ಸಾವಿತ್ರಿ ವಿಜಯ ಗೋಪಾಲ್‌ರವರಿಗೆ ಶ್ರದ್ಧಾಂಜಲಿ

0

ಪುತ್ತೂರು: ಪ್ರಗತಿ ಸ್ಟಡಿ ಸೆಂಟರ್‌ನ ಪಿ.ವಿ ಗೋಕುಲ್‌ನಾಥ್ ರವರ ತಾಯಿ ಸಾವಿತ್ರಿ ವಿಜಯ ಗೋಪಾಲ್ ರವರ ಶ್ರದ್ಧಾಂಜಲಿ ಸಭೆಯು ಫೆ.8ರಂದು ಕಲ್ಲಾರೆ ಶ್ರೀಗುರು ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ನಡೆಯಿತು.

ನ್ಯಾಯವಾದಿ ಪಿ.ಕೆ. ಸತೀಶನ್ ದೀಪ ಪ್ರಜ್ವಲನೆ ಮಾಡಿದರು.
ನುಡಿ‌ ನಮನ ಸಲ್ಲಿಸಿದ ಶಿಕ್ಷಕ ರಮೇಶ್ ಉಳಯ ಮಾತನಾಡಿ, 86 ವರ್ಷಗಳ ಸುದೀರ್ಘ ಜೀವನ ನಡೆಸಿದ ಸಾವಿತ್ರಿ ವಿಜಯ ಗೋಪಾಲ್ ರವರು ಅಪಾರ ಮಾನವ ಪ್ರೀತಿಯ ವ್ಯಕ್ತಿತ್ವ ಹೊಂದಿದ್ದವರು. ತನ್ನ ಮಕ್ಕಳಿಗೆ ಆವಶ್ಯಕವಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಿದ ಬಳಿಕವೇ ಮರಣವನ್ನಪ್ಪಿದ ಅವರು ಖುಷಿಯ ಮರಣವನ್ನು ಪಡೆದವರಾಗಿದ್ದಾರೆ. ನೃತ್ಯ ಪಟುವಾಗಿದ್ದ ಅವರು ಕಲೆಯ ಬಗ್ಗೆ ಅಪಾರ ಗೌರವ ಹೊಂದಿದ್ದರು ಎಂದರು. ನಿವೃತ್ತ ಶಿಕ್ಷಕ ನಾರಾಯಣ ರೈ ಕುಕ್ಕುವಳ್ಳಿ ಮಾತನಾಡಿ, ಸಮಾಜ‌ಸೇವಕರಾಗಿ, ಸಕಾರಾತ್ಮಕ ಜೀವನ‌ ನಡೆಸಿದವರು. ಹೃದಯವಂತಿಕೆಯ ತಾಯಿಯಾಗಿದ್ದರು. ತೃಪ್ತ ಜೀವನವನ್ನು ಅನುಭವಿಸಿ,‌ ಕುಟುಂಬವನ್ನು ಬೆಳಸಿದವರು. ಅವರ ಜೀವನದ ಆದರ್ಶ ಬದುಕಿಗೆ ತಿರುವುಕೊಡುವ ಸಂಸ್ಥೆಯನ್ನು ಬೆಳೆಸುವಲ್ಲಿ‌ ಸಹಕಾರಿಯಾಗಿದ್ದು ಅದಕ್ಕೆ ಪೂರಕವಾಗಿ ಪ್ರಗತಿ ಸ್ಟಡಿ‌ ಸೆಂಟರ್ ಬೆಳೆಯುತ್ತಿದೆ ಎಂದರು. ಪೆರ್ನಾಜೆ ಸೀತಾರಾಘವ ಪ್ರೌಢಶಾಲಾ ಮುಖ್ಯಗುರು ಸುಜಾತ ಮಾತನಾಡಿ, ಆತ್ಮೀಯತೆ, ಪ್ರೀತಿಯಿಂದ ಎಲ್ಲರೊಂದಿಗಿದ್ದ ಸಾವಿತ್ರಿಯವರ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಉತ್ತಮ ಸಂಸ್ಕಾರವಂತರಾಗಿದ್ದರು. ಶಿಕ್ಷಣದ ಬಗ್ಗೆ ಅಪಾರ ಕಾಳಜಿಯಿಂದಿದ್ದರು. ಇಂದು ಅವರ ಪುತ್ರ ಬಡ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಿದ್ದಾರೆ ಎಂದರು.

ಆರ್ಯಭಟ ಪ್ರಶಸ್ತಿ ಪುರಸ್ಕೃತ ನೃತ್ಯ ಗುರು ವಿದ್ವಾನ್ ದೀಪಕ್ ಕುಮಾರ್ ಮಾತನಾಡಿ, ಸಾವಿತ್ರಿಯವರು ತಾಯಿಯಂತೆ ಪ್ರೀತಿಯಿಂದ ಮಾತನಾಡುತ್ತಿದ್ದರು. ಕಷ್ಟ,‌ಸವಾಲುಗಳನ್ನು ಎದುರಿಸಿದ್ದರೂ ಸಂತೋಷದಿಂದ ಇದ್ದರು. ಕಲೆಯ ಮೇಲೆ ಬಹಳಷ್ಟು ಪ್ರೀತಿ ಹೊಂದಿದ್ದ ಅವರು ನನ್ನ ಜೀವನದಲ್ಲಿ ದೊಡ್ಡ ಅಧ್ಯಾಯವಾಗಿದ್ದರು ಎಂದರು.

ಸಿಡ್ಕೋ ಸೊಸೈಟಿ ಅಧ್ಯಕ್ಷ ಟಿ.ವಿ‌ ರವೀಂದ್ರನ್,‌ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ ಶಿವಾನಂದ, ಸುರೇಶ್ ಶೆಟ್ಟಿ, ಸವಣೂರು ವಿದ್ಯಾರಶ್ಮೀ ಸಮೂಹ ಶಿಕ್ಷಣ ಸಂಸ್ಥೆಗಳ ಅಶ್ವಿನ್ ಎಲ್‌ ಶೆಟ್ಟಿ, ಉದ್ಯಮಿಗಳಾದ ಉದಯ ಕುಮಾರ್, ಪ್ರಸನ್ನ ಶೆಟ್ಟಿ, ಇಂದುಶೇಖರ್, ರಾಜೇಶ್ ಸೇರಿದಂತೆ ಹಲವು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here