ಆರ್ಯಾಪು: ಅಮೃತ ಉದ್ಯಾನವನ, ಬಿಕೋನ್‌ ಡಿಜಿಟಲ್‌ ಗ್ರಂಥಾಲಯ ಉದ್ಘಾಟನೆ

0

ಆರ್ಯಾಪು ಪಂಚಾಯತ್ ವ್ಯವಸ್ಥಿತ ಮತ್ತು ಮಾದರಿ ಎನಿಸಿದೆ – ಅಶೋಕ್‌ ರೈ

ಪುತ್ತೂರು: ಆರ್ಯಾಪು ಪಂಚಾಯತ್‌ ಕಚೇರಿ ಮಾದರಿ ಪಂಚಾಯತ್‌ ಆಗಿದೆ. ಒಳ್ಳೆಯ ಪಂಚಾಯತ್ ನೋಡುವ ಅವಕಾಶ ಸಿಕ್ಕಿದೆ. ಸರಕಾರಿ ಕಚೇರಿ ಅದರಲ್ಲಿಯೂ ಪಂಚಾಯತ್ ಕಚೇರಿಯೊಂದು ಈ ರೀತಿಯ ಅಚ್ಚುಕಟ್ಟಿನ ವ್ಯವಸ್ಥೆಯಲ್ಲಿರುವುದನ್ನು ನೋಡಿ ಅತೀವ ಸಂತೋಷವಾಯಿತು ಎಂದು ಶಾಸಕ ಅಶೋಕ್‌ ಕುಮಾರ್‌ ರೈ ಹೇಳಿದರು. ಆರ್ಯಾಪು ಗ್ರಾ.ಪಂ. ಅಮೃತ ಉದ್ಯಾನವನ ಹಾಗೂ ತಾಲೂಕಿನ ಏಕೈಕ ಬೀಕೊನ್‌ ಡಿಜಿಟಲ್‌ ಗ್ರಂಥಾಲಯವನ್ನು ಅ. 17ರಂದು ಉದ್ಘಾಟಿಸಿ ಅವರು ಮಾತನಾಡಿದರು.


ಹೋರಾಟದ ರೂವಾರಿಯಾಗಲಿದ್ದೇನೆ
ಪ್ರತೀ ಹಳ್ಳಿಯ ಜನರೂ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು ಮತ್ತು ವಿದ್ಯುತ್‌ನಿಂದ ವಂಚಿತರಾಗಬಾರದು. ಇದಕ್ಕಾಗಿ ನಾನು ಹೋರಾಟ ಮಾಡಲೂ ಸಿದ್ದನಿದ್ದೇನೆ. ಈ ಹೋರಾಟಗಳಿಗೆ ನಾನೇ ರೂವಾರಿಯಾಗಲಿದ್ದೇನೆ ಎಂದು ಶಾಸಕ ಅಶೋಕ್‌ ಕುಮಾರ್‌ ರೈ ಹೇಳಿದರು. ಒಂದೂವರೆ ವರ್ಷದಲ್ಲಿ ಬಹುಗ್ರಾಮ ಕುಡಿಯುವ ನೀರಿನ ವ್ಯವಸ್ಥೆ ಆಗಲಿದೆ. ಈಗಾಗಲೇ 230 ಕೋಟಿ ರೂ. ಟೆಂಡರ್ ಆಗಿ ಕಾಮಗಾರಿ ಪ್ರಕ್ರಿಯೆ ಆರಂಭಗೊಂಡಿದೆ. ಇದರಿಂದ ಪುತ್ತೂರು ಹಾಗೂ ಸುಳ್ಯ ತಾಲೂಕಿನ ಎಲ್ಲಾ ಗ್ರಾಮಗಳಿಗೆ ಶುದ್ದೀಕರಿಸಿದ ಕುಡಿಯುವ ನೀರು ಪೂರೈಕೆಯಾಗಲಿದೆʼ ಎಂದು ಶಾಸಕರು ಹೇಳಿದರು.


ಅಭಿವೃದ್ಧಿಯಲ್ಲಿ ರಾಜಕೀಯವಿಲ್ಲ : 5 ವರ್ಷದಲ್ಲಿ ಏನಾದರೂ ಜನರ ಸೇವೆ ಮಾಡಿ ಸಾಧನೆ ಮಾಡಲು ರಾಜಕೀಯಕ್ಕೆ ಬಂದಿದ್ದೇನೆ. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯವಿಲ್ಲ. ಬಡವರು ಯಾರೂ ಬೇಕಾದರೂ ಸಹಾಯ, ಸರಕಾರದ ಸವಲತ್ತು ಪಡೆಯುವಲ್ಲಿ ಮುಚ್ಚುಮರೆಯಲ್ಲಿದೇ ನನ್ನ ಬಳಿ ಹೇಳಿ ಎಂದು ಶಾಸಕರು ಹೇಳಿದರು.

