ಅಧಿಕಾರಿಗಳು ಉತ್ತಮ ಆಡಳಿತಕ್ಕೆ ಸಹಕರಿಸಿದರೆ ಭ್ರಷ್ಟಾಚಾರ ಮುಕ್ತ ಜನಪರ ಸೇವೆ ಸಾಧ್ಯ

0

ಮಂಗಳೂರಿನಲ್ಲಿ ಕಂದಾಯ ಇಲಾಖಾ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ

ಪುತ್ತೂರು: ಕಂದಾಯ ಇಲಾಖೆಯ ತಳಮಟ್ಟದ ಅಧಿಕಾರಿಗಳಾದ ವಿಎಗಳಿಂದ ಹಿಡಿದು ಜಿಲ್ಲಾಧಿಕಾರಿಗಳ ತನಕ ಎಲ್ಲರೂ ಪರಸ್ಪರ ಹೊಂದಾಣಿಕೆಯಿಂದ ಜನರ ಕೆಲಸವನ್ನು ಮಾಡಬೇಕು. ಯಾವುದೇ ಕಾರಣಕ್ಕೂ ಜನರನ್ನು ಸತಾಯಿಸುವ ಕೆಲಸವನ್ನು ಮಾಡಬಾರದು. ಫೈಲು ಹಿಡಿದು ಜನ ಸಾಮಾನ್ಯ ಕಚೇರಿಯಿಂದ ಕಚೇರಿಗೆ ಅಲೆದಾಟ ಮಾಡುವಂತೆ ಮಾಡಬೇಡಿ ಎಂದು ಕಂದಾಯ ಸಚಿವ ಕೃಷ್ಣ ಬೈರೇ ಗೌಡ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆ.29ರಂದು ದ.ಕ.ಜಿ.ಪಂ. ನೇತ್ರಾವತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕಂದಾಯ ಪ್ರಗತಿಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳ ಜೊತೆ ಜಿಲ್ಲೆಯ ಅಭಿವೃದ್ದಿಗೆ ಸಂಬಂಧಿಸಿದಂತೆ ಅವರು ಚರ್ಚೆ ನಡೆಸಿದರು.


ಉತ್ತಮ ಹಾಗೂ ಜನಪರ ಆಡಳಿತ ನೀಡಲಿದೆ ಎಂಬ ವಿಶ್ವಾಸದಿಂದ ಮತದಾರರು ನಮಗೆ ಇತಿಹಾಸ ಕಾಣದ ಬಹುಮತ ನೀಡಿದ್ದಾರೆ. ಹೀಗಾಗಿ ಜನಸ್ನೇಹಿ ಆಡಳಿತ ನೀಡಬೇಕು ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಶಯ. ಅಲ್ಲದೆ, ಕಂದಾಯ ಇಲಾಖೆ ಎಲ್ಲಾ ಇಲಾಖೆಗಳ ಮಾತೃ ಇಲಾಖೆ.ಹೀಗಾಗಿ ಈ ಇಲಾಖೆಯಲ್ಲೂ ಸಕಾರಾತ್ಮಕ ಬದಲಾವಣೆ ತರಬೇಕು ಎಂಬ ಕಾರಣದಿಂದಲೇ ನನಗೆ ಈ ಜವಾಬ್ದಾರಿಯನ್ನು ನೀಡಲಾಗಿದೆ. ಆದರೆ, ಅಧಿಕಾರಿಗಳ ಸಹಕಾರ ಇಲ್ಲದೆ ಯಾವ ಬದಲಾವಣೆಯೂ ಸಾಧ್ಯವಿಲ್ಲ. ಅಧಿಕಾರಿಗಳು ಉತ್ತಮ ಆಡಳಿತಕ್ಕೆ ಸಹಕರಿಸಿದರೆ, ಎಲ್ಲರೂ ಒಟ್ಟಾಗಿ ಭ್ರಷ್ಟಾಚಾರ ಮುಕ್ತ ಜನಪರ ಸೇವೆ ನೀಡಬಹುದು ಎಂದು ಸಚಿವರು ಹೇಳಿದರು.ಎಲ್ಲರೂ ಟೀಂ ಆಗಿ ಕೆಲಸ ಮಾಡಿದರೆ ಯಾವುದೇ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಾಗಿದೆ. ಗ್ರಾಮಕರಣಿಕರಿಂದ ಹಿಡಿದು ಜಿಲ್ಲಾಧಿಕಾರಿಗಳ ತನಕ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿದೆ. ಇಲಾಖೆಯಲ್ಲಿ ಯಾವುದೇ ಸಮಸ್ಯೆ ಇದ್ದರೆ ತಿಳಿಸಿ. ಕೇವಲ ಚರ್ಚೆ ಮಾಡಿದರೆ ಅಭಿವೃದ್ದಿಯಾಗಲು ಸಾಧ್ಯವಿಲ್ಲ. ಜನರಿಗೆ ಇಲಾಖೆಯ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳುವುದೇ ಸಮಸ್ಯೆಯಾಗಿದೆ.ಜನೋಪಯೋಗಿಯಾಗಿ ನಾವು ಕೆಲಸ ಮಾಡಬೇಕು. ಜನರ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬೇಕಿದೆ ಎಂದು ಸಚಿವರು ಹೇಳಿದರು.

