ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ-ಅಧ್ಯಕ್ಷ ಗಣೇಶ್ ಉದನಡ್ಕ, ಉಪಾಧ್ಯಕ್ಷರಾಗಿ ಬಾಲಕೃಷ್ಣ ಗೌಡ ಇಡ್ಯಡ್ಕ

0

ಕಾಣಿಯೂರು: ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಗಣೇಶ್ ಉದನಡ್ಕ ಮತ್ತು ಉಪಾಧ್ಯಕ್ಷರಾಗಿ ಬಾಲಕೃಷ್ಣ ಗೌಡ ಇಡ್ಯಡ್ಕ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯು ಸಂಘದ ಪ್ರಧಾನ ಕಚೇರಿ ಕಾಣಿಯೂರಿನಲ್ಲಿ ಡಿ 28ರಂದು ನಡೆಯಿತು. ಚುನಾವಣಾ ರಿಟರ್ನಿಂಗ್ ಅಧಿಕಾರಿಯಾಗಿದ್ದ ಮಂಗಳೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಅಧೀಕ್ಷಕ ಬಿ.ನಾಗೇಂದ್ರರವರು ಚುನಾವಣಾ ಪ್ರಕ್ರಿಯೆ ನಡೆಸಿ, ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಘೋಷಣೆ ಮಾಡಿ, ನೂತನ ನಿರ್ದೇಶಕರುಗಳಿಗೆ ಪ್ರಮಾಣ ಪತ್ರ ವಿತರಿಸಿದರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಅಶೋಕ್ ಗೌಡ ಸಹ ಚುನಾವಣಾಧಿಕಾರಿಯಾಗಿ ಸಹಕರಿಸಿದರು. ಸಿಬ್ಬಂದಿಗಳು ಸಹಕರಿಸಿದರು. ಸಂಘದ ನಿರ್ದೇಶಕರಾದ ಅನಂತಕುಮಾರ್ ಬೈಲಂಗಡಿ, ಪರಮೆಶ್ವರ ಗೌಡ ಅನಿಲ, ಸುಂದರ ಗೌಡ ದೇವಸ್ಯ, ವಿಶ್ವನಾಥ ಕೂಡಿಗೆ, ಲೋಕೇಶ್ ಆತಾಜೆ, ದಿವಾಕರ ಮರಕ್ಕಡ, ರಮೇಶ್ ಉಪ್ಪಡ್ಕ, ವೀಣಾ ಅಂಬುಲ, ಶೀಲಾವತಿ ಮುಗರಂಜ, ರತ್ನಾವತಿ ಮುದುವ ಉಪಸ್ಥಿತರಿದ್ದರು.


ಚುನಾವಣಾ ರಿಟರ್ನಿಂಗ್ ಅಧಿಕಾರಿಯವರಿಗೆ ಸನ್ಮಾನ:
ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯ ಚುನಾವಣಾ ರಿಟರ್ನಿಂಗ್ ಅಧಿಕಾರಿಯಾಗಿ ಯಶಸ್ವಿಯಾಗಿ ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟ ಬಿ.ನಾಗೇಂದ್ರರವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.


ಕಾರ್ಯಕರ್ತರ ನಿರಂತರ ಪರಿಶ್ರಮದಿಂದ ಅಭೂತಪೂರ್ವ ಗೆಲುವು ಸಾಧ್ಯವಾಗಿದೆ – ಭಾಗೀರಥಿ ಮುರುಳ್ಯ: ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಶುಭಹಾರೈಸಿದ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯರವರು, ಸಂಘದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಎಲ್ಲಾ ಅಭ್ಯರ್ಥಿಗಳು ಅಭೂತಪೂರ್ವವಾದ ಜಯವನ್ನು ಕಂಡಿದ್ದು, ಎಂದೂ ಕಂಡರಿಯದ ದೊಡ್ಡ ಅಂತರದ ಗೆಲುವು ಆಗಿದೆ. ಇದು ಕಾರ್ಯಕರ್ತರ ನಿರಂತರ ಪರಿಶ್ರಮದಿಂದ ಸಾಧ್ಯವಾಗಿದೆ. ಸಂಘದ ಅಭಿವೃದ್ಧಿಯಲ್ಲಿ ಎಲ್ಲಾ ನಿರ್ದೇಶಕರು ಅಧ್ಯಕ್ಷ, ಉಪಾಧ್ಯಕ್ಷರ ಜೊತೆ ಕೈಜೋಡಿಸಬೇಕು ಎಂದರು.


ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಈ ಚುನಾವಣೆ ಒಳ್ಳೆಯ ಸಂದೇಶ ನೀಡಿದೆ- ಹರೀಶ್ ಕಂಜಿಪಿಲಿ:
ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಮಾತನಾಡಿ, ಹಲವಾರು ವರ್ಷಗಳಿಂದ ಬಿಜೆಪಿ ಪಕ್ಷದ ಕಾರ್ಯಕರ್ತರು ಇಲ್ಲಿ ಟಾರ್ಗೆಟ್ ಆಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲಾ ಕಾರ್ಯಕರ್ತರು ತಮ್ಮ ತಂತ್ರಗಾರಿಕೆಯನ್ನು ಉಪಯೋಗಿಸಿಕೊಳ್ಳಬೇಕು. ಇಂದು ನಮ್ಮ ಸರಕಾರ ಇಲ್ಲ, ನಾವು ವಿರೋಧ ಪಕ್ಷದಲ್ಲಿದ್ದೇವೆ. ಆದ್ದರಿಂದ ಒಂದು ರೀತಿಯಲ್ಲಿ ಶ್ರೀಕೃಷ್ಣನ ತಂತ್ರಗಾರಿಕೆಯನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಎರಡು ಹೆಜ್ಜೆ ಎದುರು ಇಟ್ಟು, ಎರಡು ಹೆಜ್ಜೆ ಹಿಂದಕ್ಕಿಡಲು ಸಿದ್ಧವಾಗಿರಬೇಕು. ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಇಲ್ಲಿನ ಚುನಾವಣೆ ಒಳ್ಳೆಯ ಸಂದೇಶ ನೀಡಿದೆ ಎಂದರು. ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಶುಭಹಾರೈಸಿ, ಮುಂದಿನ ೫ ವರ್ಷದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಂಘದ ಅಭಿವೃದ್ದಿಗೆ ಕೈಜೋಡಿಸಬೇಕು ಎಂದರು.


ಸಂಘಟನೆಯ ಶಕ್ತಿಯ ಆಧಾರದಲ್ಲಿ ಬಿಜೆಪಿ ಗೆಲುವಾಗದೆ- ರಾಕೇಶ್ ರೈ ಕೆಡೆಂಜಿ:
ಸುಳ್ಯ ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ಮಾತನಾಡಿ, ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಯನ್ನು ಗಟ್ಟಿ ಮಾಡಿಕೊಂಡು, ಒಗ್ಗಟ್ಟಾಗಿ ಕೆಲಸ ಮಾಡಿ, ಪಕ್ಷದ ಬೆಳವಣಿಗೆಯಲ್ಲಿ ತೊಡಗಿಸಿಕೊಳ್ಳಬೇಕು. ಸಂಘಟನೆಯ ಶಕ್ತಿಯ ಆಧಾರದಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಎಲ್ಲಾ ಅಭ್ಯರ್ಥಿಗಳು ಗರಿಷ್ಠ ಅಂತರದಲ್ಲಿ ಗೆಲುವು ಆಗಿದೆ. ಅಲ್ಲದೇ ಇಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಗಳಲ್ಲಿಯೂ ಎಲ್ಲಾ ನಿರ್ದೇಶಕರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದಾದರೆ ಅದು ಸಂಘಟನಾತ್ಮಕ ಶಕ್ತಿಯ ಕಾರಣವಾಗಿದೆ ಎಂದರು. ಸಂಘದ ನಿಕಟಪೂರ್ವ ಅಧ್ಯಕ್ಷ ಆನಂದ ಗೌಡ ಮೇಲ್ಮನೆ ಅವರು ಈ ಬಾರಿಯ ಚುನಾವಣೆಯಲ್ಲಿ ಸ್ಪಽಸದೇ ಬೇರೆಯವರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಸಂಘದ ನೂತನ ನಿರ್ದೇಶಕ ಅನಂತಕುಮಾರ್ ಬೈಲಂಗಡಿಯವರಿಗೆ ಉಪಾಧ್ಯಕ್ಷರಾಗಿ ಆಯ್ಕೆಯಾಗಲು ಅವಕಾಶವಿದ್ದರೂ ಅವರು ಹಿರಿಯರಿಗೆ ಅವಕಾಶಮಾಡಿಕೊಟ್ಟದ್ದು ಅವರ ಹಿರಿಮೆಯನ್ನು ಹೆಚ್ಚಿಸಿದೆ ಎಂದರು.


ಸಂಘದ ಅಭಿವೃದ್ಧಿಯಲ್ಲಿ ಎಲ್ಲರ ಸಹಕಾರ ಅಗತ್ಯ- ಗಣೇಶ್ ಉದನಡ್ಕ:
ನೂತನ ಅಧ್ಯಕ್ಷ ಗಣೇಶ್ ಉದನಡ್ಕ ಮಾತನಾಡಿ, ಪಕ್ಷದ ಎಲ್ಲಾ ಹಿರಿಯರ ಮಾರ್ಗದರ್ಶನದಲ್ಲಿ ಅಭೂತ ಪೂರ್ವ ಗೆಲುವು ಆಗಿದೆ. ಯಾವುದೇ ಫಲಾಪೇಕ್ಷೆಯಿಲ್ಲದೆ ಪಕ್ಷದ ಹಿರಿಯ, ಕಿರಿಯ ಕಾರ್ಯಕರ್ತರು ನಿರಂತರ ದುಡಿದ ಫಲವಾಗಿ ಗರಿಷ್ಠ ಅಂತರದಲ್ಲಿ ಗೆಲುವು ಸಾಧ್ಯವಾಗಿದೆ. ಇದು ನಮ್ಮ ಸಂಘಟನಾತ್ಮಕ ಗೆಲುವು ಮತ್ತು ಬಿಜೆಪಿ ಗೆಲುವು ಆಗಿದೆ. ವಿರೋಧಪಡಿಸುವವರಿಗೆ ಈ ಚುನಾವಣೆ ಸ್ಪಷ್ಟ ಸಂದೇಶವನ್ನು ಕೊಟ್ಟಿದೆ ಎಂದರಲ್ಲದೆ ಮುಂದಿನ ದಿನಗಳಲ್ಲಿ ಸಂಘದ ಅಭಿವೃದ್ಧಿಯಲ್ಲಿ ಎಲ್ಲರ ಸಹಕಾರ ಅಗತ್ಯ ಬೇಕು ಎಂದರು.