ಬಿಕೋನ್‌ ಡಿಜಿಟಲ್‌ ಗ್ರಂಥಾಲಯ ಉದ್ಘಾಟನೆ


ನಿರ್ವಹಣೆ ಮುಖ್ಯ: ಸದಸ್ಯರೆಲ್ಲರೂ ಸೇರಿ ಉದ್ಯಾನವನ ನಿರ್ವಹಣೆ ಮಾಡಬೇಕು. ನಿರ್ವಹಣೆ ಮಾಡದಿದ್ದಲ್ಲಿ ಅದರ ಪ್ರಯೋಜನವಿಲ್ಲ. ಪರಿಸರಕ್ಕೆ ಪ್ರಯೋಜನ ಕೊಡುವ ಕೆಲಸವಾಗವೇಕು. ಪ್ರಾಣಿ ಪಕ್ಷಿಗಳಿಗೆ ತಿನ್ನುವುದಕ್ಕಾದರೂ ಜಾಗ ಸಿಕ್ಕಲ್ಲಿ ಒಂದಷ್ಟು ಹಣ್ಣಿನ ಗಿಡಗಳನ್ನು ನೆಡಬೇಕು.  ಆ ದಿಶೆಯಲ್ಲಿ ಆರ್ಯಾಪು ಪಂಚಾಯತ್ ಒಂದು ಹೆಜ್ಜೆ ಮುಂದಿದೆʼ ಎಂದು ಶಾಸಕರು ಪ್ರಶಂಸೆ ವ್ಯಕ್ತಪಡಿಸಿದರು.

ದೀಪ ಬೆಳಗಿಸಿ ಸಭಾ ಕಾರ್ಯಕ್ರಮಕ್ಕೆ ಚಾಲನೆ


ಪುಸ್ತಕ ಓದಿ ಆರೋಗ್ಯ ಹೆಚ್ಚಿಸಿಕೊಳ್ಳಿ: ಜನಸಮೂಹವನ್ನು ಜ್ಞಾನದ ರೂಪಕ್ಕೆ ಪರಿವರ್ತಿಸಬೇಕಾದರೆ ಜ್ಞಾನ ಭಂಡಾರ ಅಗತ್ಯ. ಲೈಬ್ರರಿ ಅಚ್ಚುಕಟ್ಟಾಗಿ ನಿರ್ಮಿಸಲಾಗಿದೆ‌. ಸಾರ್ವಜನಿಕರು ಈ ವ್ಯವಸ್ಥೆಯ ಪ್ರಯೋಜನ ಪಡೆಯಿರಿ. ಪುಸ್ತಕ ಓದಿ. ಜ್ಞಾನದ ಜೊತೆಗೆ ಆರೋಗ್ಯ ಸುಧಾರಿಸಿಕೊಳ್ಳಲು ಇದು ಅನುಕೂಲವಾಗುತ್ತದೆ‌ʼ ಎಂದು ಅಶೋಕ್‌ ರೈಯವರು ಸಾರ್ವಜನಿಕರಿಗೆ ಕಿವಿಮಾತು ಹೇಳಿದರು.


ಸಭಾಧ್ಯಕ್ಷತೆ ವಹಿಸಿದ್ದ ಪಂಚಾಯತ್ ಅಧ್ಯಕ್ಷೆ ಗೀತಾ ರವರು ಮಾತನಾಡಿ  ಮೂಲಸೌಕರ್ಯಕ್ಕಾಗಿ ಹೆಚ್ಚಿನ ಅನುದಾನ ಒದಗಿಸಲು, ಕುಡಿಯುವ ನೀರಿನ ಸಮಸ್ಯೆಯಾಗದಂತೆ ಸೇರಿದಂತೆ ಹಲವು ರೀತಿಯ ಅನುದಾನಕ್ಕಾಗಿ ಶಾಸಕರಿಗೆ ಮನವಿ ಸಲ್ಲಿಸಿದರು.


