ದ.23: ಕಡಬದಲ್ಲಿ ಅದ್ಧೂರಿ ಗುರುವಂದನ ಕಾರ್ಯಕ್ರಮ

0

ಕಡಬ: ಸರಕಾರಿ ಪ್ರೌಢಶಾಲೆಯ 1978-79 ನೇ ಸಾಲಿನ ಶಾಲಾ ಎಸ್‌ಎಸ್‌ಎಲ್‌ಸಿ ಬ್ಯಾಚ್‌ನ ಸಹಪಾಠಿಗಳ ಸಮಿತಿಯ ವತಿಯಿಂದ ಸಂಘದ ಸದಸ್ಯರ ಗುರುಗಳಿಗೆ ಅದ್ಧೂರಿ ಹಾಗೂ ವಿಶಿಷ್ಠ ಗುರುವಂದನಾ ಕಾರ್ಯಕ್ರಮ ಕಡಬ ಸಂತ ಜೋಕಿಮರ ಸಮುದಾಯ ಭವನದಲ್ಲಿ ದ. 23 ರಂದು ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ದೈಹಿಕ ಶಿಕ್ಷಣ ಶಿಕ್ಷಕ ಗಣೇಶ್ ಪಿ ಹೇಳಿದರು.

ಅವರು ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಒಳ್ಳೆಯ ಉದ್ದೇಶ ಹಾಗೂ ನಿರ್ಧಿಷ್ಟ ದೃಷ್ಠಿಕೋನವನ್ನು ಇಟ್ಟುಕೊಂಡು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು. ಕಳೆದ ಸಪ್ಟೆಂಬರ್ ತಿಂಗಳಲ್ಲಿ 1978-79 ನೇ ಶೈಕ್ಷಣಿಕ ಸಾಲಿನ ಹತ್ತನೇ ತರಗತಿಯ 43 ಜನ ಸಹಪಾಠಿಗಳು ೪೩ ವರ್ಷಗಳ ಬಳಿಕ ಒಟ್ಟಾಗಿದ್ದೆವು. ಈ ಸಭೆಯಲ್ಲಿ ನಮಗೆಲ್ಲಾ ಆದರಣೀಯರಾದ ಗುರುಗಳನ್ನು ಗೌರವಿಸಬೇಕೆನ್ನುವ ನಿರ್ಧಾರಕ್ಕೆ ಬರಲಾಗಿತ್ತು. ಈ ಕಾರ್ಯ ಯಶಸ್ವಿಯಾಗಲು ಕಾರ್ಯಕಾರಿ ಸಮಿತಿಯೊಂದನ್ನು ರಚಿಸಿಕೊಂಡು ಗುರುವಂದನಾ ಕಾರ್ಯಕ್ರಮಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದೆ.

ಕಾರ್ಯಕ್ರಮವನ್ನು ಕಡಬ ಸರಕಾರಿ ಪ್ರೌಢ ಶಾಲೆಯಲ್ಲೇ ಮಾಡಬೇಕೆನ್ನುವ ಆಲೋಚನೆ ಇದ್ದರೂ ಅಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಹಿನ್ನೆಲೆಯಲ್ಲಿ ಕಡಬ ಸೈಂಟ್ ಜೋಕಿಮ್ಸ್ ಸಮುದಾಯ ಭವನದಲ್ಲಿ ಕಾರ್ಯಕ್ರಮ ನಡೆಸಲಾಗುವುದು, ನಾವು ಕಲಿತ ಶಾಲೆಗೆ ಅಗತ್ಯವಿರುವ ಕೆಲವು ಮೂಲಭೂತ ಸೌಕರ್ಯಗಳನ್ನು ಒದಗಿಸುವುದು, ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ನೀಡುವುದು ಹಾಗೂ ಇನ್ನಿತರ ಸಮಾಜಮುಖಿ ಕಾರ್ಯಗಳನ್ನು ಮಾಡುವುದು ನಮ್ಮ ಮುಂದಿನ ಗುರಿಯಾಗಿದೆ. ಗುರುವಂದನಾ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಡಿ.ಶ್ರೀಧರ ಭಾಗವತ್, ಎನ್.ಕುಕ್ಕ ಗೌಡ, ಕೆ.ಆನಂದ, ಇ.ವೆಂಕಟಕೃಷ್ಣ, ಕೆ.ವಿ.ಗಣಪಯ್ಯ, ಎಂ.ತಿರುಮಲೇಶ್ವರ ಭಟ್, ಬಿ.ಪುಟ್ಟಣ್ಣ, ಎಂ.ಗೋಪಾಲಕೃಷ್ಣ ವೈದ್ಯ, ಪಿ.ರಾಮಚಂದ್ರ ಗೌಡ, ಟಿ.ವಿಠಲ ಶೆಟ್ಟಿ ಮುಂತಾದವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಹೇಳಿದ ಗಣೇಶ್ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ.ಆರ್ ವಹಿಸಲಿದ್ದಾರೆ.

ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಗುಡ್ಡಪ್ಪ ಗೌಡ ಬಲ್ಯ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ರಾಷ್ಟ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಗಂಗಾಧರ ಕೆ.ಆರ್ ಸನ್ಮಾನ ನೆರವೇರಿಸಲಿದ್ದಾರೆ. ಸೈಂಟ್ ಜೋಕಿಮ್ಸ್ ವಿದ್ಯಾ ಸಂಸ್ಥೆಗಳ ಸಂಚಾಲಕ ಫಾ|ಅರುಣ್ ವಿಲ್ಸನ್ ಲೋಬೋ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ವಿವರ ನೀಡಿದರು. ಪತ್ರಿಕಾ ಗೋಷ್ಠಿಯಲ್ಲಿ ಸಮಿತಿಯ ಕಾರ್ಯದರ್ಶಿ ಕೆ.ಎಂ.ಚಾಕೋ, ಖಜಾಂಜಿ ಜೋನ್ ವೇಗಸ್, ಸದಸ್ಯರಾದ ಕಿಟ್ಟಣ್ಣ ರೈ, ನಾಗಪ್ಪ ಗೌಡ, ರೆಬೆಕಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here