ವಿವೇಕಾನಂದ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲರಾಗಿ ದೇವಿಚರಣ್ ರೈ ಅಧಿಕಾರ ಸ್ವೀಕಾರ

0

ಪುತ್ತೂರು, ಸೆ 13: ವಿವೇಕಾನಂದ ವಿದ್ಯಾವರ್ಧಕ ಸಂಘದ ಆಡಳಿತಕ್ಕೊಳಪಟ್ಟ ವಿವೇಕಾನಂದ ಪದವಿಪೂರ್ವ ಕಾಲೇಜಿನ ನೂತನ ಉಪಪ್ರಾಂಶುಪಾಲರಾಗಿ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ದೇವಿಚರಣ್ ರೈ ಅಧಿಕಾರ ಸ್ವೀಕರಿಸಿದರು. ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಎಂಡೆಸಾಗುನಲ್ಲಿರುವ ಇವರು ತಿಂಗಳಾಡಿಯ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಪ್ರೌಢ, ಪದವಿಪೂರ್ವ ಶಿಕ್ಷಣ ಮತ್ತು ಪದವಿ ಶಿಕ್ಷಣವನ್ನು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಪೂರೈಸಿದ್ದರು. 2002-03ನೇ ಸಾಲಿನಲ್ಲಿ ಎಂ. ಸಿ ಎ ಪದವಿಯನ್ನು ಪೂರ್ಣಗೊಳಿಸಿ ಬಳಿಕ ತಮಿಳುನಾಡಿನ ಅಣ್ಣಮಲೈ ವಿಶ್ವವಿದ್ಯಾಲಯದಲ್ಲಿ ಎಂ.ಫಿಲ್ ಪೂರೈಸಿರುತ್ತಾರೆ. ಸುಮಾರು 20 ವರ್ಷಗಳ ಕಾಲ ಉಪನ್ಯಾಸಕರಾಗಿ ಸೇವಾ ಅನುಭವವನ್ನು ಹೊಂದಿರುವ ಇವರು ವಿದ್ಯಾರ್ಥಿಗಳ ಹಾಗೂ ಶಿಕ್ಷಣ ಪ್ರೇಮಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು. 2022ನೇ ಸಾಲಿನಲ್ಲಿ ಪುತ್ತೂರು ರೋಟರಿ ಯುವ ಸಂಸ್ಥೆಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಕೃಷಿ ಚಟುವಟಿಕೆಗಳಲ್ಲೂ ಅನುಭವ ಹೊಂದಿರುವ ಇವರು ಬೆಳಿಯೂರುಗುತ್ತು ದಿ.ವಾಸುದೇವ ರೈ ಮತ್ತು ಗಂಗಾರತ್ನ ದಂಪತಿಯ ಪುತ್ರ.

ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್ ರಾವ್ ಕಾಲೇಜಿನ ಉಪಪ್ರಾಂಶುಪಾಲ ದೇವಿಚರಣ್ ರೈ ರವರಿಗೆ ಅಧಿಕಾರವನ್ನು ಹಸ್ತಾಂತರಿಸಿದರು. ನಂತರ ಸತೀಶ್ ರಾವ್ ಮಾತನಾಡಿ ವಿವೇಕಾನಂದ ಪದವಿಪೂರ್ವ ಕಾಲೇಜು ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನದ ದೇಗುಲವಾಗಿದೆ. ಶೈಕ್ಷಣಿಕ, ಕ್ರೀಡಾ ಕ್ಷೇತ್ರದಲ್ಲಿ ಮಹತ್ತರ ಸಾಧನೆಗಳನ್ನು ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳು ತೋರಿಸಿದ ಪರಿಣಾಮವಾಗಿ ಈ ವಿದ್ಯಾಸಂಸ್ಥೆಯು ರಾಜ್ಯಮಟ್ಟದಲ್ಲಿ ಹೆಸರುವಾಸಿಯಗಿದೆ. ಪ್ರಾಂಶುಪಾಲರು ಮತ್ತು ನೂತನ ಉಪಪ್ರಾಂಶುಪಾಲರ ಅವಧಿಯಲ್ಲಿ ಈ ಸಂಸ್ಥೆಯು ಇನ್ನಷ್ಟು ಪ್ರಗತಿಪಥದತ್ತ ಮನ್ನಡೆಯಲಿ ಎಂದು ಶುಭ ಹಾರೈಸಿದರು.

ನೂತನ ಉಪಪ್ರಾಂಶುಪಾಲ ದೇವಿಚರಣ್ ರೈ ಮಾತನಾಡಿ ಎಲ್ಲರ ಬೆಂಬಲ ಹಾಗೂ ಹಿರಿಯರ ಮಾರ್ಗದರ್ಶನದ ಮೂಲಕ ಈ ಉಪಪ್ರಾಂಶುಪಾಲ ಹುದ್ದೆಯನ್ನು ನಿರ್ವಹಿಸಲು ಸಾಧ್ಯ. ಇದಕ್ಕಾಗಿ ಪ್ರತಿಯೊಬ್ಬರು ಸಹಕರಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ, ಸಂಚಾಲಕ ಎಂ. ಗೋಪಾಲಕೃಷ್ಣ ಭಟ್, ಕೋಶಾಧಿಕಾರಿ ಸಚಿನ್ ಶೆಣೈ, ಸದಸ್ಯರಾದ ವತ್ಸಲಾ ರಾಜ್ಞಿ, ಡಾ. ಕೆ ಎನ್ ಸುಬ್ರಹ್ಮಣ್ಯ, ಡಾ.ಮುರಳೀಕೃಷ್ಣ ರೈ, ಪ್ರಾಂಶುಪಾಲ ಮಹೇಶ ನಿಟಿಲಾಪುರ, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here