ಕೋಡಿಂಬಾಡಿ:ಗೃಹಲಕ್ಷ್ಮಿ ಕಾರ್ಯಕ್ರಮಕ್ಕೆ ಬಂದವರಿಗೆ ಮಲ್ಲಿಗೆ ನೀಡಿ ಸಂಭ್ರಮ

0

ಶಾಸಕರ ತವರು ಗ್ರಾಮ ಕೋಡಿಂಬಾಡಿಯಲ್ಲಿ ಮಹಿಳೆಯರಿಗೆ ಮಲ್ಲಿಗೆ ವಿತರಣೆ


ಪುತ್ತೂರು: ಕರ್ನಾಟಕ ಸರಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಆ. 30 ರಂದು ರಾಜ್ಯಾದ್ಯಂತ ಏಕಕಾಲದಲ್ಲಿ ಚಾಲನೆ ನೀಡಲಾಯಿತು. ಪುತ್ತೂರು ತಾಲೂಕು ವ್ಯಾಪ್ತಿಯ ಎಲ್ಲಾ ಗ್ರಾಪಂ ವತಿಯಿಂದಲೂ ಕಾರ್ಯಕ್ರಮಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆದರೆ ಪುತ್ತೂರು ಶಾಸಕರಾದ ಅಶೋಕ್ ರೈ ಯವರ ತವರು ಗ್ರಾಮದಲ್ಲಿ ಗೃಹಲಕ್ಷ್ಮಿ ಸಂಭ್ರಮವನ್ನು ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡಲಾಯಿತು. ಕಾರ್ಯಕ್ರಮಕ್ಕೆ ಬಂದ ಎಲ್ಲಾ ಮಹಿಳೆಯರಿಗೂ ಮಲ್ಲಿಗೆಯನ್ನು ವಿತರಣೆ ಮಾಡುವ ಮೂಲಕ ಸಂಭ್ರಮವನ್ನು ಆಚರಿಸಿದರು.


ಸುಮಾರು 200 ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು 10 ಅಟ್ಟಿ ಮಲ್ಲಿಗೆಯನ್ನು ಎಲ್ಲರಿಗೂ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರಾಪಂ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರ್ ರಾಜ್ಯದ ಕಾಂಗ್ರೆಸ್ ಸರಕಾರ ಜನತೆಗೆ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ಚುನಾವಣಾ ಪೂರ್ವದಲ್ಲಿ ಐದು ಗ್ಯಾರಂಟಿ ಯೋಜನೆಯನ್ನು ಘೋಷಣೆ ಮಾಡಿತ್ತು ಇದರಲ್ಲಿ ಅಧಿಕಾರಕ್ಕೆ ಬಂದ ನೂರೇ ದಿನದಲ್ಲಿ ನಾಲ್ಕು ಗ್ಯಾರಂಟಿಯನ್ನು ಜನತೆಗೆ ನೀಡಿದೆ. ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ರಾಜ್ಯದ ಜನತೆಯನ್ನು ಎಂದೂ ಕೈ ಬಿಟ್ಟವರಲ್ಲ, ಬಡವರ ಪರ ಅಪಾರ ಕಾಳಜಿ ಇರುವ ಕಾಂಗ್ರೆಸ್ ಸರಕಾರ ರಾಜ್ಯದ ಪ್ರತೀಯೊಂದು ಕುಟುಂಬಕ್ಕೂ ಯೋಜನೆಯನ್ನು ತಲುಪಿಸುವ ಮೂಲಕ ರಾಜ್ಯದ ಕಾಂಗ್ರೆಸ್ ಸರಕಾರ ಜನಪರ ಸರಕಾರ ಎಂಬುದನ್ನು ಸಾಬೀತು ಮಾಡಿದೆ. ಶಾಸಕರಾದ ಅಶೋಕ್ ರೈಯವರ ತವರು ಗ್ರಾಮದಲ್ಲಿ ನಾವು ಗೃಹಲಕ್ಷ್ಮಿ ಕಾರ್ಯಕ್ರಮವನ್ನು ಮಲ್ಲಿಗೆ ನೀಡುವ ಮೂಲಕ ಮಹಿಳೆಯರನ್ನು ಸ್ವಾಗತಿಸಿದ್ದೇವೆ. ಬಡವರ ಪರ ಕೆಲಸ ಮಾಡುತ್ತಿರುವ ಶಾಸಕರು ಕ್ಷೇತ್ರದ ಜನತೆಯ ಪಾಲಿನ ದಿಟ್ಟ ನಾಯಕ ಎಂದು ಹೇಳಿದರು.


