ಹಚ್ಚೋಣ ದೀಪ… ಕತ್ತಲು ಕರಗಿ ಸಂಸ್ಕಾರ, ಸಂಸ್ಕೃತಿಯ ಬೆಳಕು ತುಂಬಲು

0

@ ಸಿಶೇ ಕಜೆಮಾರ್


ಆಟಿ ತಿಂಗಳು ಕಳೆದು ಸೋಣ ಬಂತೆಂದರೆ ಸಾಕು, ತುಳುನಾಡಿನ ದೈವ, ದೈವಸ್ಥಾನಗಳಲ್ಲಿ ಒಂದು ರೀತಿಯ ಹಬ್ಬದ ವಾತಾವರಣ ಸೃಷ್ಟಿಯಾಗಿ ಬಿಡುತ್ತದೆ. ದೈವದ ಗುಡಿಯ ಬಾಗಿಲು ತೆರೆದು ದೈವದ ಮಣೆ ಮಂಚಕ್ಕೆ ಹೂ ಇಟ್ಟು ದೀಪ ಹಚ್ಚುತ್ತೇವೆ. ಈ ಅವಧಿಯಲ್ಲಿ ಹಬ್ಬಗಳ ಸಾಲು ಸಾಲು ನಮ್ಮ ಮುಂದೆ ತೆರೆದುಕೊಳ್ಳುತ್ತದೆ. ಮೊದಲಿಗೆ ಬರುವ ಹಬ್ಬವೆಂದರೆ ನಾಗರ ಪಂಚಮಿ. ತುಳುವರು ನಾಗಮೂಲ ಸಂತಾನದವರು ಆಗಿರುವುದರಿಂದ ಇದು ಬಹಳ ಪ್ರಾಮುಖ್ಯವಾದ ಹಬ್ಬವಾಗಿದೆ. ಇದರೊಂದಿಗೆ ತೆನೆ ಹಬ್ಬ, ಚೌತಿ, ನವರಾತ್ರಿ ಹಬ್ಬದ ನಂತರ ಬರುವ ಹಬ್ಬವೇ ದೀಪಾವಳಿ. ತುಳುನಾಡು ಅಂದ ತಕ್ಷಣ ಅಲ್ಲಿ ಪ್ರತಿಯೊಂದು ಹಬ್ಬಕ್ಕೂ ಒಂದು ವಿಶೇಷತೆ ಇದ್ದೇ ಇರುತ್ತದೆ. ತುಳುವರು ಆಚರಿಸುವ ಹಬ್ಬಗಳಲ್ಲಿ ತನ್ನದೇ ಆದ ಸೊಗಡು, ವಿಶಿಷ್ಠತೆ, ಅರ್ಥ ಇರುತ್ತದೆ. ಅದಕ್ಕಾಗಿಯೇ ಹಬ್ಬಗಳ ಆಚರಣೆ ಹಾಗೂ ಅದರ ಹಿಂದಿನ ಉದ್ದೇಶ, ನೀತಿ ನಿಯಮಗಳನ್ನು ತಿಳಿಯಬೇಕಿದ್ದರೆ ನಾವು ತುಳುನಾಡಿಗೆ ಒಂದು ಸುತ್ತು ಹೊಡೆಯಬೇಕು ಅನ್ನೋದು. ಇಲ್ಲಿನ ಪ್ರತಿಯೊಂದು ಮನೆಗಳಲ್ಲೂ ಒಂದು ಸಂಪ್ರದಾಯವಿದೆ. ಭಕ್ತಿಯ ಪರಾಕಾಷ್ಠೆ ಇದೆ. ಹಬ್ಬದ ಆಚರಣೆಗೊಂದು ಕಥೆ ಇದ್ದೇ ಇರುತ್ತದೆ. ದೀಪಾವಳಿ ಹಬ್ಬದ ಹಿಂದಿರುವ ಕಥೆಯೂ ನಮಗೆಲ್ಲಾ ಗೊತ್ತೇ ಇದೆ.