ತಾಲೂಕು ಪಂಚಾಯತ್‌ ಯೋಜನಾಧಿಕಾರಿ ಸುಕನ್ಯಾರವರು ಮಾತನಾಡಿ ʻಗ್ರಂಥಾಲಯ ನಾಮ್‌ಕೇವಾಸ್ತೆಯಾಗಿ ಉಳಿಯಬಾರದು. ಬಳಕೆ, ನಿರ್ವಹಣೆ, ಸ್ವಚ್ಛತೆಯನ್ನು ಕಾಪಾಡಿಕೊಂಡು ಸಾರ್ವಜನಿಕ ಆಸ್ತಿಯನ್ನು ಸಂರಕ್ಷಿಸಿಕೊಳ್ಳಬೇಕಾದದ್ದು ನಮ್ಮೆಲ್ಲರ ಕರ್ತವ್ಯವಾಗಿದೆ’ ಎಂದರು. ವೇದಿಕೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಅಶೋಕ್ ಕುಮಾರ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಗ್ರಾಮಸ್ಥರು


ಅಭಿನಂದನೆ:
ಆರ್ಯಾಪು ಕುರಿಯ ಗ್ರಾಮಸ್ಥರ ಪರವಾಗಿ ಅಶೋಕ್ ಕುಮಾರ್ ರೈ ಯವರನ್ನು ಇದೇ ವೇಳೆ ಸನ್ಮಾನಿಸಿ ಅಭಿನಂದಿಸಲಾಯಿತು‌.
ಪಿಡಿಒ ನಾಗೇಶ್ ರವರು ಪ್ರಸ್ತಾವನೆಗೈದು ಸ್ವಾಗತಿಸಿ, ʻಸ್ವಾತಂತ್ರ್ಯೋತ್ಸವದ 75 ವರ್ಷಗಳ ನೆನಪಿಗಾಗಿ ʻಅಮೃತ ಗ್ರಾಮ ಪಂಚಾಯತ್‌ʼ ಗೆ ಆಯ್ಕೆಯಾಗಿರುವ ರಾಜ್ಯದ 750 ಗ್ರಾ.ಪಂ. ಗಳಲ್ಲಿ ಆರ್ಯಾಪು ಕೂಡಾ ಒಂದಾಗಿದೆ‌. ಇದರ ಅಂಗವಾಗಿ ಡಿಜಿಟಲ್ ಬಿಕೊನ್ ಗ್ರಂಥಾಲಯ ನಿರ್ಮಾಣಗೊಂಡಿದೆʼ ಎಂದರು. ಮಹಾತ್ಮ ಗಾಂಧಿಯವರ ಕನಸಿನಂತೆ ಹಳ್ಳಿಯ ವಿಧಾನಸಭೆ ಅಭಿವೃದ್ದಿಯಾಗಬೇಕು. ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಹಂತ ಹಂತಗಳ ಯೋಜನೆಗಳಿಗೆ ಬೆಂಬಲವಾಗಿ ನಿಂತದ್ದು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಾಗಿದೆ. ಗ್ರಾಮೀಣ ಭಾಗದ ಜನರಿಗೆ ವಿಹಾರ ಕಲ್ಪಿಸಿಕೊಡುವ ನಿಟ್ಟಿನಲ್ಲಿ ರೂ. 5 ಲಕ್ಷ ಉದ್ಯೋಗ ಖಾತ್ರಿ ಮತ್ತು ರೂ. 1.5 ಲಕ್ಷ ಅಮೃತ ಗ್ರಾಮ ಪಂಚಾಯತ್‌ ಯೋಜನೆಯಲ್ಲಿ ಸಂಟ್ಯಾರ್‌ ಬಳಿ ʻಅಮೃತ ಉದ್ಯಾನವನʼ ನಿರ್ಮಿಸಲಾಗಿದೆ. ರೂ. 4 ಲಕ್ಷ ಅಮೃತ ಗ್ರಾಮ ಪಂಚಾಯತ್‌ ಯೋಜನೆ, ರೂ. 1 ಲಕ್ಷ ಗ್ರಾ.ಪಂ. ಗ್ರಂಥಾಲಯ ಉಪಕರ ಹಾಗೂ ರೂ. 1 ಲಕ್ಷ 15ನೇ ಹಣಕಾಸು ಯೋಜನೆಯಲ್ಲಿ ತಾಲೂಕಿನ ಏಕೈಕ ʻಬಿಕೋನ್‌ ಡಿಜಿಟಲ್‌ ಗ್ರಂಥಾಲಯ ನಿರ್ಮಿಸಲಾಗಿದೆʼ ಎಂದು ನಾಗೇಶ್‌ ಹೇಳಿದರು.


