ಅಖಿಲ ಭಾರತ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾಟಕ್ಕೆ ಅದ್ದೂರಿಯ ಚಾಲನೆ

0

ಉಪ್ಪಿನಂಗಡಿ: ಮಂಗಳೂರು ವಿವಿಯು ಐದು ದಿನಗಳ ಕಾಲ ಆಯೋಜಿಸಿರುವ ಪುರುಷರ ಅಖಿಲ ಭಾರತ ಅಂತರ ವಿವಿ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟಕ್ಕೆ ಜ.13ರಂದು ಸಂಜೆ ಉಪ್ಪಿನಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅದ್ದೂರಿಯ ಚಾಲನೆ ದೊರಕಿದೆ.

ರಾಷ್ಟ್ರ ಧ್ವಜದ ಬಣ್ಣವನ್ನು ಸಂಕೇತಿಸುವ ಬಲೂನುಗಳನ್ನು ಗಗನದೆತ್ತರಕ್ಕೆ ಹಾರಿಬಿಡುವ ಮೂಲಕ ಶಾಸಕ ಹಾಗೂ ಕಾಲೇಜಿನ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಸಂಜೀವ ಮಠಂದೂರು ಅವರು ಪಂದ್ಯಾಟಕ್ಕೆ ಚಾಲನೆ ನೀಡಿದರು. ಅದರೊಂದಿಗೆ ನೂರಾರು ಬಣ್ಣಬಣ್ಣದ ಬಲೂನುಗಳನ್ನು ಹಾರಿಬಿಡಲಾಯಿತು. ಬಳಿಕ ಮಾತನಾಡಿದ ಶಾಸಕರು, ಬಾಲ್ ಬ್ಯಾಡ್ಮಿಂಟನ್ ಆಟವು ಭಾರತದ ಗ್ರಾಮೀಣ ಕ್ರೀಡೆಯಾಗಿದ್ದು, ತಮಿಳುನಾಡಿನ ತಂಜಾವೂರಿನ ಶ್ರೀಮಂತ ಮನೆತನದವರಿಂದ ಈ ಕ್ರೀಡೆ ಹುಟ್ಟಿಕೊಂಡಿತು. ದೇಶದ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸುವಲ್ಲಿ ನಮ್ಮೆಲ್ಲರ ಜವಾಬ್ದಾರಿ ಹೆಚ್ಚಿದೆ. ಗ್ರಾಮೀಣ ಭಾಗದಲ್ಲಿ ಈ ಕ್ರೀಡೆಯಿಂದ ಆಯೋಜನೆಗೊಂಡಿರುವ ನಮ್ಮೂರಿಗೆ ಹೆಮ್ಮೆಯ ವಿಷಯವಾಗಿದ್ದು, ಕ್ರೀಡಾಳುಗಳು ಕ್ರೀಡಾ ಸೂರ್ತಿಯಿಂದ ಆಡಬೇಕು ಹಾಗೂ ತೆರೆದ ಹೃದಯದಿಂದ ತೀರ್ಪನ್ನು ಸ್ವೀಕರಿಸುವ ಮನೋಭಾವವನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಮುಖ್ಯ ಅತಿಥಿಯಾಗಿದ್ದ ಮಂಗಳೂರು ವಿವಿಯ ರಿಜಿಸ್ಟ್ರಾರ್ ಡಾ. ಕಿಶೋರ್ ಕುಮಾರ್ ಸಿ.ಕೆ. ಮಾತನಾಡಿ, ಬೋಧನೆ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಮಂಗಳೂರು ವಿವಿಯು ಉತ್ತಮವಾಗಿ ತೊಡಗಿಸಿಕೊಂಡಿದ್ದು, ಕ್ರೀಡಾಳುಗಳಿಗೆ ಉತ್ತಮ ಪ್ರೋತ್ಸಾಹ, ಸಹಕಾರ ಹಾಗೂ ಮೂಲ ಸೌಕರ್ಯ ನೀಡುವಲ್ಲಿ ರಾಜ್ಯದಲ್ಲೇ ಮುಂದಿದೆ ಎಂದರಲ್ಲದೆ, ಈ ಪಂದ್ಯಾಟದಿಂದ ಇನ್ನಷ್ಟು ಸಾಧಕರು ಸೃಷ್ಟಿಯಾಗಬೇಕು ಎಂದು ಶುಭಹಾರೈಸಿದರು.

