ಕಲ್ಲಂದಡ್ಕದಲ್ಲಿ ಕುಳ ವಲಯ ಕಾಂಗ್ರೆಸ್ ವತಿಯಿಂದ ಚುನಾವಣಾ ಪ್ರಚಾರ ಸಭೆ-

0

ಪಕ್ಷದ ಬೆಳವಣಿಗೆಗೆ ನಾವೆಲ್ಲರು ಪಣತೊಡೋಣ: ಅಶೋಕ್ ಕುಮಾರ್ ರೈ

ನಮ್ಮ ಕಾರ್ಯಕರ್ತರು ಯಾವುದೇ ಟೀಕೆ – ಟಿಪ್ಪಣಿ ಗಳಿಗೆ ಕಿವಿಕೊಡದೆ ಮುಂದುವರಿಯಿರಿ: ಡಾ.ರಾಜಾರಾಮ ಕೆ.ಬಿ.

ಕೋಮು ಭಾವನೆಯನ್ನು ಹುಟ್ಟುಹಾಕಿ ಮತಗಿಟ್ಟಿಸುವ ಕೆಲಸ ಬಿಜೆಪಿಯಿಂದ ಆಗುತ್ತಿದೆ: ಎಂ.ಎಸ್. ಮಹಮ್ಮದ್

ನಮ್ಮ ಒಗ್ಗಟ್ಟು ಬಿಜೆಪಿಗೆ ನಡುಕ ಹುಟ್ಟಿಸಿದೆ: ಹೇಮನಾಥ ಶೆಟ್ಟಿ ಕಾವು

ವಿಟ್ಲ: ಬಿಜೆಪಿಗರು ಕಳೆದ ಐದು ವರ್ಷದಲ್ಲಿ ಮಾಡಿದ ಸಾಧನೆ ಶೂನ್ಯವಾಗಿದೆ. ಆದ್ದರಿಂದ ಈ ಭಾರಿ ಚುನಾವಣೆಯಲ್ಲಿ ಮತ ಗಿಟ್ಟಿಸಿಕೊಳ್ಳಲು ನನ್ನ ವಿರುದ್ದ ಅಪಪ್ರಚಾರವನ್ನು ನಡೆಸುತ್ತಿದ್ದಾರೆ‌. ವಿಚಾರದಲ್ಲಿ ಅನೇಕ ವ್ಯತ್ಯಾಸಗಳಿರಬಹುದು. ಅವೆಲ್ಲವನ್ನು ಸರಿಪಡಿಸಿಕೊಂಡು ಮುಂದುವರೆಯೋಣ. ಪಕ್ಷದ ಬೆಳವಣಿಗೆಗೆ ನಾವೆಲ್ಲರು ಪಣತೊಡೋಣ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಕೋಡಿಂಬಾಡಿರವರು ಹೇಳಿದರು.

