ಉಪ್ಪಿನಂಗಡಿ: ಪ್ರವಾಹ ರಕ್ಷಣಾ ತಂಡ ರಚನೆ

0

ಉಪ್ಪಿನಂಗಡಿ: ಮಳೆಗಾಲದಲ್ಲಿ ಸಂಭಾವ್ಯ ಪ್ರಾಕೃತಿಕ ವಿಕೋಪ ಎದುರಿಸುವ ಸಲುವಾಗಿ ದ.ಕ. ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ದ.ಕ. ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಠರಾದ ಡಾ.ಮುರಲೀ ಮೋಹನ್ ಚೂಂತಾರು ಅವರ ಉಪಸ್ಥಿತಿಯಲ್ಲಿ ಈ ಬಾರಿಯೂ ಉಪ್ಪಿನಂಗಡಿಯಲ್ಲಿ ಗೃಹರಕ್ಷಕದಳ ಪ್ರವಾಹ ರಕ್ಷಣಾ ತಂಡ ರಚಿಸಲಾಯಿತು.


ಕಾರ್ಯಾಚರಣೆಗೆ ಬಳಸುವ ಎರಡು ರಬ್ಬರ್ ದೋಣಿ, ಎರಡು ದೋಣಿ ಇಂಜಿನ್, ಲೈಪ್ ಜಾಕೆಟ್, ಆಸ್ಕ ಲೈಟ್, ಮರಕತ್ತರಿಸುವ ಯಂತ್ರ ಸೇರಿದಂತೆ ಎಲ್ಲಾ ರಕ್ಷಣಾ ಸಲಕರಣೆ ಡಾ. ಮುರಲೀ ಮೋಹನ್ ಚೂಂತಾರು ಅವರು ಪರಿಶೀಲನೆ ನಡೆಸಿದರು. ಗೃಹರಕ್ಷಕದಳ ಪ್ರಭಾರ ಘಟಕಾಧಿಕಾರಿ ದಿನೇಶ್ .ಬಿ ನೇತೃತ್ವದ ಪ್ರವಾಹ ರಕ್ಷಣಾ ತಂಡದಲ್ಲಿ ಎ.ಎಸ್.ಎಲ್. ಜನಾರ್ದನ ಆಚಾರ್ಯ, ಸೋಮನಾಥ್, ವಸಂತ, ಸಮದ್, ಸುದರ್ಶನ್‌ರವರು ಇದ್ದಾರೆ.

ಎಲೆಕ್ಟ್ರಿಷಿಯನ್, ದೋಣಿ ಆಪರೇಟರ್, ಪ್ಲಂಬರ್, ಈಜುಗಾರರು ಸೇರಿದಂತೆ ಒಟ್ಟು 6 ಗೃಹರಕ್ಷಕರು ಈ ತಂಡದಲ್ಲಿ ಇರುತ್ತಾರೆ. ಈ ತಂಡವು ಜೂನ್ ತಿಂಗಳಿನಿಂದ ಸೆಪ್ಟೆಂಬರ್ ತಿಂಗಳ ಅಂತ್ಯದವರೆಗೆ ಉಪ್ಪಿನಂಗಡಿ ದೇವಾಲಯದ ಸ್ಥಾನ ಘಟ್ಟದ ಬಳಿ ದೋಣಿ ಸಹಿತ ರಕ್ಷಣಾ ಸಲಕರಣೆಯೊಂದಿಗೆ ಮೊಕ್ಕಾಂ ಇರಲಿದೆ. ರಸ್ತೆಗಳಲ್ಲಿ ಮರಗಳು ಉರಳಿ ಬಿದ್ದರೆ ತೆರವುಗೊಳಿಸುವುದು ಹಾಗೂ ನೆರೆ ಬಂದ ಸಮಯದಲ್ಲಿ ಸಾರ್ವಜನಿಕ ಆಸ್ತಿ-ಪಾಸ್ತಿ ರಕ್ಷಣೆಗೆ ಮೊದಲ ಆದ್ಯತೆ ಈ ತಂಡ ನೀಡಲಿದೆ.

ಈ ಪ್ರವಾಹ ರಕ್ಷಣಾ ತಂಡವು ಪುತ್ತೂರು ತಹಶೀಲ್ದಾರ್ ಅವರ ಅಧೀನದಲ್ಲಿದ್ದು ಉಪ್ಪಿನಂಗಡಿ ಉಪ ತಹಶೀಲ್ದಾರ್ ಚೆನ್ನಪ್ಪ ಗೌಡರವರು ಈ ಪ್ರವಾಹ ರಕ್ಷಣಾ ತಂಡದ ಉಸ್ತುವಾರಿ ವಹಿಸಿರುತ್ತಾರೆ.
ತಂಡ ರಚನಾ ಸಂದರ್ಭ ಉಪ ತಹಶೀಲ್ದಾರ್ ಚೆನ್ನಪ್ಪ ಗೌಡ, ಉಪ್ಪಿನಂಗಡಿ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಹನುಮಂತಯ್ಯ, ಉಪ್ಪಿನಂಗಡಿ ಪೊಲೀಸ್ ಠಾಣಾ ಸಿಬ್ಬಂದಿ ಹಿತೋಶ್, ಪ್ರವೀಣ್ ಕೆ.ಎಲ್., ಮಾದರಿ ಶಾಲೆಯ ಎಸ್.ಡಿ.ಎಂ.ಸಿ. ಸದಸ್ಯರಾದ ಅಬ್ದುಲ್ ಮಜೀದ್, ಗ್ರಾಮ ಸಹಾಯಕ ಯತೀಶ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here