ಬೆಳಗಾವಿಯಲ್ಲಿ ನಡೆಯುತ್ತಿದ್ದ ಗ್ರಾಪಂ ನೌಕರರ ಪ್ರತಿಭಟನೆಗೆ ತೆರೆ

0

ಮನವಿ ಸ್ವೀಕರಿಸಿದ ಸಚಿವ ಗೋವಿಂದ ಕಾರಜೋಳ, ಬೇಡಿಕೆ ಈಡೇರಿಸುವ ಭರವಸೆ

@ ಸಿಶೇ ಕಜೆಮಾರ್

ಪುತ್ತೂರು: ಗ್ರಾಮ ಪಂಚಾಯತ್ ನೌಕರರಿಗೆ ಸಿ ಮತ್ತು ಡಿ ದರ್ಜೆ ಸ್ಥಾನಮಾನ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ಶ್ರೇಯೋಭಿವೃದ್ಧಿ ಸಂಘದ ಆಶ್ರಯದಲ್ಲಿ ಬೆಳಗಾವಿ ಸುವರ್ಣ ವಿಧಾನ ಸೌಧದ ಎದುರು ನಡೆಸುತ್ತಿದ್ದ ಅನಿರ್ಧಿಷ್ಟಾವಧಿ ಪ್ರತಿಭಟನೆಯನ್ನು ದ.19 ರಂದು ಸಂಜೆ ಹಿಂದಕ್ಕೆ ಪಡೆದುಕೊಂಡಿದ್ದಾರೆ.

ಗ್ರಾಪಂ ನೌಕರರ ಹೋರಾಟದಲ್ಲಿ ಗ್ರಾಮ ಪಂಚಾಯತ್ ನೌಕರರ ಅಹವಾಲು ಸ್ವೀಕರಿಸಲು ಮುಖ್ಯ ಮಂತ್ರಿಗಳ ಪರವಾಗಿ ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ಯವರ ಸೂಚನೆಯಂತೆ ಪ್ರಮುಖ ಮತ್ತು ಮಧ್ಯಮ ನೀರಾವರಿ ಸಚಿವರಾದ ಗೋವಿಂದ ಕಾರಜೋಳ ರವರು ಆಗಮಿಸಿ ಮನವಿಯಲ್ಲಿ ನೀಡಲಾದ ಬೇಡಿಕೆಗಳ ಕುರಿತು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸರಕಾರದ ಪರವಾಗಿ ಆಶ್ವಾಸನೆಯನ್ನು ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದುಕೊಳ್ಳಲಾಗಿದೆ.

ಪ್ರತಿಭಟನಾ ಸ್ಥಳಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ರವರ ಸೂಚನೆಯಂತೆ ವಿಪಕ್ಷದ ಉಪ ನಾಯಕ ಯು ಟಿ ಖಾದರ್ ರವರು ಆಗಮಿಸಿ ಗ್ರಾಮ ಪಂಚಾಯತ್ ನೌಕರರ ಬೇಡಿಕೆಗಳ ಕುರಿತು ಅಧಿವೇಶನದಲ್ಲಿ ಚರ್ಚೆಗೆ ಹಾಕಿ ಈಡೇರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಆಶ್ವಾಸನೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ಶ್ರೇಯೋಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಡಾ.ದೇವಿಪ್ರಸಾದ್ ಬೊಳ್ಮರವರು ಸರಕಾರದ ಮತ್ತು ವಿರೋದ ಪಕ್ಷದಿಂದ ಪ್ರಥಮ ಆಶ್ವಾಸನೆಯನ್ನು ಸ್ವೀಕರಿಸುವ ಮೂಲಕ ತಾತ್ಕಲಿಕವಾಗಿ ಹೋರಾಟವನ್ನು ಕೈಬಿಡುವುದಾಗಿ ಮತ್ತು ಒಂದು ವೇಳೆ ಸರಕಾರದಿಂದ ಗ್ರಾಮ ಪಂಚಾಯತ್ ನೌಕರರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದನೆ ಸಿಗದೇ ಇದ್ದರೆ, ಬೆಂಗಳೂರಿನಲ್ಲಿ ರಾಜ್ಯದ 6000 ಕ್ಕೂ ಅಧಿಕ ಗ್ರಾಮ ಪಂಚಾಯತಿಗಳ ಎಲ್ಲಾ 65000ಕ್ಕೂ ಅಧಿಕ ಗ್ರಾಮ ಪಂಚಾಯತ್ ನೌಕರರನ್ನು ಸೇರಿಸಿ ಹೋರಾಟವನ್ನು ಕೈಗೊಳ್ಳುವುದಾಗಿ ಘೋಷಣೆ ಮಾಡಿದರು.

