ನೆಲ್ಯಾಡಿ: ಕಡಬ ತಾಲೂಕಿನ ಕುಂತೂರು-ಅರ್ಬಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪಂಚಮ ವರ್ಷದ ಪ್ರತಿಷ್ಟಾ ದಿನ, ಬಲಿವಾಡು ಕೂಟ ಬ್ರಹ್ಮಶ್ರೀ ವೇದಮೂರ್ತಿ ಕುಡುಪು ನರಸಿಂಹ ತಂತ್ರಿಯವರ ನೇತೃತ್ವದಲ್ಲಿ ನಡೆಯಿತು.
ಬೆಳಿಗ್ಗೆ ಪ್ರತಿಷ್ಠಾ ದಿನ, ಬಲಿವಾಡು ಕೂಟ ನಡೆಯಿತು. ಬಳಿಕ ದೇವಸ್ಥಾನದಲ್ಲಿ ನಿರ್ಮಾಣಗೊಳ್ಳಲಿರುವ ಅನ್ನಪೂರ್ಣ ಅನ್ನಛತ್ರಕ್ಕೆ ಶಿಲಾನ್ಯಾಸ ಹಾಗೂ ರುದ್ರಾಕ್ಷ ಸಭಾಂಗಣ, ಪಾರ್ವತಿ-ಪರಮೇಶ್ವರ ಅತಿಥಿಗೃಹ ಮತ್ತು ಹೊರಾಂಗಣ ಲೋಕಾರ್ಪಣೆ ನಡೆಯಿತು. ಹೊರನಾಡು ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತರಾದ ಡಾ.ಜಿ.ಭೀಮೇಶ್ವರ ಜೋಶಿಯವರು ಶಿಲಾನ್ಯಾಸ ನೆರವೇರಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅವರು ಶುಭಹಾರೈಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಸತೀಶ್ರವರು ಹೊರಾಂಗಣ ಹಾಸುಪದರವನ್ನು ಲೋಕಾರ್ಪಣೆ ಮಾಡಿದರು. ಪೆರಾಬೆ ಗ್ರಾ.ಪಂ.ಅಧ್ಯಕ್ಷ ಚಂದ್ರಶೇಕರ ರೈಯವರು ಅತಿಥಿಗೃಹವನ್ನು ಲೋಕಾರ್ಪಣೆಗೊಳಿಸಿ ಶುಭಹಾರೈಸಿದರು.
ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಕೃಷ್ಣಕುಮಾರ್ ಅತ್ರಿಜಾಲುರವರು ನೂತನವಾಗಿ ನಿರ್ಮಾಣಗೊಳ್ಳುವ ಅನ್ನಛತ್ರದ ಬಗ್ಗೆ ವಿವರಣೆ ನೀಡಿದರು. ಕಾರ್ಯದರ್ಶಿ ಪ್ರವೀಣ ಆಳ್ವ ಸ್ವಾಗತಿಸಿ, ಉಪಾಧ್ಯಕ್ಷ ಸುಬ್ರಮಣ್ಯ ಗೌಡ ವಂದಿಸಿದರು. ಪೂರ್ವಾಹ್ನ ಮಹಾಗಣಪತಿ ಹೋಮ, ನವಕಪ್ರದಾನ ಮತ್ತು ರಾತ್ರಿ ರಂಗಪೂಜೆ ನಡೆಯಿತು.