ಮೊದಲ ಡಿಜಿಟಲ್‌ ಇನ್‌ಫಾರ್ಮೆಶನ್‌ ಡಿಸ್‌ಪ್ಲೇ ಮೆಷಿನ್:‌
ಉದ್ಯಮಿ ಅಶ್ರಫ್ ಕಮ್ಮಾಡಿಯವರ ಕೊಡುಗೆಯ ರೂ. 1.20 ಲಕ್ಷ ವೆಚ್ಚದ ಡಿಜಿಟಲ್‌ ಇನ್ಫಾರ್ಮೆಶನ್‌ ಡಿಸ್‌ಪ್ಲೇʼ ಯಂತ್ರವನ್ನು ಗ್ರಂಥಾಲಯದಲ್ಲಿ ಅಳವಡಿಸಲಾಗಿದೆ. ಸರಕಾರದ ಎಲ್ಲಾ ಇಲಾಖೆಗಳ ಮಾಹಿತಿಯನ್ನು ಸಾರ್ವಜನಿಕರು ನೇರವಾಗಿ ಇದರಲ್ಲಿ ಪಡೆಯಬಹುದಾಗಿದೆ. ಇದು ಜಿಲ್ಲೆಯಲ್ಲೇ ಪ್ರಥಮವಾಗಿದೆ. ಈ ವೇಳೆ ಕೊಡುಗೈ ದಾನಿ ಅಶ್ರಫ್‌ ಕಮ್ಮಾಡಿಯವರಿಗೆ ಕೃತಜ್ಞತೆ ಸಲ್ಲಿಸಲಾಯಿತು.


ಗೌರವಾರ್ಪಣೆ:
ಗ್ರಂಥಾಲಯದ ಕಾಮಗಾರಿ ವಹಿಸಿಕೊಂಡ ಗುತ್ತಿಗೆದಾರ ಸುರೇಂದ್ರ ರೈ ಬಳ್ಳಮಜಲು, ಮನರೇಗಾ ಸಾಮಾಗ್ರಿ ಪೂರೈಕೆ ಮಾಡಿದ ಪವನ್ ಶೆಟ್ಟಿ, ನರೇಗಾ ಇಂಜಿನಿಯರ್ ಪ್ರಶಾಂತಿ ಹಾಗೂ ಶ್ರೀಲಕ್ಷ್ಮಿಯವರಿಗೆ ಗೌರವ ಸ್ಮರಣಿಕೆ ನೀಡಲಾಯಿತು.


ಬಹುಮಾನ ವಿತರಣೆ:
ಗ್ರಂಥಪಾಲಕರ ದಿನಾಚರಣೆಯ ಅಂಗವಾಗಿ ನಡೆದ ಮಕ್ಕಳ ಪ್ರಬಂಧ ಸ್ಪರ್ಧಾ ವಿಜೇತರಾದ ಪೂಜಾಶ್ರೀ, ದೀಕ್ಷಾ ಎಂ., ಧನ್ಯಶ್ರೀ ಯವರಿಗೆ ಬಹುಮಾನ ವಿತರಿಸಲಾಯಿತು‌. ಸದಸ್ಯೆ ಪವಿತ್ರ ಎನ್. ವಂದಿಸಿದರು‌. ಸದಸ್ಯ ನೇಮಾಕ್ಷ ಸುವರ್ಣ ಕಾರ್ಯಕ್ರಮ ನಿರೂಪಿಸಿದರು‌. ಅತಿಥಿಗಳನ್ನು ತಾಂಬೂಲ, ಶಾಲು ನೀಡಿ ಪಂಚಾಯತ್‌ ಸದಸ್ಯರಾದ ಬೂಡಿಯಾರ್ ಪುರುಷೋತ್ತಮ ರೈ ಮಾಜಿ ಅಧ್ಯಕ್ಷೆ ಸರಸ್ವತಿ, ಮಾಜಿ ಉಪಾಧ್ಯಕ್ಷೆ ಪೂರ್ಣಿಮಾ ರೈ, ಸದಸ್ಯರಾದ ವಸಂತ ಶ್ರೀದುರ್ಗಾ, ಯಾಕೂಬ್ ಯಾನೆ ಸುಲೈಮಾನ್ ಗೌರವಿಸಿದರು. ಪಂಚಾಯತ್ ಸದಸ್ಯರು, ಉದ್ಯೋಗ ಖಾತ್ರಿ ಇಂಜಿನಿಯರ್ ಗಳು, ಆರೋಗ್ಯ ಕಾರ್ಯಕರ್ತೆಯರು, ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಮಧ್ಯಾಹ್ನ ಪಂಚಾಯತ್‌ ವತಿಯಿಂದ ಭೋಜನ ವ್ಯವಸ್ಥೆ ಮಾಡಲಾಗಿತ್ತು.


