ಕುರಿಯ ಹಾಲು ಉತ್ಪಾದಕರ ಸಹಕಾರ ಸಂಘದ ಮಹಾಸಭೆ

0

4.2 ಕೋಟಿ ರೂ . ವ್ಯವಹಾರ : 4.05 ಲಕ್ಷ ರೂ. ಲಾಭ
ಶೇ. 12 ಡಿವಿಡೆಂಡ್, ಪ್ರತಿ ಲೀ. ಹಾಲಿಗೆ 59 ಪೈಸೆ ಬೋನಸ್ ಘೋಷಣೆ

ಪುತ್ತೂರು: ಕುರಿಯ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ ಸೆ. 21 ರಂದು ಕುರಿಯ ರಾಜೀವ ಗಾಂಧಿ ಸೇವಾ ಕೇಂದ್ರದಲ್ಲಿ ಜರಗಿತು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ವಿಜಯಹರಿ ರೈ ಬಳ್ಳಮಜಲುರವರು ಮಾತನಾಡಿ, ಸಂಘವು 2022-23ನೇ ಸಾಲಿನಲ್ಲಿ ವಾರ್ಷಿಕ 4 ಕೋಟಿ 2 ಲಕ್ಷ 9 ಸಾವಿರ ರೂ ವ್ಯವಹಾರ ನಡೆಸಿ, 4 ಲಕ್ಷ, 5 ಸಾವಿರ ರೂ ಲಾಭಗಳಿಸಿದ್ದು, ಸದಸ್ಯರಿಗೆ 12 ಶೇಕಡಾ ಡಿವಿಡೆಂಡ್ ಮತ್ತು ಪ್ರತಿ ಲೀಟರ್ ಹಾಲಿಗೆ 59 ಪೈಸೆ ಬೋನಸ್ ನೀಡಲಾಗುವುದು ಎಂದು ಹೇಳಿದರು.
ಸಂಘದಲ್ಲಿ ಕಾರ‍್ಯದರ್ಶಿಯಾಗಿ 32 ವರ್ಷಗಳ ಕಾಲ ಸೇವೆ ಸಲ್ಲಿಸಿ, ನಿವೃತ್ತರಾದ ದೇರಣ್ಣ ಗೌಡರವರು ಒರ್ವ ಸರಳ ಸಜ್ಜನಿಕೆಯ ವ್ಯಕ್ತಿತ್ವದ ಮೂಲಕ ಸಂಘದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದರು ಎಂದು ಅಧ್ಯಕ್ಷ ವಿಜಯಹರಿ ರೈ ಬಳ್ಳಮಜಲು ಪ್ರಶಂಶೆ ವ್ಯಕ್ತಪಡಿಸಿದರು.

ದ.ಕ. ಹಾಲು ಒಕ್ಕೂಟದ ಪಶು ವೈದ್ಯಾಧಿಕಾರಿ ಡಾ. ಅನುದೀಪ್‌ರವರು ಮಾತನಾಡಿ ಕುರಿಯ ಹಾಲು ಉತ್ಪಾದಕರ ಸಹಕಾರ ಸಂಘ ಉತ್ತಮ ರೀತಿಯಲ್ಲಿ ನಡೆಯುತ್ತಿದ್ದು, ಈ ಭಾಗದ ಹೈನುಗಾರರು ಇನ್ನೂ ಹೆಚ್ಚಿನ ಮುತುವರ್ಜಿಯಿಂದ ಸಂಘಕ್ಕೆ ಹೆಚ್ಚಿನ ಹಾಲು ಪೂರೈಕೆಯನ್ನು ಮಾಡಬೇಕು ಎಂದು ಹೇಳಿದರು.


ಬಹುಮಾನ ವಿತರಣೆ-
ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಕೆ ಮಾಡಿದವರಿಗೆ ಬಹುಮಾನ ನೀಡಲಾಯಿತು ಪ್ರಥಮ ಪ್ರಶಸ್ತಿಯನ್ನು ಚಿದಾನಂದ ಶೆಟ್ಟಿ, ದ್ವಿತೀಯ ಪ್ರಶಸ್ತಿಯನ್ನು ಕೃಷ್ಣವೇಣಿ ರೈ ತೃತೀಯ ಪ್ರಶಸ್ತಿಯನ್ನು ಜಯಂತ ನಡುಬೈಲು ಪಡೆದರು. ಸಂಘಕ್ಕೆ ಹಾಲು ಪೂರೈಕೆ ಮಾಡಿದ ಎಲ್ಲರಿಗೂ ಸ್ಟೀಲ್ ಪಾತ್ರೆ ಉಡುಗೊರೆ ನೀಡಲಾಯಿತು.


ಸನ್ಮಾನ ಸಮಾರಂಭ-
ಸಂಘದಲ್ಲಿ 32 ವರ್ಷಗಳ ಕಾಲ ಕರ‍್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ದೇರಣ್ಣ ಗೌಡ ಪರೆಂಕಿಲುರವರನ್ನು ಸಂಘದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿದ ದೇರಣ್ಣ ಗೌಡರವರು ಮಾತನಾಡಿ ನನ್ನ 32 ವರ್ಷಗಳ ಸೇವಾವಧಿಯಲ್ಲಿ ಸಂಘದ ಆಡಳಿತ ಮತ್ತು ಸದಸ್ಯರುಗಳು ಹಾಗೂ ಸಿಬ್ಬಂಧಿಗಳ ಸಹಕಾರದಿಂದ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿದ್ದೇನೆ ಎಂಬ ಸಂತೃಪ್ತಿ ಇದೆ ಎಂದು ಹೇಳಿದರು.


