ಮಾ.2, 3ಕ್ಕೆ ಪುತ್ತೂರು ತಾಲೂಕು ಮಟ್ಟದ ತುಳುವೆರೆ ಮೇಳೊ, ತೆನೆಸ್ ಮೇಳೊ- ಐವರಿಗೆ ಬಿರ್ದ್‌ದ ತುಳುವೆರ್ ಪುತ್ತೂರು ತಾಲೂಕು ಪ್ರಶಸ್ತಿ ಪ್ರದಾನ

0

ತುಳು ಪದ ನಲಿಕೆ, ಗಾನ ನೃತ್ಯ ವೈಭವ, ತಡುಡ ಪದ, ತುಳುವಾಮೃತ, ಕಬಿ ಕೂಟೊ, ತುಳು ಮನರಂಜನೆ, ಯಕ್ಷಗಾನ ತಾಳಮದ್ದಳೆ, ನಾಟಕ ವಿಶೇಷ

ಪುತ್ತೂರು: ತುಳು ಕೂಟೊ ಪುತ್ತೂರು ತಾಲೂಕು ಇದರ ವತಿಯಿಂದ ತುಳುವೆರೆ ಮೇಳೊ-2024 ಮತ್ತು ತೆನೆಸ್ ಮೇಳೊ ಕಾರ್ಯಕ್ರಮ ಮಾ.2 ಮತ್ತು 3ರಂದು ಪುತ್ತೂರು ಮಂಜಲ್ಪಡ್ಪು ಸುದಾನ ವಸತಿಯುತ ಶಾಲೆಯ ಎಡ್ವರ್ಡ್ ಸಭಾಂಗಣದಲ್ಲಿ ಜರುಗಲಿದೆ ಎಂದು ತುಳುವೆರೆ ಮೇಳೊ ಸಮಿತಿ ಇದರ ಗೌರವಾಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ.ವಿರೇಂದ್ರ ಹೆಗ್ಗಡೆಯವರ ಮತ್ತು ಒಡಿಯೂರು ಶ್ರೀ ಗುರುದೇವಾನಂದ ಅವರ ಆಶಿರ್ವಾದ ಪಡೆದು ಕೊಂಡು ಸುದಾನ ವಸತಿಯುತ ಶಾಲೆಯ ಸಂಚಾಲಕ ರೇ ವಿಜಯ ಹಾರ್ವಿನ್ ಅವರ ನಾಯಕತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಮಾ.2ರಂದು ಮೇಳದಲ್ಲಿ ತೆನೆಸ್ ಮೇಳೊ, ತುಳು ಪದ ನಲಿಕೆ, ತುಡರ ಪದ(ಕತ್ತಲ ಹಾಡು) ಜರುಗಲಿದ್ದು, ಮಾ.3ರಂದು ತುಳುವೆರೆ ಮೇಳೊ ಬೆಳಿಗ್ಗೆ ಉದ್ಘಾಟನೆಗೊಳ್ಳಲಿದೆ. ಈ ಸಂದರ್ಭ ಐವರಿಗೆ ಪ್ರಶಸ್ತಿ ಪ್ರದಾನ, ಅಮೃತ ಸೋಮೇಶ್ವರ ಅವರ ನೆನಪು, ಪ್ರಬಂದ ಮಂಡನೆ, ಕವಿ ಕೂಟೊ, ತುಳು ಮನರಂಜನೆ, ಯಕ್ಷಗಾನ ತಾಳಮದ್ದಳೆ, ಬಲೆ ತೆಲಿಪುಕೊ, ತುಳು ಸಿನಿಮದ ಹಾಡುಗಳು, ನಾಟಕ ಮೇಳ ಜರುಗಲಿದೆ ಎಂದವರು ಹೇಳಿದರು.

