ಆಲಂಕಾರು: ಉಚಿತ ನೇತ್ರ ಚಿಕಿತ್ಸೆ, ಕನ್ನಡಕ ವಿತರಣೆ

0

ಕಡಬ: ಲಯನ್ಸ್ ಕ್ಲಬ್ ಆಲಂಕಾರು ದುರ್ಗಾಂಬಾ, ಮನವಳಿಕೆಗುತ್ತು ಕುಟುಂಬ ದೈವ ದೇವರುಗಳ ಸೇವಾ ಟ್ರಸ್ಟ್ ಮತ್ತು ಅಶ್ವಿನಿ ಒಪ್ಟಿಕಲ್ಸ್ ಯೋಗ ಕ್ಷೇಮ ಸಂಕೀರ್ಣ ಕಡಬ ಇದರ ಆಶ್ರಯದಲ್ಲಿ ಆನಂದಾಶ್ರಮ ಸೇವಾ ಟ್ರಸ್ಟ್ ಪುತ್ತೂರು, ಜಿಲ್ಲಾ ಅಂಧತ್ವ ನಿವಾರಣ ಸಂಸ್ಥೆ ಮಂಗಳೂರು, ವೆನ್‌ಲಾಕ್ ಆಸ್ಪತ್ರೆ ಮಂಗಳೂರು, ಸಂಚಾರಿ ನೇತ್ರ ಚಿಕಿತ್ಸಾ ಘಟಕ ಮಂಗಳೂರು, ಪ್ರಾಥಮಿಕ ಆರೋಗ್ಯ ಕೇಂದ್ರ ಕೊಲ ಇವರ ಸಹಯೋಗದೊಂದಿಗೆ ಉಚಿತ ನೇತ್ರ ಚಿಕಿತ್ಸಾ ಶಿಬಿರ, ಶಸ್ತ್ರ ಚಿಕಿತ್ಸಾ ಶಿಬಿರ ಮತ್ತು ಅಶ್ವಿನಿ ಒಪ್ಟಿಕಲ್ಸ್ ಕಡಬ ಇದರ ವತಿಯಿಂದ ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮ ಆಲಂಕಾರು ಶ್ರೀ ದುರ್ಗಾಂಬಾ ಪ್ರೌಢಶಾಲೆಯಲ್ಲಿ ನಡೆಯಿತು.


ಆಲಂಕಾರು ಆದಿತ್ಯ ಕ್ಲಿನಿಕ್‌ನ ವೈದ್ಯಾಧಿಕಾರಿ ಡಾ.ಆಕಾಶ್ ಅವರು ಉದ್ಘಾಟಿಸಿ ಮಾತನಾಡಿ, ಪಂಚೇಂದ್ರಿಯಗಳಲ್ಲಿ ಕಣ್ಣು ಅತ್ಯಂತ ಪ್ರಾಮುಖ್ಯತೆಯನ್ನು ಪಡೆದಿದೆ. ಕಣ್ಣಿನ ಸಂರಕ್ಷಣೆ ನಮ್ಮ ಆದ್ಯ ಕರ್ತವ್ಯವಾಗಿದೆ. ನೇತ್ರ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇಂತಹ ಶಿಬಿರಗಳು ವರದಾನವಾಗಿದೆ. ಈ ಶಿಬಿರ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಬೆಳಕಾಗಲಿ ಮತ್ತು ಇಂತಹ ಶಿಬಿರಗಳನ್ನು ಆಯೋಜಿಸಿದ ಲಯನ್ಸ್ ಕ್ಲಬ್ ಮತ್ತು ಎಲ್ಲಾ ಸಂಘ ಸಂಸ್ಥೆಗಳಿಗೆ ಅಭಿನಂದನೆಗಳು ಎಂದರು. ಮುಖ್ಯ ಅತಿಥಿಯಾಗಿದ್ದ ಆಲಂಕಾರು ಶ್ರೀ ದುರ್ಗಾಂಬಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ಮನವಳಿಕೆಗುತ್ತು ಕುಟುಂಬ ದೈವ ದೇವರುಗಳ ಸೇವಾ ಟ್ರಸ್ಟ್‌ನ ಅಧ್ಯಕ್ಷರೂ ಆದ ದಯಾನಂದ ರೈ ಮನವಳಿಕೆಗುತ್ತುರವರು ಮಾತನಾಡಿ, ಲಯನ್ಸ್ ಕ್ಲಬ್ ಆಲಂಕಾರು ದುರ್ಗಾಂಬಾದ ವತಿಯಿಂದ ಈ ಭಾಗದಲ್ಲಿ ಅನೇಕ ವೈದ್ಯಕೀಯ ಶಿಬಿರಗಳನ್ನು ಸಂಘಟಿಸಿ ಅತ್ಯುತ್ತಮ ಸೇವೆ ನೀಡಲಾಗುತ್ತಿದೆ. ಇಂತಹ ಶಿಬಿರಗಳನ್ನು ಏರ್ಪಡಿಸಿ ಸಾರ್ವಜನಿಕರಿಗೆ ಅನುಕೂಲವನ್ನು ಮಾಡಿಕೊಡುವುದರ ಜೊತೆಗೆ ಮಕ್ಕಳಲ್ಲಿ ಸೇವಾ ಮನೋಭಾವವನ್ನು ಮೂಡಿಸುವಲ್ಲಿ ಪ್ರೋತ್ಸಾಹವನ್ನು ನೀಡಿದೆ. ಈ ಶಿಬಿರದಲ್ಲಿ ಫಲಾನುಭವಿಗಳಿಗೆ ಉಚಿತ ಕನ್ನಡಕಗಳನ್ನು ವಿತರಿಸಿದ ಅಶ್ವಿನಿ ಒಪ್ಟಿಕಲ್ಸ್ ಕಡಬ ಇದರ ವೈದ್ಯಾಧಿಕಾರಿಗಳಾದ ಡಾ.ಶಾಂತರಾಜು ಅವರಿಗೆ ಅಭಿನಂದನೆಗಳು ಎಂದರು.