ಪುತ್ತೂರಲ್ಲಿ ಮಾತ್ರ ಫೈಲ್ ಪೆಂಡಿಂಗ್ ಯಾಕೆ?:
ಪುತ್ತೂರಿನಲ್ಲಿ ಮಾತ್ರ 5 ವರ್ಷಗಳ ಹಿಂದಿನ ಕೇಸು ಎಸಿ ಕೋರ್ಟಲ್ಲಿ ಬಾಕಿ ಇದೆ.ರಾಜ್ಯದ ಎಲ್ಲಿಯೂ ಐದು ವರ್ಷದ ಹಿಂದಿನ 18 ಕೇಸುಗಳೂ ಬಾಕಿ ಇಲ್ಲ ಪುತ್ತೂರಲ್ಲಿ ಮಾತ್ರ ಯಾಕೆ ಇದೆ? ಯಾವ ಕಾರಣಕ್ಕೆ ಅದು ಬಾಕಿಯಾಗಿದೆ? ಎಂದು ಸಚಿವರು ಸಹಾಯಕ ಆಯುಕ್ತ ಗಿರೀಶ್ ನಂದನ್ ಅವರನ್ನು ಪ್ರಶ್ನಿಸಿ ತರಾಟೆಗೆತ್ತಿಕೊಂಡರು.ಬಾಕಿ ಇರುವ ಫೈಲುಗಳನ್ನು ಕೂಡಲೇ ವಿಲೇವಾರಿ ಮಾಡುವಂತೆ ಸಚಿವರು ಸೂಚಿಸಿದರು.
ಗ್ರಾಮ ಲೆಕ್ಕಿಗರ ಕಚೇರಿಗೆ ಧಿಡೀರ್ ಬೇಟಿ ನೀಡಿ, ತಕರಾರು, ಪೈಕಿ ಪಹಣಿ ಹಾಗೂ ನಮೂನೆ 53, 57 ಪ್ರಕರಣಗಳನ್ನು ಕಾಲಮಿತಿಯೊಳಗೆ ವಿಲೇಗೊಳಿಸಿ ಎಂದು ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಸೂಚನೆ ನೀಡಿದರು.

