ಕೋಡಿಂಬಾಡಿ: ಶಾಂತಿನಗರ ನಿವಾಸಿ ಕುಶಾಲಪ್ಪ ಪೂಜಾರಿ ನಿಧನ-ವಿಷ ಸೇವಿಸಿ ಆತ್ಮಹತ್ಯೆ ಶಂಕೆ-ನಗರ ಠಾಣೆಯಲ್ಲಿ ದೂರು ದಾಖಲು

0

ಪುತ್ತೂರು: ಕೋಡಿಂಬಾಡಿ ಗ್ರಾಮದ ಶಾಂತಿನಗರ ದಿ. ಮಾಂಕು ಪೂಜಾರಿಯವರ ಪುತ್ರ ಕುಶಾಲಪ್ಪ ಪೂಜಾರಿ(61ವ) ಅವರು ಜ.16ರಂದು ರಾತ್ರಿ ನಿಧನರಾದ ಘಟನೆಗೆ ಸಂಬಂಧಿಸಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಜ.17ರಂದು ಕೇಸು ದಾಖಲಾಗಿದೆ.

ಘಟನೆಯ ವಿವರ:
ಕೋಡಿಂಬಾಡಿ ಗ್ರಾಮದ ಶಾಂತಿನಗರ ದಿ. ಮಾಂಕು ಪೂಜಾರಿಯವರ ಪುತ್ರ ಕುಶಾಲಪ್ಪ ಪೂಜಾರಿ(61ವ)ರವರು ಜ.16ರಂದು ರಾತ್ರಿ ಮನೆಯಲ್ಲಿ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದರು. ಅವರನ್ನು ಮನೆಯವರು ಮತ್ತು ಸ್ಥಳೀಯರು ರಿಕ್ಷಾದಲ್ಲಿ ಪುತ್ತೂರು ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಕೊಂಡು ಹೋಗಿದ್ದರು. ಪರೀಕ್ಷಿಸಿದ ವೈದ್ಯರು ಆ ವೇಳೆಗಾಗಲೇ ಕುಶಾಲಪ್ಪ ಪೂಜಾರಿ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದರು. ಜ.17ರಂದು ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮೃತರ ಪುತ್ರಿ ನಮಿತಾ ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು ತನ್ನ ತಂದೆ ಜ.16ರಂದು ರಾತ್ರಿ ಮನೆಯಲ್ಲಿ ಕುಸಿದು ಬಿದ್ದಿದ್ದು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅವರು ಮೃತಪಟ್ಟಿದ್ದಾರೆ. ಘಟನೆ ನಡೆದ ಬಳಿಕ ನಮ್ಮ ಮನೆಯಲ್ಲಿ ಬಾಟಲಿಯೊಂದು ಪತ್ತೆಯಾಗಿದ್ದು ಅದರಲ್ಲಿ ವಿಷ ಇರುವುದಾಗಿ ತಿಳಿದು ಬಂದಿದೆ. ಆದ್ದರಿಂದ ತನ್ನ ತಂದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಸಂಶಯ ಇದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇದರೊಂದಿಗೆ ಜ.16ರಂದು ಕುಶಾಲಪ್ಪ ಪೂಜಾರಿಯವರನ್ನು ಪರೀಕ್ಷಿಸಿದ್ದ ವೈದ್ಯರು ಅಮಲು ಪದಾರ್ಥ ಅಥವಾ ವಿಷ ಪದಾರ್ಥ ಸೇವನೆಯಿಂದ ಮೃತಪಟ್ಟಿರುವುದಾಗಿ ವರದಿ ನೀಡಿದ್ದರು. ಕೇಸು ದಾಖಲು ಮಾಡಿಕೊಂಡಿರುವ ನಗರ ಠಾಣಾ ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿ ಸಿಕ್ಕಿದ ನಂತರ ಸಾವಿನ ನಿಖರ ಕಾರಣ ತಿಳಿದು ಬರಲಿದೆ ಎಂದು ತಿಳಿಸಿದ್ದಾರೆ. ಮೃತರು ಕೋಡಿಂಬಾಡಿ ಗ್ರಾಮ ಪಂಚಾಯತ್ ಮಾಜಿ ಸದಸ್ಯೆಯಾಗಿರುವ ಪತ್ನಿ ಯಮುನಾ, ಪುತ್ರಿ ನಮಿತಾ, ಅಳಿಯ ಭಾಸ್ಕರ ಪೂಜಾರಿ ಕಾರ್ನೋಜಿ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here