ಅಧ್ಯಕ್ಷತೆಯನ್ನು ವಹಿಸಿದ್ದ ಆಲಂಕಾರು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಪ್ರಶಾಂತ್ ರೈ ಮನವಳಿಕೆಗುತ್ತುರವರು ಮಾತನಾಡಿ, ಲಯನ್ಸ್ ಕ್ಲಬ್‌ನ ಕಾರ್ಯ ಚಟುವಟಿಕೆಗಳ ಬಗ್ಗೆ ಸೇವಾ ಕಾರ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ದುರ್ಗಾಂಬಾ ಸಂಸ್ಥೆಯ ನಿವೃತ್ತ ಮುಖ್ಯಗುರು, ಲಯನ್ಸ್ ಕ್ಲಬ್‌ನ ಕಾರ್ಯದರ್ಶಿ ಶ್ರೀಪತಿ ರಾವ್, ನೇತ್ರಾಧಿಕಾರಿಗಳಾದ ಡಾ.ಶಾಂತರಾಜ್‌ರವರನ್ನು ಸನ್ಮಾನಿಸಲಾಯಿತು. ಡಾ. ಶಾಂತರಾಜ್‌ರವರು ಶಿಬಿರದ ಬಗ್ಗೆ ಮಾಹಿತಿ ನೀಡಿದರು. ಲಯನ್ಸ್ ಕ್ಲಬ್ ಕಾರ್ಯದರ್ಶಿ ಶ್ರೀಪತಿ ರಾವ್‌ರವರು ಸನ್ಮಾನದ ಬಗ್ಗೆ ಕೃತಜ್ಞತೆಗಳನ್ನು ಅರ್ಪಿಸಿದರು.
ಆಲಂಕಾರು ಗ್ರಾ.ಪಂ.ಉಪಾಧ್ಯಕ್ಷ ರವಿ ಪೂಜಾರಿ ಶುಭಹಾರೈಸಿದರು. ವೆನ್‌ಲಾಕ್ ಆಸ್ಪತ್ರೆಯ ನೇತ್ರ ತಜ್ಞೆ ಡಾ.ಪೂರ್ಣಿಮಾ ಉಪಸ್ಥಿತರಿದ್ದರು. ಶಿಬಿರದಲ್ಲಿ ಸುಮಾರು 120 ಜನರು ನೇತ್ರ ತಪಾಸಣೆಯನ್ನು ಮಾಡಿಸಿದರು. 100 ಫಲಾನುಭವಿಗಳಿಗೆ ಉಚಿತ ಕನ್ನಡಕಗಳನ್ನು ಅಶ್ವಿನಿ ಒಪ್ಟಿಕಲ್ಸ್ ಕಡಬ ಇವರಿಗೆ ಶಿಫಾರಸು ಮಾಡಲಾಯಿತು. 5 ಜನ ಫಲಾನುಭವಿಗಳು ಉಚಿತ ಪೊರೆ ಶಸ್ತ್ರ ಚಿಕಿತ್ಸೆಗೆ ಆಯ್ಕೆಗೊಂಡರು.
ಲಯನ್ಸ್ ಕ್ಲಬ್ ಅಧ್ಯಕ್ಷರಾದ ಪ್ರಶಾಂತ್ ರೈ ಮನವಳಿಕೆಗುತ್ತು ಸ್ವಾಗತಿಸಿದರು. ನೆಲ್ಯಾಡಿ ವಲಯ ಬಂಟರ ಸಂಘದ ಮಾಜಿ ಅಧ್ಯಕ್ಷ, ಆಲಂಕಾರು ದುರ್ಗಾಂಬಾ ಲಯನ್ಸ್ ಕ್ಲಬ್ ಪದಾಧಿಕಾರಿ ನಿತ್ಯಾನಂದ ಶೆಟ್ಟಿ ಮನವಳಿಕೆಗುತ್ತು ವಂದಿಸಿದರು. 52ನೇ ನೇತ್ರ ಚಿಕಿತ್ಸಾ ಶಿಬಿರದ ಸಂಘಟಕ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ಗಂಗಾಧರ ಶೆಟ್ಟಿ ಹೊಸಮನೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here