ಗ್ರಾಮೀಣಾಭಿವೃಧ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮ ಪಂಚಾಯತ್ ನೌಕರರಾದ ಬಿಲ್ಲ್ ಕಲೇಕ್ಟರ್, ಕ್ಲರ್ಕ್ ಕಮ್ ಡಿಇಓ, ಡಾಟ ಎಂಟ್ರೀ ಅಪರೇಟರ್, ವಾಟರ್ ಮ್ಯಾನ್, ಪಂಪುಚಾಲಕ, ಶುಚಿತ್ವ ನೌಕರರು ಹಾಗೂ ಅಟೆಂಡರ್ ಗಳು ಭವಿಷ್ಯ ನಿಧಿ ಇಲ್ಲದೇ, ಆರೋಗ್ಯ ಭದ್ರತೆ ಇಲ್ಲದೇ, ಸರಿಯಾದ ವೇತನ ಶ್ರೇಣಿ ಇಲ್ಲದೇ, ಉದ್ಯೋಗ ಭದ್ರತೆ ಇಲ್ಲೆದೇ, ನಿವೃತ್ತಿ ಜೀವನಕ್ಕೆ ಭದ್ರತೆ ಇಲ್ಲದೇ ಕಳೆದ ಮೂರು ದಶಕಗಳಿಂದ ಕೇವಲ ಕನಿಷ್ಠ ಕೂಲಿ ಪಡೆದು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಗ್ರಾಮ ಪಂಚಾಯತ್ ನೌಕರರಿಗೆ ಸೂಕ್ತ ಸ್ಥಾನಮಾನ ಮತ್ತು ಸವಲತ್ತುಗಳನ್ನು ನೀಡದೇ ಕೇವಲ ಕನಿಷ್ಠ ವೇತನ ನೀಡಿ ಜೀತದಾಳುಗಳಂತೆ ಹಗಲಿರುಳು ದುಡಿಸಿಕೊಳ್ಳುತ್ತಿದ್ದು, ಗ್ರಾಮೀಣ ಭಾಗದಲ್ಲಿನ ರಾಜಕೀಯ ಒತ್ತಡ, ಮೇಲಾಧಿಕಾರಿಗಳ ಒತ್ತಡದೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಗ್ರಾಮ ಪಂಚಾಯತ್ ನೌಕರ ಬಹು ಮುಖ್ಯ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಪಂಚಾಯತ್ ನೌಕರರೇ ಸೇರಿ ದ.19 ರಂದು ಬೆಳಗಾವಿಯಲ್ಲಿ ಬೃಹತ್ ಹೋರಾಟ ನಡೆಸಿದ್ದೇವೆ ಎಂದು ದೇವಿಪ್ರಸಾದ್ ಬೊಳ್ಮರವರು ತಿಳಿಸಿದ್ದಾರೆ.