ಕುಳ ಗ್ರಾಮದ ಕಲ್ಲಂದಡ್ಕದಲ್ಲಿ ನಡೆದ ಕುಳ ವಲಯ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ನಮ್ಮ ತಳಮಟ್ಟದ ಕಾರ್ಯಕರ್ತರನ್ನು ಬಲಿಷ್ಠಗೊಳಿಸುವ ಕೆಲಸವಾಗಬೇಕು. ನಿಜ ವಿಚಾರ ಹೇಳಿ ಜನರ ಮನಸ್ಸುನ್ನು ಪರಿವರ್ತನೆ ಮಾಡುವ ಕೆಲಸವಾಗಬೇಕು. ಕಾರ್ಯಕರ್ತರು ಪ್ರತಿಯೊಂದು ಮನೆಗಳಿಗೆ ತೆರಳಿ ಪಕ್ಷದ ಪ್ರಣಾಳಿಕೆ ಬಗ್ಗೆ ತಿಳಿ ಹೇಳುವ ಕೆಲಸ ಮಾಡಬೇಕು. ನಮ್ಮ ಧರ್ಮವನ್ನು ಪ್ರೀತಿಸಿ ಅನ್ಯಧರ್ಮವನ್ನು ಗೌರವಿಸುವ ಮನಸ್ಸು ನಮ್ಮದಾಗಬೇಕು. ನಾನು ಯಾವತ್ತೂ ಜಾತಿ – ಭೇದ ಮಾಡಿಲ್ಲ. ನಾನು ಧರ್ಮದ ಆಧಾರದಲ್ಲಿ ಕೆಲಸ ಮಾಡಿಲ್ಲ‌, ಮಾನವೀಯತೆಯ ಅಡಿಯಲ್ಲಿ ಕೆಲಸಮಾಡಿದ್ದೇನೆ. ಪುತ್ತೂರಿಗೆ ಅತೀ ಅಗತ್ಯವಿರುವ ಮೆಡಿಕಲ್ ಕಾಲೇಜು ನಿರ್ಮಾಣ ಈವರೆಗೆ ಆಗಿಲ್ಲ. ಐದು ವರ್ಷದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಯಲ್ಲಿ ಬಿಜೆಪಿಯ ಸಾಧನೆ ಶೂನ್ಯವಾಗಿದೆ. ಚುನಾವಣೆ ಸಂದರ್ಭದಲ್ಲಿ ಬಿಜೆಪಿಯವರು ಹಿಂದುತ್ವವನ್ನು ಹೇಳಿಕೊಂಡು ಮತ ಪಡೆಯುವ ಕೆಲಸ ಮಾಡುತ್ತಿದ್ದಾರೆ. ನಿಮ್ಮ ಘನತೆ ಗೌರವಕ್ಕೆ ಚ್ಯುತಿ ಭಾರದಂತೆ ಕೆಲಸ ಮಾಡುತ್ತೇನೆ. ವ್ಯತ್ಯಾಸಗಳು ಎಲ್ಲಾ ಕಡೆಯಲ್ಲಿದೆ ಅದನ್ನು ಸರಿಪಡಿಸಕೊಂಡು ಮುನ್ನಡೆಯೋಣ. ಕಾಂಗ್ರೆಸ್ ಗೆಲುವಿಗೆ ಎಲ್ಲರೂ ಸಹಕರಿಸಿ ಎಂದರು.

ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಾ.ರಾಜಾರಾಮ್ ಕೆ.ಬಿ.ರವರು ಮಾತನಾಡಿ ಬಿಜೆಪಿಗರ ಈ ಕುತಂತ್ರವನ್ನು ಜನರಿಗೆ ಮನಮುಟ್ಟುವ ರೀತಿಯಲ್ಲಿ ನಾವು ತಿಳಿಹೇಳುವ ಕೆಲಸವಾಗಬೇಕು. ನಮ್ಮ ಕಾರ್ಯಕರ್ತರು ಯಾವುದೇ ಟೀಕೆ – ಟಿಪ್ಪಣಿ ಗಳಿಗೆ ಕಿವಿಕೊಡದೆ ಮುಂದುವರಿಯಿರಿ. ಕಾಂಗ್ರೆಸ್ ಈ ಹಿಂದೆ ನೀಡಿದ ಪ್ರಣಾಳಿಕೆಯಂತೆ ನಡೆದುಕೊಂಡಿದೆ. ಕಾಂಗ್ರೆಸ್ ಸರಕಾರ ಪ್ರಾಮಾಣಿಕತೆಯಿಂದ ಕೆಲಸಮಾಡಿದೆ. ಕಾಂಗ್ರೆಸ್ ಸರಕಾರ ನಮಗೆ ಅನಿವಾರ್ಯ. ಸಮಾನತೆಯ ಸಂದೇಶ ಸಾರಿದ ಕಾಂಗ್ರೆಸ್ ಪಕ್ಷ ಜನರಿಗೆ ಬೇಕಾಗಿದೆ. ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಹಚ್ಚುವ ಕೆಲಸ ಬಿಜೆಪಿ ಸರಕಾರದಿಂದ ಆಗುತ್ತಿದೆ. ಅಶೋಕ್ ಕುಮಾರ್ ರೈ ಓರ್ವ ಸಮರ್ಥ ಅಭ್ಯರ್ಥಿ. ಪ್ರತಿಯೋರ್ವ ಬಡವನ ಕಣ್ಣೀರು ಒರೆಸುವ ಕೆಲಸ ಅಶೋಕ್ ಕುಮಾರ್ ರೈಯವರಿಂದ ಆಗಿದೆ. ಅವರನ್ನು ಬಹುಮತದಿಂದ ಗೆಲ್ಲಿಸುವಲ್ಲಿ ನಾವೆಲ್ಲರೂ ಪಣತೊಡೋಣ ಎಂದರು.