“ಕರ್ಗಲ್ಲ್ ಕಾಯಿ ಆನಗ, ಬೊರ್ಗಲ್ಲ್ ಪೂ ಪೋನಗ, ಉಪ್ಪು ರ‍್ಪೂರಾನಗ, ಜಾಲ್ ಪಾದೆ ಆನಗ, ಉರ್ದು ಮದ್ದೊಲಿ ಆನಗ, ಗೊಡ್ಡೆರ್ಮೆ ಗೋನೆ ಆನಗ, ಎರು ದಡ್ಡೆ ಆನಗ, ತುಂಬೆದಡಿಟ್ ಕೂಟ ಆನಗ, ನೆಕ್ಕಿದಡಿಟ್ ಆಟ ಆನಗ, ದಂಬಲ್ಗ್ ಪಾಪು ಪಾಡ್ನಗ, ಅಲೆಟ್ ಬೊಲ್ನೈ ಮುರ‍್ಕುನಗ, ಗರ‍್ಗೊಂಜಿದ ಕಲೆ ಮಾಜಿನಗ, ಮಂಜೊಲು ಪಕ್ಕಿ ಮೈ ದೆಪ್ಪುನಗ, ಕೊಟ್ರು ಞ ಕೊಡಿ ಜಾನಗ, ಆಟಿದ ಅಮಾಸೆ ಸೋಣ ಬರ್ಪಿ ಸಂಕ್ರಾಂದಿ, ಬೊಂತೆಲ್ದ ಮೂಜಿ ದಿನತ ಕೊಡಿ ಪರ್ಬೊಗು ಬಲಿ ದೆತೊಂದು ಬಲ್ಲ ಬಲಿಯೇಂದ್ರ ಕೂ…ಕೂ…ಕೂ…”

ತುಳು ಭಾಷೆಯಲ್ಲಿರುವ ಈ ಸಾಲುಗಳು ಎಷ್ಟೊಂದು ಅರ್ಥಪೂರ್ಣವಾಗಿವೆ. ಯಾವತ್ತೂ ಬೊರ್ಗಲ್ (ಬಂಡೆ ಕಲ್ಲು)ಹೂ ಆಗಲು ಸಾಧ್ಯ ಇಲ್ಲ, ಹಾಗೆ ಉಪ್ಪು ಕರ್ಪೂರ ಆಗಲು ಸಾಧ್ಯನಾ? ಒಟ್ಟಿನಲ್ಲಿ ಇಲ್ಲಿರುವ ಸಾರಾಂಶ ಏನೆಂದರೆ ಪರಶುರಾಮನ ಸೃಷ್ಟಿಯ ಈ ತುಳುನಾಡಿಗೆ ಯಾವತ್ತೂ ಅಂತ್ಯ ಇಲ್ಲ. ತುಳುವರು ಸರ್ವಶ್ರೇಷ್ಠರು ಎಂಬುದಾಗಿದೆ. ಇಂತಹ ಸರ್ವಶ್ರೇಷ್ಠ ತುಳುವರು ಕೂಡ ಹಬ್ಬಗಳ ಮಹತ್ವವನ್ನು ಮರೆಯುತ್ತಿದ್ದರಾ? ತುಳುನಾಡಲ್ಲೂ ಕೂಡ ಹಬ್ಬಗಳ ಸೊಗಡು ಆ ಸಂಸ್ಕೃತಿ, ಸಂಸ್ಕಾರ ಮರೆಯಾಗುತ್ತಿದ್ದೆಯಾ? ತುಳುವರು ಕೂಡ ಆಧುನಿಕತೆಗೆ ಒಗ್ಗಿಕೊಳ್ಳುತ್ತಿದ್ದಾರೆಯೇ? ಆಧುನಿಕತೆಯ ಬಿರುಗಾಳಿಗೆ ತುಳುನಾಡಿನ ಸಂಸ್ಕೃತಿ, ಸಂಸ್ಕಾರಗಳು ತರಗೆಲೆಗಳಂತೆ ಹಾರುತ್ತಿವೆಯಾ? ಎಂಬಿತ್ಯಾದಿ ಹಲವು ಪ್ರಶ್ನೆಗಳು ನಮ್ಮ ಮನಸ್ಸಲ್ಲಿ ಮೂಡತೊಡಗುತ್ತವೆ. ಇಂತಹ ಹಲವು ಪ್ರಶ್ನೆಗಳಿಗೆ ಉತ್ತರ ‘ಹೌದು’ಎಂದು ಅಂದುಕೊಂಡರೂ ಎಲ್ಲೋ ಒಂದು ಮೂಲೆಯಲ್ಲಿ ಆ ಸಂಸ್ಕೃತಿ, ಸಂಸ್ಕಾರಗಳು ಮತ್ತೆ ಗರಿಗೆದರಿಕೊಳ್ಳುತ್ತಿರುವುದು ಸಂತಸದ ವಿಷಯವಾಗಿದೆ. ವಿದ್ಯುತ್ ದೀಪಗಳ ಗುಂಡಿ ಒತ್ತಿ ಬಲ್ಬ್ ಉರಿಸಿ ದೀಪಾವಳಿ ಆಚರಿಸುವ ಇಂದಿನ ಮಕ್ಕಳು ದೀಪ ಹಚ್ಚುವುದನ್ನೇ ಮರೆತಿದ್ದಾರೆ. ಎಣ್ಣೆ,ಬತ್ತಿಗಳ ಬಂಧನದೊಂದಿಗೆ ಉರಿಯುವ ಜ್ಯೋತಿಯನ್ನು ಹಚ್ಚುವ ಕೈಗಳು ಮರೆಯಾಗುತ್ತಿವೆ. ಹೀಗಾಗದಿರಲಿ ಎಂಬ ಆಶಯವೇ ನನ್ನ ಹಾಗೂ ನಮ್ಮೆಲ್ಲರ ಕರ್ತವ್ಯವಾಗಬೇಕಾಗಿದೆ. ನಮ್ಮ ಮಕ್ಕಳಿಗೆ ನಮ್ಮ ಸಂಸ್ಕೃತಿ, ಸಂಸ್ಕಾರ, ಹಬ್ಬಗಳ ಮಹತ್ವಗಳನ್ನು ಕಲಿಸಬೇಕಾಗಿದೆ. ಬನ್ನಿ ದೀಪಾವಳಿ ಹಬ್ಬದ ಒಂದಿಷ್ಟು ವಿಶೇಷತೆಗಳನ್ನು ತಿಳಿದುಕೊಳ್ಳೋಣ…

ಅಗಲಿದವರನ್ನು ನೆನೆಯುವ ನಮಗೆ ಬಹಳ ವಿಶೇಷವೆನಿಸುತ್ತದೆ. ತುಳುನಾಡಿನಲ್ಲಿ ದೀಪಾವಳಿ ಆರಂಭವಾಗುವುದೇ ನಮ್ಮನ್ನು ಅಗಲಿದವರನ್ನು ನೆನೆಯುವುದು, ಸತ್ತವರ ಹಬ್ಬವನ್ನು ಆಚರಿಸುವ ಮೂಲಕ. ಇದಕ್ಕೂ ಒಂದು ಅರ್ಥವಿದೆ. ತುಳುವರ ನಂಬಿಕೆಯಂತೆ ಮನೆತನದ ತೀರಿ ಹೋದ ಹಿರಿ,ಕಿರಿಯರು ಶಾಶ್ವತವಾಗಿ ಗೃಹಗತಿಯನ್ನು ತೊರೆದು ಹೋಗುವುದಿಲ್ಲ. ನಿಜವಾಗಿ ನೋಡಿದರೆ ತುಳುವರಲ್ಲಿ ಸತ್ತವರನ್ನು ವೈಕುಂಠಕ್ಕೆ ಕಳುಹಿಸುವ ಪದ್ದತಿ ಇಲ್ಲವೇ ಇಲ್ಲ. ಸತ್ತವರಿಗಾಗಿ ಮಾಡುವ ಉತ್ತರಕ್ರಿಯೆಗಳು ಮುಗಿದ ಬಳಿಕ ಮನೆಯಲ್ಲಿ ಮಡೆ ಬೊಜ್ಜವನ್ನು ಮಾಡಿ, ತೀರಿಕೊಂಡವರಿಗೆ ಮನೆಯ ಒಳಗಡೆ ಮಿಸೆಲ್ ಬಡಿಸುವರು. ಒಬ್ಬ ವ್ಯಕ್ತಿ ಸತ್ತು 16 ದಿನದಲ್ಲಿ ಕುಟುಂಬ ವರ್ಗದವರನ್ನು