ಶಿರಾಡಿ ಘಾಟ್ ಸುರಂಗ ಮಾರ್ಗದ ರಸ್ತೆ ನಿರ್ಮಾಣಕ್ಕೆ ಕೆಂದ್ರ ಸರಕಾರದಿಂದ ಅಧಿಕೃತ ಒಪ್ಪಿಗೆ – 2500 ಕೋಟಿ ರೂಪಾಯಿಗಳ ಅಂದಾಜು ವೆಚ್ಚದ ಯೋಜನೆ – ಮುಂದಿನ ವರ್ಷ ಆರಂಭದ ನಿರೀಕ್ಷೆ

0

– ಪ್ರವೀಣ್ ಚೆನ್ನಾವರ

ಪುತ್ತೂರು: ಬೆಂಗಳೂರು -ಮಂಗಳೂರನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75ರ ಬಿ.ಸಿ ರೋಡಿನಿಂದ ಅಡ್ಡಹೊಳೆವರೆಗಿನ ಚತುಷ್ಪಥ ಕಾಮಗಾರಿ ಈಗಾಗಲೇ ಚಾಲನೆ ದೊರೆತಿದೆ. ಈ ನಡುವೆ ಪ್ರಮುಖವಾಗಿ ಶಿರಾಡಿಘಾಟಿಯಲ್ಲಿ ಸುರಂಗ ಮಾರ್ಗದ ಮೂಲಕ ರಸ್ತೆ ನಿರ್ಮಿಸುವ ಯೋಜನೆಗೂ ಇದೀಗ ಅಧಿಕೃತ ಒಪ್ಪಿಗೆ ಸಿಕ್ಕಿದೆ.

ಹಲವು ಏಳು-ಬೀಳುಗಳ ನಡುವೆಯೇ ಆರಂಭಗೊಂಡಿದ್ದ ರಾಷ್ಟ್ರೀಯ ಹೆದ್ದಾರಿ 75 ರ ಬಿ.ಸಿ.ರೋಡ್ ನಿಂದ ಶಿರಾಡಿಯ ಅಡ್ಡಹೊಳೆ ವರೆಗಿನ 65 ಕಿಲೋಮೀಟರ್ ದೂರದ ಚತುಷ್ಪಥ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಈ ಹಿಂದೆ ರಸ್ತೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸುಮಾರು 821 ಕೋಟಿ ರೂಪಾಯಿಗಳ ಕಾಮಗಾರಿಯ ಗುತ್ತಿಗೆ ಪಡೆದಿದ್ದ ಎಲ್ ಎಂಡ್ ಟಿ ಕಂಪೆನಿಯು ಕಾಮಗಾರಿಯನ್ನು ಆರಂಭಿಸಿದ ಬಳಿಕ ಪ್ರಾಕೃತಿಕ ವಿಕೋಪದಿಂದಾಗಿ ಕಂಪೆನಿಗೆ ಭಾರೀ ನಷ್ಟವಾದ ಹಿನ್ನಲೆಯಲ್ಲಿ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿ ಹಿಂದೆ ಸರಿದಿತ್ತು. ಆ ಬಳಿಕ ಇದೇ ರಸ್ತೆಗೆ ಮತ್ತೆ ಟೆಂಡರ್ ಕರೆಯಲಾಗಿದ್ದು, ಈ ಬಾರಿ ಸುಮಾರು 1500 ಕೋಟಿ ಅಂದಾಜಿನ ಎರಡು ಹಂತದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಕಾಮಗಾರಿಯು ಇದೀಗ ಭರದಿಂದ ಸಾಗುತ್ತಿದ್ದು, 2023 ರ ಡಿಸೆಂಬರ್ ತಿಂಗಳಲ್ಲಿ ಈ ಕಾಮಗಾರಿಯನ್ನು ಮುಗಿಸಲು ಗಡುವನ್ನೂ ನೀಡಲಾಗಿದೆ. ಈ ಕಾಮಗಾರಿಯ ಜತತೆ ಜತೆಗೆ ಕೇಂದ್ರ ಸರಕಾರ ಉದ್ಧೇಶಿತ ಶಿರಾಡಿ ಘಾಟ್ ಸುರಂಗ ಮಾರ್ಗದ ಕಾಮಗಾರಿಯ ಯೋಜನೆಗೂ ಅಧಿಕೃತ ಒಪ್ಪಿಗೆ ನೀಡಿದೆ. ಶಿರಾಢಿಘಾಟ್ ನ ಸುಮಾರು 27 ರಿಂದ 30 ಕಿಲೋಮೀಟರ್ ಉದ್ದದ ಈ ಘಾಟ್ ರಸ್ತೆಯನ್ನು ಸುರಂಗ ಮಾರ್ಗವನ್ನಾಗಿ ಪರಿವರ್ತಿಸಲು ತೀರ್ಮಾನಿಸಲಾಗಿದೆ.