ಕೆಪಿಸಿಸಿ ಕಾರ್ಯದರ್ಶಿಯಾದ ಎಂ. ಎಸ್. ಮುಹಮ್ಮದ್ ರವರು ಮಾತನಾಡಿ ಕೋಮು ಭಾವನೆಯನ್ನು ಹುಟ್ಟುಹಾಕಿ ಮತಗಿಟ್ಟಿಸುವ ಕೆಲಸ ಬಿಜೆಪಿಯಿಂದ ಆಗುತ್ತಿದೆ. ಸಮಾಜದ ದುರ್ಬಲ ವರ್ಗವನ್ನು ಮೇಲಕ್ಕೆತ್ತುವ ಕೆಲಸ ಬಿಜೆಪಿಯಿಂದ ಆಗಿಲ್ಲ. ಕಾಂಗ್ರೆಸ್ ಸರಕಾರ ಆಡಳಿತದ ಸಂದರ್ಭದಲ್ಲಿ ಜಾರಿಗೆ ತಂದ ಹಲವಾರು ಸಮಾಜಮುಖಿ ಯೋಜನೆಗಳನ್ನು ಬಿಜೆಪಿ ಸರಕಾರ ತೆಗೆದುಹಾಕಿದೆ. ಜನಪರ ಕೆಲಸಕ್ಕೆ ಒಲವು ತೋರದ ಬಿಜೆಪಿ ಸರಕಾರವನ್ನು ಕಿತ್ತೆಸೆಯಬೇಕಾದ ಅನಿವಾರ್ಯತೆ ಜನತೆಯ ಪಾಲಿಗೆ ಬಂದೊದಗಿದೆ.
ಅಶೋಕ್ ಕುಮಾರ್ ರೈಯವರು ಬಿಜೆಪಿ ಪಕ್ಷದಲ್ಲಿದ್ದರೂ ಕೋಮುವಾಧಿ, ಜಾತಿವಾದಿಯಾಗಿರಲಿಲ್ಲ. ಅವರು ಜೀವನದಲ್ಲಿ ಜಾತ್ಯಾತೀತ ತತ್ವದ ಅಡಿಯಲ್ಲಿ ನಡೆದಿರುವುದರಿಂದ ಅವರಿಗೆ ಬಿಜೆಪಿಯಲ್ಲಿ ಸೀಟು ಸಿಕ್ಕಿಲ್ಲ. ಸಂಪಾದನೆಯ ಒಂದಂಶವನ್ನು ಬಡವರ್ಗಕ್ಕೆ ನೀಡುವ ಕೆಲಸ ಅವರ ಟ್ರಸ್ಟ್ ನ ಮುಖಾಂತರ ಕೊಡುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಅಭ್ಯರ್ಥಿಯ ಗೆಲುವಿಗೆ ಎಲ್ಲರೂ ಒಗ್ಗಟ್ಟಾಗಿ ಸಹಕರಿಸಬೇಕು ಎಂದರು.

