ಸಹಕಾರ ರತ್ನ ಪ್ರಶಸ್ತಿಗೆ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ಎ.ಸುರೇಶ್ ರೈ ಆಯ್ಕೆ

0

ವಿಟ್ಲ; 25 ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ಎ.ಸುರೇಶ್ ರೈ ಅವರನ್ನು ಸಹಕಾರ ಕ್ಷೇತ್ರದ ಉನ್ನತವಾದ ರಾಜ್ಯಮಟ್ಟದ ಸಹಕಾರ ರತ್ನ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಸೌಹಾರ್ದ ಸಹಕಾರಿಯಲ್ಲಿ ಸಲ್ಲಿಸಿದ ಅನುಪಮ ಸೇವೆಯನ್ನು ಪುರಸ್ಕರಿಸಿ ಇವರನ್ನು ಈ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.


ವಿಜಯಪುರದಲ್ಲಿ ನ.20ರಂದು ನಡೆಯುವ 70ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಪುರಸ್ಕಾರ ಪ್ರದಾನ ಮಾಡಲಾಗುವುದು.
ದಿವ್ಯಜ್ಯೋತಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಏಳೂವರೆ ವರ್ಷ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಸಂಸ್ಥೆಯನ್ನು ಯಶಸ್ವಿ ಸೊಸೈಟಿಯಾಗಿಸುವಲ್ಲಿ ಶ್ರಮಿಸಿದ್ದರು.
2011ರಲ್ಲಿ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಆರಂಭವಾದಾಗ ಅದರ ಸ್ಥಾಪಕಾಧ್ಯಕ್ಷರಾಗಿ, ಈಗಲೂ ಅಧ್ಯಕ್ಷರಾಗಿ ಯಶಸ್ವಿಯಾಗಿ ಸಂಸ್ಥೆಯನ್ನು ಮುನ್ನಡೆಸುತ್ತಿರುವ ಹೆಗ್ಗಳಿಕೆ ಇವರದ್ದು.


ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಮೂಲಕ 6500ಕ್ಕೂ ಹೆಚ್ಚು ಸ್ವಸಹಾಯ ಗುಂಪುಗಳನ್ನು ರಚಿಸಿ, 50,000ಕ್ಕೂ ಅಧಿಕ ಬಡ/ಹಿಂದುಳಿದ ಮಹಿಳೆಯರಿಗೆ ಸಾಲ ಸೌಲಭ್ಯ ಒದಗಿಸಿಕೊಟ್ಟಿದ್ದಾರೆ.
ಸ್ವಸಹಾಯ ಗುಂಪಿನ ಸದಸ್ಯರಿಗೆ ಮರಣ ಸಾಂತ್ವನ ನಿಧಿ ಒದಗಿಸುವ ಮೂಲಕ ಕಷ್ಟದ ಸಮಯದಲ್ಲಿ ಸ್ಪಂದಿಸುವ ಯೋಜನೆ ರೂಪಿಸಿದ್ದಾರೆ.
ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ 250 ಕೋಟಿ ರೂ.ಗೂ ಅಧಿಕ ಮೊತ್ತದ ಠೇವಣಿ ಮತ್ತು ಸಾಲ ಯೋಜನೆಗಳ ಮೂಲಕ ಸಂಘದ ಯಶಸ್ಸಿಗೆ ಪ್ರಯತ್ನಿಸಿದ್ದು ಆರಂಭದಿಂದಲೇ ಶೇ.15 ಡಿವಿಡೆಂಡ್ ನೀಡಲಾಗಿದೆ.
ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯು ಪ್ರಸ್ತುತ 19 ಶಾಖೆಗಳನ್ನು ಹೊಂದಿದ್ದು, ಗ್ರಾಮವಿಕಾಸ ಯೋಜನೆಯಡಿ 350ಕ್ಕೂ ಹೆಚ್ಚು ಉದ್ಯೋಗ ನೀಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿಯ ಸ್ಥಾಪಕಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಸುರೇಶ್ ರೈಗಳು, ಜಿಲ್ಲೆಯ ಸೌಹಾರ್ದ ಸಹಕಾರಿಗಳನ್ನು ಒಗ್ಗೂಡಿಸಲು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ.


ಲಯನ್ಸ್ ಸಂಸ್ಥೆಯಲ್ಲಿ ಸಕ್ರಿಯರಾಗಿರುವ ಇವರು, ಪ್ರಸ್ತುತ ಕ್ಯಾಬಿನೆಟ್ ಮೆಂಬರ್ ಆಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಬಂಟರ ಯಾನೆ ನಾಡವರ ಮಾತೃ ಸಂಘದಲ್ಲೂ ಸಕ್ರಿಯರಾಗಿದ್ದು ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದಾರೆ.
ಪ್ರಸ್ತುತ ಮಕರ ಜ್ಯೋತಿ ಚಿಟ್ಸ್ ಪ್ರೈವೇಟ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕರಾಗಿ , ಜಯಾಂಬಿಕಾ ಚಿಟ್ಸ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕರಾಗಿ, ತರ್ಜನಿ ಇನ್ಸೂರೆನ್ಸ್ ಬ್ರೋಕರೇಜ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕರಾಗಿ, ದಿವ್ಯಜೋತಿ ಎಂಟರ್ಪ್ರೈಸಸ್ ಮಾಲಕರಾಗಿ ಜಿಲ್ಲೆಯ ಯಶಸ್ವಿ ಉದ್ಯಮಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ

ಸಾವಯವ ಸುಸ್ಥಿರ ಕೃಷಿ ಅಭಿಯಾನ
ಇವತ್ತು ನಾವು ಸೇವಿಸುತ್ತಿರುವ ಆಹಾರ ವಿಷಯುಕ್ತವಾಗಿರುವಂಥದ್ದು ಎಂದು ಮನಗಂಡು ಅದನ್ನು ತಡೆಗಟ್ಟಲು ಸಾವಯವ ಕೃಷಿಯೊಂದೇ ಪರಿಹಾರ ಎಂಬುದನ್ನು ಕಂಡುಕೊಂಡ ಸುರೇಶ್ ರೈಯವರು, ದ.ಕ. ಜಿಲ್ಲಾದ್ಯಂತ ಸಾವಯವ ಸುಸ್ಥಿರ ಕೃಷಿ ಅಭಿಯಾನದ ಮೂಲಕ ರೈತರ ತೋಟಗಳಲ್ಲಿ ಸಾವಯವ ಕೃಷಿ ಬಗ್ಗೆ ಮಾಹಿತಿ ನೀಡುತ್ತ 10,000 ರೈತರು ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ಪ್ರೇರಣೆ ಒದಗಿಸಿದ್ದಾರೆ. ಈ ಮೂಲಕ ಕೃಷಿ ತೋಟದಲ್ಲಿ ಸಕಾರಾತ್ಮಕ ಬದಲಾವಣೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಇವೆಲ್ಲದರ ಮಧ್ಯೆ ಕೋವಿಡ್ ಆತಂಕದ ದಿನಗಳಲ್ಲಿ ರಿಕ್ಷಾ ಚಾಲಕರಿಗೆ ಬಡ್ಡಿರಹಿತ ಸಾಲ ಕೊಡುವ ಮೂಲಕ ಆ ವರ್ಗದ ಜನರಿಗೆ ನೆರವಾಗಿದ್ದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.

LEAVE A REPLY

Please enter your comment!
Please enter your name here