಕ ಕಾರ್ಮಿಕರ ಬೇಧಭಾವ ಇಲ್ಲದ ಸಂಸ್ಥೆ:
ಎಸ್ಆರ್ಕೆ ಲ್ಯಾಡರ್ಸ್ ಸಂಸ್ಥೆಯ ಸಿಬ್ಬಂದಿ ಮನೋಜ್ ಬಿ ಅವರು ಟೀಮ್ ಎಸ್ಆರ್ಕೆ ವತಿಯಿಂದ ಮಾಲಕರಿಗೆ ಹುಟ್ಟು ಹಬ್ಬದ ಶುಭಾಶಯ ನೀಡಿ ಮಾತನಾಡಿ, ದೃಢ ನಿರ್ಧಾರದ ಸಾಧನೆ ಕೇಶವಣ್ಣ ಅವರದ್ದು. ಅವರ ಸಾಧನೆ ನಮಗೆ ಸ್ಪೂರ್ತಿ.
ಇಲ್ಲಿ ಮಾಲಕ ಕಾರ್ಮಿಕರ ಬೇಧಬಾವ ಇಲ್ಲ. ನಮಗೆ ಯಾವುದೇ ತೊಂದರೆ ಆದರೂ ಪರಿಹಾರ ಸಿಗುತ್ತದೆ. ಇಲ್ಲಿ ಯಾರೂ ಮೇಲೂ ಅಲ್ಲ ಕೀಳೂ ಅಲ್ಲ. ಮಾಲಕರ 100 ನೇ ವರ್ಷವೂ ಇದೇ ಸಂಸ್ಥೆಯಲ್ಲಿ ಆಚರಿಸುವ ಯೋಗ ನಮಗೆ ಕೂಡಿ ಬರಲಿ ಎಂದರು.
ಕಾರ್ಯಕ್ರಮದಲ್ಲಿ ಕೇಕ್ ಕಟ್ ಮಾಡುವ ಮೂಲಕ ಕೇಶವ ಅಮೈ ಮತ್ತು ಕೇಶವ ಅಮೈ ಅವರ ಸಹೋದರಿ ಶ್ರೀಲತಾ ಅವರಿಗೂ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಲಾಯಿತು. ರಕ್ಷಿತ್ ಕಬಕ, ಪ್ರವೀಣ್, ಗಣೇಶ್ ಕಬಕ, ಬಾಲಕೃಷ್ಣ ಗೌಡ, ಕೀರ್ತೇಶ್, ಸುಮಾ, ಕೀರ್ತನ್, ಅಶ್ವಿನಿ, ಲಿವಿಟ ಪಿಂಟೊ, ಅತಿಥಿಗಳನ್ನು ಗೌರವಿಸಿದರು. ದೀಪಕ್ ಪ್ರಾರ್ಥಿಸಿದರು. ರಕ್ಷಿತ್ ಆಚಾರ್ಯ ಸ್ವಾಗತಿಸಿದರು. ಅಶ್ವಿನಿ ವಂದಿಸಿದರು. ಕಾರ್ಯಕ್ರಮ ಯೋಜನೆಯ ರೂವಾರಿ ದಿನೇಶ್ ಕಾರ್ಯಕ್ರಮ ನಿರೂಪಿಸಿದರು. ಪ್ರಮೋದ್ ಕೆ.ಕೆ ಅವರ ಪತ್ನಿ ವಿಜಯಲಕ್ಷ್ಮೀ, ಕೇಶವ ಅಮೈ ಅವರ ಪುತ್ರ ಗಗನ್ ಕೇಶವ್, ಕೇಶವ ಅಮೈ ಅವರ ಸಹೋದರಿ ಹೇಮಾವತಿ , ಶ್ರೀಲತಾ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ಪ್ರಸಾದ್ ನೇತ್ರಾಲಯದ ಮನೋಹರ್ ಅವರು ನೇತ್ರದಾನ ಶಿಬಿರದ ನೋಂದಾವಣೆ ಕಾರ್ಯ ನೆರವೇರಿಸಿದರು.

ಸತ್ತ ನಂತರ ಕುಲೆಗೆ ಕಣ್ಣಿಲ್ಲವೆಂಬ ಭಯಬೇಡ
ನೇತ್ರದಾನದ ವಿಚಾರದಲ್ಲಿ ನಮ್ಮೊಳಗೆ ತುಂಬಾ ಅಭಿಪ್ರಾಯ ಹುಟ್ಟುತ್ತದೆ. ಕಣ್ಣು ದಾನ ಮಾಡಿದರೆ ಸತ್ತ ನಂತರ ಕುಲೆ ಹೇಗೆ ಹೋಗುವುದು ಎಂಬ ಭಯ ಬೇಡ. ರಂಬೆ, ಊರ್ವಸಿ, ಮೇನಕೆ ಸ್ವರ್ಗದಲ್ಲಿ ನಿಮಗೆ ಸಿಗುವುದು ಕಷ್ಟ. ಜೀವಂತ ಇರುವಾಗಲೇ ಎಲ್ಲವನ್ನು ಅನುಭವಿಸಿ ಎಂದು ಹಾಸ್ಯವಾಗಿ ಮಾತನಾಡಿದ ಕೇಶವ ಅಮೈ ಅವರು ಜೀವಂತ ಇರುವಾಗ ಸಮಾಜಕ್ಕೆ ಏನಾದರೂ ಕೊಡುಗೆ ನೀಡಿ. ಎಲ್ಲಕ್ಕಿಂತಲೂ ಒಂದಕ್ಕಿಂತ ಮಿಗಿಲಾದ ದಾನವಿದೆ. ಸಮಾಜಮುಖಿ ಆಲೋಚನೆ ಇರಲಿ ಎಂದು ತಿಳಿಸಿದರು.
ಎರಡು ಯಂತ್ರಗಳ ಲೋಕಾರ್ಪಣೆ
ಅಡಿಕೆಯನ್ನು ಗೊನೆಯಿಂದ ಬಿಡಿಸುವ ಯಂತ್ರದಲ್ಲಿ ಗೊನೆಯನ್ನು ಯಂತ್ರದ ಮೇಲಿಟ್ಟರೆ ಯಂತ್ರ ಚಾಲೂ ಆಗಿ ತಕ್ಷಣ ಕೈಗೆ ಯಾವುದೇ ಒತ್ತಡವಿಲ್ಲದೆ ಅಡಿಕೆಗಳು ಗೊನೆಯಿಂದ ಪ್ರತ್ಯೇಕವಾಗುತ್ತದೆ. ಕಾಳುಮೆಣಸು ಸ್ವಚ್ಛತೆಯ ಯಂತ್ರದಲ್ಲಿ ಪ್ರಥಮ ಮತ್ತು ದ್ವಿತೀಯ ದರ್ಜೆಯ ಕಾಳುಮೆಣಸುಗಳು ಪ್ರತ್ಯೇಕವಾಗುತ್ತವೆ ಮತ್ತು ಕಾಳುಮೆಣೆಸಿನ ಧೂಳು ಕೂಡಾ ಪ್ರತ್ಯೇಕವಾಗಿ ಬೀಳುತ್ತವೆ. ಈ ಕುರಿತು ಕೇಶವ ಅಮೈ ಅವರು ಮಾಹಿತಿ ನೀಡಿದರು.