ತುಳುವೆರೆ ಮೇಳೊ ಇದರ ಕಾರ್ಯಾಧ್ಯಕ್ಷ ಪ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನಸ್ ಅವರು ಮಾತನಾಡಿ ಮಾ.2ರಂದು ಬೆಳಿಗ್ಗೆ ಆಹಾರ ಮೇಳ ಮತ್ತು ವ್ಯಾಪಾರ ಮಳಿಗೆಯ ಉದ್ಘಾಟನೆ ನಡೆಯಲಿದೆ. ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಮನ ಪೈ ಅವರು ಉದ್ಘಾಟಿಸಲಿದ್ದಾರೆ. ಮೂಡಾಯಿ ತೆನೆಸ್ ಅನ್ನು ಡಾ. ಸುರೇಶ್ ಪುತ್ತೂರಾಯ, ಪಡ್ಡಾಯಿ ತೆನೆಸ್ ಅನ್ನು ಹೊಟೇಲ್ ಅಭಿಮಾನ್ ಇದರ ಮಾಲಕ ಅಭಿಜಿತ್ ಶೆಟ್ಟಿ ಉದ್ಘಾಟಿಸಲಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾ ಅಧ್ಯಕ್ಷ ರೂಪೇಶ್ ರೈ ಅಲಿಮಾರ್, ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಿತ್ತಳಿಕೆ ಸೂರ್ಯನಾಥ ಆಳ್ವ, ಜನ್ಮ ಫೌಂಡೇಶನ್ ಇದರ ಅಧ್ಯಕ್ಷ ಡಾ. ಹರ್ಷಕುಮಾರ್ ರೈ ಮಾಡಾವು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಸಂದರ್ಭ ಮಧ್ಯಾಹ್ನ ಸಸ್ಯಹಾರಿ ಮತ್ತು ಮಾಂಸಹಾರಿ ಆಹಾರದ ವ್ಯವಸ್ಥೆಯಿದೆ.

ಸಾಂಸ್ಕೃತಿಕ ಕಾರ್ಯಕ್ರಮ: ಮಧ್ಯಾಹ್ನ ಗಂಟೆ 3.30ರಿಂದ ಶರಣ್ಯ, ಶ್ರಾವಣ್ಯ ರೈ, ಧನ್ವಿ ರೈ ಪಾಣಾಜೆ, ನವ್ಯ ರೆಂಜಲಾಡಿ ಮತ್ತು ಬಳಗದಿಂದ ತುಳು ಪದ ನಲಿಕೆ, ಗುರುಕುಲ ಕಲಾ ಕೇಂದ್ರ ಪುರುಷರಕಟ್ಟೆ ಇದರ ವತಿಯಿಂದ ಗಾನ ನೃತ್ಯ ವೈಭವ ನಡೆಯಲಿದೆ. ಸಂಜೆ ಗಂಟೆ 7ರಿಂದ ಮಣಿನಾಲ್ಕೂರ ಅವರಿಂದ ತುಡ ಪದ (ಕತ್ತಲ ಹಾಡು) ವಿಶೇಷ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯಗುರು ಸಾಹಿತಿ ನಾರಾಯಣ ಕುಕ್ಕುವಳ್ಳಿ ದೀಪ ಪ್ರಜ್ವಲಿಸಲಿದ್ದಾರೆ. ರೇಡಿಯೋ ಪಾಂಚಜನ್ಯದ ಅಧ್ಯಕ್ಷೆ ಕೃಷ್ಣವೇಣಿ ಮುಳಿಯ ಅಧ್ಯಕ್ಷತೆ ವಹಿಸಲಿದ್ದಾರೆ.

