ಕಾವು:ಒಕ್ಕಲಿಗ ಗೌಡ ಸೇವಾ ಸಂಘ ಮಾಡ್ನೂರು ಗ್ರಾಮ ಸಮಿತಿ,ಯುವ ಒಕ್ಕಲಿಗ ಗೌಡ ಘಟಕ ಹಾಗೂ ಮಹಿಳಾ ಘಟಕದ ಸಹಕಾರದೊಂದಿಗೆ ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟ ಮಾಡ್ನೂರು ಇದರ ನೇತೃತ್ವದಲ್ಲಿ ಅಟಿಡೊಂಜಿ ದಿನ ಕಾರ್ಯಕ್ರಮ, ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜು 24 ರಂದು ನನ್ಯ ಜನಮಂಗಳ ಸಭಾಭವನದಲ್ಲಿ ನಡೆಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷರಾದ ವಿಶ್ವನಾಥ ಗೌಡ ಕೆಯ್ಯುರು ಸಮುದಾಯವನ್ನು ಸಂಘಟಿಸುವುದರ ಜೊತೆಗೆ ನಾಯಕತ್ವ ಗುಣವನ್ನು ಬೆಳೆಸಿಕೊಂಡು ಎಲ್ಲಾ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು,ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮಾಡ್ನೂರು ಗ್ರಾಮ ತಾಲೂಕಿನ ಎಲ್ಲಾ ಗ್ರಾಮಗಳಿಗೂ ಮಾದರಿಯಾಗಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಿ ಮಾತನಾಡಿದ ಯುವ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷರಾದ ನಾಗೇಶ್ ಕೇಡೆಂಜಿ ಮಾತನಾಡಿ ವಿದ್ಯಾರ್ಥಿ ಜೀವನ ಮನರಂಜನೆಯ ದಿನಗಳಾಗಿರಬಾರದು,ಸ್ಪಷ್ಟವಾದ ಗುರಿ ಇದ್ದಾಗ ಜೀವನದಲ್ಲಿ ಯಶಸ್ಸು ಸಿಗುತ್ತದೆ,ಗುರಿ ಮುಟ್ಟುವ ತನಕ ವಿಶ್ರಮಿಸದೆ ಇರುವ ಮನೋಭಾವ ನಮ್ಮದಾಗಬೇಕು ಎಂದರು.
ಒಕ್ಕಲಿಗ ಗೌಡ ಮಹಿಳಾ ಘಟಕದ ಅಧ್ಯಕ್ಷೆ ಮೀನಾಕ್ಷಿ ಡಿ ಗೌಡ ಮಾತನಾಡಿ ತಾಲೂಕು ಮಹಿಳಾ ಸಂಘದ ನೇತೃತ್ವದಲ್ಲಿ ಮುಂದಿನ ತಿಂಗಳು ಆ 5 ರಂದು ವರಮಹಾಲಕ್ಷ್ಮಿ ಪೂಜೆ ಹಾಗೂ ಆ 14 ರಂದು ಅಟಿಡೊಂಜಿ ದಿನ ಕಾರ್ಯವನ್ನು ಒಕ್ಕಲಿಗ ಗೌಡ ಸಮುದಾಯ ಭವನ ತೆಂಕಿಲ ದಲ್ಲಿ ಹಮ್ಮಿಕೊಂಡಿದ್ದ ಎಲ್ಲಾ ಸಮಾಜ ಬಾಂಧವರು ಭಾಗವಹಿಸುವಂತೆ ತಿಳಿಸಿದರು.
ಅತಿಡೊಂಜಿ ದಿನ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಪ್ರಮೀಳಾ ಉಮೇಶ್ ಕುದ್ಮಾರು ಮಾತನಾಡಿ ಆಟಿ ತಿಂಗಳ ತಿಂಡಿ ತಿನಿಸುಗಳು ಆಹಾರ ಕ್ರಮಗಳು ತನ್ನದೇ ಆದ ವೈಶಿಷ್ಟ್ಯ ಹೊಂದಿದೆ. ಅನೇಕ ಆಹಾರಗಳು ಔಷಧೀಯ ಗುಣಗಳನ್ನು ಹೊಂದಿವೆ, ಆಟಿ ತಿಂಗಳ ಮಹತ್ವವನ್ನ ಅರಿಯುವ ಮೂಲಕ ಹಿರಿಯರು ಹಾಕಿ ಕೊಟ್ಟ ಸಂಪ್ರದಾಯವನ್ನು ಯುವ ಪೀಳಿಗೆ ಉಳಿಸುವಂತಾಗಬೇಕು ಎಂದರು.
ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟ ಮಾಡ್ನೂರು ಇದರ ಅಧ್ಯಕ್ಷರಾದ ಲೋಕೇಶ್ ಚಾಕೋಟೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮಾಡ್ನೂರು ಒಕ್ಕಲಿಗ ಗೌಡ ಸೇವಾ ಸಂಘದ ಗ್ರಾಮ ಸಮಿತಿ ಅಧ್ಯಕ್ಷರಾದ ಶೇಷಪ್ಪ ಗೌಡ ಪರನೀರು ಅತಿಥಿಗಳನ್ನು ವೀಳ್ಯ ನೀಡಿ ಗೌರವಿಸಿದರು.
ಕಾರ್ಯಕ್ರಮದ ಉದ್ಘಾಟನೆ,ವಿವಿಧ ಸ್ಪರ್ಧೆಗಳ ಆಯೋಜನೆ
ಸಭಾ ಕಾರ್ಯಕ್ರಮದ ಮೊದಲಿಗೆ ಕಾರ್ಯಕ್ರಮವನ್ನು ಮಾದರಿ ಗ್ರಾಮ ಸಮಿತಿ ಮಾಡ್ನೂರು ಇದರ ಅಧ್ಯಕ್ಷರಾದ ವಿಠಲ ಗೌಡ ಕಟ್ಟಪುಣಿ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು, ನಂತರ ಸಮಾಜ ಭಾಂದವರಿಗೆ ವಿವಿಧ ಒಳಾಂಗಣ ಸ್ಪರ್ಧೆಗಳು ನಡೆದು,ಸಭಾ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಉಚಿತ ಪುಸ್ತಕ ವಿತರಣೆ
2021-2022 ನೆ ಶೈಕ್ಷಣಿಕ ಸಾಲಿನಲ್ಲಿಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ನಲ್ಲಿ ಸಾಧನೆಗೈದ ವಿದ್ಯಾರ್ಥಿಗಳಾದ ಚಾಕೋಟೆ ಗಿರಿಧರ ಗೌಡ ಮತ್ತು ನಳಿನಾಕ್ಷಿ ದಂಪತಿಗಳ ಪುತ್ರಿ ಪ್ರೀತಿ ಚಾಕೋಟೆ,ಬೇರ್ನ್oತಿ ಸತೀಶ್ ಹಾಗೂ ಪುಷ್ಪಲತಾ ದಂಪತಿಗಳ ಪುತ್ರಿ ಅನನ್ಯ , ಪುಂದ್ರುಕೊಡಿ ರವೀಂದ್ರ ಮತ್ತು ಸುನಿತಾ ದಂಪತಿಗಳ ಪುತ್ರ ನಮೃತ್. ಅಲಸಂಡೆ ಮಜಲು ಶೇಷಪ್ಪ ಗೌಡ ಮತ್ತು ಲಲಿತ ದಂಪತಿಗಳ ಪುತ್ರಿ ಯಕ್ಷಿತಾ, ಕಂಟ್ರಮಜಲು ಬಿಡಾರ ಕೊರಗಪ್ಪಗೌಡ ತಿರುಮಲೇಶ್ವರಿ ದಂಪತಿಗಳ ಪುತ್ರಿ ಸಾಕ್ಷಿ ಇವರುಗಳನ್ನು ಶಾಲು ಹೊದಿಸಿ,ಹೂಗುಚ್ಛ, ಸ್ಮರಣಿಕೆ ನೀಡಿ ಹಾರ ಹಾಕಿ ಗೌರವಿಸಲಾಯಿತು. ಹಾಗೂ ಸುಮಾರು 100ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಅರ್ಪಿತಾ ಚಾಕೋಟೆ ಪ್ರಾರ್ಥಿಸಿದರು. ಯುವ ಒಕ್ಕಲಿಗ ಗೌಡ ಸೇವಾ ಸಂಘದ ಮಾಡ್ನೂರು ಘಟಕದ ಅಧ್ಯಕ್ಷರಾದ ಯೋಗೀಶ್ ಗೌಡ ಹೊಸಮನೆ ವಂದಿಸಿದರು,ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ದಿವ್ಯ ಪ್ರಸಾದ್ ಎ ಯಂ ,ಮೇಲ್ವಿಚಾರಕಾರದ ವಿಜಯಕುಮಾರ್, ಪ್ರೇರಕರಾದ ಶ್ರೀಕಾಂತ್ ಗೌಡ ವಿವಿಧ ಕಾರ್ಯಕ್ರಮ ನಿರ್ವಹಿಸಿದರು, ಕಾರ್ಯಕ್ರಮದ ಬಳಿಕ ಆಟಿ ತಿಂಗಳ ವಿವಿಧ ಖಾದ್ಯಗಳ ವಿಶೇಷ ಭೋಜನ ವ್ಯವಸ್ಥೆ ಮಾಡಲಾಗಿತ್ತು.