ಈ ಸಂದಭದಲ್ಲಿ ಕಾಣಿಯೂರು ಗ್ರಾ.ಪಂ.ಅಧ್ಯಕ್ಷ ವಿಶ್ವನಾಥ ಕೊಪ್ಪ, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿಕಟಪೂರ್ವ ಅಧ್ಯಕ್ಷ ಆನಂದ ಗೌಡ ಮೇಲ್ಮನೆ ಹಾಗೂ ನಿರ್ದೇಶಕರು, ಕಾಣಿಯೂರು ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್, ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದ ನಿಕಟಪೂರ್ವ ಅಧ್ಯಕ್ಷ ಧನಂಜಯ ಕೇನಾಜೆ, ಹಿರಿಯರಾದ ಬೆಳಿಯಪ್ಪ ಗೌಡ ದೇವರತ್ತಿಮಾರು, ಸುಳ್ಯ ಬಿಜೆಪಿ ಮಂಡಲ ಸಮಿತಿ ಸದಸ್ಯ ಶಿವರಾಮ ರೈ ಪಿಜ್ಕಕಳ, ಪುತ್ತೂರು ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ದೇವಯ್ಯ ಖಂಡಿಗ, ಚಾರ್ವಾಕ ಶ್ರಿ ಕಪಿಲೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೊರಗಪ್ಪ ಗೌಡ ಕುಕ್ಕುನಡ್ಕ, ಗ್ರಾ.ಪಂ.ಉಪಾಧ್ಯಕ್ಷೆ ಗಂಗಮ್ಮ ಗುಜ್ಜರ್ಮೆ, ಸದಸ್ಯರಾದ ರಾಮಣ್ಣ ಗೌಡ ಮುಗರಂಜ, ತೇಜಕುಮಾರಿ ಉದ್ಲಡ್ಡ, ಕೀರ್ತಿಕುಮಾರಿ ಅಂಬುಲ, ಪ್ರವೀಣ್‌ಚಂದ್ರ ರೈ ಕುಮೇರು, ದೇವಿಪ್ರಸಾದ್ ದೋಳ್ಪಾಡಿ, ಲೋಕಯ್ಯ ಪರವ ದೋಳ್ಪಾಡಿ, ಲಲಿತಾ ದರ್ಖಾಸು, ಸುಲೋಚನಾ ಮಿಯೋಳ್ಪೆ, ತಾರಾನಾಥ ಇಡ್ಯಡ್ಕ, ಮೀರಾ ಕಳೆಂಜೋಡಿ, ಅಂಬಾಕ್ಷಿ ಕೂರೇಲು, ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸತ್ಯನಾರಾಯಣ ಕಲ್ಲೂರಾಯ, ಉಪಾಧ್ಯಕ್ಷ ಕುಸುಮಾಧರ ಗೌಡ ಇಡ್ಯಡ್ಕ ಹಾಗೂ ನಿರ್ದೇಶಕರು, ದೋಳ್ಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಆನಂದ ಗೌಡ ಬನೇರಿ, ಉಪಾಧ್ಯಕ್ಷ ಪುರಂದರ ಕೂರೇಲು ಹಾಗೂ ನಿರ್ದೇಶಕರು, ಕಾಣಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರುಗಳು, ಕಾಣಿಯೂರು ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಸುಂದರ ಬೆದ್ರಾಜೆ, ಕಾರ್ಯದರ್ಶಿ ಸುರೇಶ್ ಬಂಡಾಜೆ, ಯಶವಂತ ಕೇಪುಳಗುಡ್ಡೆ, ನಾಣಿಲ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ವೀರಪ್ಪ ಗೌಡ ಉದ್ಲಡ್ಡ, ಕಾರ್ಯದರ್ಶಿ ಜನಾರ್ದನ ಕೆಳಗಿನಕೇರಿ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಪಕ್ಷದ ಪ್ರಮುಖರು, ಕಾರ್ಯಕತರು ಅಭಿನಂದನೆಯನ್ನು ಸಲ್ಲಿಸಿದರು. ಬಳಿಕ ಕಾಣಿಯೂರು ಶ್ರೀ ಅಮ್ಮನವರ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here