ಉದ್ಘಾಟನೆ:
ಸಭಾ ಕಾರ್ಯಕ್ರಮಕ್ಕೂ ಮೊದಲು ಸಂಟ್ಯಾರ್‌ ಬಳಿ ನಿರ್ಮಾಣಗೊಂಡಿರುವ ಅಮೃತ ಉದ್ಯಾನವನವನ್ನು ರಿಬ್ಬನ್‌ ಕತ್ತರಿಸಿ ಉದ್ಘಾಟಿಸಿದ ಶಾಸಕರು ಬಳಿಕ ಉದ್ಯಾನವನದೊಳಗೆ ಗಿಡಗಳಿಗೆ ನೀರೆರೆದರು. ಪಂಚಾಯತ್‌ ಸದಸ್ಯರು ಮತ್ತು ಸಿಬಂದಿಗಳ ಜೊತೆಗೆ ಗಾರ್ಡನ್‌ನಲ್ಲಿ ಫೋಟೋ ತೆಗೆಸಿಕೊಂಡರು. ಬಳಿಕ ಪಂಚಾಯತ್‌ ಕಚೇರಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಬಿಕೋನ್‌ ಡಿಜಿಟಲ್‌ ಗ್ರಂಥಾಲಯವನ್ನು ಉದ್ಘಾಟಿಸಿದರು. ಇರ್ದೆ ಶ್ರೀ ವಿಷ್ಣು ಚೆಂಡೆ ಮೇಳದವರಿಂದ ಚೆಂಡೆ ಮೇಳೆ ಆಕರ್ಷಣೆಯಾಗಿತ್ತು.

ಕಾನೂನು ತೊಡಕು ನಿವಾರಿಸಿ ಜನರ ಸೇವೆ ಮಾಡಬೇಕು
ಕಾನೂನಿನ ಹಿಂದೆ ನಾವು ಹೋಗುವುದಲ್ಲ.  ಜನಪ್ರತಿನಿಧಿಗಳಾದ ನಾವು ಕಾನೂನು ತೊಡಕು ಪರಿಹರಿಸಿಕೊಂಡು ಜನರ ಕೆಲಸ ಮಾಡಿಕೊಡಬೇಕು‌. ಬಡವರಿಗೆ ಮಾಹಿತಿ ಕೊರತೆಯಿರುತ್ತದೆ. ಅವರಿಗೆ ಸರಿಯಾದ ಮತ್ತು ಪ್ರಾಮಾಣಿಕ ಸೇವೆಯನ್ನು ಜನಪ್ರತಿನಿಧಿಗಳು ಮತ್ತು ಪಂಚಾಯತ್ ಸಿಬಂದಿಗಳು ಮಾಡಬೇಕುʼ ಎಂದು ಅಶೋಕ್‌ ರೈ ಹೇಳಿದರು.

ಸಾರ್ವಜನಿಕ ಮಾಹಿತಿ ಯಂತ್ರ – ಜಿಲ್ಲೆಯಲ್ಲೇ ಪ್ರಥಮ
ಬಿಕೋನ್‌ ಡಿಜಿಟಲ್‌ ಗ್ರಂಥಾಲಯವು ವಿಶೇಷ ಚೇತನರಿಗಾಗಿ ಇರುವ ಅತ್ಯಾಧುನಿಕ ಸೌಲಭ್ಯ ಹೊಂದಿರುವ ಪುತ್ತೂರು ತಾಲೂಕಿನ ಪ್ರಥಮ ಗ್ರಂಥಾಲಯವಾಗಿದೆ. ಅಲ್ಲದೇ ಈ ಗ್ರಂಥಾಲಯದೊಳಗೆ ಸಾರ್ವಜನಿಕರಿಗೆ ವಿವಿಧ ಇಲಾಖೆಗಳ ಮಾಹಿತಿ ಒದಗಿಸಬಲ್ಲ ಸಾರ್ವಜನಿಕ ಮಾಹಿತಿ ಪರದೆ ʻಡಿಜಿಟಲ್‌ ಇನ್‌ಫಾರ್ಮೆಶನ್‌ ಡಿಸ್‌ಪ್ಲೇʼ ಯಂತ್ರವನ್ನೂ ಅಳವಡಿಸಲಾಗಿದೆ. ಇದು ಜಿಲ್ಲೆಯಲ್ಲೇ ಪ್ರಥಮ ಎನಿಸಿಕೊಂಡಿದೆ.

LEAVE A REPLY

Please enter your comment!
Please enter your name here