ಮಾ.3ಕ್ಕೆ ತುಳುವೆರೆ ಮೇಳೊ-2024
ಮಾ.೩ರಂದು ತುಳುವೆರೆ ಮೇಳೊ ಕಾರ್ಯಕ್ರಮ ಬೆಳಿಗ್ಗೆ ಗಂಟೆ 9.3೦ರಿಂದ ಆರಂಭಗೊಳ್ಳಲಿದೆ. ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ಮಂಡಳಿ ಪುತ್ತೂರು ಘಟಕದವತಿಯಿಂದ ತುಳು ಪದರಂಗಿತ ನಡೆಯಲಿದ್ದು ಬಳಿಕ ಸಭಾ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಆಶೀರ್ವಚನ ನೀಡಲಿದ್ದಾರೆ. ಕಲಸೆಗೆ ಭತ್ತವನ್ನು ತುಂಬಿಸುವ ಮೂಲಕ ಶಾಸಕ ಅಶೋಕ್ ಕುಮಾರ್ ರೈ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ತುಳುವೆರೆ ಮೇಳೊ ಇದರ ಅಧ್ಯಕ್ಷ ರೇ ವಿಜಯ ಹಾರ್ವಿನ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಅಖಿಲ ಭಾರತ ತುಳು ಒಕ್ಕೂಟ ಮಂಗಳೂರು ಇದರ ಅಧ್ಯಕ್ಷ ಎ.ಸಿ.ಭಂಡಾರಿ, ಅಖಿಲ ಭಾರತ ಪೆಟ್ರೋಲಿಯಂ ವಿತರಕರ ಸಂಘದ ಕಾರ್ಯದರ್ಶಿ ಕೆ.ವಿಶ್ವಾಸ್ ಶೆಣೈ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ, ಮಾಜಿ ಶಾಸಕ ಸಂಜೀವ ಮಠಂದೂರು, ಪುತ್ತೂರು ಸಿಟಿ ಆಸ್ಪತ್ರೆಯ ಅಡಳಿತ ವೈದ್ಯಾಧಿಕಾರಿ ಡಾ. ಭಾಸ್ಕರ್ ಎಸ್, ರೋಟರಿ ವಲಯ 5ರ ಅಸಿಸ್ಟೆಂಟ್ ಗವರ್ನರ್ ಪುರಂದರ ರೈ ಮಿತ್ರಂಪಾಡಿ, ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಕೋಟಿ ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ನಗರಭೆ ಮಾಜಿ ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಆರ್ಯಾಪು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಹೆಚ್.ಮಹಮ್ಮದ್ ಆಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದ ಅವರು ಇದೇ ಸಂದರ್ಭ ತುಳುವೆರೆ ಮೇಳದಲ್ಲಿ ಐವರು ಸಾಧಕರಿಗೆ ಬಿರ್ದ್‌ದ ತುಳುವೆರ್ ಪ್ರಶಸ್ತಿ ಪ್ರದಾನ ಮಾಡಲಾಗುವುದು. ವಿಜಯ ಕುಮಾರ್ ಹೆಬ್ಬಾರಬೈಲು, ಯೂಸೂಪ್ ಮಠ, ಕೊಳ್ತಿಗೆ ನಾರಾಯಣ ಗೌಡ, ಯಮುನಾ ಪೂಜಾರಿ, ಗುಬ್ಬಿ ಕೆಮ್ಮಾರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

