ವಿಟ್ಲ: ಕರ್ಣಾಟಕ ಬ್ಯಾಂಕ್‌ ದರೋಡೆಗೈದ ಖದೀಮರು

0

ವಿಟ್ಲ: ಬ್ಯಾಂಕಿನ ಕಿಟಕಿಯ ಸರಳುಗಳನ್ನು ತುಂಡರಿಸಿ ಒಳನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಕಳವುಗೈದ ಘಟನೆ ವಿಟ್ಲ ಠಾಣಾ ವ್ಯಾಪ್ತಿಯ ಅಡ್ಯನಡ್ಕದಲ್ಲಿರುವ ಕರ್ಣಾಟಕ ಬ್ಯಾಂಕಿನಲ್ಲಿ ನಡೆದಿದ್ದು, ಫೆ.8ರಂದು ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ.
ಬ್ಯಾಂಕ್‌ನ ಹಿಂಭಾಗ ಪೊದರುಗಳಿಂದ ಆವೃತ್ತವಾಗಿದ್ದು, ಈ ದಾರಿಯಾಗಿ ಬಂದ ಕಳ್ಳರು ಕಿಟಕಿಯ 8 ಸರಳುಗಳನ್ನು ಕಬ್ಬಿಣ ತುಂಡರಿಸುವ ಗರಗಸ ಬಳಸಿ ತುಂಡರಿಸಿ ಬಳಿಕ ಒಳಗೆ ನುಸುಳಿರುವ ಬಗ್ಗೆ ಸುಳಿವು ಪತ್ತೆಯಾಗಿದೆ. ಬಳಿಕ ಕಪಾಟಿನಲ್ಲಿರಿಸಲಾಗಿದ್ದ ನಗದನ್ನು ದೋಚಿದ್ದಾರೆ. ಗ್ರಾಹಕರ ವೈಯಕ್ತಿಕ ಲಾಕರ್‌ಗಳ ಪೈಕಿ ಕೆಲವನ್ನು ತೆರೆಯುವಲ್ಲಿ ತಂಡ ಯಶಸ್ವಿಯಾಗಿದೆ. ಉಳಿದಂತೆ ಅಡವಿರಿಸಿದ ಚಿನ್ನಾಭರಣವಿದ್ದ ಸೇಫ್ ಲಾಕರ್‌ನ ಬಾಗಿಲನ್ನು ಗ್ಯಾಸ್ ಕಟ್ಟರ್ ಬಳಸಿ ತುಂಡರಿಸುವ ಪ್ರಯತ್ನ ನಡೆದಿದೆಯಾದರೂ ಅದು ವಿಫಲವಾಗಿರುವುದರಿಂದ ಕೊಟ್ಯಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಸುರಕ್ಷಿತವಾಗಿದೆ.
ಅಡ್ಯನಡ್ಕ ಪೇಟೆಯಲ್ಲಿ ರಾತ್ರಿ ಸುಮಾರು 11 ಗಂಟೆಯವರೆಗೂ ಜನ ಸಂಚಾರ ಇದ್ದು, ಆ ಸಮಯದ ಬಳಿಕ ಕಳ್ಳರ ತಂಡ ಆಗಮಿಸಿರಬಹುದು. ಫೆ.8ರಂದು ಬೆಳಿಗ್ಗೆ 9.30ರ ಸುಮಾರಿಗೆ ಬ್ಯಾಂಕ್ ಸಿಬ್ಬಂದಿಗಳು ಬ್ಯಾಂಕ್‌ಗೆ ಬಂದ ವೇಳೆ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಅವರು ಕೂಡಲೇ ವಿಟ್ಲ ಠಾಣಾ ಪೊಲೀಸರಿಗೆ ಹಾಗೂ ಬ್ಯಾಂಕ್‌ನ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಅರಿತು ಸ್ಥಳಕ್ಕಾಗಮಿಸಿದ ಪೊಲೀಸರು ಬ್ಯಾಂಕ್ ಆವರಣವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ.
