ಇಡ್ಲಿ ತಿಂದು ಶಹಬ್ಬಾಸ್ ಎಂದ ಶಾಸಕರು
ಪುತ್ತೂರು; ಇಲ್ಲಿನ ಇಂದಿರಾ ಕ್ಯಾಂಟೀನ್ಗೆ ಶಾಸಕರಾದ ಅಶೋಕ್ ರೈ ಭೇಟಿ ನೀಡಿ ಕಟ್ಟಡ ಮತ್ತು ಅಲ್ಲಿನ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿದರು. ಬಳಿಕ ಅಲ್ಲಿಂದ ಒಂದು ಪ್ಲೇಟ್ ಇಡ್ಲಿ ಸಾಂಬಾರ್ ಸವಿದರು. ಈ ವೇಳೆ ಅಲ್ಲಿನ ಸಿಬಂದಿಗಳ ಜೊತೆ ಮಾತುಕತೆ ನಡೆಸಿದ ಶಾಸಕರು ಇಲ್ಲಿ ಏನಾದರೂ ಸಮಸ್ಯೆಗಳಿವೆಯೇ ಎಂದು ಕೇಳಿದರು. ಕಟ್ಟಡ ಲೀಕೇಜ್ ಇದೆ ಮತ್ತು ಕೈ ತೊಳೆಯುವ ಸ್ಥಳದಲ್ಲಿ ದುರಸ್ಥಿಯಾಗಬೇಕಿದೆ ಎಂದು ಹೇಳಿದರು.
ದಿನವೊಂದಕ್ಕೆ ಎಷ್ಟು ಮಂದಿ ಇಲ್ಲಿ ಊಟಕ್ಕೆ , ಉಪಾಹಾರಕ್ಕೆ ಬರುತ್ತಿದ್ದಾರೆ ಎಂದು ಶಾಸಕರ ಪ್ರಶ್ನೆಗೆ ಉತ್ತರಿಸಿದ ಸಿಬಂದಿಗಳು ಬೆಳಗ್ಗಿನ ಉಪಾಹಾರಕ್ಕೆ 450 ರಿಂದ 500 ಮಂದಿ ಬರುತ್ತಿದ್ದಾರೆ. ಸರಕಾರಿ ಆಸ್ಪತ್ರೆಯ ಭೇಟಿ ಮತ್ತು ಅಲ್ಲಿನ ರೋಗಿಗಳ ಸಂದರ್ಶನಕ್ಕೆ ಬರುವ ಬಡವರು ಇಲ್ಲಿಗೆ ಉಪಹಾರಕ್ಕೆ ಬರುತ್ತಿದ್ದಾರೆ, ಪಾರ್ಸೆಲ್ ಕೊಂಡು ಹೋಗುತ್ತಿದ್ದಾರೆ. ಮೂರು ಇಡ್ಲಿಗೆ 5 ರೂ ನಂತೆ ನಾವು ಹಣ ಪಡೆದುಕೊಳ್ಳುತ್ತಿದ್ದೇವೆ ಎಂದು ಹೇಳಿದರು. ಮಧ್ಯಾಹ್ನ ಊಟಕ್ಕೆ ವಿದ್ಯಾರ್ಥಿಗಳು ಬರುತ್ತಾರೆ, ಮಧ್ಯಾಹ್ನ ಊಟಕ್ಕೆ ಅನ್ನ, ಸಾಂಬಾರು, ಪಲ್ಯ ಇರುತ್ತದೆ, ಊಟಕ್ಕೆ 10 ರೂ ಎಂದು ಹೇಳಿದರು. ಇಡ್ಲಿ ಸವಿದ ಶಾಸಕರು ತುಂಬಾ ಚೆನ್ನಾಗಿದೆ, ಮೂರು ಇಡ್ಲಿಗೆ ಐದು ರೂ ಹಾಗೂ ಊಟಕ್ಕೆ ಹತ್ತು ರೂ ದರ ನಿಗದಿಮಾಡಲಾಗಿದೆ. ಇದು ರಾಜ್ಯದ ಕಾಂಗ್ರೆಸ್ ಸರಕಾರದ ಯೋಜನೆಯಾಗಿದೆ. ರಾಜ್ಯದಲ್ಲಿ ಯಾರೊಬ್ಬರೂ ಹಸಿವಿನಿಂದ ಇರಬಾರದು ಎಂದು ಉಚಿತ ಅಕ್ಕಿ ಮತ್ತು ಇಂದಿರಾ ಕ್ಯಾಂಟೀನ್ ಆರಂಭಿಸಿದ್ದಾರೆ ಬಡವರು ಬಂದು ಊಟ ಮಾಡಿ ತೆರಳುತ್ತಿದ್ದಾರೆ ಇದಕ್ಕಿಂದ ಪುಣ್ಯ ಬೇರೆ ಬೇಕಾ ಎಂದು ಹೇಳಿದರು.
ಈ ವೇಳೆ ಬ್ಲಾಕ್ ಅಧ್ಯಕ್ಷರಾದ ಎಂ ಬಿ ವಿಶ್ವನಾಥ ರೈ, ನಗರ ಕಾಂಗ್ರೆಸ್ ಅಧ್ಯಕ್ಷರಾದ ಮಹಮ್ಮದ್ ಆಲಿ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶಕೂರ್ ಹಾಜಿ, ಪ್ರಹ್ಲಾದ್ ಬೆಳ್ಳಿಪ್ಪಾಡಿ, ರೋಶನ್ ರೈ ಬನ್ನೂರು, ಹಬೀಬ್ ಕಣ್ಣೂರು, ಸಿದ್ದಿಕ್ ಸುಲ್ತಾನ್, ಸೇರಿದಂತೆ ಕಾಂಗ್ರೆಸ್ ಪಕ್ಷದ ಹಲವು ಮುಖಂಡರು ಉಪಸ್ಥಿತರಿದ್ದರು.