ಬೆಳ್ತಂಗಡಿ: ಮುಂಡಾಜೆ ಸರಕಾರಿ ಶಾಲೆಯು ಶತಮಾನೋತ್ಸವದ ವರ್ಷದಲ್ಲಿದ್ದು ಇದರ ಭಾಗವಾಗಿ ಹಳೆ ವಿದ್ಯಾರ್ಥಿಗಳು ಹಾಗೂ ಸಂಘ ಸಂಸ್ಥೆಗಳು ನೀಡಿದ ವಸ್ತುರೂಪದ ಕೊಡುಗೆಗಳನ್ನು ಸ್ವೀಕರಿಸಲಾಯಿತು.
ಮುಂಡಾಜೆ ಹೆಲ್ಪ್ಲೈನ್ ಬಳಗದ ವತಿಯಿಂದ ಎಲ್ಲಾ ಮಕ್ಕಳಿಗೆ ಟೈ ಮತ್ತು ಬೆಲ್ಟ್, ಅನಂತ ಫಡ್ಕೆ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಐಡಿ ಕಾರ್ಡ್ ಮತ್ತು ಟ್ಯಾಗ್, ರೋಟರಿ ಸಂಸ್ಥೆಯಿಂದ ಸಮವಸ್ತ್ರ, ಹಾಗೂ ನೂತನವಾಗಿ ನಿರ್ಮಾಣಗೊಂಡಿರುವ 4 ಕೊಠಡಿಗಳಿಗೆ 4 ಕಬ್ಬಿಣದ ಕಪಾಟುಗಳನ್ನು ಶಾಲೆಗೆ ಸ್ವೀಕರಿಸಲಾಯಿತು.
ಈ ವೇಳೆ ಕೊಡುಗೆದಾರರಾದ ಪ್ರಹಲ್ಲಾದ ಫಡ್ಕೆ, ಹೆಲ್ಪ್ಲೈನ್ ಪರವಾಗಿ ಯು.ಎ ಇಸಾಕ್, ಉದ್ಯಮಿ ಅಯೂಬ್ ಬೆಂಗಳೂರು, ರೋಟರಿ ಸಂಸ್ಥೆಯ ಪರವಾಗಿ ನಿವೃತ ಮೇಜರ್ ಜನರಲ್ ಎಂ.ವಿ ಭಟ್ ಅವರನ್ನು ಶಾಲಾ ಸಮಿತಿ ವತಿಯಿಂದ ಗೌರವಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಎಸ್ಡಿಎಂಸಿ ಅಧ್ಯಕ್ಷ ಗಣೇಶ್ ಬಂಗೇರ ವಹಿಸಿದ್ದರು. ಕಾರ್ಯಕ್ರಮಕ್ಕೆ ಶತಮಾನೋತ್ಸವ ಸಮಿತಿ ಅಧ್ಯಕ್ಷ ಅಡೂರು ಗೋಪಾಲಕೃಷ್ಣ ರಾವ್, ಪ್ರಹ್ಲಾದ ಫಡ್ಕೆ, ಯಂಗ್ ಚಾಲೆಂಜರ್ಸ್ ಸಂಸ್ಥಾಪಕ ನಾಮದೇವ ರಾವ್ ಶುಭ ಕೋರಿದರು.
ಶತಮಾನೋತ್ಸವ ಸಮಿತಿ ಗೌರವ ಸಲಹೆಗಾರ ಅಡೂರು ವೆಂಕಟ್ರಾಯ, ಗ್ರಾ.ಪಂ ಅಧ್ಯಕ್ಷೆ ರಂಜಿನಿ ಆರ್, ಹೆಲ್ಪ್ಲೈನ್ ಮುಖ್ಯ ಎಡ್ಮಿನ್ ಸಿದ್ದೀಕ್ ಸಾಗರ್, ವಿಶ್ವನಾಥ ಶೆಟ್ಟಿ, ಕಜೆ ವೆಂಕಟೇಶ ಭಟ್, ಬಾಬು ಪೂಜಾರಿ ಕೂಳೂರು, ನಾರಾಯಣ ಪೂಜಾರಿ, ಅಶ್ವೀರ್, ರಶೀದ್, ಸಾದಿಕ್, ರಶೀದ್ ಕೂಳೂರು, ಲಕ್ಷ್ಮಣ, ಇಬ್ರಾಹಿಂ ಮೊದಲಾದವರು ಉಪಸ್ಥಿತರಿದ್ದರು. ಬಿಇಒ ವಿರೂಪಾಕ್ಷಪ್ಪ ವಿಶೇಷ ಭೇಟಿ ನೀಡಿ ಕಾರ್ಯವನ್ನು ಶ್ಲಾಘಿಸಿದರು.
ಶತಮಾನೋತ್ಸವ ಸಮಿತಿ ಕಾರ್ಯದರ್ಶಿ ಅಶ್ರಫ್ ಆಲಿಕುಂಞಿ ಕೊಡುಗೆದಾರರನ್ನು ಅಭಿನಂದಿಸಿ ಮಾತನಾಡಿ, ಶಾಲೆಯ ಇತರ ವಸ್ತುರೂಪದ ಬೇಡಿಕೆ ಮಂಡಿಸಿದರು. ಶಾಲಾ ಮುಖ್ಯೋಪಾಯಿನಿ ಮಂಜುಳಾ ಸ್ವಾಗತಿಸಿದರು. ಶಿಕ್ಷಕಿಯರಾದ ಸೇವಂತಿ ಕಾರ್ಯಕ್ರಮ ನಿರೂಪಿಸಿ, ಜಯಶ್ರೀ ವಂದಿಸಿದರು.