ಬ್ಯಾಂಕ್ ಶಾಖಾ ವ್ಯವಸ್ಥಾಪಕರನ್ನು ಹೊರತು ಪಡಿಸಿ ಉಳಿದವರನ್ನು ಹೊರಗಡೆ ನಿಲ್ಲಿಸಿ ಅಗತ್ಯ ವಿಚಾರಣೆ ನಡೆಸಿದ್ದಾರೆ. ಅಂದಾಜು ಪ್ರಕಾರ ಲಾಕರ್ ಒಳಗಿದ್ದ 17 ಲಕ್ಷ ರೂಪಾಯಿ ನಗದು ಹಾಗೂ ನಾಲ್ಕು ವೈಯಕ್ತಿಕ ಲಾಕರ್‌ಗಳನ್ನು ಕಳ್ಳರು ತೆರೆದು ಅದರಲ್ಲಿದ್ದ ಚಿನ್ನಾಭರಣವನ್ನು ದೋಚುವಲ್ಲಿ ಯಶಸ್ವಿಯಾಗಿದ್ದಾರೆ. ಮಧ್ಯಾಹ್ನ 12.30ಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಆಗಮಿಸಿದೆ. ಚಿನ್ನಾಭರಣ ಅಡವು ಸಾಲ ನೀಡಿದ ಚಿನ್ನ ಭದ್ರವಾಗಿದೆ ಎಂದು ಬ್ಯಾಂಕ್ ನ ಸಿಬ್ಬಂದಿಗಳು ತಿಳಿಸಿದ್ದಾರೆ. ಕಳವಾದ ನಗದು ಮತ್ತು ಚಿನ್ನಾಭರಣದ ನಿಖರ ಮಾಹಿತಿ ಲಭ್ಯವಾಗಿಲ್ಲ.
ಹಳೆಯ ಕಟ್ಟಡದಲ್ಲಿ ಈ ಬ್ಯಾಂಕ್ ಇದ್ದು, ಬ್ಯಾಂಕಿನ ಸುತ್ತಮುತ್ತಲೂ ಕಾಡು-ಪೊದೆಗಂಟಿಗಳು ಬೆಳೆದು ಕಾಡಿನಂತಾಗಿದೆ. ಈ ಜಾಗದ ಮೂಲಕ ಕಳ್ಳರು ಕನ್ನ ಹಾಕಿದ್ದಾರೆ. ಯಾವುದೇ ಮುಂಜಾಗ್ರತೆ ಇಲ್ಲದ ಕಟ್ಟಡದಲ್ಲಿ ಬ್ಯಾಂಕ್ ಕಾರ್ಯ ನಿರ್ವಹಿಸುತ್ತಿದ್ದು, ಅಜಾಗರೂಕತೆಯೇ ಕಳ್ಳತನಕ್ಕೆ ಕಾರಣವಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಽಕ್ಷಕ ಸಿ.ಬಿ. ರಿಷ್ಯಂತ್, ಎ.ಎಸ್.ಪಿ. ರಾಜೇಂದ್ರ, ಡಿವೈಎಸ್ ಪಿ ವಿಜಯ ಪ್ರಸಾದ್, ವಿಟ್ಲ ಠಾಣಾ ಇನ್ಸ್ ಪೆಕ್ಟರ್ ಹೆಚ್.ಈ. ನಾಗರಾಜ್ ರವರು ಆಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಬ್ಯಾಂಕಿನ ಶಾಖಾ ವ್ಯವಸ್ಥಾಪಕ ಪುಣ್ಚಪ್ಪಾಡಿಯ ರಾಮಕೃಷ್ಣ ವಿ.ಯು.ರವರು ನೀಡಿದ ದೂರಿನಂತೆ ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶ್ವಾನದಳ, ಬೆರಳಚ್ಚು ತಜ್ಞರಿಂದ ಪರಿಶೀಲನೆ: ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಜಾಗೂ ಎ-.ಎಸ್.ಎಲ್. ಅಽಕಾರಿಗಳ ತಂಡವನ್ನು ಕರೆಸಿ ಪರಿಶೀಲನೆ ನಡೆಸಿದ್ದಾರೆ. ಶ್ವಾನವು ಬ್ಯಾಂಕ್ ನ ಹಿಂಬದಿಯಲ್ಲಿರುವ ರೈಸ್ ಮಿಲ್ ವರೆಗೆ ತೆರಳಿ ಆ ಬಳಿಕ ಮುಖ್ಯ ರಸ್ತೆಕಡೆ ತೆರಳಿದೆ. ಉಳಿದಂತೆ ಬೆರಳಚ್ಚು ಸಹಿತ ಕೆಲವೊಂದು ಮಾಹಿತಿಗಳನ್ನು ತನಿಖಾ ತಂಡ ಕಲೆ ಹಾಕಿದೆ ಎಂದು ಮಾಹಿತಿ ಲಭಿಸಿದೆ.
