ಪಿಯು ಅತಿಥಿ ಉಪನ್ಯಾಸಕರ ನೇಮಕಾತಿಗೆ ಬಿಎಡ್ ಕಡ್ಡಾಯ-ಶಿಕ್ಷಣ ಇಲಾಖೆಯ ಆದೇಶ ರದ್ದತಿಗೆ ಕ್ರಮಕೈಗೊಳ್ಳಲು ಶಾಸಕರಿಗೆ ಮನವಿ

0

ಪುತ್ತೂರು; ಪಿಯು ಅತಿಥಿ ಉಪನ್ಯಾಸಕರ ನೇಮಕಾತಿ ಮಾಡುವಲ್ಲಿ ಬಿಎಡ್ ಕಡ್ಡಾಯಗೊಳಿಸಿ ಶಿಕ್ಷಣ ಇಲಾಖೆ ಸುತ್ತೋಲೆಯನ್ನು ಹೊರಡಿಸಿದ್ದು ಈ ಸುತ್ತೋಲೆಯನ್ನು ರದ್ದು ಮಾಡುವಂತೆ ಉಪನ್ಯಾಸಕರು ಶಾಸಕ ಅಶೋಕ್‌ ಕುಮಾರ್‌ ರೈಯವರಿಗೆ ಮನವಿ ಮಾಡಿದ್ದಾರೆ.


ಈಗಾಗಲೇ ಪಿಜಿ ಪದವಿಧರರು ಅತಿಥಿ ಉಪನ್ಯಾಸಕರಾಗಿ ಕರ್ತವ್ಯದಲ್ಲಿದ್ದಾರೆ. ಹಲವು ವರ್ಷಗಳಿಂದ ಉಪನ್ಯಾಸವನ್ನು ಮಾಡುತ್ತಿದ್ದಾರೆ. ಇವರು ಮುಂದಿನ ದಿನಗಳಲ್ಲಿ ಉಪನ್ಯಾಸಕರಾಗಿ ಮುಂದುವರೆಯಬೇಕಾದಲ್ಲಿ ಬಿಎಡ್ ಕಡ್ಡಾಯವಾಗಿ ಮಾಡಬೇಕು ಎಂಬುದು ಶಿಕ್ಷಣ ಇಲಾಖೆಯ ಆದೇಶವಾಗಿದೆ. ಈ ಆದೇಶ ಜಾರಿಯಾದಲ್ಲಿ ಹಲವು ಮಂದಿ ಉಪನ್ಯಾಸಕರು ಕೆಲಸವನ್ನು ಕಳೆದುಕೊಳ್ಳಲಿದ್ದೇವೆ. ಅತಿಥಿ ಉಪನ್ಯಾಸಕರನ್ನು ನೇಮಕಾತಿ ವೇಳೆ ಸ್ನಾತಕೋತ್ತರ ಪದವಿಯನ್ನು ಮಾನ್ಯ ಮಾಡಲಾಗಿತ್ತು ಆದರೆ ಇದೀಗ ಹೊಸ ಕಾನೂನು ನಮಗೆ ಸಂಕಷ್ಟವನ್ನು ತಂದೊಡ್ಡಿದೆ ಎಂದು ಶಿಕ್ಷಕರು ಶಾಸಕರಾದ ಅಶೋಕ್ ರೈಯವರಿಗೆ ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ.

ಎರಡು ವರ್ಷದ ಅವಧಿ ಕೊಡಿ
ನಮಗೆ ಉಪನ್ಯಾಸದ ಜೊತೆಗೆ ಬಿಎಡ್ ವ್ಯಾಸಂಗ ಮಾಡಲು ಎರಡು ವರ್ಷದ ಕಾಲವಕಾಶ ನೀಡಬೇಕು. ಎರಡು ವರ್ಷದ ಕಾಲವಕಾಶ ನೀಡಿದ್ದಲ್ಲಿ ನಾವು ಬಿಎಡ್ ವ್ಯಾಸಂಗವನ್ನು ಪೂರ್ಣಗೊಳಿಸುವುದಾಗಿ ಅತಿಥಿ ಉಪನ್ಯಾಸಕರು ಶಾಸಕರಲ್ಲಿ ಮನವಿ ಮಾಡಿದ್ದು ಈ ವಿಚಾರವನ್ನು ಸರಕಾರದ ಗಮನಕ್ಕೆ ತಂದು ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ತಿಳಿಸಬೇಕೆಂದು ಶಿಕ್ಷಕರು ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಉಪನ್ಯಾಸಕರಾದ ತನುಜಾಕ್ಷಿ ಶೆಟ್ಟಿ, ಪ್ರಜ್ಞಾ, ಸಾಧನಾ, ಶೋಭಿತಾ, ಅಕ್ಷತಾ, ನವ್ಯಶ್ರೀ, ಜ್ಯೋತಿ, ಮಮತಾ, ಸಹನಾ, ಆಯಿಷತ್ ಮರ್ವ, ಮಹಮ್ಮದ್ ಜುಬೈರ್, ಪ್ರಸಾದ್, ತುಷಾರ, ಶ್ರುತಿ,ಅಶ್ವಿತಾ, ಉಷಾ, ಚಂಧ್ರಿಕಾ, ಯೋಗೀಶ್ವರಿ, ದಿವ್ಯ ಬೇಬಿ, ಮತ್ತು ದೀಕ್ಷಿತಾ ಉಪಸ್ತಿತರಿದ್ದರು.