ತಕರಾರು, ಪೈಕಿ ಪಹಣಿ ಹಾಗೂ ನಮೂನೆ 53, 57 ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಅಧಿಕವಾಗುತ್ತಿದ್ದು,ಈ ಎಲ್ಲಾ ಪ್ರಕರಣಗಳಿಗೆ ಕಾಲಮಿತಿಯೊಳಗೆ ಪರಿಹಾರ ನೀಡಬೇಕು.ಡಿಸಿ-ಎಸಿ ಹಾಗೂ ತಹಶೀಲ್ದಾರ್ ನ್ಯಾಯಾಲಯಗಳು ತ್ವರಿತಗತಿಯಲ್ಲಿ ಪ್ರಕರಣಗಳನ್ನು ಇತ್ಯರ್ಥಗೊಳಿಸಬೇಕು ಎಂದೂ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಪೈಕಿ ಪಹಣಿ ಪ್ರಕರಣಗಳ ಸಂಖ್ಯೆ ಜಿಲ್ಲೆಯಲ್ಲಿ ಅಧಿಕವಾಗಿದ್ದು, ಹಲವು ಪ್ರಕರಣಗಳಲ್ಲಿ ಒಂದು ಸರ್ವೆ ನಂಬರ್‌ನಲ್ಲಿ 50-100 ಜನರ ಹೆಸರುಗಳು ಇದ್ದು, ಕನಿಷ್ಟ ಕಲಂ 3 ಮತ್ತು 9ರ ನಡುವೆ ತಾಳೆ ಇರುವ ಪ್ರಕರಣಗಳಲ್ಲಿ ಸರ್ಕಾರವೇ ಕ್ಯಾಂಪೇನ್ ಮೂಲಕ ಪೋಡಿ ಮಾಡಿಕೊಡಲು ಸಿದ್ದವಿದೆ. ಈ ಪ್ರಕರಣಗಳ ಜೊತೆಗೆ ನಮೂನೆ 53, 57 ಪ್ರಕರಣಗಳನ್ನೂ ಕಾಲಮಿತಿಯೊಳಗೆ ಅಧಿಕಾರಿಗಳು ಪರಿಹರಿಸಬೇಕು ಎಂದು ಸಚಿವರು ತಿಳಿಸಿದರು.

ಜಿಲ್ಲೆಯಲ್ಲಿ ಸಾವಿರಾರು ತಕರಾರು ಪ್ರಕರಣಗಳು ಬಾಕಿ ಇವೆ. ಈ ಎಲ್ಲಾ ಪ್ರಕರಣಗಳನ್ನೂ ಶೀಘ್ರದಲ್ಲೇ ವಿಲೇವಾರಿ ಮಾಡಬೇಕು. ಕೆಲವು ಜಿಲ್ಲೆಗಳಲ್ಲಿ ಈ ಪ್ರಕರಣಗಳ ಶೀಘ್ರ ಇತ್ಯರ್ಥವಾಗುತ್ತಿದ್ದು, ತಹಶೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿ ನ್ಯಾಯಾಲಯಗಳು ವಾರದಲ್ಲಿ ಕನಿಷ್ಟ ನಾಲ್ಕು ದಿನ ಕಾರ್ಯ ನಿರ್ವಹಿಸಬೇಕು, ಎಲ್ಲಾ ತಕರಾರು ಪ್ರಕರಣಗಳನ್ನೂ ಶೀಘ್ರ ವಿಲೇವಾರಿಗೊಳಿಸಬೇಕು. ಹಾಗೆಂದು ಗುಣಮಟ್ಟದಲ್ಲಿ ಯಾವುದೇ ಹೊಂದಾಣಿಕೆ ಸಲ್ಲದು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಆದೇಶಕ್ಕಾಗಿ ಕಾಯ್ದಿಟ್ಟ ಪ್ರಕರಣಗಳಿಗೆ 15 ದಿನಗಳೊಳಗೆ ಆದೇಶ ಮಾಡಿ:
ವಿಚಾರಣೆಯಾಗಿ ಆದೇಶಕ್ಕಾಗಿ ಕಾಯ್ದಿರಿಸಲ್ಪಟ್ಟ ಪ್ರಕರಣಗಳ ಬಗ್ಗೆಯೂ ಗಮನ ಸೆಳೆದ ಸಚಿವರು, ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ನ್ಯಾಯಾಲಯದಲ್ಲಿ ವಿಚಾರಣೆಯಾಗಿ ಆದೇಶಕ್ಕೆ ಕಾಯ್ದಿರಿಸಲ್ಪಟ್ಟ ಪ್ರಕರಣಗಳ ವಿಲೇವಾರಿಗೂ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿರುವುದು ಸರಿಯಲ್ಲ.
ಆದೇಶಕ್ಕೆ ಕಾಯ್ದಿರಿಸಲ್ಪಟ್ಟ ಪ್ರಕರಣಗಳಿಗೆ ಸಂಬಂಧಿಸಿದಂತೆ 15 ದಿನಗಳೊಳಗಾಗಿ ಆದೇಶ ಹೊರಡಿಸಬೇಕು ಎಂಬ ಕಾನೂನು ಇದೆ. ಕಾನೂನಿನನ್ವಯ ಅಧಿಕಾರಿಗಳು ತುರ್ತಾಗಿ ಆದೇಶ ಹೊರಡಿಸಬೇಕು ಎಂದು ತಾಕೀತು ಮಾಡಿದರು.

