ಮೂರು ದಿನಗಳು ನಡೆಯುವ ‘ಪುಸ್ತಕ ಹಬ್ಬ’, ‘ಪುಸ್ತಕದಾನಿಗಳ ಮೇಳ’ ಮತ್ತು ‘ಸಾಹಿತ್ಯ ವೈಭವ’ ಕಾರ್ಯಕ್ರಮ

0

ಐ.ಎ.ಎಸ್- ಐ.ಪಿ.ಎಸ್ ತತ್ಸಮಾನ ಸ್ಪರ್ಧಾತ್ಮಕ ಪರೀಕ್ಷೆಗಳ ಕಾರ್ಯಾಗಾರ ಹಾಗೂ ‘ಐ.ಎ.ಎಸ್ ದರ್ಶನ’ ಎಂಬ ಯೂಟ್ಯೂಬ್ ಚಾನೆಲ್ ಲೋಕಾರ್ಪಣೆ

ಸಾಧನೆಗೆ ಗುರು, ಗುರಿಯೊಂದಿಗೆ ಉರಿಯೂ ಇರಬೇಕು – ಶ್ರೀಲತಾ
ಜನಸ್ನೇಹಿ ಅಧಿಕಾರಿಗಳನ್ನು ಸೃಷ್ಟಿ ಮಾಡಲು ‘ಯಶಸ್ಸು’ ಪ್ರಯತ್ನ – ಡಾ. ಕೆ.ಎಂ.ಕೃಷ್ಣ ಭಟ್
ಪ್ರಾಮಾಣಿಕ ಅಧಿಕಾರಿಗಳಾಗಿ ಪುತ್ತೂರಿನಿಂದ ತಯಾರಾಗಬೇಕು – ಕೃಷ್ಣನಾರಾಯಣ ಮುಳಿಯ

ಪುತ್ತೂರು: ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ನೇತೃತ್ವದಲ್ಲಿ ಜ್ಞಾನ ಗಂಗಾ ಪುಸ್ತಕ ಮಳಿಗೆ ಇವರ ಸಹಕಾರದೊಂದಿಗೆ ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಮೂರು ದಿನಗಳು ನಡೆಯುವ ‘ಪುಸ್ತಕ ಹಬ್ಬ’, ‘ಪುಸ್ತಕದಾನಿಗಳ ಮೇಳ’ ಮತ್ತು ‘ಸಾಹಿತ್ಯ ವೈಭವ’ವದ 2ನೇ ದಿನವಾದ ಆ.12ರಂದು ಬೆಳಿಗ್ಗೆ ವಿವೇಕಾನಂದ ಐ.ಎ.ಎಸ್ ಅಧ್ಯಯನ ಕೇಂದ್ರ ಯಶಸ್ ನೆಹರುನಗರ, ಪುತ್ತೂರು ಇವರ ಸಹಯೋಗದೊಂದಿಗೆ ಆಸಕ್ತ ವಿದ್ಯಾರ್ಥಿಗಳಿಗೆ, ಅಧ್ಯಾಪಕರಿಗೆ ಮತ್ತು ಸಾರ್ವಜನಿಕರಿಗೆ ಐ.ಎ.ಎಸ್- ಐ.ಪಿ.ಎಸ್ ತತ್ಸಮಾನ ಸ್ಪರ್ಧಾತ್ಮಕ ಪರೀಕ್ಷೆಗಳ ಕಾರ್ಯಾಗಾರ ಹಾಗೂ ‘ಐ.ಎ.ಎಸ್ ದರ್ಶನ’ ಎಂಬ ಯೂಟ್ಯೂಬ್ ಚಾನೆಲ್ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು.


ಸಾಧನೆಗೆ ಗುರು, ಗುರಿಯೊಂದಿಗೆ ಉರಿಯೂ ಇರಬೇಕು:
ಕಾರ್ಯಾಗಾರ ಉದ್ಘಾಟಿಸಿದ ಶಿಶು ಅಭಿವೃದ್ಧಿ ಇಲಾಖೆಯ ಯೋಜನಾ ನಿರ್ದೇಶಕಿ ಶ್ರೀಲತಾ ಅವರು ಮಾತನಾಡಿ ಎಷ್ಟೇ ಓದಿದರೂ, ಜ್ಞಾನವಿದ್ದರೂ ಯಾವ ರೀತಿ ಓದಬೇಕು, ಯಾವ ರೀತಿ ಬರೆಯಬೇಕು ಎಂಬುದಕ್ಕೆ ಕೋಚಿಂಗ್ ಸೆಂಟರ್ ಅಗತ್ಯ. ನಾವು ಪರಿಪಕ್ವವಾಗಿರಬೇಕು. ಗುರು, ಗುರಿಯೊಂದಿಗೆ ಉರಿ ಇದ್ದಾಗ ಯಶಸ್ಸು ಸಾಧಿಸಬಹುದು. ಅದಕ್ಕಾಗಿ ತಪ್ಪಸ್ಸಿನ ರೀತಿಯಲ್ಲಿ ಓದಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನಾಡಿದ ಅವರು ತನ್ನ ಶಿಕ್ಷಣದ ಮತ್ತು ಸಾಧನೆಯ ಅನುಭವವನ್ನು ತಿಳಿಸಿದರು.


