ಅರಣ್ಯ ಇಲಾಖೆ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟ-ಸುಳ್ಯದ ಎಸಿಎಫ್ ಪ್ರವೀಣ್ ಕುಮಾರ್ ಶೆಟ್ಟಿಗೆ 4 ಚಿನ್ನದ ಪದಕ

0

ಪುತ್ತೂರು: ಬೆಳಗಾವಿಯಲ್ಲಿ ಮೂರು ದಿನಗಳ ಕಾಲ ನಡೆದ ಅರಣ್ಯ ಇಲಾಖೆ ನೌಕರರ ರಾಜ್ಯ ಮಟ್ಟದ ಕ್ರೀಡಾ ಕೂಟದಲ್ಲಿ ಸುಳ್ಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್‌ಕುಮಾರ್ ಶೆಟ್ಟಿಯವರು ನಾಲ್ಕು ಚಿನ್ನದ ಪದಕದೊಂದಿಗೆ ವೈಯಕ್ತಿಕ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಹಿರಿಯರ ವಿಭಾಗದ ಶಾಟ್ ಪುಟ್, ಡಿಸ್ಕಸ್ ತ್ರೋ, ಹ್ಯಾಮರ್ ತ್ರೋ ವಿಭಾಗಗಳಲ್ಲಿ ಅವರು ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಗೆದ್ದಿದ್ದಾರೆ. ಇದರ ಅಂಕ ಆಧರಿಸಿ ಅವರಿಗೆ ವೈಯಕ್ತಿಕ ಚಾಂಪಿಯನ್‌ಶಿಪ್ ಘೋಷಿಸಲ್ಪಟ್ಟಿತು.

ಪುತ್ತೂರು ಸಾಮೆತ್ತಡ್ಕ ನಿವಾಸಿಯಾಗಿರುವ ಪ್ರವೀಣ್ ಕುಮಾರ್ ಶೆಟ್ಟಿ ಅವರು 1992ರಲ್ಲಿ ಅರಣ್ಯ ಇಲಾಖೆಯಲ್ಲಿ ಫಾರೆಸ್ಟರ್ ಆಗಿ ನೇಮಕಾತಿ ಹೊಂದಿದವರು. ಬಳಿಕ ವಲಯ ಅರಣ್ಯಾಧಿಕಾರಿಯಾಗಿ ಪದೋನ್ನತಿ ಹೊಂದಿ ಪಂಜ ಮತ್ತು ಬೆಳ್ತಂಗಡಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಬಳಿಕ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಪದೋನ್ನತಿ ಪಡೆದು ಪ್ರಸ್ತುತ ಸುಳ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾಲೇಜು ದಿನಗಳಿಂದಲೇ ಅತ್ಯುತ್ತಮ ಕ್ರೀಡಾಪಟುವಾಗಿ ಗುರುತಿಸಿಕೊಂಡಿರುವ ಇವರು ಅತ್ಯುತ್ತಮ ಕಬಡ್ಡಿ ಪಟುವಾಗಿ, ವಾಲಿಬಾಲ್ ಮತ್ತು ಕ್ರಿಕೆಟ್ ಆಟಗಾರನಾಗಿಯೂ ಗುರುತಿಸಲ್ಪಟ್ಟಿದ್ದಾರೆ. ಹಗ್ಗ ಜಗ್ಗಾಟದ ಬಲಿಷ್ಠ ತಂಡವನ್ನೂ ಹೊಂದಿರುವ ಅವರು ಉತ್ತಮ ಕ್ಷಮತೆ ಪ್ರದರ್ಶಿಸಿದ್ದಾರೆ. ಅತೀವ ಸಾಹಿತ್ಯಾಸಕ್ತಿ ಕೂಡ ಹೊಂದಿರುವ ಅವರು ಓರ್ವ ಜನಸ್ನೇಹಿ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here