ಎ.ಸಿ ನ್ಯಾಯಾಲಯಗಳಲ್ಲಿ 3354 ಪ್ರಕರಣಗಳು ಬಾಕಿ ಇವೆ. 164 ಪ್ರಕರಣ 5 ವರ್ಷಗಳಿಗೂ ಹೆಚ್ಚು ಬಾಕಿ ಇವೆ, 142 ಪ್ರಕರಣ 2ರಿಂದ 5 ವರ್ಷಳಿಂದ ಬಾಕಿ ಇವೆ. ಡಿ.ಸಿ ನ್ಯಾಯಾಲಯದಲ್ಲಿ 495 ಪ್ರಕರಣಗಳು (5 ವರ್ಷಕ್ಕಿಂತ ಮೀರಿದ 83 ಪ್ರಕರಣ, 2ರಿಂದ 5 ವರ್ಷದ 64 ಪ್ರಕರಣ)ಬಾಕಿ ಇವೆ, ಇವೆಲ್ಲವನ್ನು 3 ತಿಂಗಳ ಒಳಗೆ ವಿಲೇ ಮಾಡಬೇಕೆಂದು ಸೂಚಿಸಿದರು.

ದಾಖಲೆಗಳ ಡಿಜಿಟಲೀಕರಣ:
ಮಂಗಳೂರು ರೆಕಾರ್ಡ್ ರೂಮ್‌ಗೆ ಭೇಟಿ ನೀಡಿದ ಸಚಿವರು,ನೂರು ವರ್ಷಗಳಷ್ಟು ಹಳೆಯ ದಾಖಲೆಗಳನ್ನು ವೀಕ್ಷಿಸಿದರು.ಅಲ್ಲದೆ, ಇಷ್ಟು ಹಳೆಯ ದಾಖಲೆಗಳನ್ನು ಹೇಗೆ ರಕ್ಷಣೆ ಮಾಡುತ್ತಿದ್ದೀರಿ? ಎಂದು ಅಧಿಕಾರಿಗಳಿಂದ ಮಾಹಿತಿಯನ್ನು ಕೇಳಿ ಪಡೆದರು. ಈ ವೇಳೆ ಪತ್ರಕರ್ತರ ಜೊತೆಗೆ ಮಾತನಾಡಿದ ಸಚಿವರು, ನೂರಾರು ವರ್ಷಗಳ ಹಳೆಯ ದಾಖಲೆಗಳನ್ನು ಸಂರಕ್ಷಿಸುವುದು ಕಷ್ಟದ ಕೆಲಸ.ಅಲ್ಲದೆ, ಇಂತಹ ದಾಖಲೆಗಳನ್ನು ತಿದ್ದುವ ಸಾಧ್ಯತೆಯೂ ಇದ್ದು, ಪರೋಕ್ಷವಾಗಿ ಭ್ರಷ್ಟಾಚಾರಕ್ಕೂ ಅನುವು ಮಾಡಿಕೊಟ್ಟಂತಾಗುತ್ತದೆ.ಹೀಗಾಗಿ ರೆಕಾರ್ಡ್ ರೂಂನ ಎಲ್ಲಾ ದಾಖಲೆಗಳನ್ನೂ ಸ್ಕ್ಯಾನ್ ಮಾಡುವ ಮೂಲಕ ಡಿಜಿಟಲೀಕರಣಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದರು.