ಸಚಿವರ ಜೊತೆ ಮಾತನಾಡಿದ್ದೇನೆ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದಾರೆ; ಅಶೋಕ್ ರೈ
ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡುವಾಗ ಬಿಎಡ್ ಪದವಿ ಕಡ್ಡಾಯಗೊಳಿಸಿ ಶಿಕ್ಷಣ ಇಲಾಖೆಯ ಅಯುಕ್ತರು ಆದೇಶ ಹೊರಡಿಸಿದ್ದಾರೆ. ಇದರಿಂದ ಈಗಾಗಲೇ ಪಿಯು ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಮಾಡುತ್ತಿರುವ ಶಿಕ್ಷಕರಿಗೆ ತೊಂದರೆಯಾಗುತ್ತದೆ ಎಂದು ಈ ಬಗ್ಗೆ ನನ್ನಲ್ಲಿ ಮನವಿ ಮಾಡಿದ್ದಾರೆ. ಶಿಕ್ಷಣ ಇಲಾಖೆಯ ಆದೇಶದಂತೆ ಈಗಾಗಲೇ ಡಬಲ್ ಡಿಗ್ರಿ ಮಾಡಿದವರೂ ಬಿಎಡ್ ಕಡ್ಡಾಯವಾಗಿ ಮಾಡಬೇಕಾಗುತ್ತದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಜೊತೆ ಮಾತುಕತೆ ನಡೆಸಿ ಈಗಾಗಲೇ ಕರ್ತವ್ಯದಲ್ಲಿರುವ ಅತಿಥಿ ಉಪನ್ಯಾಸಕರಿಗೆ ತೊಂದರೆಯಾಗಬಾರದು ಮತ್ತು ಹೊಸ ಆದೇಶದ ಬಗ್ಗೆ ಪರಿಶೀಲನೆ ಮಾಡುವಂತೆಯೂ ಸಚಿವರಿಗೆ ಮನವಿ ಮಾಡಿದ್ದೇನೆ. ಹೊಸ ಆದೇಶದ ಬಗ್ಗೆ ಪರಿಶೀಲನೆ ಮಾಡುತ್ತೇನೆ ಮತ್ತು ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಕ್ರಮಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈಯವರು ತಿಳಿಸಿದ್ದಾರೆ.

ನಿಯೋಜನೆ ರದ್ದುಗೊಳಿಸಲು ಮನವಿ
ಪಿಯು ಅತಿಥಿ ಶಿಕ್ಷಕರಿರುವಲ್ಲಿ ಖಾಯಂ ಶಿಕ್ಷಕರನ್ನು ನಿಯೋಜನೆ ಮಾಡುತ್ತಿದ್ದು ಇದರಿಂದ ಅತಿಥಿ ಉಪನ್ಯಾಸಕರಿಗೆ ತೊಂದರೆಯಾಗುತ್ತಿದೆ ಮಾತ್ರವಲ್ಲದೆ ನಾವು ಕೆಲಸ ಇಲ್ಲದೆ ಮನೆಯಲ್ಲಿ ಇರಬೆಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಅತಿಥಿ ಉಪನ್ಯಾಸಕರು ಇರುವ ಕಾಲೇಜಿಗೆ ಖಾಯಂ ಶಿಕ್ಷಕರನ್ನು ನಿಯೋಜನೆ ಮಾಡಬಾರದು ಎಂದು ಅತಿಥಿ ಉಪನ್ಯಾಸಕರು ಶಾಸಕರಲ್ಲಿ ಮನವಿ ಮಾಡಿದರು. ಈ ವಿಚಾರದ ಬಗ್ಗೆಯೂ ಶಾಸಕರು ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಜೊತೆ ಮಾತನಾಡಿ ಅತಿಥಿ ಉಪನ್ಯಾಸಕರು ಇರುವಲ್ಲಿ ಖಾಯಂ ಶಿಕ್ಷಕರನ್ನು ನಿಯೋಜನೆ ಮಾಡದಂತೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here