ಕರೆಸಿ ಉಲಾಯಿ ಲೆಪ್ಪುನ(ಒಳಗೆ ಕರೆಯುವುದು) ಎಂಬ ಪದ್ಧತಿ ಇದೆ. ಅಂದರೆ ನಮ್ಮ ಮನೆಯಿಂದ ಸತ್ತು ಸ್ವರ್ಗ ಸೇರಿದ ವ್ಯಕ್ತಿಯೂ ಸತ್ತ ನಂತರ ಕೂಡ ನಮ್ಮ ಮನೆಯಲ್ಲಿಯೇ ಇರಬೇಕು ಅಂದರೆ ನಮ್ಮ ಜೊತೆಯೇ ಅಶರೀರವಾಗಿ ಇರುತ್ತಾನೆ ಎಂದು ತುಳುವರು ನಂಬುತ್ತಾರೆ. ಆಯಾ ದೀಪಾವಳಿಗೆ ಮುಂಚೆ ಯಾರಾದರೂ ವಿಧಿವಶರಾದರೆ ಅವರಿಗೆ ದೀಪಾವಳಿ ದಿನ ವಿಶೇಷ ಖಾದ್ಯಗಳನ್ನು ಮಾಡಿ ಬಳಸುತ್ತಾರೆ. ಇದರಲ್ಲಿ ವಿಶೇಷವಾಗಿ ಅವಲಕ್ಕಿಯನ್ನು ಬಳಸುವುದು ಸಾಮಾನ್ಯವಾಗಿದೆ. ದೀಪಾವಳಿ ಹಬ್ಬದ ಮೊದಲು ದಿನ ಕುಚ್ಚಲಕ್ಕಿ ಅರೆದು, ತೆಂಗಿನಕಾಯಿ ತುರಿದು, ಬೆಲ್ಲ ಮಿಶ್ರಣ ಮಾಡಿ ಅರಸಿನದ ಎಲೆಯಲ್ಲಿ ಕಡುಬು ಬೇಯಿಸುವರು. ಬೂದುಕುಂಬಳ, ಬಾಳೆಕಾಯಿ ಮತ್ತು ಮೀನು ಪಲ್ಯವನ್ನು ಬೇರೆಬೇರೆಯಾಗಿ ತಯಾರಿಸಿ ರಾತ್ರಿ ಸಮಯದಲ್ಲಿ ಬಾಳೆ ಎಲೆ ಹಾಕಿ ಬಡಿಸುವರು. ಒಟ್ಟಿನಲ್ಲಿ ನಮ್ಮನ್ನಗಲಿದ ಹಿರಿಯರನ್ನು ಮರೆಯಬಾರದು ಎಂಬುದು ಈ ಹಬ್ಬದ ಒಂದು ಉದ್ದೇಶವಾಗಿದೆ. ಅದೇ ದಿನ ಬಚ್ಚಲು ಮನೆಯನ್ನು ಶುದ್ಧಗೊಳಿಸಿ ತಂಬಿಗೆಗೆ ಬಣ್ಣ ಬಳಿದು ನೀರು ತುಂಬಿಸಿ ಇಡಲಾಗುತ್ತದೆ. ಮರುದಿವಸ ಬೆಳಿಗ್ಗೆ ಎದ್ದು ಬಚ್ಚಲು ಮನೆಯಲ್ಲಿ ನೀರು ತುಂಬಿಸಿಟ್ಟ ಮಂಡೆ(ದೊಡ್ಡ ತಂಬಿಗೆ)ಯ ಒಲೆಗೆ ಬೆಂಕಿ ಹಾಕಿ ನೀರು ಕಾಯಿಸಲಾಗುತ್ತದೆ. ಮನೆಯ ಎಲ್ಲರೂ ಮೈಗೆ ಎಣ್ಣೆ ಹಚ್ಚಿ ಬಿಸಿ ನೀರಲ್ಲಿ ಸ್ನಾನ ಮಾಡುತ್ತಾರೆ. ಹೀಗೆ ಸ್ನಾನ ಮಾಡಿ ಬಂದವರು ಬೆಲ್ಲ ಹಾಕಿ ಕಲಸಿಟ್ಟ ಅವಲಕ್ಕಿ, ನೀರುದೋಸೆ(ತೆಲ್ಲವು) ತಿನ್ನುತ್ತಾರೆ.