ಈಗಾಗಲೇ ಪೈಲಟ್ ಯೋಜನೆಯ ರೂಪದಲ್ಲಿ 6 ತಾಲೂಕುಗಳಲ್ಲಿ ದಾಖಲೆ ಡಿಜಿಟಲೀಕರಣ ಮಾಡಲಾಗುತ್ತಿದೆ. ಎಲ್ಲಾ ದಾಖಲೆಗಳನ್ನೂ ಡಿಜಿಟಲೀಕರಣ ಮಾಡುವ ಮೂಲಕ ಜನರೂ ಸಹ ತಮ್ಮ ದಾಖಲೆಗಳನ್ನು ಆನ್ ಲೈನ್ ಮೂಲಕ ನೋಡಬಹುದು.ಇದರಿಂದ ಜನರ ವಸೂಲಿ, ಶೋಷಣೆಯನ್ನು ತಪ್ಪಿಸಬಹುದು. ಪೈಲಟ್ ಯೋಜನೆ ಯಶಸ್ವಿಯಾದ ನಂತರ ಮುಂದಿನ ದಿನಗಳಲ್ಲಿ ಎಲ್ಲಾ ತಾಲೂಕುಗಳ ದಾಖಲೆಗಳನ್ನೂ ಡಿಜಿಟಲೀಕರಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.

ಕಡಲ್ಕೊರೆತ-ಭೂ ಕುಸಿತದ ಬಗ್ಗೆ ಎಚ್ಚರಿಕೆ:
ಪರಿಶೀಲನಾ ಸಭೆಯಲ್ಲಿ ಕಡಲ್ಕೊರೆತ ಹಾಗೂ ಭೂ ಕುಸಿತದ ಬಗ್ಗೆಯೂ ಎಚ್ಚರಿಕೆಯ ಮಾತುಗಳನ್ನಾಡಿದ ಸಚಿವ ಕೃಷ್ಣ ಬೈರೇಗೌಡ ಅವರು, ಮಂಗಳೂರು ಭಾಗದಲ್ಲಿ ಕಡಲ್ಕೊರೆತ ಸಾಮಾನ್ಯವಾದ ದೀರ್ಘಾವದಿ ಸಮಸ್ಯೆ. ಆದರೆ, ಈ ವಿಚಾರ ಕಂದಾಯ ಇಲಾಖೆಯ ಅಡಿಯಲ್ಲಿ ನೇರವಾಗಿ ಬರುವುದಿಲ್ಲ. ಆದರೂ, ಕಡಲ್ಕೊರೆತ ಅಧಿಕವಾಗಿರುವ ದುರ್ಬಲ ಪ್ರದೇಶಗಳ ಬಗ್ಗೆ ಅಧಿಕಾರಿಗಳು ಎಚ್ಚರದಿಂದ ಇರಬೇಕು. ಸಮುದ್ರ ಸವೆತದ ಬಗ್ಗೆ ಕೇರಳ ಮಾದರಿಯ ಬಗ್ಗೆ ಅಧ್ಯಯನ-ಸಂಶೋಧನೆಯ ಅಗತ್ಯವಿದ್ದು ಬಂದರು ಇಲಾಖೆ ಜೊತೆಗೂ ಮಾತುಕತೆ ನಡೆಸಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಭೂ-ಕುಸಿತದ ಬಗ್ಗೆಯೂ ಪರಿಶೀಲನೆ ನಡೆಸಿದ ಸಚಿವರು, ಈ ಹಿಂದೆ ಕರಾವಳಿ ಭಾಗದಲ್ಲಿ ಅಧಿಕ ಭೂ ಕುಸಿತ ಸಾಧ್ಯತೆ ಇರುವ 81 ಪ್ರದೇಶವನ್ನು ಗುರುತು ಮಾಡಲಾಗಿತ್ತು.ಆದರೆ, ಅಧಿಕಾರಿಗಳು 71 ಪ್ರದೇಶಗಳ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದು, ಈ ಬಗ್ಗೆ ಸೂಕ್ತ ಕ್ರಮ ವಹಿಸಲಾಗುವುದೆಂದು ತಿಳಿಸಿದರು.

