ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಕರಾಯ ಗ್ರಾಮದ ಕಲ್ಲೇರಿ ಎಂಬಲ್ಲಿ ಗುರುವಾರ ರಾತ್ರಿ ನಡೆದಿದ್ದ ಕಳವು ಹಾಗೂ ಕಳ್ಳತನ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಉಪ್ಪಿನಂಗಡಿ ಠಾಣಾ ಉಪನಿರೀಕ್ಷಕ ರಾಜೇಶ್ ಕೆ.ವಿ. ನೇತೃತ್ವದ ಪೊಲೀಸರ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ಸು ಗಳಿಸಿದೆ.
ಕಲ್ಲೇರಿಯ ಮೆಡಿಕಲ್ ಶಾಪ್ನ ಮತ್ತೊಂದು ಕೊಠಡಿಯಲ್ಲಿದ್ದ ಕ್ಲಿನಿಕ್ನಲ್ಲಿ ಕಳವು ಮಾಡಿ, ಮೂರ್ತೆದಾರರ ಸಹಕಾರಿ ಸಂಘದ ಬಾಗಿಲು ಮುರಿಯಲು ಯತ್ನಿಸಿದ ಘಟನೆ ಶುಕ್ರವಾರದಂದು ಬೆಳಕಿಗೆ ಬಂದಿತ್ತು. ಈ ಬಗ್ಗೆ ತಕ್ಷಣವೇ ಕಾರ್ಯಪ್ರವೃತ್ತರಾದ ಎಸೈ ಮತ್ತವರ ತಂಡ ಅಗತ್ಯ ಮಾಹಿತಿಯನ್ನು ಕಲೆ ಹಾಕಿ ಪರಾರಿಯಾಗಿದ್ದ ಕಳ್ಳನ ಜಾಡು ಹಿಡಿದು ಗುರುವಾಯನಕರೆ ಸಮೀಪ ಆರೋಪಿ ಅಶ್ರಫ್ (37) ಎಂಬಾತನನ್ನು ಬಂಧಿಸಿರುತ್ತಾರೆ. ಬಂಧಿತ ಆರೋಪಿಯು ಕಡಬ ತಾಲೂಕು ಕೌಕ್ರಾಡಿ ಗ್ರಾಮದ ಶಾಂತಿಬೆಟ್ಟು ಮನೆ ನಿವಾಸಿ ಅಬ್ದುಲ್ ಖಾದರ್ ಎಂಬವರ ಮಗನಾಗಿದ್ದು, ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳ್ಳತನದ ಪ್ರಕರಣದಲ್ಲೂ ಆರೋಪಿಯಾಗಿರುತ್ತಾನೆ.
ಕಸ ವಿಲೇವಾರಿಗೆ ಬಂದು ಕಳ್ಳತನಕ್ಕೆ ಸ್ಕೆಚ್!: ಬಂಧಿತ ಆರೋಪಿಯು ತಣ್ಣಿರುಪಂತ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ನಿರ್ವಹಣಾ ಕಾರ್ಯದಲ್ಲಿ ಕೆಲಸ ನಿರ್ವಹಿಸುವ ಕಾರ್ಯ ಮಾಡುತ್ತಾ ಕಳವು ಕೃತ್ಯಕ್ಕೆ ಯೋಗ್ಯ ಸ್ಥಳವನ್ನು ಗುರುತಿಸುತ್ತಿದ್ದನೆಂದೂ ತನಿಖೆಯ ವೇಳೆ ತಿಳಿದು ಬಂದಿದೆ. ಕಳವುಗೈದು ದೊರಕಿದ ಹಣದಿಂದ ಮೋಜು ಮಸ್ತಿ ನಡೆಸಿ ಚೀಲ ತುಂಬಾ ಹಣ್ಣು ಖರೀದಿಸಿ ಮನೆಯ ದಾರಿ ಹಿಡಿಯುವ ಯತ್ನದಲ್ಲಿದ್ದಾಗಲೇ ಈತ ಪೊಲೀಸರ ವಶವಾಗಿದ್ದಾನೆ.