ಗ್ರಾಪಂ ಅಧ್ಯಕ್ಷೆ ಮಲ್ಲಿಕಾ ಪೂಜಾರಿ ಮಾತನಾಡಿ ಮಹಿಳೆಯರ ಸಬಲೀಕರಣಕ್ಕೆ ರಾಜ್ಯದ ಕಾಂಗ್ರೆಸ್ ಸರಕಾರ ಗ್ಯಾರಂಟಿ ಯೋಜನೆಯನ್ನು ಜಾರಿಗೆ ತಂದಿದೆ.ಶಕ್ತಿ ಮತ್ತು ಗೃಹಲಕ್ಷ್ಮಿ ಯೋಜನೆ ಮಹಿಳೆಯರ ಪಾಲಿಗೆ ವರದಾನವಾಗಿದೆ. ಇಷ್ಟೊಂದು ಪ್ರಮಾಣದಲ್ಲಿ ಗ್ಯಾರಂಟಿಯನ್ನು ಜನತೆಗೆ ನೀಡಿದ ದೇಶದ ಏಕೈಕ ಸರಕಾರ ಅದು ಕರ್ನಾಟಕದ ಕಾಂಗ್ರೆಸ್ ಸರಕಾರವಾಗಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಸುಭದ್ರ ಸರಕಾರವನ್ನು ನೀಡುವ ಮೂಲಕ ರಾಜ್ಯದ ಜನತೆಯ ಆಶೋತ್ತರಗಳನ್ನು ಈಡೇರಿಸಲಿದೆ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯರುಗಳಾದ ಪೂರ್ಣಿಮಾಯತೀಶ್ ಸೆಟ್ಟಿ, ಗೀತಾಬಾಬು, ಮೋಹಿನಿ, ರಾಮಣ್ಣ ಗೌಡ ಗುಂಡೋಳೆ, ಗ್ರಾಪಂ ಮಾಜಿ ಅಧ್ಯಕ್ಷರಾದ ರಾಮಚಂದ್ರ ಪೂಜಾರಿ, ಕಾಂಗ್ರೆಸ್ ಮುಖಂಡ ನಿರಂಜನ್ ರೈ ಮಠಂತಬೆಟ್ಟು, ಮಾಜಿ ಗ್ರಾಪಂ ಸದಸ್ಯ ಮೋನಪ್ಪ ಗೌಡ ಪಮ್ಮನಮಜಲು, ಗ್ರಾಪಂ ಕಾರ್ಯದರ್ಶಿ ಅಣ್ಣು ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀ ಶಕ್ತಿ ಸಂಘಟನೆಯ ಕಾರ್ಯಕರ್ತರು, ಉಪಸ್ಥಿತರಿದ್ದರು.


ಪಿಡಿಒ ರೋಹಿತಾಕ್ಷ ಸ್ವಾಗತಿಸಿದರು. ಗ್ರಾಪಂ ಸದಸ್ಯ ಜಗನ್ನಾಥ ಸೆಟ್ಟಿ ನಡುಮನೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಗ್ರಾಪಂ ಸಿಬಂದಿಗಳಾದ ಕಾವ್ಯ, ವೀಣಾ, ಸುರೇಶ್, ಸುರೇಶ್ ಪಾದೆಕಲ್ಲು, ಕುಸುಮ ಸಹಕರಿಸಿದರು.

LEAVE A REPLY

Please enter your comment!
Please enter your name here