” ವೀರ ಪುತ್ರನಿಗಿದೋ ಅಕ್ಷರದ ನಮನ “

0

ಎಂಟೆದೆಯ ಬಂಟನಿವ
ದೇಶಕಾಯುವ ನೆಂಟ
ಭಾರತಾಂಬೆಯ ಮಡಿಲೊಳು
ಚಿರನಿದ್ರೆಗೆ ಜಾರಿರಲು

ದೇಶರಕ್ಷಣೆಯ ಕನಸನ್ನು ಹೊತ್ತವ
ತನ್ನ ಸರ್ವಸ್ವವನ್ನೇ ಧಾರೆ ಎರೆದ ಯೋಧ
ಉಗ್ರರ ಸದೆ ಬಡಿದು ಮಟ್ಟ ಹಾಕಿದ ವೀರ
ತಲುಪಿದ್ದು ಇಂದು ಸಪ್ತ ಸಾಗರದಾಚೆಗಿನ ತೀರ

ಇಡೀ ದೇಶವೇ ಮೌನ ತಾಳಿದೆ
ಕರಾವಳಿ ತುಂಬೆಲ್ಲಾ ಕಗ್ಗತ್ತಲ ಕಾರ್ಮೋಡ ಆವರಿಸಿದೆ
ಕುಸಿದು ಬಿದ್ದಿದೆಯಿಂದು ಬೆಟ್ಟದಂತಹ ಜೀವ
ನೆನೆಯಲಾಗುತ್ತಿಲ್ಲ ನೀ ಅಗಲಿದ ನೋವ

ಅಂದಿನ ಸ್ಕೌಟ್ ರಾಷ್ಟ್ರಪತಿ ಬಿರುದು ಪುರಸ್ಕೃತ
ಈ ದಿನ ತಾಯಿ ಭಾರತಿಗೆ ತಾನು ಅರ್ಪಿತ
ಚಿಗುರೊಡೆದ ಕನಸು, ಬಾಳಿ ಬದುಕಬೇಕಾದ ಕ್ಷಣಗಳು
ಏನಿದು ವಿಧಿಯ ಆಟ ಬಲ್ಲವರಾರಿಲ್ಲಿ ಹೇ ಮನುಜ

ಬಿಕ್ಕಿ ಬಿಕ್ಕಿ ಅಳುತಿಹುದು
ಹೆತ್ತು ಹೊತ್ತು ತುತ್ತು ಮುತ್ತಿಟ್ಟ ಕರುಳು
ಹೋಗಿ ಬರುವೆ ಎಂದು ಹೊರಟ ಕಂದನ
ನಿಂತುಸಿರು ಮರಳಿದಾಗ ಹೇಗೆ ಸ್ವೀಕರಿಸುವುದು ಮನ

ಓ ತಾಯೆ ವರವಕೊಡು ಪ್ರಾಂಜಲ್ ಗಿಂದು
ಮರಳಿ ಮತ್ತಿದೇ ಪುಣ್ಯ ಮಣ್ಣಲ್ಲಿ ಹುಟ್ಟಿ ಬರಲೆಂದು
ಕರೆಯೋಲೆ ಇಲ್ಲದೇ ಕರೆದೊಯ್ಯುವೆ ಕೆಲವರ
ಇದಕ್ಕೆಲ್ಲ ಕಾರಣ ಏನೆಂದು ಕೊಡು ಎಮಗೆ ವಿವರ

ದೀಪ್ತಿ ಅಡ್ಡಂತ್ತಡ್ಕ
ಪತ್ರಿಕೋದ್ಯಮ ವಿದ್ಯಾರ್ಥಿನಿ
ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು

LEAVE A REPLY

Please enter your comment!
Please enter your name here