ಪುತ್ತೂರು: ಮಕ್ಕಳ ಅಮೂಲ್ಯ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಲು, ಮನಸ್ಸನ್ನು ಕ್ರಿಯಾಶೀಲಗೊಳಿಸಲು ಮತ್ತು ಭವಿಷ್ಯದ ವಿದ್ಯಾಭ್ಯಾಸದ ಕಲಿಕೆಗೆ ಪ್ರೇರಣೆ ನೀಡಲು ಜೇಸಿಐ ಮತ್ತು ಜೆಜೆಸಿ ಉಪ್ಪಿನಂಗಡಿ ಘಟಕಗಳ ನೇತೃತ್ವದಲ್ಲಿ ಕಾಂಚನ ವೆಂಕಟ ಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆ, ಶ್ರೀಲಕ್ಷ್ಮೀನಾರಾಯಣ ಹಿರಿಯ ಪ್ರಾಥಮಿಕ ಶಾಲೆ ಮತ್ತು ವಿಕ್ರo ಯುವಕ ಮಂಡಲ ಕಾಂಚನ ಇದರ ಸಂಯುಕ್ತ ಆಶ್ರಯದಲ್ಲಿ ಮೇ 7ರಿಂದ ಮೇ 9ರ ತನಕ ಚಿತ್ರಕಲೆ, ಮುಖವಾಡ ತಯಾರಿಕೆ, ನೃತ್ಯ, ಹಾಡು, ಭಾಷಣ ಕಲೆ, ಕ್ರಾಫ್ಟ್, ವ್ಯಕ್ತಿತ್ವ ವಿಕಸನ ತರಬೇತಿ, ರಂಗ ಅಭಿನಯ, ಜೀವನ ಕೌಶಲ್ಯ ತರಬೇತಿ ಶಿಬಿರ ಕಾಂಚನ ಶ್ರೀ ವೆಂಕಟರಮಣ ಸ್ಮಾರಕ ಪ್ರೌಢಶಾಲೆಯಲ್ಲಿ ನಡೆಯಲಿದೆ. ರಾಜ್ಯ ಮಟ್ಟದ ನುರಿತ ನೀನಾಸಂ ರಂಗಕರ್ಮಿ ಉಪನ್ಯಾಸಕ ಶೀನಾ ನಾಡೋಳಿ ನೇತೃತ್ವದ ಸಂಪನ್ಮೂಲ ವ್ಯಕ್ತಿಗಳಿಂದ ಶಿಬಿರ ಜರಗಲಿದೆ. ಘಟಕಾಧ್ಯಕ್ಷ ಮೋಹನ್ ಚಂದ್ರ ತೋಟದ ಮನೆ, ಕಾರ್ಯದರ್ಶಿ ಲವೀನಾ ಪಿಂಟೋ, ಘಟಕ ಉಪಾಧ್ಯಕ್ಷ ಡಾ. ನಿರಂಜನ್ ರೈ, ಮುಖ್ಯೋಪಾಧ್ಯಾಯರಾದ ಸೂರ್ಯ ಪ್ರಕಾಶ, ಲಕ್ಷ್ಮಣ, ಯುವಕ ಮಂಡಲ ಅಧ್ಯಕ್ಷ ಅನಿಲ್ ಪಿಂಟೊ, ಜೆಜೆಸಿ ಅಧ್ಯಕ್ಷೆ ಶ್ರೀರಕ್ಷಾ, ನಿಕಟಪೂರ್ವ ಅಧ್ಯಕ್ಷ ಕೆ. ವಿ. ಕುಲಾಲ್, ಶಿಬಿರ ನಿರ್ದೇಶಕ ಶಶಿಧರ್ ನೆಕ್ಕಿಲಾಡಿ ಮತ್ತು ಸಂಚಾಲಕ ಪ್ರಶಾಂತ್ ಕುಮಾರ್ ರೈ ಮಾರ್ಗದರ್ಶನದಲ್ಲಿ ತರಬೇತಿ ನಡೆಯಲಿದೆ.
ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢಶಾಲೆ , ಪದವಿಪೂರ್ವ ಕಾಲೇಜು ಮತ್ತು ಕಾಲೇಜು ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಬೆಳಿಗ್ಗೆ 9.30ರಿಂದ ಸಂಜೆ 4ರ ತನಕ ತರಬೇತಿ ನಡೆಯಲಿದೆ. ಮಧ್ಯಾಹ್ನ ಊಟ,ಲಘು ಉಪಹಾರದ ವ್ಯವಸ್ಥೆ ಕಲ್ಪಿಸಲಾಗಿದೆ. ಆಸಕ್ತ ಪೋಷಕರಿಗೂ ತರಬೇತಿಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ.
ತರಬೇತಿಯಲ್ಲಿ ಭಾಗವಹಿಸಿ ಅತ್ಯುತ್ತಮವಾಗಿ ತರಬೇತಿ ಮುಗಿಸಿದ ಮಕ್ಕಳಿಗೆ ವಿಶೇಷ ಪುರಸ್ಕಾರ ನೀಡಲಾಗುತ್ತದೆ. ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಕೋವಿಡ್ ನಿಯಮ ಪಾಲನೆ ಯೊಂದಿಗೆ ಶಿಬಿರ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.