ಬಾಕಿ ಕಾಮಗಾರಿಗಳಿಗೆ ಗಡುವು:
ಸಾರ್ವಜನಿಕ ಆಸ್ತಿಗಳಿಗೆ ಉಂಟಾಗಿರುವ ಮಳೆಹಾನಿ ದುರಸ್ತಿಗೆ 2019ರಿಂದ 2022ರ ಅವಧಿಯಲ್ಲಿ ಮಂಜೂರಾಗಿ ಇನ್ನೂ ಪೂರ್ಣಗೊಳ್ಳದ ಕಾಮಗಾರಿಗಳನ್ನು(ಕೊರೋನಾ ಸೇರಿದಂತೆ) ಮುಂದಿನ 15 ದಿನಗಳಲ್ಲಿ ಪೂರ್ಣಗೊಳಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಈ ಕಾಮಗಾರಿಗಳು ಇನ್ನೂ ಪೂರ್ಣಗೊಳ್ಳದಿರಲು ಕಾರಣವೇನು? 45 ದಿನಗಳಲ್ಲಿ ಮುಗಿಯಬೇಕಾದ ಕಾಮಗಾರಿಗಳು 2019ರಿಂದಲೂ ಬಾಕಿ ಉಳಿದಿವೆ ಎಂದರೆ ಏನರ್ಥ? ಎಂದು ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡ ಸಚಿವರು, ಮುಂದಿನ 15 ದಿನಗಳಲ್ಲಿ ಈ ಎಲ್ಲಾ ಕಾಮಗಾರಿಗಳೂ ಪೂರ್ಣಗೊಳಿಸಬೇಕು, ಸಂಬಂಧಪಟ್ಟ ಕಾಮಗಾರಿಗೆ ಹಣ ಪಾವತಿ ಮಾಡಬೇಕು. ಕಳೆದ ವರ್ಷದ ಬಾಕಿಯನ್ನೂ ಸಂಪೂರ್ಣವಾಗಿ ವಿಲೇವಾರಿ ಮಾಡಬೇಕು ಎಂದು ಜಿಲ್ಲಾಧಿಕಾರಿಯವರಿಗೆ ಸೂಚಿಸಿದರು. ಅಲ್ಲದೆ, ಪ್ರಕೃತಿ ವಿಕೋಪ ಸಂದರ್ಭದ ತುರ್ತು ಖರ್ಚುಗಳಿಗಾಗಿ ಜಿಲ್ಲಾಧಿಕಾರಿ ಖಾತೆಯಲ್ಲಿ 7 ಕೋಟಿ ರೂ. ಹಾಗೂ ತಹಶೀಲ್ದಾರ್ ಖಾತೆಯಲ್ಲಿ ತಲಾ 3 ಕೋಟಿ ರೂ. ಹಣ ಇದೆ. ಈ ಹಣವನ್ನೂ ಸಹ ಅಗತ್ಯ ಕಾಮಗಾರಿಗಳಿಗೆ ಬಳಸಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಅಧಿಕಾರಿಗಳು ಇ-ಆಫೀಸ್ ಬಳಸಿ:
ಹಳೇ ಕಾಲದ ಪತ್ರ ವ್ಯವಹಾರವನ್ನು ಕೈಬಿಟ್ಟು ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳುವ ಹಾಗೂ ಕಡತಗಳ ಶೀಘ್ರ ವಿಲೇವಾರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆಗಸ್ಟ್ 15ರಿಂದ ಇ-ಆಫೀಸ್ ಅನುಷ್ಠಾನಗೊಳಿಸಲಾಗಿದೆ. ಎಲ್ಲಾ ಜಿಲ್ಲಾಧಿಕಾರಿಗಳೂ ಈಗಾಗಲೇ ಇ-ಆಫೀಸ್ ಮೂಲಕವೇ ಕಡತ ವಿಲೇವಾರಿ ಮಾಡುತ್ತಿದ್ದು, ತಹಶೀಲ್ದಾರ್ ಹಾಗೂ ವಿಭಾಗಾಧಿಕಾರಿಗಳು ಸೆಪ್ಟೆಂಬರ್ 1ರ ಒಳಗಾಗಿ ಇ-ಆಫೀಸ್ ಬಳಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಕಡತಗಳು ಇ-ಆಫೀಸ್‌ನಲ್ಲಿ ನನ್ನ ಲಾಗಿನ್‌ಗೆ ಬಂದರೆ 2 ದಿನದಲ್ಲಿ ವಿಲೇವಾರಿ ಮಾಡಿದ್ದೇನೆ. ಇ-ಆಫೀಸ್ ಸಹಜವಾಗಿ ಕಾರ್ಯ ದಕ್ಷತೆ ಹೆಚ್ಚಿಸಲಿದೆ. ಯಾವುದೇ ಸ್ಥಳದಿಂದಲೂ ನೀವು ಕಡತ ವಿಲೇವಾರಿ ಮಾಡಬಹುದಾಗಿದೆ. ಸ್ವತ ನಾನು ಇ-ಆಫೀಸ್ ಮೂಲಕ ಕಡತ ವಿಲೇವಾರಿ ಮಾಡುತ್ತಿದ್ದೇನೆ. ಶಾಲೆ, ಗ್ರಾಮ ಪಂಚಾಯತಿಗೆ ಜಮೀನು ನೀಡಲು ಆಗುತ್ತಿರುವ ವಿಳಂಬಕ್ಕೆ ಇ-ಆಫೀಸ್ ಮೂಲಕ ಪರಿಹಾರ ನೀಡಬಹುದು ಎಂದು ಸಚಿವ ಕೃಷ್ಣಬೈರೇ ಗೌಡ ತಿಳಿಸಿದರು.