ಹೋರಾಟದಲ್ಲಿ ಭಾಗವಹಿಸಿದ ಸುಮಾರು 12000 ಕ್ಕೂ ಅಧಿಕ ಗ್ರಾಮ ಪಂಚಾಯತ್ ನೌಕರರು ನೌಕರರು ನೀಡಿದ ಬೇಡಿಕೆಗಳು ಕಾಲಮಿತಿಯೋಳಗೆ ಈಡೇರದೇ ಇದ್ದಲ್ಲಿ ಮುಂದಿನ ಚುನಾವಣೆಯನ್ನು ನೌಕರರು, ನೌಕರರ ಕುಟುಂಬದವರು ಮತ್ತು ಗೆಳೆಯರೊಂದಿಗೆ ಬಹಿಸ್ಕರಿಸಲು ಕರೆ ನೀಡಬೇಕು ಎಂದು ಒಕ್ಕೋರಲದಿಂದ ಮಂಡನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಪದ್ಮನಾಭ ಆರ್ ಕುಲಾಲ್, ಹೋರಾಟ ಸಮಿತಿ ಅಧ್ಯಕ್ಷ ದಯಾನಂದ ಪೆರುವಾಜೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಶೋಧರ ಬೆದ್ರ, ಜಿಲ್ಲಾಧ್ಯಕ್ಷ ಗಂಗಾಧರ ನಾಯ್ಕ, ಉಡುಪಿ ಜಿಲ್ಲಾ ಅಧ್ಯಕ್ಷ ಪ್ರಶಾಂತ್ ಕಂಕನಾಡಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲಾ ಸಮಿತಿಯ ಜಿಲ್ಲಾಧ್ಯಕ್ಷರು ಮತ್ತು ಪದಾಧಿಕಾರಿಗಳು, ರಾಜ್ಯದ ವಿವಿಧ ತಾಲೂಕು ಸಮಿತಿಯ ಜಿಲ್ಲಾಧ್ಯಕ್ಷರು ಮತ್ತು ಪದಾಧಿಕಾರಿಗಳು, ರಾಜ್ಯದ ವಿವಿಧ ಜಿಲ್ಲಾ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷರು ಮತ್ತು ಪದಾಧಿಕಾರಿಗಳು, ರಾಜ್ಯದ ವಿವಿಧ ತಾಲೂಕು ಹೋರಾಟ ಸಮಿತಿಯ ಸಮಿತಿಯ ಜಿಲ್ಲಾಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

ಗ್ರಾಪಂ ನೌಕರರ ಪ್ರಮುಖ ಬೇಡಿಕೆಗಳು
1. ಗ್ರಾಮ ಪಂಚಾಯತ್ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕ್ಲರ್ಕ್/ಕ್ಲಕ್ ಕಮ್ ಡಿಇಓ, ಬಿಲ್ಲ್ ಕಲೇಕ್ಟರ್ ಹಾಗೂ ಡಾಟ ಎಂಟ್ರೀ ಅಪರೇಟರ್ ಗಳಿಗೆ ಸಿ ದರ್ಜೆಗೆ ಮೇಲ್ದರ್ಜೆಗೇರಿಸಬೇಕು ಮತ್ತು ಅಟೆಂಡರ್, ಕ್ಲೀನರ್ಸ್, ವಾಟರ್ ಮ್ಯಾನ್/ಪಂಪು ಚಾಲಕ ಇತ್ಯಾದಿ ವೃಂದಗಳನ್ನು ಡಿ ದರ್ಜೆಗೆ ಮೇಲ್ದರ್ಜೆಗೇರಿಸುವ ಮೂಲಕ ನಗರ ಮತ್ತು ಪಟ್ಟಣ ಪಂಚಾಯತ್ ನಲ್ಲಿ ಇರುವಂತೆ ಪಂಚಾಯತ್ ನೌಕರರಿಗೆ ಕನಿಷ್ಠ ವೇತನ ಬದಲು ವೇತನ ಶ್ರೇಣಿ ನಿಗಧಿಪಡಿಸಬೇಕು, ಜೊತೆಗೆ ನೌಕರರು ಮತ್ತು ನೌಕರರ ಅವಲಂಬಿತರಿಗೆ ಸರಕಾರದಿಂದ ಆರೋಗ್ಯ ಭದ್ರತೆಯೊಂದಿಗೆ ಪಂಚಾಯತ್ ನೌಕರರ ಮುಂದಿನ ನಿವೃತ್ತಿ ಜೀವನಕ್ಕೆ ಆರ್ಥಿಕ ಭದ್ರತೆಯ ವ್ಯವಸ್ಥೆಯನ್ನು ಕಲ್ಪಿಸಬೇಕು.