ಭೂಮಿಯನ್ನು ದೇವರೆಂದು ಕೈ ಮುಗಿಯುತ್ತೇವೆ ತುಳುವರು ಈ ಮಣ್ಣನ್ನು ದೇವರಿಗೆ ಸಮಾನ ಕಾಣುತ್ತಾರೆ. ಯಾವುದೇ ಕೆಲಸಕ್ಕೆ ಮುನ್ನ ಮಣ್ಣಿಗೆ ಕೈ ಮುಗಿದು ಕೆಲಸ ಆರಂಭಿಸುತ್ತಾರೆ. ನಾವು ದೇವಸ್ಥಾನ, ದೈವಸ್ಥಾನಗಳಲ್ಲಿಯೂ ಕೂಡ ಗಮನಿಸಬಹುದು ದೇವರಿಗೆ ಅಥವಾ ದೈವಕ್ಕೆ ಮಂಗಳಾರತಿ ಆದ ಬಳಿಕ ನಾವೆಲ್ಲ ನೆಲವನ್ನು ಮುಟ್ಟಿ ನಮಸ್ಕರಿಸುತ್ತೇವೆ. ದೈವಕ್ಕೆ ಪ್ರಾರ್ಥನೆ ಸಲ್ಲಿಸಿದ ಬಳಿಕವು ನೆಲವನ್ನು ಮುಟ್ಟಿ ಹಣೆಗೆ ಒತ್ತಿಕೊಳ್ಳುತ್ತೇವೆ. ಅಂದರೆ ಈ ಮಣ್ಣಲ್ಲಿ ದೇವರಿದ್ದಾನೆ ಎಂದು ತುಳುವರು ನಂಬುತ್ತಾರೆ. ತುಳುವರು ಬೇಸಾಯವನ್ನೇ ನಂಬಿ ಬದುಕುವವರು. ಆದ್ದರಿಂದ ದೀಪಾವಳಿಯ ಎರಡನೇ ದಿನ ತುಳುನಾಡಲ್ಲಿ ಭೂಮಿ ಪೂಜೆ ತನ್ನದೇ ಆದ ಮಹತ್ವವನ್ನು ಪಡೆದುಕೊಂಡಿದೆ. ಇಲ್ಲಿ ಮುಖ್ಯವಾಗಿ ಬಲಿಯೇಂದ್ರನ ಆರಾಧನೆಯೊಂದಿಗೆ ಭೂಮಿ ಪೂಜೆಯು ಕೂಡ ಸೇರಿಕೊಂಡಿರುವುದನ್ನು ನಾವು ಗಮನಿಸಿದರೆ ತುಳುವರು ಭೂಮಿಯಲ್ಲಿ ಅರ್ಥಾತ್ ಪ್ರಕೃತಿಯಲ್ಲಿ ದೇವರನ್ನು ಕಂಡುಕೊಂಡವರು ಎಂಬುದು ಸ್ಪಷ್ಟವಾಗುತ್ತದೆ. ಈ ದಿನ ಗದ್ದೆಯ ಸುತ್ತಲು ಸ್ವಚ್ಛ ಮಾಡುತ್ತಾರೆ. ತೆಂಗಿನ ಮಡಲಿನ ಕಡ್ಡಿಗೆ ಕೈಮಗ್ಗದ ಬಿಳಿಯ ಬಟ್ಟೆಯ ತುಂಡುಗಳನ್ನು ಸುತ್ತಿ ಒಂದು ರೀತಿಯ ಉದ್ದನೆಯ ದೀಪವನ್ನು ತಯಾರು ಮಾಡುತ್ತಾರೆ ಇದಕ್ಕೆ ತುಳುವಿನಲ್ಲಿ ಕೋಲ್ ನಿಣೆ ಎಂದು ಹೇಳುತ್ತಾರೆ. ಅಲ್ಲದೆ ವಿವಿಧ ಬಗೆಯ ಕಾಡು ಹೂಗಳನ್ನು ಕೂಡ ತಯಾರು ಮಾಡುತ್ತಾರೆ. ಮುಖ್ಯವಾಗಿ ಕೇಪುಳ ಹೂ, ಪಾದೆ ಹೂ ಇತ್ಯಾದಿ ಹಲವು ಬಗೆಯ ಹೂಗಳನ್ನು ಕೂಡ ಜೋಡಿಸಿ ಇಡುತ್ತಾರೆ. ರಾತ್ರಿಯ ಸಮಯದಲ್ಲಿ ಗದ್ದೆಯ ಬದಿಗೆ ಹೋಗಿ ಬಟ್ಟೆಯಲ್ಲಿ ಮಾಡಿದ ದೀಪ (ಕೋಲ್ ನಿಣೆ)ವನ್ನು ಉರಿಸಿ ಅದರ ಬುಡಕ್ಕೆ ಈ ಹೂಗಳನ್ನು ಹಾಕುತ್ತಾರೆ. ಅಲ್ಲದೆ ವೀಳ್ಯದೆಲೆ, ಅಡಿಕೆ, ಅವಲಕ್ಕಿ, ತೆಂಗಿನ ಕಾಯಿಯ ತುಂಡು ಇತ್ಯಾದಿಗಳನ್ನು ಕೂಡ ಇಡುತ್ತಾರೆ. ತುಳುನಾಡಲ್ಲಿ ಇನ್ನೊಂದು ಪದ್ಧತಿ ಕೂಡ ಇದ್ದು ಹಾಲೆ ಮರದ ಗೆಲ್ಲನ್ನು ನೆಟ್ಟು ಆ ಕೊಂಬೆಗೆ ವಿವಿಧ ರೀತಿಯ ಕಾಡು ಹೂಗಳಿಂದ ಸಿಂಗಾರ ಮಾಡಿ, ಅದರ ಬುಡಕ್ಕೆ ಈ ವಸ್ತುಗಳನ್ನು ಇಟ್ಟು ಪೂಜಿಸುತ್ತಾರೆ. ಒಟ್ಟಿನಲ್ಲಿ ಭೂಮಿ ಪೂಜೆಯೊಂದಿಗೆ ಬಲಿಯೇಂದ್ರನ ಆರಾಧನೆಯು ನಡೆದಿದೆ.

