ಉಜಿರೆ: ಉಜಿರೆ ಶ್ರೀ ಧ.ಮಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ನ.1 ರಂದು ವಿವಿಧ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಕನ್ನಡಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡುವುದರ ಮೂಲಕ ಶಾಲಾ ಶಿಕ್ಷಕ ರಕ್ಷಕ ಸಂಗದ ಅಧ್ಯಕ್ಷ ವಿಜಯ ಜಿ ಇವರು ಉದ್ಘಾಟಿಸಿ, ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಗಳ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ಬಾಲಕೃಷ್ಣ ನಾಯ್ಕ್ ವಹಿಸಿದ್ದರು.
ಈ ಸಂದರ್ಭದಲ್ಲಿ ಹವ್ಯಾಸಿ ಕಲಾವಿದರು, ಸಾಹಿತಿಗಳು ಹಾಗೂ ಸ.ಹಿ.ಪ್ರಾ.ಶಾಲೆ ಸಿದ್ದಬೈಲು ಪರಾರಿ ಇಲ್ಲಿನ ಸಹ ಶಿಕ್ಷಕರಾಗಿರುವ ಶಂಕರ್ ತ್ಹಾಮನ್ ಕರ್ ಭಾಗವಹಿಸಿ ರಾಜ್ಯೋತ್ಸವದ ಶುಭ ಸಂದೇಶವನ್ನು ನೀಡಿದರು ಮತ್ತು ತಮ್ಮದೇ ರಾಗ ಸಂಯೋಜನೆಯ ಕೆಲವೊಂದು ಸ್ವರಚಿತ ಕವನಗಳು ಮತ್ತು ನಾಡು ನುಡಿಗೆ ಸಂಬಂಧಿಸಿದ ಪ್ರಮುಖ ಗೀತೆಗಳನ್ನು ಹಿನ್ನೆಲೆ ವಾದ್ಯದ ಜೊತೆಗೆ ಹಾಡಿ ವಿದ್ಯಾರ್ಥಿಗಳಿಗೆ ಅಭ್ಯಾಸ ಮಾಡಿಸಿದರು.
ವಿದ್ಯಾರ್ಥಿಗಳು ಕರ್ನಾಟಕದ ವಿವಿಧ ವಿಭಾಗಗಳಿಗೆ ಸಂಬಂಧಿತ ವೈವಿಧ್ಯಮಯ ಉಡುಪುಗಳನ್ನು ಧರಿಸಿ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಮಾಡಿದರು.
ವಿದ್ಯಾರ್ಥಿಗಳು ಕನ್ನಡ ನಾಡು ನುಡಿಗೆ ಸಂಬಂಧಿಸಿದ ಭಾಷಣ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಶಿಕ್ಷಕ ಪವನ್ ಕುಮಾರ್ ಸ್ವಾಗತಿಸಿದರು. ಶಿಕ್ಷಕಿ ಜ್ಯೋತಿ ಕಾರ್ಯಕ್ರಮ ನಿರ್ವಹಿಸಿದರು, ಶಿಕ್ಷಕಿ ಪುಷ್ಪಾವತಿ ಧನ್ಯವಾದ ಸಮರ್ಪಿಸಿದರು.