ಸುರಂಗ ಮಾರ್ಗದ ವಿಚಾರವಾಗಿ ಈಗಾಗಲೇ ಮೂರು ಬಾರಿ ಸರ್ವೆ ನಡೆಸಲಾಗಿದೆ. ಒಂದು ಸರ್ವೆಯಲ್ಲಿ ಸುಮಾರು 3000 ಕೋಟಿ, ಇನ್ನೊಂದು ಸರ್ವೆಯಲ್ಲಿ 12000 ಕೋಟಿ ಅಂದಾಜು ವೆಚ್ಚದ ಯೋಜನೆ ರೂಪಿಸಲಾಗಿತ್ತು. ಬಳಿಕ ಮೂರನೇ ಬಾರಿಗೆ ಸರ್ವೆ ನಡೆಸಲಾಗಿದ್ದು, ಹಿಂದಿನ ಡಿಸೈನ್ ಗಳನ್ನು ಬದಲಾಯಿಸಿ ಹೊಸ ಡಿಸೈನ್ ಅನ್ನು ತಯಾರಿಸಲಾಗಿದೆ. ಸುರಂಗ ಮಾರ್ಗಕ್ಕಾಗಿ ಸುಮಾರು 2500 ಕೋಟಿ ರೂಪಾಯಿಗಳ ಅಂದಾಜು ವೆಚ್ಚದ ಯೋಜನೆ ತಯಾರಿಸಲಾಗಿದ್ದು, ಈ ಯೋಜನೆಯ ಪ್ರಕಾರ ಶಿರಾಡಿ ಘಾಟ್ ನ ನಾಲ್ಕು ಕಡೆಗಳಲ್ಲಿ ಸುರಂಗ ಮಾರ್ಗ, ಉಳಿದ ಕಡೆಗಳಲ್ಲಿ ಮೇಲ್ಸೇತುವೆಗಳನ್ನು ನಿರ್ಮಿಸಲು ಪ್ಲಾನ್ ಮಾಡಲಾಗಿದೆ. ಕೇಂದ್ರ ಹೆದ್ದಾರಿ ಪ್ರಾಧಿಕಾರ ಈ ಯೋಜನೆಗೆ ಅಧಿಕೃತ ಒಪ್ಪಿಗೆ ನೀಡಿದ್ದು, ಮುಂದಿನ ವರ್ಷದಲ್ಲಿ ಈ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ.

ಬಿ.ಸಿ.ರೋಡ್ ನಿಂದ ಅಡ್ಡಹೊಳೆವರೆಗಿನ ಕಾಮಗಾರಿ ಭರದಿಂದ ನಡೆಯುತ್ತಿದ್ದರೂ, ಮಳೆಯ ಕಾರಣಕ್ಕಾಗಿ ಕಾಮಗಾರಿ ನಿರ್ವಹಣೆಗೆ ಕೊಂಚ ತಡೆಯಾಗುತ್ತಿದೆ. ಈ ಕಾಮಗಾರಿಯಲ್ಲಿ ಬಿ.ಸಿ.ರೋಡ್ ನೇತ್ರಾವತಿ ಮತ್ತು ಉಪ್ಪಿನಂಗಡಿಯಲ್ಲಿ ಕುಮಾರಧಾರ ನದಿಗೆ ಎರಡು ಬೃಹತ್ ಸೇತುವೆ, ಕಲ್ಲಡ್ಕದಲ್ಲಿ ಸುಮಾರು ಒಂದೂವರೆ ಕಿಲೋಮೀಟರ್ ವ್ಯಾಪ್ತಿಯ ಮೇಲ್ಸೇತುವೆಯ ಕಾಮಗಾರಿಯೂ ಪ್ರಗತಿಯಲ್ಲಿದೆ.

ಶಿರಾಡಿ ಘಾಟಿಯ ಎರಡು ಕಡೆಗಳಲ್ಲಿ ಸುರಂಗ ಮತ್ತು ಇತರ ಪ್ರದೇಶಗಳಲ್ಲಿ ಮೇಲ್ಸೇತುವೆಗಳನ್ನು ನಿರ್ಮಿಸಲಾಗುವುದು. ಕೇಂದ್ರ ಸರ್ಕಾರ ಮೊದಲ ಹಂತದಲ್ಲಿ 2500 ಕೋಟಿ ರೂ. ಬಿಡುಗಡೆ ಮಾಡಲು ಒಪ್ಪಿಗೆ ನೀಡಿದೆ. 2024ರಲ್ಲಿ ಕಾಮಗಾರಿ ಆರಂಭವಾಗಲಿದೆ.

-ನಳಿನ್ ಕುಮಾರ್ ಕಟೀಲ್, ದ.ಕ.ಸಂಸದ

LEAVE A REPLY

Please enter your comment!
Please enter your name here