ಧಾರ್ಮಿಕ ಕೇಂದ್ರಗಳ ಜಾಗದ ಜಂಟಿ ಆರ್‌ಟಿಸಿ ಮಾಡಬೇಕು:
ಜಿಲ್ಲೆಯ ಬಹುತೇಕ ಧಾರ್ಮಿಕ ಕೇಂದ್ರಗಳಾದ ದೇವಸ್ಥಾನ, ದೈವಸ್ಥಾನ, ಮಸೀದಿ, ಚರ್ಚುಗಳು ಸರಕಾರಿ ಜಾಗದಲ್ಲಿವೆ. ಈ ಧಾರ್ಮಿಕ ಕೇಂದ್ರಗಳಿಗೆ ಇನ್ನೂ ಆರ್‌ಟಿಸಿ ದೊರೆಯಲಿಲ್ಲ. ಸರಕಾರಿ ಜಾಗದಲ್ಲಿರುವ ಧಾರ್ಮಿಕ ಕೇಂದ್ರಗಳನ್ನು ಸರಕಾರ ಮತ್ತು ಧಾರ್ಮಿಕ ಕೇಂದ್ರಗಳ ಹೆಸರಲ್ಲಿ ಜಂಟಿ ಆರ್‌ಟಿಸಿ ಮಾಡಬೇಕು ಎಂದು ಶಾಸಕರು ಮನವಿ ಮಾಡಿದರು.

