ಬಂಟಸಿರಿ ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕ ಪ್ರವೀಣ್ ಭಂಡಾರಿ ಬಾವಬೀಡುರವರ ಶ್ರದ್ಧಾಂಜಲಿ ಸಭೆ

0

ಪುತ್ತೂರು: ಬಂಟಸಿರಿ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ಕಳೆದ ಹತ್ತು ವರ್ಷಗಳಿಂದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ, ವಿಜಯಾ ಬ್ಯಾಂಕ್ ನ ನಿವೃತ್ತ ಪ್ರಬಂಧಕ ಹಾಗೂ ಯಕ್ಷಧ್ರುವ ಪಟ್ಲ ಫೌಂಡೇಶನ್ ಇದರ ಗೌರವ ಸಲಹೆಗಾರರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ಅಗಲಿದ ಎಚ್.ಪ್ರವೀಣ್ ಭಂಡಾರಿ ಬಾವಬೀಡುರವರ ಶ್ರದ್ಧಾಂಜಲಿ ಸಭೆಯು ಮಂಗಳೂರಿನ ಡಾ.ಟಿ.ಎಂ.ಪೈ ಕನ್ವೆಂಷನ್ ಸೆಂಟರ್ ನಲ್ಲಿ ನ.26 ರಂದು ಜರಗಿತು.


ಹೇಮಪ್ರಕಾಶ್ ಶೆಟ್ಟಿ ಹರೇಕಳಗುತ್ತು ಕಾರ್ಯಕ್ರಮ ನಿರ್ವಹಿಸಿ ಮಾತನಾಡಿ, ನಮ್ಮನ್ನಗಲಿದ ಪ್ರವೀಣ್ ಭಂಡಾರಿರವರು ಪ್ರೀತಿ ವಾತ್ಸಲ್ಯದ ವ್ಯಕ್ತಿತ್ವವನ್ನು ಹೊಂದಿರುವುದರ ಜೊತೆಗೆ ಹೃದಯ ಶ್ರೀಮಂತಿಕೆಯನ್ನು ಮೈಗೂಡಿಸಿಕೊಂಡಿದ್ದರು. ಅವರು ನಮಗೆ ಸದಾ ಸ್ಪೂರ್ತಿಯ ಸೆಲೆಯಾಗಿ, ಎಲ್ಲರಿಗೂ ಒಳಿತ್ತನ್ನೇ ಬಯಸಿ, ಸದಾ ಕ್ರಿಯಾಶೀಲರಾಗಿ, ಎಲ್ಲರೊಂದಿಗೆ ಪ್ರೀತಿ ವಿಶ್ವಾಸದೊಂದಿಗೆ ಬೆರೆತಿರುತ್ತಿದ್ದರು. ಸಮಾಜ, ವ್ಯಕ್ತಿ, ಕರ್ತವ್ಯಗಳಿಂದ ಸಾಮಾಜಿಕ ಉನ್ನತಿಯನ್ನು ಸಾಧಿಸಿದ ಅನುಕರಣೀಯ ವ್ಯಕ್ತಿಯಾಗಿದ್ದು ಇಂದು ಅವರು ನಮ್ಮನ್ನಗಲಿದ್ದಾರೆ. ಅವರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸುವುದರ ಜೊತೆಗೆ ಅವರ ಕುಟುಂಬಕ್ಕೆ ಅವರ ಅಗಲಿಕೆಯ ನೋವನ್ನು ಸಹಿಸಲು ಭಗವಂತನು ಅನುಗ್ರಹಿಸಲಿ ಎಂಬುದು ನಮ್ಮ ಪ್ರಾರ್ಥನೆಯಾಗಿದೆ ಎಂದರು.


ಈ ಸಂದರ್ಭದಲ್ಲಿ ಅಗಲಿದ ಪ್ರವೀಣ್ ಭಂಡಾರಿರವರ ಪತ್ನಿ ವೇದ ಪ್ರವೀಣ್ ಭಂಡಾರಿ, ಪುತ್ರಿ ಸ್ಮಿತಾ ಅಡಪ, ಅಳಿಯ ಚೇತನ್ ಪ್ರಕಾಶ್ ಅಡಪ, ಸಹೋದರರಾದ ವೇಣುಗೋಪಾಲ್ ಭಂಡಾರಿ, ಜಯಪ್ರಕಾಶ್ ಭಂಡಾರಿ, ಜಗದೀಶ್ ಭಂಡಾರಿ, ಡಾ.ಸತೀಶ್ ಭಂಡಾರಿ, ಸಹೋದರಿ ಸುಜಾತಾ ಕೃಷ್ಣಪ್ರಸಾದ್ ರೈ, ಭಾವ ಡಾ.ಅಶೋಕ್ ಕುಮಾರ್ ರೈ ಸಹಿತ ಕುಟುಂಬಸ್ಥರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.

ಭಾವಚಿತ್ರಕ್ಕೆ ಪುಷ್ಪಾರ್ಚನೆ..
ಈ ಸಂದರ್ಭದಲ್ಲಿ ಆಗಮಿಸಿದ ಗಣ್ಯಾತಿಗಣ್ಯರು ಅಗಲಿದ ಎಚ್.ಪ್ರವೀಣ್ ಭಂಡಾರಿ ಬಾವಬೀಡುರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು.

LEAVE A REPLY

Please enter your comment!
Please enter your name here