ತುಳುವಾಮೃತ:
ಮಧ್ಯಾಹ್ನ ಗಂಟೆ 12ಕ್ಕೆ ಅಮೃತ ಸೋಮೇಶ್ವರ ಅವರ ನೆನಪು ‘ತುಳುವಾಮೃತ’ ಕಾರ್ಯಕ್ರಮ ನಡೆಯಲಿದೆ. ತುಳುಕೂಟೊ ಇದರ ಮಾಜಿ ಅಧ್ಯಕ್ಷ ಕುಂಬ್ರ ದುರ್ಗಾಪ್ರಸಾದ್ ರೈ, ಸುದ್ದಿ ಬಿಡುಗಡೆ ಪತ್ರಿಕೆಯ ಆಡಳಿತ ವ್ಯವಸ್ಥಾಪಕ ನಿರ್ದೇಶಕ ಡಾ.ಯು.ಪಿ.ಶಿವಾನಂದ, ವಿಶ್ರಾಂಶ ಪ್ರಾಂಶುಪಾಲ ಝೇವಿಯರ್ ಡಿ’ಸೋಜ, ಬಿ.ವಿ.ಸೂರ್ಯನಾರಾಯಣ ಅವರು ಮಾತನಾಡಲಿದ್ದಾರೆ. ಸಾಹಿತಿ ಪ್ರೊ. ವಿ.ಬಿ.ಅರ್ತಿಕಜೆ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಂದರ್ಭ ಮಹಿಳಾ ಕಾಲೇಜಿನ ಉಪನ್ಯಾಸಕ ನರೇಂದ್ರ ರೈ ದೇರ್ಲ, ರಂಗ ನಿರ್ದೇಶಕ ಐ.ಕೆ.ಬೊಳುವಾರು, ಯಕ್ಷಗಾನ ಕಲಾವಿದ ಜಬ್ಬರ್ ಸಮೊ ಪ್ರಬಂದ ಮಂಡನೆ ಮಾಡಲಿದ್ದಾರೆ. ಇದಾದ ಬಳಿಕ ಕಬಿ ಕುಟೊ ನಡೆಯಲಿದ್ದು, ನ್ಯಾಯವಾದಿ ಭಾಸ್ಕರ್ ಕೋಡಿಂಬಾಳ ಅಧ್ಯಕ್ಷತೆ ವಹಿಸಲಿದ್ದಾರೆ. ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ದಂಬೆಕ್ಕಾನ ಸದಾಶಿವ ರೈ, ಪುತ್ತೂರು ಸಿಟಿ ಆಸ್ಪತ್ರೆಯ ಡಾ. ಎ.ಪಿ.ಭಟ್, ವಿವೇಕಾನಂದ ಬಿ.ಎಡ್ ಕಾಲೇಜಿನ ಪ್ರಾಂಶುಪಾಲೆ ಡಾ. ಶೋಭಿತಾ ಸತೀಶ್ ರಾವ್ ಮಾತನಾಡಲಿದ್ದಾರೆ. ಸಂಜೆ ಗಂಟೆ 4ರಿಂದ ತುಳು ಮನರಂಜನೆ ನಡೆಯಲಿದ್ದು, ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯೆ ಶ್ರೀಶಾವಸವಿ, ರೋಟರಿ ವಲಯ 4ರ ಸಹಾಯಕ ಗವರ್ನರ್ ರತ್ನಾಕರ ರೈ ಕೆದಂಬಾಡಿಗುತ್ತು, ತುಳು ಅಪ್ಪೆಕೂಟೊ ಇದರ ಅಧ್ಯಕ್ಷೆ ಹರಿಣಾಕ್ಷಿ ಜೆ ಶೆಟ್ಟಿ ಮಾತನಾಡಲಿದ್ದಾರೆ. ಸಂಜೆ ಗಂಟೆ 4 ರಿಂದ ಧೀಶಕ್ತಿ ಮಹಿಳಾ ಯಕ್ಷ ಬಳದಿಂದ ‘ಸಮರ ಸೌಗಂಧಿಕಾ’ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಸಂಜೆ ಗಂಟೆ 5.30ರಿಂದ ಬಲೆ ತಲಿಪುಕೊ ಕಾರ್ಯಕ್ರಮ ನಡೆಯಲಿದೆ. ಗಂಟೆ 6.30ರಿಂದ ಮಿಥುನ್ ರಾಜ್ ವಿದ್ಯಾಪುರ ಮತ್ತು ಚಂದ್ರಶೇಖರ ಹೆಗ್ಡೆ ಬಳಗದಿಂದ ತಳು ಸಿನಿಮಾ ಹಾಡುಗಳ ಪ್ರಸ್ತುತಿ ನಡೆಯಲಿದೆ. ಗಂಟೆ 7 ರಿಂದ ನಾಟಕ ಮೇಳ ನಡೆಯಲಿದೆ. ರೋಶನ್ ರೈ ಬನ್ನೂರು ಅವರು ಅಧ್ಯಕ್ಷತೆ ವಹಿಸಲಿದ್ದು, ನಾಟಕ ನಿರ್ದೇಶಕ ಮತ್ತು ಸಿನಿಮಾ ಕಲಾವಿದ ಸುಂದರ ರೈ ಮಂದಾರ, ಒಕ್ಕಲಿಗ ಯುವ ಗೌಡ ಸೇವಾ ಸಂಘದ ಅಧ್ಯಕ್ಷ ಅಮರನಾಥ ಗೌಡ ಬಪ್ಪಳಿಗೆ ಮಾತನಾಡಲಿದ್ದಾರೆ. ಬಳಿಕ ತುಳು ಹಾಸ್ಯ ನಾಟಕ ‘ನಂಬಕೆ ದಾಯೆಗ್’ ಎಂಬ ತುಳು ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಎಂದು ಪ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನಸ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ತುಳುವೆರೆ ಮೇಳೊ ಸಮಿತಿ ಇದರ ಕಾರ್ಯದರ್ಶಿ ಡಾ| ರಾಜೇಶ್ ಬೆಜ್ಜಂಗಳ, ಜೊತೆ ಕಾರ್ಯದರ್ಶಿ ಉಲ್ಲಾಸ್ ಪೈ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here