ರಾಜ್ಯದಲ್ಲಿ ಮುಂಗಾರು ಚುರುಕಾಗಿದ್ದು, ಕರಾವಳಿ ಜಿಲ್ಲೆಯಾದ್ಯಂತ ಬುಧವಾರದಿಂದ ಮುಂಗಾರು ಮಳೆ ವೇಗ ಪಡೆದುಕೊಂಡಿದೆ. ಮಂಗಳೂರು ಸೇರಿದಂತೆ ದ.ಕ. ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ ಜೂ.30 ಮತ್ತು ಜುಲೈ 1ರಂದು ಕರಾವಳಿಯಲ್ಲಿ ಆರೆಂಜ್ ಅಲರ್ಟ್ ಮುಂದುವರಿಯಲಿದ್ದು, ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ.
ಜೂ.29ರಂದು ಬೆಳಗ್ಗಿನಿಂದಲೇ ಗ್ರಾಮಾಂತರ ಪ್ರದೇಶದ ಅಲ್ಲಲ್ಲಿ ಮಳೆ ಸುರಿಯತೊಡಗಿದ್ದು ಜೂ.30ರಂದು ಎಡೆಬಿಡದೆ ಮಳೆ ಸುರಿಯುತ್ತಿದೆ.
ದ.ಕ. ಜಿಲ್ಲೆಯಲ್ಲಿ ದಿನದ ಸರಾಸರಿ ಮಳೆ 42.3 ಮಿಲಿ ಮೀಟರ್ ಆಗಿದೆ. ಜಿಲ್ಲೆಯ ಬೆಳ್ತಂಗಡಿ 36.6 ಮಿ.ಮೀ, ಬಂಟ್ವಾಳ 68.7 ಮಿ.ಮೀ, ಮಂಗಳೂರು 28.5 ಮಿ.ಮೀ, ಪುತ್ತೂರು39.7 ಮಿ.ಮೀ, ಸುಳ್ಯ 32.5 ಮಿ.ಮೀ, ಮೂಡುಬಿದಿರೆ 56.5 ಮಿ.ಮೀ, ಹಾಗೂ ಕಡಬದಲ್ಲಿ 43.4 ಮಿ.ಮೀ. ಮಳೆ ದಾಖಲಾಗಿದೆ.