ನಾರ್ಯ ಮುಂಡಾಡಿಗುತ್ತು ದಿ| ನಾರಾಯಣ ಶೆಟ್ಟಿ ಕಂಪ ಸ್ಮರಣಾರ್ಥ ಮುಂಡೂರು ಶಾಲೆಯಲ್ಲಿ ಕಲಿಕಾ ಕುಟೀರ ‘ನಾರಾಯಣಿ’ ಉದ್ಘಾಟನೆ

0

ದಿ.ನಾರಾಯಣ ಶೆಟ್ಟಿಯವರು ಆದರ್ಶ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು-ಗಣ್ಯರ ಅಭಿಮತ

ಪುತ್ತೂರು: ಮಾಜಿ ಮಂಡಲ ಪ್ರಧಾನ ನಾರ್ಯ ಮುಂಡಾಡಿಗುತ್ತು ದಿ| ನಾರಾಯಣ ಶೆಟ್ಟಿ ಕಂಪ ಸ್ಮರಣಾರ್ಥ ಮುಂಡೂರು ಸ.ಉ.ಹಿ.ಪ್ರಾ.ಶಾಲೆಯಲ್ಲಿ ನಿರ್ಮಿಸಲಾದ ಕಲಿಕಾ ಕುಟೀರ ‘ನಾರಾಯಣಿ’ ಇದರ ಉದ್ಘಾಟನೆ ಫೆ.13ರಂದು ನಡೆಯಿತು. ದಿ.ನಾರಾಯಣ ಶೆಟ್ಟಿ ಕಂಪ ಅವರ ಪತ್ನಿ ಮುಂಡೂರು ಪ್ರಾ.ಕೃ.ಪ.ಸಹಕಾರಿ ಸಂಘದ ನಿರ್ದೇಶಕಿ ಗುಲಾಬಿ ಎನ್ ಶೆಟ್ಟಿ ಕಂಪ ಅವರು ನಾಮಫಲಕ ಅನಾವರಣಗೊಳಿಸಿ, ದೀಪ ಪ್ರಜ್ವಲನಗೊಳಿಸಿ ಕಲಿಕಾ ಕುಟೀರವನ್ನು ಶಾಲಾರ್ಪಣೆ ಮಾಡಿದರು. ಬಳಿಕ ಸಭಾ ಕಾರ್ಯಕ್ರಮ ನಡೆಯಿತು.

ಎದೆಗಾರಿಕೆ ಇರುವ ನಾಯಕರಾಗಿದ್ದರು-ಬಿ.ವಿ ಸೂರ್ಯನಾರಾಯಣ:

ನಾರ್ಯ ಮುಂಡಾಡಿಗುತ್ತು ದಿ| ನಾರಾಯಣ ಶೆಟ್ಟಿ ಕಂಪ ಅವರ ಬಗ್ಗೆ ಸಭೆಗೆ ವಿವರಿಸಿದ ನಿವೃತ್ತ ಪ್ರಾಂಶುಪಾಲರಾದ ಬಿ.ವಿ ಸೂರ್ಯನಾರಾಯಣ ಎಲಿಯ ಮಾತನಾಡಿ ದಿ.ನಾರಾಯಣ ಶೆಟ್ಟಿಯವರು ತನ್ನ ಜೀವಿತಾವಧಿಯಲ್ಲಿ ಉತ್ತಮ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡು ಜೀವನ ನಡೆಸಿದ್ದು ಅವರು ಅಜಾತ ಶತ್ರುವಾಗಿದ್ದರು ಎಂದು ಹೇಳಿದರು. ನರಿಮೊಗರು ಮಂಡಲ ಅಧ್ಯಕ್ಷರಾಗಿದ್ದ ಅವರು ಮಿನಿ ಎಂಎಲ್‌ಎ ಆಗಿದ್ದರು. ಅವರಿಗೆ ಯಾರೂ ಪ್ರತಿಸ್ಪರ್ಧಿಗಳು, ವಿರೋಧಿಗಳು ಇರಲಿಲ್ಲ. ರಾಜಕೀಯವಾಗಿ ಎಲ್ಲರಿಗಾಗಿ ಅವರು ಕೆಲಸ ಮಾಡಿದ್ದರು. ಆಗಿನ ಕಾಲದಲ್ಲಿ ಇಂಗ್ಲೀಷ್ ಪತ್ರಿಕೆಯನ್ನು ಓದುತ್ತಿದ್ದ ಅವರು ಓರ್ವ ಎದೆಗಾರಿಕೆ ಇರುವ ನಾಯಕನಾಗಿ ಸಮಾಜದಲ್ಲಿ ಗುರುತಿಸಿಕೊಂಡಿದ್ದರು ಎಂದು ಅವರು ಹೇಳಿದರು.