ಕೆಎಂಎಫ್‌ಗೆ ಜಾಗಕ್ಕೆ ಮನವಿ:
ಪುತ್ತೂರುನಲ್ಲಿ ಕೆಎಂಎಫ್ ವತಿಯಿಂದ ಕೈಗೆತ್ತಿಕೊಳ್ಳಲುದ್ದೇಶಿಸಿರುವ ಯೋಜನೆಗಳಿಗೆ ಅಗತ್ಯವಾಗಿರುವ ಜಮೀನು ಕೂಡಲೇ ಮಂಜೂರು ಮಾಡುವಂತೆ ಮತ್ತು ಪುತ್ತೂರು ತಾಲೂಕು ಕಚೇರಿಗೆ ಹೆಚ್ಚುವರಿಯಾಗಿ ಐದು ಸಿಬ್ಬಂದಿಗಳನ್ನು ತಾತ್ಕಾಲಿಕ ನೆಲೆಯಲ್ಲಿ ನೇಮಿಸುವಂತೆ ಶಾಸಕ ಅಶೋಕ್ ಕುಮಾರ್ ರೈಯವರು ಸಚಿವರಿಗೆ ಮನವಿ ಸಲ್ಲಿಸಿದರು.ಈ ಕುರಿತು ಅಗತ್ಯ ಕ್ರಮಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.
ಶಾಸಕರಾದ ವೇದವ್ಯಾಸ್ ಕಾಮತ್ ಮತ್ತು ವಿಧಾನ ಪರಿಷತ್ ಶಾಸಕರಾದ ಹರೀಶ್ ಕುಮಾರ್, ಡಾ.ಮಂಜುನಾಥ್ ಭಂಡಾರಿ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಕಂದಾಯ ಇಲಾಖೆಯ ಆಯುಕ್ತ ಸುನಿಲ್ ಕುಮಾರ್ ಹಾಗೂ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಅಕ್ರಮ ಸಕ್ರಮ ಹೊಸ ಕಾನೂನು – ಶಾಸಕ ಅಶೋಕ್ ರೈ ಆಕ್ಷೇಪ
2005ರ ಮೊದಲು ಸಾಗುವಳಿ ಮಾಡಿಕೊಂಡಿರುವ ಸರಕಾರಿ ಜಮೀನನ್ನು ಮಾತ್ರ ಅಕ್ರಮ ಸಕ್ರಮದಲ್ಲಿ ಮಂಜೂರು ಮಾಡಿಸಬೇಕು. ನಿಜವಾದ ಸಾಗುವಳಿದಾರನಿಗೆ ಈ ವ್ಯವಸ್ಥೆಯ ಮೂಲಕ ಭೂಮಿ ಸಿಗುವಂತಾಗಬೇಕು ಎಂಬ ಉದ್ದೇಶದಿಂದ ಕಾನೂನು ಮಾರ್ಪಾಡು ಮಾಡಲಾಗಿದೆ ಎಂದು ಸಚಿವರು ತಿಳಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರು, ಈ ಕಾನೂನು ಸರಿಯಲ್ಲ. 2005ರ ನಂತರವೂ ತಮ್ಮ ವಶದಲ್ಲಿರುವ ಭೂಮಿಯಲ್ಲಿ ಸಾಗುವಳಿ ಮಾಡಿಕೊಂಡವರೂ ಅಕ್ರಮ ಸಕ್ರಮಕ್ಕೆ ಅರ್ಜಿ ಹಾಕಿದ್ದಾರೆ. ಅವರಿಗೂ ಜಮೀನು ಮಂಜೂರು ಮಾಡಬೇಕು.ಈ ಕಾನೂನಿನಲ್ಲಿ ಮಾರ್ಪಾಡು ಮಾಡಬೇಕಿದೆ. ಈ ರೀತಿ ಕಾನೂನು ಮಾಡಿದರೆ ಜನಪ್ರತಿನಿಧಿಗಳಾದ ನಮಗೆ ತೊಂದರೆಯಾಗಬಹುದು ಎಂದು ಸಚಿವರ ಗಮನಕ್ಕೆ ತಂದರು. ಈ ಬಗ್ಗೆ ಪರಿಶೀಲನೆ ಮಾಡುವ ಎಂದು ಸಚಿವರು ತಿಳಿಸಿದರು.

LEAVE A REPLY

Please enter your comment!
Please enter your name here