ಬಜತ್ತೂರು: ಹೆಬ್ಬಲಸು ಮರಗಳ ಮಾರಣ ಹೋಮ ಪ್ರಕರಣ

0
  • ನಾಲ್ವರ ವಿಚಾರಣೆ, ಮರ ದಾಸ್ತಾನು ಬಗ್ಗೆ ಮಹತ್ವದ ಸುಳಿವು ಲಭ್ಯ

ಪುತ್ತೂರು ವಲಯ ಅರಣ್ಯ ಇಲಾಖಾ ವ್ಯಾಪ್ತಿಯಲ್ಲಿ ಬರುವ ಬಜತ್ತೂರು ಗ್ರಾಮದ ಹೊಸಗದ್ದೆ ಎಂಬಲ್ಲಿ ಇರುವ ಅಕೇಶಿಯಾ ನೆಡುತೋಪುನಿಂದ ಹೆಬ್ಬಲಸು
ಮರಗಳನ್ನು ಕಡಿದು ಸಾಗಾಟ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸು ದಾಖಲಾದ ಬಳಿಕದ ಬೆಳವಣಿಗೆಯಲ್ಲಿ ನಾಲ್ವರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಅಕ್ರಮವಾಗಿ ಕಡಿದು ಸಾಗಾಟ ಮಾಡಿದ ಹೆಬ್ಬಲಸು ಮರದ ದಿಮ್ಮಿಯನ್ನು ದಾಸ್ತಾನು ಇರಿಸಿರುವ ಜಾಗದ ಬಗ್ಗೆಯೂ ಅರಣ್ಯ ಇಲಾಖೆಗೆ ಮಹತ್ವದ ಸುಳಿವು ಲಭ್ಯವಾಗಿರುವುದಾಗಿ ತಿಳಿದು ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಶಯಿತ ನಾಲ್ವರನ್ನು ಪುತ್ತೂರು ವಲಯ ಅರಣ್ಯಾಧಿಕಾರಿ ಕಚೇರಿಗೆ ಕರೆಸಲಾಗಿ ವಿಚಾರಣೆ ನಡೆಸಲಾಗಿದ್ದು, ಮರ ಕಡಿದು ಸಾಗಾಟ ಮಾಡಿರುವ ಬಗ್ಗೆ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಮರವನ್ನು ದಿಮ್ಮಿಗಳಾಗಿ ಮಾಡಿ ಸಾಗಾಟ ಮಾಡಲಾಗಿ ದಾಸ್ತಾನು ಇರಿಸಿರುವ ಅಡಗುತಾಣದ ಬಗ್ಗೆ ಅರಣ್ಯಾಧಿಕಾರಿಗಳಿಗೂ ಮಹತ್ವದ ಸುಳಿವು ಲಭ್ಯವಾಗಿದೆ ಎಂದು ಹೇಳಲಾಗಿದೆ.

ಬಜತ್ತೂರು ಗ್ರಾಮದ ಹೊಸಗದ್ದೆ ಮತ್ತು ಪೆರಿಯಡ್ಕ ಮಧ್ಯೆ ಇರುವ ಅಕೇಶಿಯಾ ನೆಡುತೋಪು ಮರಗಳ ಕಟಾವು ಹೆಸರಿನಲ್ಲಿ ಅಲ್ಲಿ ಇದ್ದಂತಹ ಬೃಹತ್ ಗಾತ್ರದ ಹೆಬ್ಬಲಸು ಮತ್ತು ಇತರೇ ಉತ್ತಮ ಜಾತಿಯ ಮರಗಳನ್ನು ಕಡಿದು ಸಾಗಾಟ ಮಾಡುತ್ತಿರುವ ಬಗ್ಗೆ ಗ್ರಾಮಸ್ಥರಿಂದ ದೂರುಗಳು ವ್ಯಕ್ತವಾಗಿತ್ತು ಮತ್ತು ಜುಲೈ ೮ರಂದು ಸುದ್ದಿ ಪತ್ರಿಕೆಯಲ್ಲಿ ಸಮಗ್ರವಾಗಿ ವಿಶೇಷ ವರದಿ ಪ್ರಕಟವಾಗಿತ್ತು.

ಆ ಬಳಿಕ ಪುತ್ತೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ.ಕೆ. ಕಾರ್ಯಪ್ಪ, ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್ ನೇತೃತ್ವದ ಅಧಿಕಾರಿಗಳ ತಂಡ ಜುಲೈ 8ರಂದು ಶುಕ್ರವಾರ ನೆಡುತೋಪುಗೆ ತೆರಳಿ ಪರಿಶೀಲನೆ ನಡೆಸಿ ಕಡಿಯಲಾದ ಹೆಬ್ಬಲಸು ಮರಗಳ ಬುಡ ಮತ್ತು ಅಲ್ಲೇ ಬಿಟ್ಟು ಹೋಗಿರುವ ಮರದ ದಿಮ್ಮಿಗಳ ಸಹಿತ ಕುರುಹುಗಳನ್ನು ಪತ್ತೆ ಮಾಡಿ ಕೇಸು ದಾಖಲಿಸಿಕೊಂಡಿದ್ದರು.

ಮರ ದಾಸ್ತಾನು ಸುಳಿವು ಲಭ್ಯವಾಗಿದೆ-ಡಿ.ಎಫ್.ಒ.
ಬಜತ್ತೂರು ಅಕೇಶಿಯಾ ನೆಡುತೋಪುನಿಂದ ಹೆಬ್ಬಲಸು ಮರಗಳನ್ನು ಅಕ್ರಮವಾಗಿ ಕಡಿದು ಸಾಗಾಟ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸು ದಾಖಲಾಗಿ ತನಿಖೆ ನಡೆಯುತ್ತಿದ್ದು, ತನಿಖೆ ಪ್ರಗತಿಯಲ್ಲಿದೆ. ಪ್ರಕರಣದ ಸಂಶಯಿತರಾಗಿರುವ ನಾಲ್ವರನ್ನು ವಿಚಾರಣೆ ನಡೆಸಲಾಗಿದೆ. ಮರ ದಾಸ್ತಾನು ಇರುವ ಜಾಗದ ಬಗ್ಗೆಯೂ ಸುಳಿವು ಲಭ್ಯವಾಗಿದೆ. ಮರವನ್ನು ವಶಕ್ಕೆ ಪಡೆದುಕೊಂಡು ಆರೋಪಿಗಳ ವಿರುದ್ಧ ಕೇಸು ದಾಖಲಿಸಲಾಗುವುದು ಎಂದು ಮಂಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ವೈ.ಕೆ. ದಿನೇಶ್ ಕುಮಾರ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here