ಮಾದರಿ ಕಾರ್ಯಕ್ರಮ -ಜಗನ್ನಾಥ ರೈ:

ಬೆಂಗಳೂರಿನಲ್ಲಿ ಎಸಿಪಿಯಾಗಿರುವ ಜಗನ್ನಾಥ ರೈ ಮಾತನಾಡಿ ಹಣ ಇರುವವರು ಸಾಕಷ್ಟು ಇದ್ದಾರೆ ಆದರೆ ದಾನ ಮಾಡುವವರು ಕಡಿಮೆ. ಈ ನಿಟ್ಟಿನಲ್ಲಿ ಗುಲಾಬಿ ಎನ್ ಶೆಟ್ಟಿ ಕುಟುಂಬ ಮಾದರಿ ಎಂದು ಹೇಳಿದರು. ಅನೇಕ ಸಮಸ್ಯೆಗಳನ್ನು ತನ್ನ ಮನೆಯಲ್ಲೇ ಪರಿಹರಿಸಿಕೊಡುತ್ತಿದ್ದ ನಾರಾಯಣ ಶೆಟ್ಟಿಯವರು ಜನತೆಗೆ ನ್ಯಾಯ ಒದಗಿಸುತ್ತಿದ್ದರು ಎಂದು ಹೇಳಿದರು.

ಊರಿನ ಅಭಿವೃದ್ಧಿಗೆ ಶ್ರಮಿಸುತ್ತಿದ್ದರು-ಸೊರಕೆ:

ಮುಂಡೂರು ಪ್ರಾ.ಕೃ.ಪ.ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಸೊರಕೆ ಮಾತನಾಡಿ ನಾರ್ಯ ಮುಂಡಾಡಿಗುತ್ತು ದಿ| ನಾರಾಯಣ ಶೆಟ್ಟಿ ಕಂಪ ಅವರು ಪ್ರತಿಯೊಂದು ಉತ್ತಮ ವಿಚಾರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಿದ್ದು ಸಮಾಜಮುಖಿಯಾದ ಕೆಲಸ ಮಾಡುವ ಮನೋಭಾವ ಅವರಲ್ಲಿತ್ತು. ಊರಿಗೆ ಬೇಕಾದ ಅವಶ್ಯಕತೆಗಳನ್ನು ಪೂರೈಕೆ ಮಾಡುತ್ತಿದ್ದ ಅವರು ಎಲ್ಲರ ಜೊತೆಗೂಡಿ ಊರಿನ ಅಭಿವೃದ್ಧಿಗೆ ಶ್ರಮಿಸುತ್ತಿದ್ದರು ಎಂದು ಹೇಳಿದರು.

ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದರು-ಭಾಸ್ಕರ ಆಚಾರ್:

ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ಸಂಚಾಲಕ ಭಾಸ್ಕರ ಆಚಾರ್ ಹಿಂದಾರು ಮಾತನಾಡಿ ದಿ.ನಾರಾಯಣ ಶೆಟ್ಟಿಯವರು ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದ ವ್ಯಕ್ತಿಯಾಗಿದ್ದರು. ಪಕ್ಷ ಬೇರೆ ಬೇರೆಯಾದರೂ ನಾವೆಲ್ಲಾ ಊರಿನಲ್ಲಿ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದೆವು ಎಂದು ಹೇಳಿದರು. ತಮ್ಮ ಗಳಿಕೆಯಲ್ಲಿ ಸಮಾಜಕ್ಕೆ ನೀಡುವ ಮನಸ್ಸನ್ನು ಎಲ್ಲರೂ ಮಾಡಬೇಕೆಂದು ಹೇಳಿದ ಭಾಸ್ಕರ ಆಚಾರ್ ಅವರು ಕಲಿಕಾ ಕುಟೀರವನ್ನು ಚೆನ್ನಾಗಿ ನಿರ್ವಹಣೆ ಮಾಡಿ ಎಂದು ಶಾಲೆಯವರಿಗೆ ಕಿವಿಮಾತು ಹೇಳಿದರು.

