ಕೋಡಿಂಬಾಡಿ: ನಮ್ಮ ಬೂತ್ ನಮ್ಮ ಜವಾಬ್ದಾರಿ ಕಾಂಗ್ರೆಸ್ ಕಾರ್ಯಕರ್ತರ ನವ ಸಂಕಲ್ಪ ಮಾಹಿತಿ ಕಾರ್ಯಾಗಾರ

0

  • ಬಿಜೆಪಿಯವರು ಭಾವನಾತ್ಮಕ ವಿಚಾರ ಹುಟ್ಟು ಹಾಕ್ತಾರೆ- ಭರತ್ ಮುಂಡೋಡಿ
  • ನಕಲಿ ಹಿಂದುತ್ವವನ್ನು ಗುರಾಣಿಯಾಗಿ ಬಳಸುತ್ತಿದ್ದಾರೆ-ಎಂ.ಜಿ. ಹೆಗಡೆ
  • ಹುಮ್ಮಸ್ಸಿನಿಂದ ಕೆಲಸ ಮಾಡಬೇಕು-ಅಶೋಕ್ ರೈ

ಪುತ್ತೂರು: ಕಾಂಗ್ರೆಸ್ ಪಕ್ಷದ ಸರಕಾರ ಮತ್ತು ಶಾಸಕರು ಎಷ್ಟೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿದರೂ ಬಿಜೆಪಿಯವರು ಹಿಂದೂ ಮುಸ್ಲಿಂ ಎಂಬ ಭಾವನಾತ್ಮಕ ವಿಷಯಗಳನ್ನು ಯುವಕರ ತಲೆಯಲ್ಲಿ ಹುಟ್ಟು ಹಾಕಿ ಮತ ನಮ್ಮ ಪರವಾಗಿ ಬೀಳದಂತೆ ನೋಡಿಕೊಳ್ಳುತ್ತಾರೆ. ಈ ಪ್ರವೃತ್ತಿಯನ್ನು ಬದಲಿಸುವ ಕಾರ್ಯವನ್ನು ನಮ್ಮ ಪಕ್ಷದ ಕಾರ್ಯಕರ್ತರು ಮಾಡಬೇಕು ಎಂದು ಕೆಪಿಸಿಸಿ ವಕ್ತಾರ ಭರತ್ ಮುಂಡೋಡಿ ಹೇಳಿದರು.

ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟುವಿನಲ್ಲಿ ನಡೆದ ನಮ್ಮ ಬೂತ್ ನಮ್ಮ ಜವಾಬ್ದಾರಿ ಕಾಂಗ್ರೆಸ್ ಕಾರ್ಯಕರ್ತರ ನವ ಸಂಕಲ್ಪ ಮಾಹಿತಿ ಕಾರ್ಯಾಗಾರ ಮತ್ತು ಮನೆ ಮನೆ ಪ್ರಚಾರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ತರಬೇತಿ ನೀಡಿ ಅವರು ಮಾತನಾಡಿದರು.

ಬಿಜೆಪಿಯವರು ಅಲ್ಲಲ್ಲಿ ಹಿಂದೂ ಹೃದಯ ಸಂಗಮ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಹಿಂದೂ ಧರ್ಮದ ಅಭಿವೃದ್ಧಿಗಾಗಿ, ಅಸಹಾಯಕ ಹಿಂದೂಗಳಿಗೆ ನೆರವು ನೀಡುವುದಕ್ಕಾಗಿ ಹಿಂದೂ ಸಂಗಮವಾಗಬೇಕು. ಆದರೆ ಪರ ಧರ್ಮ ನಿಂದನೆ ಮಾಡಲು ನಮಗೆ ಹಿಂದೂ ಸಂಗಮದ ಅಗತ್ಯವಿಲ್ಲ. ಇದನ್ನು ಜನರಿಗೆ ಪರಿಣಾಮಕಾರಿಯಾಗಿ ತಿಳಿಸುವ ಕೆಲಸ ಕಾರ್ಯಕರ್ತರಿಂದ ಆಗಬೇಕು ಎಂದ ಅವರು, ಕಾರ್ಯಕರ್ತರು ಮೊದಲು ಮನೆಯವರಿಗೆ ಬೇಕಾದವರು ಆಗಬೇಕು. ಬಳಿಕ ನೆರೆಹೊರೆಯವರಿಗೆ, ಆಮೇಲೆ ಊರಿನವರಿಗೆ ಬೇಕಾದವನಾದರೇ ಮಾತ್ರ ಪಕ್ಷ ಬೆಳೆಸಲು ಸಾಧ್ಯ. ಕಾರ್ಯಕರ್ತರು ಇಂತಹ ವ್ಯಕ್ತಿತವನ್ನು ಬೆಳೆಸಬೇಕು ಎಂದರು.