ಹಿರಿಯ ನಾಯಕರಾದ ಹೇಮನಾಥ ಶೆಟ್ಟಿ ಕಾವು ಮಾತನಾಡಿ, ಬಿಜೆಪಿಯ ಅನ್ಯಾಯವನ್ನು ಪ್ರಶ್ನೆ ಮಾಡಬೇಕಾದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಿದೆ. ನಾವೆಲ್ಲರೂ ಒಟ್ಟಾಗಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ಪ್ರಯತ್ನಿಸಬೇಕು. ನಮ್ಮ ವಿರುದ್ಧ ಅಪಪ್ರಚಾರ ಮಾಡಿ ಮತಗಳಿಸುವ ಪ್ರಯತ್ನವನ್ನು ಇತರ ಪಕ್ಷಗಳು ಮಾಡುತ್ತಿವೆ. ಬಿಜೆಪಿಯ ತತ್ವಸಿದ್ದಾಂತದಿಂದ ಬೇಸತ್ತು ವಿರುದ್ಧವಾಗಿ ಅಶೋಕ್ ಕುಮಾರ್ ರೈ ಕಾಂಗ್ರೆಸ್ ಗೆ ಸೇರ್ಪಡೆಗೊಂಡಿದ್ದಾರೆ. ನಾವೆಲ್ಲರು ಒಗ್ಗಟ್ಟಾಗಿ ಅವರ ಗೆಲುವಿಗಾಗಿ ಪ್ರಯತ್ನಿಸಬೇಕಿದೆ. ನಮ್ಮ ಒಗ್ಗಟ್ಟು ಬಿಜೆಪಿಗೆ ನಡುಕಹುಟ್ಟಿಸಿದೆ. ಪುತ್ತೂರಿನಲ್ಲಿ ಬಿಜೆಪಿ – ಹಿಂದುತ್ವ ಇಬ್ಬಾಗವಾಗಿದೆ. ಕಾಂಗ್ರೆಸ್ ಪಕ್ಷವನ್ನು ಬಲಿಷ್ಟಗೊಳಿಸುವ ಕೆಲಸ ನಮ್ಮೆಲ್ಲರಿಂದ ಆಗಬೇಕಿದೆ ಎಂದರು.

ಕಬಕ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸಾಬ ಕಬಕ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಉಮನಾಥ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಚಂದ್ರ ಆಳ್ವ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಉಸ್ತುವಾರಿಗಳಾದ ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಮಹೇಶ್ ಅಂಕೊತ್ತಿಮಾರ್, ಪಕ್ಷದ ಮುಖಂಡರಾದ ವೇದನಾಥ್ ಸುವರ್ಣ, ಕುಳ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಸೋಮಶೇಖರ್ ಶೆಟ್ಟಿ ಅಳಕೆಮಜಲ್, ಕೊಡಿಪಾಡಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಸುಬ್ರಹ್ಮಣ್ಯ ಗೌಡ ಹಣಿಯೂರು, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವಕ್ತಾರ ರಮಾನಾಥ ವಿಟ್ಲ, ಜಿಲ್ಲಾ ಪ್ರಚಾರ ಸಮಿತಿ ಜಂಟಿ ಸಂಯೋಜಕರಾದ ವಿ ಕೆ ಎಂ ಅಶ್ರಫ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬೇಬಿ ಗೌಡ ಸೂರ್ಯ, ಪ್ರಮುಖರಾದ ಮೊಹಮ್ಮದ್ ಇಕ್ಬಾಲ್, ರಮ್ಲ ,ಉಮ್ಮರ್ ಬಗ್ಗುಮೂಲೆ, ಉಮ್ಮರ್ ಯು. ಎಸ್ ,ಹನೀಫ್ ಬಗ್ಗುಮೂಲೆ, ಧನ್ಯಶ್ರೀ, ಚೇತನ್ ಕುಳ ಮೊದಲಾದವರು ಉಪಸ್ಥಿತರಿದ್ದರು. ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಮೋಹನ್ ಗುರ್ಜಿನಡ್ಕ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here