ಸಮಸ್ಯೆಗೆ ಸ್ಪಂದಿಸುತ್ತಿದ್ದರು-ಯಾಕೂಬ್:

ಮುಂಡೂರು ಪ್ರಾ.ಕೃ.ಪ.ಸ.ಸಂಘದ ಉಪಾಧ್ಯಕ್ಷ ಯಾಕೂಬ್ ಮುಲಾರ್ ಮಾತನಾಡಿ ನಾರಾಯಣ ಶೆಟ್ಟಿಯವರು ಎಲ್ಲರೊಂದಿಗೆ ಆತ್ಮೀಯವಾಗಿದ್ದುಕೊಂಡು ಸಮಸ್ಯೆಗೆ ಸ್ಪಂದಿಸುತ್ತಿದ್ದರು ಎಂದು ಹೇಳಿದರು.

ತುಂಬ ಖುಷಿಯಾಗಿದೆ-ಪುಷ್ಪಾ ಎನ್:

ಅಧ್ಯಕ್ಷತೆ ವಹಿಸಿದ್ದ ಮುಂಡೂರು ಗ್ರಾ.ಪಂ ಅಧ್ಯಕ್ಷೆ ಪುಷ್ಪಾ ಎನ್ ಮಾತನಾಡಿ ಸರಳ ಸಜ್ಜನಿಕೆಯ ಗುಲಾಬಿ ಎನ್ ಶೆಟ್ಟಿಯವರು ಅವರ ಪತಿಯ ಸ್ಮರಣಾರ್ಥ ಶಾಲೆಗೆ ಕಲಿಕಾ ಕುಟೀರ ಕಟ್ಟಿಸಿಕೊಟ್ಟಿರುವುದು ಮಾದರಿ ಕಾರ್ಯವಾಗಿದೆ. ಈ ಕಾರ್ಯಕ್ರಮ ನಾನು ಬಯಸದ ಕ್ಷಣವಾಗಿದ್ದು ತುಂಬ ಖುಷಿಯಾಗಿದೆ ಎಂದು ಹೇಳಿದರು.

ಮುಂದಾಲೋಚನೆಯಿದ್ದ ವ್ಯಕ್ತಿಯೆಂದು ತಿಳಿಯಿತು-ವಿಜಯಾ ಪಿ: ಮುಂಡೂರು ಶಾಲಾ ಮುಖ್ಯಗುರು ವಿಜಯಾ ಪಿ ಪ್ರಾಸ್ತಾವಿಕವಾಗಿ ಮಾತನಾಡಿ ದಿ.ನಾರಾಯಣ ಶೆಟ್ಟಿ ಅವರು ಮುಂದಾಲೋಚನೆ ಇರುವ ವ್ಯಕ್ತಿ ಎನ್ನುವುದು ತಿಳಿದು ಬಂದಿದ್ದು ಅವರ ಪತ್ನಿ ಗುಲಾಬಿ ಶೆಟ್ಟಿಯವರು ಸರಳ, ಸೌಜನ್ಯತೆಯ ಮಾದರಿ ಮಹಿಳೆಯಾಗಿದ್ದಾರೆ ಎಂದು ಹೇಳಿದರು. ಕಲಿಕಾ ಕುಟೀರದ ಮಹತ್ವದ ಬಗ್ಗೆ ವಿವರಿಸಿದ ಅವರು ಅದರ ಅವಶ್ಯಕತೆ ಮತ್ತು ಉಪಯೋಗದ ಬಗ್ಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಶಶಿಕುಮಾರ್ ರೈ ಬಾಲ್ಯೊಟ್ಟು, ಸಾಜ ರಾಧಾಕೃಷ್ಣ ಆಳ್ವ, ಮೋಹನ್ ರೈ ನರಿಮೊಗರು, ಸದಾಶಿವ ಶೆಟ್ಟಿ ಪಟ್ಟೆ, ಇಬ್ರಾಹಿಂ ಮುಲಾರ್, ದಂಬೆಕ್ಕಾನ ಸದಾಶಿವ ರೈ, ಡಾ.ಸೀತರಾಮ ಭಟ್ ಕಲ್ಲಮ, ಅನಿಲ್ ಕಣ್ಣಾರ್ನೂಜಿ, ಜಯಪ್ರಕಾಶ್ ರೈ ಚೆಲ್ಯಡ್ಕ, ಬಾಲಕೃಷ್ಣ ಕಣ್ಣಾರಾಯ, ಅಬ್ದುಲ್ ರಹಿಮಾನ್ ಮುಲಾರ್, ಸರೋಜಿನಿ ಶೆಟ್ಟಿ ನೇಸರಕಂಪ, ಶಿವರಾಮ ಆಳ್ವ, ಎ.ಕೆ ಜಯರಾಮ ರೈ, ರಮೇಶ್ ರೈ ಡಿಂಬ್ರಿ, ಚೇತನ್ ರೈ, ಮುಂಡೂರು ಗ್ರಾ.ಪಂ ಸದಸ್ಯರಾದ ಉಮೇಶ್ ಗೌಡ ಅಂಬಟ ಹಾಗೂ ಅರುಣಾ ಕಣ್ಣಾರ್ನೂಜಿ, ಅಶ್ರ- ಮುಲಾರ್ ಮತ್ತಿತರ ಹಲವರು ಉಪಸ್ಥಿತರಿದ್ದರು.

