ಎ.24: ಕಾಂಗ್ರೆಸ್‌ ನಿಂದ ನನ್ನ ಬೂತ್ ನಾನು ಅಭ್ಯರ್ಥಿ ಅಭಿಯಾನ

0

ಕೋಡಿಂಬಾಡಿ ಬೂತ್‌ ನಲ್ಲಿ ಶಾಸಕರೇ ಅಭ್ಯರ್ಥಿ


ಪುತ್ತೂರು: ಎ.24 ರಂದು ಬುಧವಾರ ಬೆಳಿಗ್ಗೆ 10ರಿಂದ ಸಂಜೆ 5 ರತನಕ ಪುತ್ತೂರು ವಿಧಾನಸಭಾ ಕ್ಷೇತ್ರದ ಎಲ್ಲಾ ಬೂತ್‌ಗಳಲ್ಲಿ ನನ್ನ ಬೂತ್ ನಾನು ಅಭ್ಯರ್ಥಿ ಅಭಿಯಾನ ನಡೆಯಲಿದೆ ಎಂದು ಶಾಸಕರಾದ ಅಶೋಕ್ ರೈ ಮಾಹಿತಿ ನೀಡಿದ್ದು , ಶಾಸಕರು ತನ್ನ ಸ್ವಗ್ರಾಮ ಕೋಡಿಂಬಾಡಿ ಬೂತ್‌ನಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.


ಈ ಬಗ್ಗೆ ಮಾಹಿತಿ ನೀಡಿದ ಶಾಸಕ ಅಶೋಕ್ ರೈ ಪ್ರತೀ ಬೂತ್‌ನಲ್ಲಿ ಬೂತ್ ಅಧ್ಯಕ್ಷ, ಬೂತ್ ಪದಾಧಿಕಾರಿಗಳು, ವಲಯಾಧ್ಯಕ್ಷರುಗಳು, ಉಸ್ತುವಾರಿಗಳು, ಸಹ ಉಸ್ತುವಾರಿಗಳು ಸೇರಿದಂತೆ ಪಕ್ಷದ ವಿವಿಧ ಘಟಕಗಳ ಮುಖಂಡರು ಹಾಗೂ ಕಾರ್ಯಕರ್ತರು ಪ್ರತೀ ಬೂತ್‌ನ ಮನೆ ಮನೆಗೆ ಭೇಟಿ ನೀಡಿ ಮತ ಯಾಚನೆ ನಡೆಸಲಿದ್ದಾರೆ. ಅವರವರ ಬೂತ್‌ನಲ್ಲಿ ಅವರೇ ಅಭ್ಯರ್ಥಿಯಾಗಿ ಕೆಲಸ ಮಾಡಲಿದ್ದಾರೆ. ಬೂತ್ ಮಟ್ಟದಲ್ಲಿರುವ ಎಲ್ಲಾ ಮನೆಗಳಿಗೂ ಭೇಟಿ ನೀಡಿ ಮತ ಯಾಚನೆ ನಡೆಸಲಿದ್ದಾರೆ. ಬೂತ್ ಮಟ್ಟದ ಎಲ್ಲಾ ಕಾರ್ಯಕರ್ತರು ಈ ಅಭಿಯಾನದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದ್ದಾರೆ.

ಬೂತ್ ಮಟ್ಟದ ಸಮಸ್ಯೆಯ ವರದಿ
ಬೂತ್‌ಮಟ್ಟದಲ್ಲಿ ಪ್ರತೀ ಮನೆಗೆ ಭೇಟಿ ನೀಡುವ ತಂಡ ಬೂತ್‌ ಮಟ್ಟದಲ್ಲಿರುವ ಸಾರ್ವಜನಿಕ ಸಮಸ್ಯೆಯನ್ನು ವರದಿ ಮಾಡಲಿದ್ದಾರೆ. ಎಲ್ಲಾ ಬೂತ್‌ಗಳ ಸಮಸ್ಯೆಯನ್ನು ಪಟ್ಟಿ ಮಾಡಿ ಅದಕ್ಕೆ ಮುಂದಿನ ದಿನಗಳಲ್ಲಿ ಪರಿಹಾರವನ್ನು ಕಂಡುಕೊಳ್ಳುವ ಅಥವಾ ಇತ್ಯರ್ಥಪಡಿಸುವ ಉದ್ದೇಶದಿಂದ ಸಮಸ್ಯೆಗಳ ಪಟ್ಟಿಯನ್ನು ತಯಾರಿಸಲಾಗುತ್ತದೆ. ಯಾವುದೇ ಪಕ್ಷ ಬೇಧವಿಲ್ಲದೆ, ಬಿಜೆಪಿ ಕಾಂಗ್ರೆಸ್ ಅನ್ನುವ ಬೇಧ ಭಾವವಿಲ್ಲದೆ ಎಲ್ಲರೂ ತಮ್ಮ ವ್ಯಾಪ್ತಿಯ ಸಾರ್ವಜನಿಕ ಸಮಸ್ಯೆಯನ್ನು ಬೂತ್ ಮಟ್ಟದಲ್ಲಿ ಕಾರ್ಯಚರಿಸಲಿರುವ ತಂಡಕ್ಕೆ ಮಾಹಿತಿ ನೀಡಬೇಕು. ರಾಜಕೀಯ ರಹಿತವಾಗಿ ಸಮಸ್ಯೆಗಳ ಪಟ್ಟಿಯನ್ನು ತಯಾರಿಸುವಂತೆಯೂ ಬೂತ್ ಮಟ್ಟದ ಪದಾಧಿಕಾರಿಗಳಿಗೆ ತಿಳಿಸಿದ್ದಾರೆ.

ಸರಕಾರದ ಯೋಜನೆ, ಶಾಸಕರ ಅಭಿವೃದ್ದಿ ಪತ್ರ ಹಂಚಿಕೆ
ಬೂತ್‌ಮಟ್ಟದ ಮನೆಗಳಿಗೆ ಪ್ರಚಾರಕ್ಕೆ ತೆರಳುವ ಕಾರ್ಯಕರ್ತರು ರಾಜ್ಯದ ಕಾಂಗ್ರೆಸ್ ಸರಕಾರದ ಐದು ಗ್ಯಾರಂಟಿ ಯೋಜನೆ, ಲೋಕಸಭಾ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ ಹಾಗೂ ಕಳೆದ 10 ತಿಂಗಳಲ್ಲಿ ಪುತ್ತೂರು ಶಾಸಕರು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ದಿ ವಿಚಾರಗಳನ್ನೊಳಗೊಂಡ ಮನವಿ ಪತ್ರವನ್ನು ಕಾರ್ಯಕರ್ತರು ಮನೆ ಮನೆಗೆ ನೀಡಲಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here