ಪುತ್ತೂರು: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಕುಂಬ್ರದಿಂದ ಒಂದು ಕಿ.ಮೀ ಮುಂದಕ್ಕೆ ದರ್ಬೆತ್ತಡ್ಕಕ್ಕೆ ತಿರುಗುವ ರಸ್ತೆಯ ಬಳಿ ಹೆದ್ದಾರಿಯ ಮಧ್ಯದಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ರಸ್ತೆ ಮಧ್ಯೆ ಗುಂಡಿ ನಿರ್ಮಾಣವಾಗಿದ್ದು ಇದರಿಂದ ನೀರಿನ ಒಸರು ಹರಿಯುತ್ತಿದೆ. ಇಲ್ಲಿ ರಸ್ತೆ ತಿರುವು ಆಗಿರುವುದರಿಂದ ವಾಹನ ಸವಾರರಿಗೆ ಗುಂಡಿ ಕಾಣುತ್ತಿಲ್ಲ ಈಗಾಗಲೇ ದ್ವಿಚಕ್ರ ವಾಹನ ಸವಾರರು ಈ ಗುಂಡಿಯಿಂದಾಗಿ ಸ್ಕಿಡ್ ಆಗಿ ಬಿದ್ದಿರುವ ಘಟನೆ ನಡೆದಿದೆ. ಜು.15ರಂದು ಮಧ್ಯಾಹ್ನ ಕೂಡ ಸ್ಕೂಟರ್ ಸವಾರರೋರ್ವರು ಸ್ವಿಡ್ ಆಗಿ ಬಿದ್ದು ಗಾಯಗೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಆಗಿರುವುದರಿಂದ ಘನ ವಾಹನಗಳ ಸಂಚಾರದಿಂದ ಗುಂಡಿ ಮತ್ತಷ್ಟು ದೊಡ್ಡದಾಗುತ್ತಲೇ ಹೋಗುತ್ತಿದೆ. ಜೀವ ಹಾನಿ ಸಂಭವಿಸುವ ಮುನ್ನ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕಾಗಿದೆ ಎನ್ನುವುದು ಸಾರ್ವಜನಿಕರ ಮನವಿಯಾಗಿದೆ.