ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯಕ್ಕೆ ತೆರಳುವ ರಸ್ತೆ ವಿವಾದ ಶಾಸಕ ಅಶೋಕ್ ಕುಮಾರ್ ರೈ ಮಧ್ಯಸ್ಥಿಕೆಯಲ್ಲಿ ಇತ್ತೀಚೆಗೆ ಬಗೆ ಹರಿದಿದೆ. ಹನ್ನೆರಡು ವರ್ಷಗಳಿಂದ ಇತ್ಯರ್ಥವಾಗದೆ ಉಳಿದಿದ್ದ ಈ ವಿವಾದವನ್ನು ಬಗೆಹರಿಸಿ, ಶಾಲಾವಿದ್ಯಾರ್ಥಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟ ಶಾಸಕರ ನಡೆ ಅನೇಕ ಹೆತ್ತವರ ಅಭಿನಂದನೆಗೆ ಕಾರಣವಾಗಿದೆ.
![](https://puttur.suddinews.com/wp-content/uploads/2024/04/Ashok-Kumar-Rai-1.jpg)
ಬಪ್ಪಳಿಗೆಯ ಅಂಬಿಕಾ ವಿದ್ಯಾಲಯಕ್ಕೆ ತೆರಳುವ ರಸ್ತೆ ಕಿರಿದಾಗಿ ವಿದ್ಯಾರ್ಥಿಗಳ ಓಡಾಟ, ಹೆತ್ತವರ ವಾಹನ ಹಾಗೂ ಶಾಲಾ ವಾಹನ ಸಂಚಾರಕ್ಕೆ ಸಾಕಷ್ಟು ಕಿರಿಕಿರಿಯಾಗುತ್ತಿತ್ತು. ಖಾಸಗಿ ವ್ಯಕ್ತಿಯೊಬ್ಬರ ಆಕ್ಷೇಪದಿಂದಾಗಿ ರಸ್ತೆಯನ್ನು ವಿಸ್ತಾರಗೊಳಿಸುವುದಕ್ಕೆ ಅಸಾಧ್ಯವಾಗಿತ್ತು. ವಿವಾದವನ್ನು ಬಗೆಹರಿಸಿ ರಸ್ತೆಯನ್ನು ವಿಸ್ತಾರಗೊಳಿಸುವ ಹಿನ್ನೆಲೆಯಲ್ಲಿ ಅಂಬಿಕಾ ಆಡಳಿತ ಮಂಡಳಿ ಹಲವು ವರ್ಷಗಳಿಂದ ಪ್ರಯತ್ನ ನಡೆಸುತ್ತಿತ್ತು. ಆದರೆ ಪ್ರಯತ್ನಗಳು ಫಲಕಾರಿಯಾಗಿರಲಿಲ್ಲ. ಇದೀಗ ಶಾಸಕ ಅಶೋಕ್ ಕುಮಾರ್ ರೈ ಖುದ್ದಾಗಿ ಸ್ಥಳಕ್ಕೆ ತೆರಳಿ ಸಮಸ್ಯೆಯನ್ನು ಬಗೆಹರಿಸಿದ್ದಾರೆ. ಈಗ ರಸ್ತೆ ಸಾಕಷ್ಟು ಅಗಲಗೊಂಡು ಸುಗಮ ಸಂಚಾರಕ್ಕೆ ಅನುಕೂಲವೆನಿಸಿದೆ. ಶಾಸಕರ ಜತೆ ಪುಡಾ ಅಧ್ಯಕ್ಷ ಭಾಸ್ಕರ ಕೋಡಿಂಬಾಳ, ಉದ್ಯಮಿ ಶಿವರಾಮ ಆಳ್ವ, ಎನ್.ಕೆ.ಜಗನ್ನಿವಾಸ ರಾವ್, ಡಾ.ರಾಜಾರಾಮ್, ಮುರಳೀಧರ ರೈ ಮಠಂತಬೆಟ್ಟು, ಪ್ರಸನ್ನ ಶೆಟ್ಟಿ ಸಿಜ್ಲರ್, ಜಯಪ್ರಕಾಶ್ ಬದಿನಾರು ಉಪಸ್ಥಿತರಿದ್ದರು. ರಸ್ತೆ ವಿವಾದವನ್ನು ಬಗೆಹರಿಸಿದ್ದಕ್ಕಾಗಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಅವರು ತಮ್ಮ ಸಂಸ್ಥೆಗಳ ಒಂದೂವರೆ ಸಾವಿರ ವಿದ್ಯಾರ್ಥಿಗಳ ಪರವಾಗಿ ಶಾಸಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.