ಭೂಮಿಯನ್ನು ಕಾಯುವವ ಬಲಿಯೇಂದ್ರ ಇಡೀ ತುಳುನಾಡನ್ನು ಆಳಿದ ಬಲಿ ಚಕ್ರವರ್ತಿ ಬಲಿಯೇಂದ್ರ ಎಂದರೆ ಭೂಮಿಯನ್ನು ಕಾಯುವವ ಎಂದು ತುಳುವರು ನಂಬುತ್ತಾರೆ. ಇದೇ ರೀತಿಯ ಹಾಲೆ(ಪಾಲೆ ಮರ)(ಡೆವಿಲ್ ಟ್ರೀ)ಮರದ ಕೊಂಬೆಯನ್ನು ಕಡಿದು ಮನೆಯ ಎದುರಿನ ತುಳಸಿ ಕಟ್ಟೆಯ ಪಕ್ಕ, ಜಾನುವಾರುಗಳ ಕೊಟ್ಟಿಗೆಯ ಪಕ್ಕ, ಜಾಗೆಯಲ್ಲಿನ ದೈವಗಳ ಗುಡಿಗಳ ಪಕ್ಕ ನೆಟ್ಟು ಸಿಂಗರಿಸಿ ದೀಪಾವಳಿ ದಿನ ಪೂಜೆ ಮಾಡುತ್ತಾರೆ. ಒಟ್ಟಿನಲ್ಲಿ ಇಲ್ಲಿ ದೀಪದ ಅಲಂಕಾರ ಪ್ರಮುಖವಾಗಿರುತ್ತದೆ. ಹಾಲೆ ಮರದ ಕೊಂಬೆಯನ್ನು ಸಿಂಗರಿಸಿ ಬುಡದಿಂದ ತಲೆಯವರೆಗೂ ದೀಪಗಳನ್ನು ಉರಿಸಿ ಇಡುತ್ತಾರೆ. ಮತ್ತೊಂದು ವಿಶೇಷತೆ ಎಂದರೆ ತುಳುವರು ದೀಪಗಳನ್ನು ಉರಿಸಲು ಇಲ್ಲಿ ನುರ್ತೊಂಗು(ಚಿಕ್ಕದಾಗಿ ಉರುಟಾಗಿರುವ ಒಂದು ರೀತಿಯ ಕಹಿ ಸೌತೆ ಕಾಯಿ) ಅನ್ನು ಬಳಸುತ್ತಾರೆ. ಈ ಕಾಯಿಯನ್ನು ಎರಡು ಭಾಗ ಮಾಡಿ ಈ ಹೋಳಿನಲ್ಲಿನ ತಿರುಳನ್ನು ತೆಗೆದು ಅದಕ್ಕೆ ಎಣ್ಣೆ ಹಾಕಿ ಅದರಲ್ಲಿ ದೀಪ ಉರಿಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಇದನ್ನೆಲ್ಲಾ ಕಾಣಲು ಸಾಧ್ಯವಿಲ್ಲ.