ಶಿಕ್ಷಕಿ ಶಶಿಕಲಾ ಟಿ ಪ್ರಾರ್ಥಿಸಿದರು. ಮುಂಡೂರು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರಮೇಶ್ ಗೌಡ ಪಜಿಮಣ್ಣು ಸ್ವಾಗತಿಸಿದರು. ಗುಲಾಬಿ ಎನ್ ಶೆಟ್ಟಿಯವರ ಪುತ್ರಿ ರೇಶ್ಮಾ ಚಂದ್ರಶೇಖರ್ ಶೆಟ್ಟಿ ವಂದಿಸಿದರು. ಶಿಕ್ಷಕ ಅಬ್ದುಲ್ ಬಶೀರ್ ಕಾರ್ಯಕ್ರಮ ನಿರೂಪಿಸಿದರು.

ಶಿಕ್ಷಕ ವೃಂದದವರಾದ ರವೀಂದ್ರ ಶಾಸಿ, ರಾಮಚಂದ್ರ, ವನಿತಾ ಅದೇ ರೀತಿ ಚಂದ್ರಶೇಖರ್ ಶೆಟ್ಟಿ, ರೇಶ್ಮಾ ಚಂದ್ರಶೇಖರ್ ಶೆಟ್ಟಿ, ದಾಮೋದರ ರೈ, ಸುಶ್ಮಾ ದಾಮೋದರ ರೈ, ಸುಶೀಕ್ತ್ ಶೆಟ್ಟಿ ಮೊದಲಾದವರು ಅತಿಥಿಗಳನ್ನು ಗೌರವಿಸಿದರು.

ಕಲಿಕಾ ಕುಟೀರ ಕಟ್ಟಡ ನಿರ್ಮಿಸಿದ ಗುತ್ತಿಗೆದಾರ ರಾಜ್‌ಕುಮಾರ್ ಅವರನ್ನು ಗುಲಾಬಿ ಎನ್ ಶೆಟ್ಟಿಯವರು ಇದೇ ಸಂದರ್ಭದಲ್ಲಿ ಶಾಲು ಹೊದಿಸಿ ಗೌರವಿಸಿದರು.

ಆತ್ಮ ತೃಪ್ತಿಯಿದೆ-ಗುಲಾಬಿ ಎನ್ ಶೆಟ್ಟಿ
ನನ್ನ ಪತಿಯ 10ನೇ ವರುಷದ ಪುಣ್ಯ ಸ್ಮರಣಾರ್ಥ ಮುಂಡೂರು ಶಾಲೆಗೆ ಕಲಿಕಾ ಕುಟೀರ ನಿರ್ಮಿಸಿಕೊಟ್ಟಿರುವುದಕ್ಕೆ ನನಗೆ ಆತ್ಮ ತೃಪ್ತಿಯಿದೆ. ಈ ಕಲಿಕಾ ಕುಟೀರ ಮಕ್ಕಳಿಗೆ ಉಪಯೋಗವಾಗಲಿ ಎನ್ನುವ ದೃಷ್ಟಿಯಲ್ಲಿ ಶಾಲೆಗೆ ಕಟ್ಟಿಸಿಕೊಟ್ಟಿದ್ದೇವೆ. ಕಾರ್ಯಕ್ರಮದಲ್ಲಿ ಪ್ರೀತಿಯಿಟ್ಟು ಭಾಗವಹಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ.
-ಗುಲಾಬಿ ಎನ್ ಶೆಟ್ಟಿ ಕಂಪ