ಸಂಪನ್ಮೂಲ ವ್ಯಕ್ತಿಯಾಗಿದ್ದ ಹಿರಿಯ ಮುಖಂಡ ಎಂ .ಜಿ. ಹೆಗ್ಗಡೆ ಮಾತನಾಡಿ ಬ್ರಿಟಿಷರು ದೇಶವನ್ನು ಬಿಟ್ಟು ಹೋದ ಸಂದರ್ಭ ದೇಶದ ಆರ್ಥಿಕ ಸಾಮಾಜಿಕ ಸ್ಥಿತಿ ಅಧೋಗತಿಯಲ್ಲಿತ್ತು. ಆಹಾರ, ರಸ್ತೆ, ಶಿಕ್ಷಣ, ಶುದ್ಧ ನೀರು ಹೀಗೆ ಮೂಲಭೂತ ಸಮಸ್ಯೆಗಳು ತಾಂಡವವಾಡುತ್ತಿದ್ದ ದೇಶವನ್ನು ಮೊದಲ ಪ್ರಧಾನಿ ನೆಹರೂ ಸೇರಿದಂತೆ ಎಲ್ಲಾ ಪ್ರಧಾನಿಗಳು ಅಭಿವೃದ್ದಿಯತ್ತ ಕೊಂಡೊಯ್ದರು. ಇದನ್ನು ನಮ್ಮ ಕಾರ್ಯಕರ್ತರು ತಮ್ಮ ಮನೆ ಮನೆ ಭೇಟಿಯ ವೇಳೆ ಮತದಾರರರಗೆ ವಿವರಿಸಬೇಕು ಎಂದರು.
ಬಿಜೆಪಿಯವರು ತಮ್ಮ ಅಡಳಿತದ ವೈಫಲ್ಯವನ್ನು ಮುಚ್ಚಿ ಹಾಕಲು ನಕಲಿ ಹಿಂದುತ್ವವನ್ನು ಗುರಾಣಿಯಾಗಿ ಬಳಸುತ್ತಿದ್ದಾರೆ. ಇದನ್ನು ಮತದಾರರ ಮನಸ್ಸಿನಿಂದ ತೊಡೆದುಹಾಕುವ ಸಾಮರ್ಥ್ಯವನ್ನು ನಮ್ಮ ಕಾರ್ಯಕರ್ತರು ಬೆಳೆಸಿಕೊಳ್ಳಬೇಕು. ಮುಂದಿನ ಚುನಾವಣೆಯವರೆಗೆ ಕಾರ್ಯಕರ್ತರು ಭಾಗವಹಿಸುವ ಪ್ರತಿ ಕಾರ್ಯಕ್ರಮ, ಸಭೆ ಸಮಾರಂಭ, ಮನೆ ಭೇಟಿಯ ವೇಳೆ ಪಕ್ಷದ ಪರ ಪ್ರಚಾರ ಕಾರ್ಯ ಮಾಡಬೇಕು, ಬಿಜೆಪಿಯ ಸಾಂಸ್ಕೃತಿಕ ರಾಜಕಾರಣವನ್ನು ಹಿಮ್ಮೆಟ್ಟಿಸದೇ ಇದ್ದರೆ ಕಾಂಗ್ರೆಸ್ ಗೆಲ್ಲುವುದಿಲ್ಲ. ಸಮಾಜದಲ್ಲಿ ಧರ್ಮಗಳ ನಡುವಿನ ಕಂದಕವು ವಿಸ್ತಾರವಾಗಿ ದೇಶಕ್ಕೂ ಹಾನಿಯಾಗಲಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಕೋಡಿಂಬಾಡಿ ರೈ ಎಸ್ಟೇಟ್ ಮಾಲಕ ಅಶೋಕ್ ಕುಮಾರ್ ರೈ ಮಾತನಾಡಿ ಪಕ್ಷದ ಕಾರ್ಯಕರ್ತರು ನಾವು ಗೆಲ್ಲಲಿದ್ದೇವೆ ಎಂಬ ಹುಮ್ಮಸ್ಸಿನಲ್ಲಿ ಕೆಲಸ ಮಾಡಬೇಕು. ಮತದಾರರ ಪಟ್ಟಿಗೆ ಹೆಚ್ಚು ಹೆಚ್ಚು ಮತದಾರರನ್ನು ಸೇರಿಸುವ ಕಾರ್ಯ ಮಾಡಬೇಕು. ಪ್ರತಿ ಬೂತ್ ನಲ್ಲೂ ಅಲ್ಲಿನ ಕಾರ್ಯಕರ್ತರು ಪಕ್ಷದ ಪರವಾಗಿ ಬ್ಯಾನರ್ ಗಳನ್ನು ಹಾಕಬೇಕು ಎಂದು ಹೇಳಿದರು.