ಗೋ ಪೂಜೆ:
ದೀಪಾವಳಿಯ ಇನ್ನೊಂದು ವಿಶೇಷ ಗೋ ಪೂಜೆ. ಹಗಲಿನ ಹೊತ್ತಲ್ಲಿ ಕೊಟ್ಟಿಗೆಯಲ್ಲಿದ್ದ ಜಾನುವಾರುಗಳನ್ನು ತೋಡಿಗೆ, ಕೆರೆಗೆ ಕರೆದುಕೊಂಡು ಹೋಗಿ ಸ್ನಾನ ಮಾಡಿಸಲಾಗುತ್ತದೆ. ಸಂಜೆಯ ಹೊತ್ತಿಗೆ ಸ್ನಾನ ಮಾಡಿದ ಗೋವುಗಳಿಗೆ ಸಿಂಗಾರ ಮಾಡಲಾಗುತ್ತದೆ. ವಿವಿಧ ರೀತಿಯ ಹೂವಿನ ಮಾಲೆಗಳನ್ನು ತೊಡಿಸಿ ಗೋವುಗಳನ್ನು ಮದುವಣ ಗಿತ್ತಿಯಂತೆ ಮಾಡುತ್ತಾರೆ. ಬಳಿಕ ಒಂದು ತಡ್ಪೆ( ಅಕ್ಕಿಯಲ್ಲಿನ ಕಸ ಕಡ್ಡಿಗಳನ್ನು ಬೀಸಿ ತೆಗೆಯಲು ಬಳಸುವ ತುಳುವರ ಸಾಧನ)ಯಲ್ಲಿ ಭತ್ತ ಹಾಕಿ, ಅದರ ಸುತ್ತ ದೀಪ ಇಟ್ಟು, ಸುತ್ತ ವಿವಿಧ ರೀತಿಯ ಹೂಗಳನ್ನು ಹಾಕಿ ಗೋವುಗಳಿಗೆ ತುಡರ್(ದೀಪ) ತೋರಿಸುತ್ತಾರೆ. ಗೋವುಗಳ ಹಣೆಗೆ ಕುಂಕುಮ ಇಟ್ಟು ಅವುಗಳಿಗೆ ಭತ್ತ, ನೀರು ದೋಸೆ(ತೆಲ್ಲವು) ತಿನ್ನಲು ಕೊಡುತ್ತಾರೆ. ಇದೇ ರೀತಿಯಲ್ಲಿ ತುಡರ್ (ದೀಪ)ಅನ್ನು ಭತ್ತದ ರಾಶಿ, ತುಳಸಿ ಕಟ್ಟೆ, ಬೇಸಾಯದ ಸಲಕರಣೆಗಳಿಗೆ ತೋರಿಸಿ ಬಳಿಕ ಹಾಲೆ ಮರದ ಕೊಂಬೆಯಲ್ಲಿ ಬಳಿ ಇಟ್ಟು ಬಲಿಯೇಂದ್ರನನ್ನು ಕೂಗಿ ಕರೆಯುತ್ತಾರೆ.

ಅಂಗಡಿ ಪೂಜೆ:
ದೀಪಾವಳಿ ದಿನ ಇಡೀ ಮನೆಯನ್ನು ಸ್ಚಚ್ಛ ಮಾಡುತ್ತಾರೆ. ಅದೇ ರೀತಿ ವ್ಯಾಪಾರಸ್ಥರು ತಮ್ಮ ಅಂಗಡಿ ಕೋಣೆಗಳನ್ನು ಸ್ವಚ್ಛ ಮಾಡುತ್ತಾರೆ. ಹೀಗೆ ಸ್ವಚ್ಛ ಮಾಡಿದ ಅಂಗಡಿಗೆ ದೀಪಗಳ ಅಲಂಕಾರ ಮಾಡುತ್ತಾರೆ. ಹೂಗಳನ್ನು ಹಾಕಿ ಶೃಂಗಾರಗೊಳಿಸುತ್ತಾರೆ. ಹೀಗೆ ಶೃಂಗಾರ ಮಾಡಿದ ಅಂಗಡಿಗಳಲ್ಲಿ ಲಕ್ಷ್ಮೀ ಅಥವಾ ಅವರ ಇಷ್ಟದ ದೇವರ ಫೋಟೋ ಇಟ್ಟು ಪೂಜೆ ಮಾಡುತ್ತಾರೆ. ತುಳುನಾಡಲ್ಲಿ ಅಂಗಡಿ ಪೂಜೆ ಕೂಡ ಬಹಳ ಗೌಜಿ ಗಮ್ಮತ್ತಿನಲ್ಲಿ ನಡೆಯುತ್ತದೆ. ಕೃಷಿಕರು ಹೆಚ್ಚಾಗಿ ಅಂಗಡಿಗಳಲ್ಲಿ ಸಾಮಾಗ್ರಿಗಳನ್ನು ಖರೀದಿಸುವ ಒಂದಿಷ್ಟು ಸಾಲವನ್ನು ಮಾಡಿರುತ್ತಾರೆ. ಹೀಗೆ ಮಾಡಿದ ಸಾಲ ಉಳಿದಿದ್ದರೆ ದೀಪಾವಳಿಗೆ ಅದನ್ನು ಮುಗಿಸಿ ಮುಂದೆ ಹೊಸ ಅಕೌಂಟ್ ಮಾಡುತ್ತಾರೆ.