ಸಂಘದ ನಿರ್ದೇಶಕರಾದ ಚಂದ್ರಹಾಸ್ ರೈ ಡಿಂಬ್ರಿ, ಸತೀಶ್ ಆರ್ ಬೊಳಂತಿಮಾರು, ಚಂದ್ರಪ್ರಕಾಶ್ ಹೊಸಮಾರು, ವಿನೋದ್ ರೈ ಕುರಿಯ ಏಳ್ನಾಡುಗುತ್ತು, ಶಿವಶಂಕರ್ ಭಟ್ ಡೆಮ್ಮಾಲೆ, ಗಣೇಶ್ ಬಂಗೇರ ಕೊರಂಗು, ಆನಂದ್ ಕುಮಾರ್ ಉಳ್ಳಾಲ, ಹರಿಕೃಷ್ಣ ಮೊಟ್ಟೆತ್ತಡ್ಕ, ಜಯಲಕ್ಷ್ಮಿ ಆರ್ ರೈ ಬೂಡಿಯಾರ್, ರಮ್ಯ ಪಡ್ಪು ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸಂಘದ ನಿಕಟಪೂರ್ವ ಕಾರ‍್ಯದರ್ಶಿ ದೇರಣ್ಣ ಗೌಡ ಪರೆಂಕಿಲು ವರದಿ ವಾಚಿಸಿ, ಸಂಘದ ಉಪಾಧ್ಯಕ್ಷ ಗಣೇಶ್ ಶೆಟ್ಟಿ ಶಿಬರ ಸ್ವಾಗತಿಸಿ, ಕಾರ‍್ಯದರ್ಶಿ, ಲೋಕೇಶ್ ಗೌಡ ನೈತ್ತಾಡಿ ಕಾರ‍್ಯಕ್ರಮ ನಿರೂಪಿಸಿ, ವಂದಿಸಿದರು. ನಿರ್ದೇಶಕ ಗಣೇಶ್ ಬಂಗೇರ ಕೊರಂಗರವರು ಸನ್ಮಾನ ಪತ್ರ ವಾಚಿಸಿದರು. ನಿರ್ದೇಶಕಿ ರಮ್ಯ ಪಡ್ಪು ಪ್ರಾರ್ಥನೆಗೈದರು. ಸಂಘದ ಸದಸ್ಯರುಗಳಾದ ಚಿದಾನಂದ ಶೆಟ್ಟಿ, ವಿಶ್ವನಾಥ ಪೂಜಾರಿ, ಕೃಷ್ಣಪ್ರಸಾದ್ ಕೆದಿಲಾಯರವರು ಸಲಹೆ ಸೂಚನೆಯನ್ನು ನೀಡಿದರು. ಸಂಘದ ಮಾಜಿ ಅಧ್ಯಕ್ಷ ವೆಂಕಟ್ರಮಣ ನಕ್ಷತ್ರಿತ್ತಾಯ, ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸುರೇಂದ್ರ ರೈ ಬಳ್ಳಮಜಲು, ಆರ್ಯಾಪು ಗ್ರಾ.ಪಂ, ಸದಸ್ಯ ಯಾಕುಬ್ ಕುರಿಯ, ನರಿಮೊಗರು ಗ್ರಾ.ಪಂ. ಸದಸ್ಯ ನವೀನ್ ರೈ ಶಿಬಿರ ಸೇರಿದಂತೆ ಸಂಘದ ಸದಸ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸಂಘದ ಶಾಖಾ ಸಿಬ್ಬಂದಿ ಜೈನುಲ್ ಅಬಿದ್ ನೈತ್ತಾಡಿ, ಹಾಲು ಪರೀಕ್ಷಕಿ ಪ್ರತಿಮಾ ಡಿಂಬ್ರಿರವರು ಸಹಕರಿಸಿದರು.

ಸಂಘಕ್ಕೆ ಹೆಚ್ಚಿನ ಹಾಲು ಪೂರೈಕೆ ಮಾಡಿ
ಕುರಿಯ ಹಾಲು ಉತ್ಪಾದಕರ ಸಹಕಾರ ಸಂಘವು ಉತ್ತಮ ರೀತಿಯಲ್ಲಿ ಎಲ್ಲಾ ಹೈನುಗಾರರ ಮತ್ತು ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳ ಸಹಕಾರದಲ್ಲಿ ನಡೆಯುತ್ತಿದೆ. ೨೫೪ ಮಂದಿ ಸದಸ್ಯರು ಸಂಘದಲ್ಲಿ ಇದ್ದು, ಮುಂದಿನ ದಿನಗಳಲ್ಲಿ ಸಂಘಕ್ಕೆ ಹೆಚ್ಚಿನ ಹಾಲು ಪೂರೈಕೆ ಮಾಡುವ ನಿಟ್ಟಿನಲ್ಲಿ ಎಲ್ಲಾ ಹೈನುಗಾರರು ಸಹಕರಿಸಬೇಕು. ಸಂಘದ ಅಭಿವೃದ್ಧಿಯೇ ನಮ್ಮ ಗುರಿಯಾಗಿದೆ.
ವಿಜಯಹರಿ ರೈ ಬಳ್ಳಮಜಲು, ಅಧ್ಯಕ್ಷರು
ಕುರಿಯ ಹಾಲು ಉತ್ಪಾದಕರ ಸಹಕಾರ ಸಂಘ

LEAVE A REPLY

Please enter your comment!
Please enter your name here