ವೇದಿಕೆಯಲ್ಲಿ ಬಾಲ್ ಬ್ಯಾಡ್ಮಿಂಟನ್‌ನಲ್ಲಿ ಏಕಲವ್ಯ ಪ್ರಶಸ್ತಿ ಪುರಸ್ಕೃತರಾದ ಮುಹಮ್ಮದ್ ಇಲ್ಯಾಸ್, ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಉಷಾಚಂದ್ರ ಮುಳಿಯ ಉಪಸ್ಥಿತರಿದ್ದರು. ಮಂಗಳೂರು ವಿವಿಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಜೆರಾಲ್ಡ್ ಸಿಕ್ವೇರಾ ಸ್ವಾಗತಿಸಿದರು. ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ. ಸುಬ್ಬಪ್ಪ ಕೈಕಂಬ ವಂದಿಸಿದರು. ರಾಷ್ಟ್ರ ಮಟ್ಟದ ಕ್ರೀಡಾ ಸಾಧಕ ಮುತ್ತುಮಿಲ್ ಕ್ರೀಡಾ ಪ್ರತಿಜ್ಞೆ ಬೋಧಿಸಿದರು. ಆಳ್ವಾಸ್ ಕಾಲೇಜಿನ ರಾಜೇಶ್ ಹಾಗೂ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ ಮುತ್ತು ಕಾರ್ಯಕ್ರಮ ನಿರೂಪಿಸಿದರು. ಒಟ್ಟು 89 ತಂಡಗಳು ನೋಂದಾವಣೆ ಮಾಡಿಕೊಂಡಿದ್ದು, ಜ.14ರಂದು ಬೆಳಗ್ಗೆ 7:30ರಿಂದ ಆರು ಅಂಕಣಗಳಲ್ಲಿ ಪಂದ್ಯಾಟಗಳು ಆರಂಭಗೊಳ್ಳಲಿವೆ.

ಆಕರ್ಷಕ ಕ್ರೀಡಾ ಜ್ಯೋತಿ ಮೆರವಣಿಗೆ: ಉಪ್ಪಿನಂಗಡಿ ಕಾಲೇಜಿನ ಹಿರಿಯ ಕ್ರೀಡಾಪಟುಗಳಾದ ಮುಹಮ್ಮದ್ ರಫೀಕ್ ಹಾಗೂ ಸಂದೇಶ್ ಅವರ ತಂಡ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದಿಂದ ಕ್ರೀಡಾ ಜ್ಯೋತಿಯನ್ನು ಆಕರ್ಷಕ ಮೆರವಣಿಗೆಯ ಮೂಲಕ ಕಾಲೇಜು ಕ್ರೀಡಾಂಗಣಕ್ಕೆ ತಂದರು. ಉಪ್ಪಿನಂಗಡಿ ಬ್ಯಾಂಕ್ ರಸ್ತೆಯಾಗಿ ಕಾಲೇಜು ಮೈದಾನಕ್ಕೆ ಆಗಮಿಸಿದ ಮೆರವಣಿಗೆಯೊಂದಿಗೆ ನೂರಾರು ವಿದ್ಯಾರ್ಥಿಗಳು, ಸ್ಕೌಟ್ಸ್ ವಿದ್ಯಾರ್ಥಿಗಳು ಕ್ರೀಡಾಭಿಮಾನಿಗಳು ಹೆಜ್ಜೆಹಾಕಿದರು. ಇದರೊಂದಿಗೆ ತುಳುನಾಡ ಸಂಸ್ಕೃತಿಯನ್ನು ಬಿಂಬಿಸುವ ಹುಲಿ ಕುಣಿತ, ಕೇರಳ ಚೆಂಡೆ, ನಾಸಿಕ್ ಬ್ಯಾಂಡ್, ಡೊಳ್ಳು ಕುಣಿತ, ಕೀಲು ಕುದುರೆ, ತಟ್ಟಿರಾಯ, ಗೊಂಬೆ ಕುಣಿತವು ಮೆರವಣಿಗೆಗೆ ಹೊಸ ಮೆರುಗನ್ನು ತಂದು ಕೊಟ್ಟವು. ಬಳಿಕ ಮೈದಾನದಲ್ಲಿ ಕ್ರೀಡಾಳುಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಶಾಸಕ ಸಂಜೀವ ಮಠಂದೂರು ಗೌರವ ವಂದನೆ ಸ್ವೀಕರಿಸಿದರು.

LEAVE A REPLY

Please enter your comment!
Please enter your name here