ಕುಸಾಲಿನ ಆಟಗಳು
ಹಿಂದಿನ ಕಾಲದಲ್ಲಿ ದೀಪಾವಳಿ ಮುಗಿದ ಬಳಿಕ ಬೇಟೆ ಮಾಡುವುದು ಕೂಡ ಇತ್ತು. ಇನ್ನು ಕೆಲವರು ತೆಂಗಿನ ಕಾಯಿ ಕುಟ್ಟುವುದು, ಕೋಳಿ ಅಂಕ ಕೂಡ ಮಾಡುತ್ತಿದ್ದರು. ಆದರೆ ಒಂದು ಗಮನಿಸಬೇಕಾದ ಅಂಶ ಎಂದರೆ ಹಿಂದಿನ ಕಾಲದಲ್ಲಿ ಕೋಳಿ ಅಂಕ, ತೆಂಗಿನ ಕಾಯಿ ಕುಟ್ಟುವುದು, ತೆಪ್ಪಂಗಾಯಿ ಇವೆಲ್ಲ ಕೇವಲ ಜೂಜಿಗಾಗಿ ಮಾತ್ರ ನಡೆಯುತ್ತಿರಲಿಲ್ಲ. ಅಲ್ಲೊಂದು ಸಂಘಟನೆ, ಖುಷಿ, ಸಂಭ್ರಮ ಇತ್ತು. ತುಳುವರು ಎಲ್ಲರೂ ಒಟ್ಟು ಸೇರಿ ಕೋಳಿ ಅಂಕ ಮಾಡುವ ಮೂಲಕ ಸಂಭ್ರಮ ಪಡುತ್ತಿದ್ದರೆ ಅಂಕದಲ್ಲಿ ಸಿಕ್ಕಿದ ಕೋಳಿಯನ್ನು ಮನೆಗೆ ಕೊಂಡೋಗಿ ಪದಾರ್ಥ ಮಾಡಿ, ಕೋಳಿ ರೊಟ್ಟಿ ಸವಿಯುತ್ತಿದ್ದರು. ಆದರೆ ಇಂದು ಕೋಳಿ ಅಂಕಗಳು ಕೂಡ ಕೇವಲ ಜೂಜಿನ ಅಂಕಗಳಾಗಿವೆ. ಕಾನೂನು ಇದನ್ನು ತಪ್ಪು ಎನ್ನುತ್ತಿದೆ ಮತ್ತು ಅದಕ್ಕೆ ಶಿಕ್ಷೆಯನ್ನು ಕೂಡ ಪ್ರಕಟ ಮಾಡಿದೆ. ಏನೇ ಆಗಲಿ ದೀಪಾವಳಿ ಎಂದರೆ ಎಲ್ಲರಿಗೂ ಖುಷಿ, ಸಂಭ್ರಮ. ಈ ಸಂಭ್ರಮ ಹೀಗೆ ಇರಲಿ ಹಬ್ಬಗಳು ನಮ್ಮನ್ನು ಮತ್ತೆ ಬಾಲ್ಯದ ದಿನಗಳಿಗೆ ಕೊಂಡೊಯ್ಯಲಿ ಎಂಬ, ನಮ್ಮ ಸಂಸ್ಕಾರ, ಸಂಸ್ಕೃತಿಯನ್ನು ಉಳಿಸಿ ಬೆಳೆಸಲಿ ಎಂಬ ಆಶಯದೊಂದಿಗೆ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು….

LEAVE A REPLY

Please enter your comment!
Please enter your name here