ಕಾಣಿಯೂರು: ಪುತ್ತೂರು- ಕಾಣಿಯೂರು- ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿಯ ಕಾಣಿಯೂರು ಸಮೀಪ ರಸ್ತೆಗೆ ವಾಲಿಕೊಂಡು ಅಪಾಯವನ್ನು ಆಹ್ವಾನಿಸುತ್ತಿದ್ದ ಮರಗಳನ್ನೂ ಕೊನೆಗೂ ತೆರವುಗೊಳಿಸಲಾಗಿದೆ. ಕಾಣಿಯೂರು ಸಮೀಪ ಕೂಡುರಸ್ತೆಯಿಂದ ಏಲಡ್ಕವರೆಗೆ ಮರಗಳು ರಸ್ತೆಗೆ ವಾಲಿ ನಿಂತಿದ್ದು ಇನ್ನೇನೂ ರಸ್ತೆಗೆ ಬೀಳುವ ಸ್ಥಿತಿಯಲ್ಲಿತ್ತು. ಮರಗಳು ರಸ್ತೆಗೆ ಬೀಳುವ ಸಂಭವವಿರುವುದರಿಂದಾಗಿ ವಾಹನ ಸವಾರರು ಭಯ ಭೀತಿಯಿಂದಲೇ ಸಂಚಾರಿಸುವ ಪರಿಸ್ಥಿತಿ ಮತ್ತು ರಸ್ತೆಯ ಎರಡೂ ಬದಿಯಲ್ಲೂ ಮರಗಳು ವಾಲಿಕೊಂಡು ಮರಗಳು ವಿದ್ಯುತ್ ತಂತಿ ಮೇಲೆ ಸಣ್ಣ ಗಾಳಿ ಬಂದರೂ ಬೀಳುವ ಸ್ಥಿತಿಯಲ್ಲಿತ್ತು. ಅಪಾಯ ಸಂಭವಿಸುವ ಮೊದಲು ಸಂಬಂಧಪಟ್ಟ ಇಲಾಖೆ ಗಮನಹರಿಸಬೇಕೆಂದು ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ನಿರ್ಣಯವನ್ನು ಕೈಗೊಳ್ಳಲಾಗಿತ್ತು. ಈ ಬಗ್ಗೆ ಗ್ರಾಮಸ್ಥರು ಕೂಡ ಅನೇಕ ಬಾರಿ ಗ್ರಾಮ ಸಭೆಗಳಲ್ಲಿ ಪ್ರಸ್ತಾಪಿಸಿ ಅಧಿಕಾರಿಗಳ ಗಮನಕ್ಕೂ ತಂದರೂ ಅಪಾಯಕಾರಿ ಮರಗಳನ್ನು ತೆರವುಗೊಳಿಸಲಿಲ್ಲ. ಇದೀಗ ಕಾಣಿಯೂರು ಗ್ರಾಮ ಪಂಚಾಯತ್ನ ಮನವಿ ಮೇರೆಗೆ ಸಚಿವ ಎಸ್. ಅಂಗಾರ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿರುವ ಹಿನ್ನಲೆಯಲ್ಲಿ ಮರ ತೆರವು ಕಾರ್ಯ ನಡೆದಿದೆ. ಮರ ತೆರವು ಕಾರ್ಯ ಸಂದರ್ಭದಲ್ಲಿ ಕಾಣಿಯೂರು ಗ್ರಾ.ಪಂ, ಅಧ್ಯಕ್ಷೆ ಲಲಿತಾ ದರ್ಖಾಸು, ಉಪಾಧ್ಯಕ್ಷ ಗಣೇಶ್ ಉದನಡ್ಕ, ಪ್ರಭಾರ ಪಂಚಾಯತ್ ಅಧಿಕಾರಿ ದೇವರಾಜ್, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆನಂದ ಗೌಡ ಮೇಲ್ಮನೆ, ಗ್ರಾ.ಪಂ.ಸದಸ್ಯರಾದ ರಾಮಣ್ಣ ಗೌಡ ಮುಗರಂಜ, ಕೀರ್ತಿ ಅಂಬುಲ, ತೇಜಕುಮಾರಿ ಉದ್ಲಡ್ಡ, ಸುಲೋಚನಾ ಮಿಯೋಳ್ಪೆ ಹಾಗೂ ಸುಂದರ ಬೆದ್ರಾಜೆ, ವೀರಪ್ಪ ಗೌಡ ಉದ್ಲಡ್ಡ, ಜತ್ತಪ್ಪ ಗೌಡ ಉದ್ಲಡ್ಡ, ಅರಣ್ಯ ಅಧಿಕಾರಿಗಳು ಮೊದಲಾದವರು ಇದ್ದರು.
ಕಾಣಿಯೂರು ರಾಜ್ಯ ಹೆದ್ದಾರಿ ಬದಿಯಲ್ಲಿರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸುವ ಬಗ್ಗೆ ಗ್ರಾ.ಪಂ.ಸಾಮಾನ್ಯ ಸಭೆ, ಗ್ರಾಮ ಸಭೆಯಲ್ಲಿ ನಿರ್ಣಯವನ್ನು ಕೈಗೊಳ್ಳಲಾಗಿತ್ತು. ಈ ಬಗ್ಗೆ ಸಚಿವ ಎಸ್.ಅಂಗಾರ ಅವರ ಗಮನಕ್ಕೂ ತರಲಾಗಿತ್ತು. ಅಲ್ಲದೇ ಮರ ತೆರವುಗೊಳಿಸುವ ಬಗ್ಗೆ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿಯೂ ಅನೇಕ ಬಾರಿ ವರದಿಯನ್ನು ಪ್ರಕಟಿಸಲಾಗಿತ್ತು. ಇದೀಗ ಮರ ತೆರವು ಕಾರ್ಯ ನಡೆದಿದೆ. – ಗಣೇಶ್ ಉದನಡ್ಕ ಉಪಾಧ್ಯಕ್ಷರು, ಗ್ರಾ.ಪಂ.ಕಾಣಿಯೂರು
ಸುದ್ದಿ ವರದಿ ಫಲಶ್ರುತಿ: ಕಾಣಿಯೂರು- ಏಲಡ್ಕ ರಾಜ್ಯ ಹೆದ್ದಾರಿ ರಸ್ತೆ ಬದಿಯಲ್ಲಿ ರಸ್ತೆಗೆ ವಾಲಿಕೊಂಡು ಅಪಾಯದಲ್ಲಿರುವ ಮರಗಳನ್ನು ತೆರವುಗೊಳಿಸುವ ಬಗ್ಗೆ ಹಲವಾರು ಬಾರಿ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಪರಿಣಾಮಕಾರಿಯಾಗಿ ವರದಿಯನ್ನು ಪ್ರಕಟಿಸಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೂ ತರಲಾಗಿತ್ತು.