2. ಗ್ರಾಮ ಪಂಚಾಯತ್ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ವಾಟರ್ ಮ್ಯಾನ್, ಶುಚಿತ್ವ ನೌಕರ, ಅಟೆಂಡರ್, ಬಿಲ್ಲ್ ಕಲೇಕ್ಟರ್ ಮತ್ತು ಕ್ಲರ್ಕ್ ಕಮ್ ಡಾಟ ಎಂಟ್ರಿ ಅಪರೇಟರ್ ವೃಂದದ ಎಲ್ಲಾ ನೌಕರರಿಗೆ ಅವರ ವಿದ್ಯಾರ್ಹತೆ ಮತ್ತು ವಯೋಮಿತಿಯನ್ನು ಪರಿಗಣಿಸಿದೇ ಹಾಗೂ ಪಂಚಾಯತಿಗಳಲ್ಲಿ ಹುದ್ದೆಗಳ ಗರಿಷ್ಠ ಮೀತಿಯನ್ನು ಮತ್ತು ಯಾವುದೇ ಕಾಲಮಿತಿಯನ್ನು ನಿಗದಿಪಡಿಸಿದೆ ರಾಜ್ಯದಲ್ಲಿರುವ ಎಲ್ಲಾ ನೌಕರರಿಗೂ ಜಿಲ್ಲಾ ಪಂಚಾಯತ್ ನಿಂದ ಕಡ್ಡಾಯವಾಗಿ ಅನುಮೋದನೆ ನೀಡಬೇಕು. ಮತ್ತು ಗ್ರಾಮ ಪಂಚಾಯತ್ ಡಾಟ ಎಂಟ್ರಿ ಅಪರೇಟರ್ ಹುದ್ದೆಗಳನ್ನು ನೇರನೇಮಕಾತಿ ಮಾಡಿಕೊಳ್ಳದೆ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ರಾಜ್ಯದ ಎಲ್ಲಾ ಡಾಟ ಎಂಟ್ರೀ ಅಪರೇಟರ್ ಗಳಿಗೆ ಕಡ್ಡಾಯವಾಗಿ ಜಿಲ್ಲಾ ಪಂಚಾಯತ್ ಅನುಮೋದನೆ ನೀಡಿ ಸೇವಾ ಭದ್ರತೆ ಒದಗಿಸಬೇಕು.

3. ಜಿಲ್ಲಾ ಪಂಚಾಯತ್ ಅನುಮೋದನೆಯಾಗಲಿ ಅಥವಾ ಆಗದೇ ಇರಲಿ ಪಂಚಾಯತ್ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಗ್ರಾಮ ಪಂಚಾಯತ್ ನೌಕರರಿಗೆ ನಿವೃತ್ತಿ ಉಪಧನ ಮಂಜೂರು ಮಾಡಬೇಕು, ಸದ್ರಿ ನಿವೃತ್ತಿ ಉಪಧನ ಪಾವತಿಸಲು ಜಿಲ್ಲಾ ಪಂಚಾಯತ್ ಮಟ್ಟದಲ್ಲಿ ಸರಕಾರವೇ ಒಂದು ಶಾಶ್ವತ ನಿಧಿಯನ್ನು ಕಾಯ್ದಿರಿಸಿ ಪಂಚಾಯತ್ ನೌಕರರ ನಿವೃತ್ತಿ ಆದ ಒಂದು ತಿಂಗಳ ಒಳಗಾಗಿ ಗೌರವಯುತವಾಗಿ ಅವರಿಗೆ ಸಂದಾಯವಾಗಬೇಕಾದ ನಿವೃತ್ತಿ ಉಪಧನವನ್ನು ಪಾವತಿ ಮಾಡಬೇಕು.

LEAVE A REPLY

Please enter your comment!
Please enter your name here