ಮುಂಡೂರು ಶಾಲೆಯ ಅಭಿವೃದ್ಧಿಗೆ ದಾನಿಗಳು ಉತ್ತಮ ಸಹಕಾರ ನೀಡುತ್ತಿದ್ದಾರೆ. ನಾರ್ಯ ಮುಂಡಾಡಿಗುತ್ತು ದಿ| ನಾರಾಯಣ ಶೆಟ್ಟಿ ಕಂಪ ಸ್ಮರಣಾರ್ಥ ಅವರ ಪತ್ನಿ ಗುಲಾಬಿ ಎನ್ ಶೆಟ್ಟಿ ಮತ್ತು ಕುಟುಂಬಸ್ಥರು ಕಲಿಕಾ ಕುಟೀರ ನಿರ್ಮಿಸಿಕೊಟ್ಟಿದ್ದು ಶಾಲೆಯ ಇನ್ನಷ್ಟು ಅಭಿವೃದ್ಧಿಗೆ ಕಾರಣವಾಗಿದೆ. ಮುಂಡೂರು ಶಾಲೆಯನ್ನು ಮಾದರಿ ಶಾಲೆಯನ್ನಾಗಿ ರೂಪಿಸುವ ಗುರಿ ನಮ್ಮದು. ಅದಕ್ಕಾಗಿ ಎಲ್ಲರ ಸಹಕಾರ ಬಯಸುತ್ತಿದ್ದೇವೆ.
-ರಮೇಶ್ ಗೌಡ ಪಜಿಮಣ್ಣು,
ಅಧ್ಯಕ್ಷರು ಎಸ್‌ಡಿಎಂಸಿ ಮುಂಡೂರು ಶಾಲೆ

ಗುಲಾಬಿ ಎನ್ ಶೆಟ್ಟಿಯವರಿಗೆ ಗೌರವಾರ್ಪಣೆ
ಮುಂಡೂರು ಶಾಲೆಗೆ ಪತಿಯ ಸ್ಮರಣಾರ್ಥ ಕಲಿಕಾ ಕುಟೀರ ನಿರ್ಮಿಸಿಕೊಟ್ಟ ಗುಲಾಬಿ ಎನ್ ಶೆಟ್ಟಿ ಕಂಪ ಅವರನ್ನು ಮುಂಡೂರು ಶಾಲೆಯ ಪರವಾಗಿ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿದ ಗುಲಾಬಿ ಎನ್ ಶೆಟ್ಟಿ ಮಾತನಾಡಿದರು. ಶಿಕ್ಷಕ ರಾಮಚಂದ್ರ ಸನ್ಮಾನ ಪತ್ರ ವಾಚಿಸಿದರು.

ಶಿವದೂತ ಗುಳಿಗೆ ನಾಟಕ
ಹಾಗೂ ನಾರ್ಯಬೀಡು ಗುಲಾಬಿ ಎನ್ ಶೆಟ್ಟಿ ಕಂಪ ಪ್ರಾಯೋಜಕತ್ವದಲ್ಲಿ ಶ್ರೀ ವಿಜಯ ಕುಮಾರ್ ಕೋಡಿಯಾಲ್‌ಬೈಲ್ ನಿರ್ದೇಶನದ ತುಳು ಸೂಪರ್ ಹಿಟ್ ನಾಟಕ ‘ಶಿವದೂತ ಗುಳಿಗೆ’ ನಡೆಯಿತು. ನೂರಾರು ಮಂದಿ ನಾಟಕ ವೀಕ್ಷಿಸಿದರು.

LEAVE A REPLY

Please enter your comment!
Please enter your name here