ಜನಸ್ನೇಹಿ ಅಧಿಕಾರಿಗಳನ್ನು ಸೃಷ್ಟಿ ಮಾಡಲು ‘ಯಶಸ್ಸು’ ಪ್ರಯತ್ನ:
ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೃಷ್ಣ ಭಟ್ ಅವರು ‘ಐ.ಎ.ಎಸ್ ದರ್ಶನ’ ಯೂಟ್ಯೂಬ್ ಚಾನೆಲ್ ಲೋಕಾರ್ಪಣೆ ಮಾಡಿ ಮಾತನಾಡಿದರು. ಶಾಸಕಾಂಗ ಮತ್ತು ಕಾರ್ಯಾಂಗವನ್ನು ರಿಪೇರಿ ಮಾಡದ ರೀತಿಯಲ್ಲಿ ಭ್ರಷ್ಟಾಚಾರ ತುಂಬಿದೆ. ಈ ಕುರಿತು ಬೆಂಗಳೂರನ ವಿಕಾಸ ಸೌಧಕ್ಕೆ ಹೋದರೆ ಅಲ್ಲಿನ ಎಲ್ಲಾ ಇಟ್ಟಿಗೆಗಳು ಕೈ ಚಾಚುವ ಮೂಲಕ ಭ್ರಷ್ಟಾಚಾರದ ಒಂದು ದರ್ಶನ ನೋಡಬಹುದು. ಈ ರೀತಿಯ ವ್ಯವಸ್ಥೆಯನ್ನು ಸರಿಪಡಿಸಲು ಬದಲಾವಣೆಯನ್ನು ತರಬೇಕು. ಜನಸ್ನೇಹಿ ಅಧಿಕಾರಿಗಳನ್ನು ಸೃಷ್ಟಿ ಮಾಡಬೇಕು ಮತ್ತು ಸ್ಪಂಧನೆಯುಳ್ಳ ಅಧಿಕಾರಿಗಳನ್ನು ತಯಾರು ಮಾಡಬೇಕಾದರೆ ಎಳವೆಯಲ್ಲೇ ಕಾರ್ಯಾಂಗಕ್ಕೆ, ಅಧಿಕಾರಿಗಳ ಕಡೆ ಯಾರು ಹೋಗುತ್ತಾರೋ ಅವರಲ್ಲಿ ಶ್ರದ್ದೆ, ನಿಷ್ಠೆ, ದೇಶಪ್ರೇಮವನ್ನು ಬೆಳೆಸಿ ಅವರನ್ನು ಅಧಿಕಾರಿಗಳನ್ನು ಮಾಡುವ ನಿಟ್ಟಿನಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ ಕೂಡಾ ‘ಯಶಸ್ಸು’ ಸಂಸ್ಥೆಯ ಮೂಲಕ ಪ್ರಯತ್ನ ಮಾಡುತ್ತಿದೆ ಎಂದರು.


ಪ್ರಾಮಾಣಿಕ ಅಧಿಕಾರಿಗಳಾಗಿ ಪುತ್ತೂರಿನಿಂದ ತಯಾರಾಗಬೇಕು:
ಮುಳಿಯ ಜ್ಯುವೆಲ್ಸ್‌ನ ಆಡಳಿತ ನಿರ್ದೇಶಕ ಕೃಷ್ಣನಾರಾಯಣ ಮುಳಿಯ ಅವರು ಮಾತನಾಡಿ ಕರ್ನಾಟಕ ರಾಜ್ಯ ಜಿಎಸ್‌ಟಿ ಪಾವತಿ ಮಾಡುವಲ್ಲಿ ದೇಶದಲ್ಲೇ ದ್ವಿತೀಯ ಸ್ಥಾನದಲ್ಲಿದೆ. ಆದರೆ ನಮಗೆ ಇಲ್ಲಿ ಕೊರತೆ ಕಾಣುವುದು ನಮ್ಮ ಭಾಗದ ಐಎಎಸ್, ಐಪಿಎಸ್ ಅಧಿಕಾರಿಗಳು. ಈ ನಿಟ್ಟಿನಲ್ಲಿ ಪುತ್ತೂರಿನಿಂದಲೆ ಪ್ರಾಮಾಣಿಕ ಅಧಿಕಾರಿಗಳು ತಯಾರಬೇಕೆಂದು ಹೇಳಿದರು. ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲೆ ಉಷಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಡಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ದರ್ಶನ್ ಸ್ವಾಗತಿಸಿದರು. ಪ್ರಣವ್ ಭಟ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here