ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿಯಲ್ಲಿ ‘ಕೇಂದ್ರ ಮುಂಗಡಪತ್ರ -2023-24ರ ವಿಶ್ಲೇಷಣೆ

0

ಬೆಟ್ಟಂಪಾಡಿ : ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇಲ್ಲಿನ ಅರ್ಥಶಾಸ್ತ್ರ ವಿಭಾಗ ಮತ್ತು ಆಂತರಿಕ ಗುಣಮಟ್ಟ ಭರವಸಾ ಕೋಶ ಇದರ ಸಹಯೋಗದೊಂದಿಗೆ ‘ಕೇಂದ್ರ ಮುಂಗಡಪತ್ರ -2023-24ರ ವಿಶ್ಲೇಷಣೆ’ ಕಾರ್ಯಕ್ರಮವು ನಡೆಯಿತು.

ಕಲಾ ವಿಭಾಗದ 8 ಅರ್ಥಶಾಸ್ತ್ರ ವಿದ್ಯಾರ್ಥಿನಿಯರು 2023-24 ರ ಕೇಂದ್ರ ಮುಂಗಡ ಪತ್ರದ ಮುಖ್ಯಾಂಶಗಳು, ಆದಾಯ, ತೆರಿಗೆ, ಖರ್ಚು, ಹೊಸ ಯೋಜನೆಗಳು, ಕೋಶೀಯ ಕೊರತೆ ಎಂಬಿವುಗಳ ಕುರಿತು ವಿಚಾರವನ್ನು ಮಂಡಿಸಿದರು.


ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ವರದರಾಜ ಚಂದ್ರಗಿರಿ ಅದ್ಯಕ್ಷೀಯ ನೆಲೆಯಲ್ಲಿ ಮಾತನಾಡುತ್ತಾ, ಕೇಂದ್ರದ ಬಜೆಟ್ ಕುರಿತು ಪ್ರತಿಯೊಬ್ಬರಿಗೂ ತಿಳಿದಿರಬೇಕು. ವಿದ್ಯಾರ್ಥಿಗಳು ಬಜೆಟ್ ನಂತಹ ವಿಷಯಗಳನ್ನು ತಿಳಿದುಕೊಂಡಾಗ ದೇಶದ ಆಗುಹೋಗುಗಳ ಕುರಿತು ಸುಲಭವಾಗಿ ಅರಿಯಲು ಸಾಧ್ಯವಾಗುತ್ತದೆ ಎಂದರು.


ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಚಾಲಕರಾದ ಡಾ| ಕಾಂತೇಶ್ ಅವರು ಕೇಂದ್ರದ ಬಜೆಟ್ ವಿಶ್ಲೇಷಣೆಯ ಮಹತ್ವ ಮತ್ತು ಅಗತ್ಯತೆ ಕುರಿತು ತಿಳಿಸಿ, ಪ್ರತಿಯೊಂದು ವಿಷಯದ ಬಗ್ಗೆ ವಿದ್ಯಾರ್ಥಿಗಳು ಅಗತ್ಯವಾಗಿ ವಿಶ್ಲೇಷಣಾ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು . ಇನ್ನೂ ಇಂತಹ ಕಾರ್ಯಗಾರದಲ್ಲಿ ಭಾಗವಹಿಸಿ. ಅವಕಾಶಗಳನ್ನು ಉಪಯೋಗಿಸಿಕೊಳ್ಳಿ ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.


ನಂತರದ ಅವದಿಯಲ್ಲಿ ನಡೆದ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಾಲಿಗ್ರಾಮ ಇಲ್ಲಿನ ಸಹಾಯಕ ಪ್ರಾಧ್ಯಾಪಕರಾದ ಡಾ| ಚೇತನ .ಬಿ ಇವರು ‘2023-24 ರ ಮುಂಗಡ ಪತ್ರದ ವಿಮರ್ಶೆ’ ಎಂಬ ವಿಷಯದ ಕುರಿತು ಮಾತನಾಡುತ್ತಾ ಬಜೆಟ್ನಲ್ಲಿ ಗುರುತಿಸಲಾದ ವಿವಿಧ ವಲಯಗಳ ಮುಖ್ಯಾಂಶಗಳ ಕುರಿತು ಹಾಗೂ ಆದಾಯ, ಖರ್ಚು ವೆಚ್ಚ ಮತ್ತು ವಿತ್ತೀಯ ಕೊರತೆಯ ಬಗ್ಗೆ ವಿಚಾರ ಮಂಡಿಸಿ, ಹೊಸ ಬಜೆಟ್‍ನಿಂದ ಸಾಮಾನ್ಯ ಜನರಿಗೆ, ಸರಕಾರಕ್ಕೆ, ಉದ್ಯಮಿಗಳಿಗೆ ಮತ್ತು ಇತರರಿಗೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ವಿಶ್ಲೇಷಣೆ ಮಾಡಿದರು.


ಪ್ರಸ್ತಾವಿಕ ನುಡಿಗಳನ್ನು ಮಾತನಾಡುತ್ತಾ ಕಾರ್ಯಕ್ರಮನ್ನು ಆರಂಭಿಸಿದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೋ. ತಿಮ್ಮಯ್ಯ .ಎಲ್.ಎಮ್ ಅವರು ಬಜೆಟ್ ನ ಮಹತ್ವವನ್ನು ಸರಳವಾಗಿ ವಿವರಿಸಿ ಕಾರ್ಯಕ್ರಮದಲ್ಲಿ ಉಪಸ್ತಿತರಿದ್ದ ಗಣ್ಯವ್ಯಕ್ತಿಗಳನ್ನು ಸ್ವಾಗತಿಸಿದರು. ಅರ್ಥಶಾಸ್ತ್ರದ ಉಪನ್ಯಾಸಕಿ ಶ್ರೀಮತಿ ಸಂಧ್ಯಾ ಸುವರ್ಣ ವಂದಿಸಿದರು. ಅಂತಿಮ ಪದವಿ ವಿದ್ಯಾರ್ಥಿನಿ ಅಶಾ ಕಾರ್ಯಕ್ರಮವನ್ನು ನಿರೂಪಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here