ಕಾರ್ಯಕ್ರಮ ಸಂಘಟಿಸಿದ್ದ ಕೋಡಿಂಬಾಡಿ ಬೂತ್ 52ರ ಅಧ್ಯಕ್ಷ ಪ್ರಭಾಕರ ಸಾಮಾನಿ ಮತ್ತು ವಲಯ ಕಾಂಗ್ರೆಸ್ ಅಧ್ಯಕ್ಷ ಮೋನಪ್ಪ ಗೌಡ ಪಮ್ಮನಮಜಲು ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ. ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಗ್ರಾ.ಪಂ.ಮಾಜಿ ಅಧ್ಯಕ್ಷ ಎ. ಮುರಳಿಧರ ರೈ ಮಠಂತಬೆಟ್ಟು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎಂ. ನಿರಂಜನ ರೈ ಮಠಂತಬೆಟ್ಟು ಹಾಗೂ ಗ್ರಾ.ಪಂ. ಸದಸ್ಯ ಜಗನ್ನಾಥ ಶೆಟ್ಟಿ ನಡುಮನೆ ಕಾರ್ಯಕ್ರಮ ನಿರೂಪಿಸಿದರು.

ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಮುಖಂಡರಾದ ಸತೀಶ್ ಕುಮಾರ್ ಕೆಡೆಂಜಿ, ಚಂದ್ರಹಾಸ ರೈ, ಡಾ.ರಘು ಬೆಳ್ಳಿಪ್ಪಾಡಿ, ಪ್ರವೀಣ್ ಚಂದ್ರ ಆಳ್ವ, ಮಹಮ್ಮದ್ ಬಡಗನ್ನೂರು, ಜಯಪ್ರಕಾಶ್ ಬದಿನಾರು, ಉಮಾನಾಥ ಶೆಟ್ಟಿ, ಹುಸೈನ್ ಕೆ. ಬಿ. ಕೆ, ವಿಕ್ರಮ್ ಶೆಟ್ಟಿ ಅಂತರ, ಯೋಗೀಶ್ ಸಾಮಾನಿ ಸಂಪಿಗೆದಡಿ, ಬಾಲಕೃಷ್ಣ ಶೆಟ್ಟಿ, ಅಬ್ದುಲ್ ರಹಿಮಾನ್ ಯುನಿಕ್, ಮಿತ್ರದಾಸ ರೈ ಪೆರ್ನೆ, ಮಲ್ಲಿಕಾ ಅಶೋಕ್ ಪೂಜಾರಿ ಕಾಂತಳಿಕೆ, ಪೂರ್ಣೀಮಾ ಯತೀಶ್ ಶೆಟ್ಟಿ ಬರಮೇಲು, ಗೀತಾ ಬಾಬು ಮೊಗೇರ,
ಮೋಹನ್ ಗುರ್ಜಿನಡ್ಕ, ರಾಮಣ್ಣ ಪಿಲಿಂಜ, ಎಲ್ಯಣ್ಣ ಪೂಜಾರಿ, ಮಹಮ್ಮದ್ ವಿಟ್ಲ, ದಿವಾಕರ ಶೆಟ್ಟಿ ಕಾರ್ನೋಜಿ, ಯತೀಶ್ ಶೆಟ್ಟಿ ಬರೆಮೇಲು ಸಹಿತ ನೂರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here