ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೋರ್ಮಂಡ ಅವರಿಗೆ ನಾಗರಿಕ ಸನ್ಮಾನ
ಪುತ್ತೂರು: ಮೇ 31ರಂದು ನಿವೃತ್ತರಾದ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಅವರಿಗೆ ನಾಗರಿಕ ಸನ್ಮಾನ ‘ದಯಾಭಿಮಾನ’ ಜೂನ್ 25ರಂದು ಇರ್ದೆ-ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಉದ್ಘಾಟನೆಗೊಂಡಿತು.
ದಯಾನಂದ ರೈ ಕೋರ್ಮಂಡ ಹಾಗೂ ಚಿತ್ರಾ ಡಿ. ದಂಪತಿಗೆ ದಯಾಭಿಮಾನ ನಾಗರಿಕ ಸನ್ಮಾನ ಮಾಡಲಾಯಿತು. ದಯಾನಂದ ರೈ ಕೋರ್ಮಂಡ ಅವರಷ್ಟೇ ಎತ್ತರದ ಅಂದರೆ 5 ಅಡಿ 10 ಇಂಚು ಎತ್ತರದ ಸನ್ಮಾನ ಪತ್ರ, 3.5 ಅಡಿ ಎತ್ತರದ ಸ್ಮರಣಿಕೆ, ಫಲಪುಷ್ಪ ನೀಡಿ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಶಾಸಕ ಸಂಜೀವ ಮಠಂದೂರು ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಸಹಕಾರಿ ಧುರೀಣ, ಸಹಕಾರಿ ರತ್ನ ಪುರಸ್ಕೃತ ಸವಣೂರು ಸೀತಾರಾಮ ರೈ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಸಂಜೀವ ರೈ, ನಿವೃತ್ತ ಚಿತ್ರಕಲಾ ಶಿಕ್ಷಕ ಐ. ಗೋಪಾಲಕೃಷ್ಣ ರಾವ್, ನೋಟರಿ ವಕೀಲರಾದ ಚಿದಾನಂದ ಬೈಲಾಡಿ, ನೋಟರಿ ವಕೀಲರಾದ ಮಂಜುನಾಥ್, ಆಲಿಕುಂಞಿ ಕೊರಿಂಗಿಲ, ಇರ್ದೆ- ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಂಗನಾಥ್ ರೈ, ಸಿಇಓ ರಾಮಯ್ಯ ರೈ,
ದಯಾಭಿಮಾನ ನಾಗರಿಕ ಸನ್ಮಾನ ಸಮಿತಿಯ ಕಾರ್ಯದರ್ಶಿ ಮಹಮ್ಮದ್ ಕುಕ್ಕುವಳ್ಳಿ, ಕೋಶಾಧಿಕಾರಿ ಪ್ರಕಾಶ್ ರೈ ಉಪಸ್ಥಿತರಿದ್ದರು.
ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಇದೇ ಸಂದರ್ಭ ಸುದ್ದಿ ಮೀಡಿಯಾ ವತಿಯಿಂದ ನಿರ್ಮಾಣಗೊಂಡ ದಯಾನಂದ ರೈ ಕೋರ್ಮಂಡ ಅವರ ಕಿರು ಸಾಕ್ಷ್ಯಚಿತ್ರವನ್ನು ಅನಾವರಣಗೊಳಿಸಲಾಯಿತು.