ನಾಲ್ಕು ವೈಯ್ಯಕ್ತಿಕ ಲಾಕರ್ ಒಡೆದರು – ಎರಡು ಖಾಲಿಯಾಗಿತ್ತು: ಬ್ಯಾಂಕ್ ನಲ್ಲಿ ಸುಮಾರು ಇಪ್ಪತ್ತು ವೈಯ್ಯಕ್ತಿಕ ಲಾಕರ್ ಇದ್ದು, ಅದರಲ್ಲಿ ನಾಲ್ಕನ್ನು ಕಳ್ಳರು ಒಡೆದಿದ್ದಾರೆ. ಈ ಪೈಕಿ ಎರಡರಲ್ಲಿ ಚಿನ್ನಭರಣ ಇದ್ದು, ಮತ್ತೆರಡು ಖಾಲಿಯಾಗಿತ್ತು. ಉಳಿದ ಲಾಕರ್ ಗಳನ್ನು ಕಳ್ಳರು ಒಡೆಯದೆ ಹಾಗೇ ಬಿಟ್ಟಿದ್ದಾರೆ. ಅಡವಿರಿಸಿದ ಚಿನ್ನಾಭರಣವಿದ್ದ ಲಾಕರ್ ಅನ್ನು ಕಳ್ಳರು ಒಡೆಯುವ ಪ್ರಯತ್ನ ಮಾಡಿದ್ದಾರಾದರೂ ಅದನ್ನು ಒಡೆಯುವಲ್ಲಿ ಕಳ್ಳರ ತಂಡ ವಿಫಲವಾಗಿದೆ ಎಂದು ಅಧಿಕಾರಿ ಗಳು ತಿಳಿಸಿದ್ದಾರೆ.
ಮೊಳಗದ ಅಲಾರಂ…!: ಕಳ್ಳರು ಬ್ಯಾಂಕಿನ ಹಿಂಬಾಗಿಲಿನ ಕಿಟಕಿ ಮುರಿದು ಒಳನುಗ್ಗಿದ್ದು, ಗ್ಯಾಸ್ ಕಟರ್ ಬಳಸಿ ಸೇಫ್ ಲಾಕರ್ ನ ಬಾಗಿಲು ತುಂಡರಿಸಿ ಕೃತ್ಯವೆಸಗಿದ್ದಾರೆ. ಕೃತ್ಯ ನಡೆಸುವ ವೇಳೆ ಬ್ಯಾಂಕಿನ ಸೆಕ್ಯೂರಿಟಿ ಅಲರಾಂ ಸೈರನ್ ಮಾಡದೇ ಇರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಭಾರೀ ಮೌಲ್ಯದ ಚಿನ್ನಾಭರಣಗಳು ವೈಯಕ್ತಿಕ ಲಾಕರ್ ಗಳಲ್ಲಿ ಇತ್ತೆನ್ನಲಾಗಿದ್ದು, ಹಲವು ಮಂದಿ ಗ್ರಾಹಕರು ಬ್ಯಾಂಕ್ ದರೋಡೆ ವಿಚಾರ ಹೊರಬರುತ್ತಿದ್ದಂತೆ ಬ್ಯಾಂಕ್ ಮುಂದೆ ಬರಲಾರಂಭಿಸಿದ್ದಾರೆ. ಆದರೆ ಈ ಕುರಿತಾಗಿ ಯಾವುದೇ ಗ್ರಾಹಕರು ವಿಟ್ಲ ಠಾಣೆಗೆ ಅಧಿಕೃತ ದೂರು ನೀಡಿಲ್ಲ ಎಂದು ವಿಟ್ಲ ಪೊಲೀಸರು ತಿಳಿಸಿದ್ದಾರೆ.
ಹಳೇಯದಾದ ಕಟ್ಟಡ..!: ಲಾಕರ್ ಇರುವ ಕೊಠಡಿಗಳಲ್ಲಿ ಯಾವುದೇ ರೀತಿಯ ಕಿಟಕಿ ಇರುವುದಿಲ್ಲ. ಆದರೆ ಈ ಬ್ಯಾಂಕ್ ನಲ್ಲಿ ಲಾಕರ್ ಇರುವ ಕೊಠಡಿಯ ಪಕ್ಕದಲ್ಲಿ ಕಿಟಕಿ ಇದ್ದು, ಈ ಕಟ್ಟಡ ಬ್ಯಾಂಕ್ ಗೆ ಯೋಗ್ಯವಲ್ಲದ ಕಟ್ಟಡ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಆಂತರಿಕ ಭದ್ರತಾ ವೈಫಲ್ಯವೇ ಘಟನೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here