![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಜಾನಪದಕ್ಕೂ ನಮ್ಮ ಬದುಕಿಗೂ ನೇರ ಸಂಬಂಧವಿದೆ-ಆಶಾ ಬೆಳ್ಳಾರೆ
ಪುತ್ತೂರು: ಜಾನಪದಕ್ಕೂ ನಮ್ಮ ಬದುಕಿಗೂ ನೇರ ಸಂಬಂಧವಿದೆ. ಒಬ್ಬರಿಂದ ಒಬ್ಬರಿಗೆ ಮೌಖಿಕವಾಗಿ ಇದು ಬಂದಿರುತ್ತದೆ. ಜಾನಪದ ಕ್ರೀಡೆ, ಸಾಹಿತ್ಯ, ತಿಂಡಿ ತಿನಸುಗಳು, ಉಡುಗೆ ತೊಡುಗೆಗಳು, ಆಚರಣೆಗಳೆಲ್ಲವೂ ನಮ್ಮೊಡನೆ ಬೆರೆತುಕೊಂಡಿದ್ದು ನಾವದನ್ನು ಅರಿತು ನಡೆಯಬೇಕು. ಈ ನಿಟ್ಟಿನಲ್ಲಿ ಜಾನಪದ ಪರಿಷತ್ತು ಪುತ್ತೂರು ತಾಲೂಕು ಘಟಕವು ಅತ್ಯಂತ ಆಸಕ್ತಿಯಿಂದ ತೊಡಗಿ ಜಾನಪದ ಕ್ಷೇತ್ರದಲ್ಲಿ ಎಲ್ಲರಿಗೂ ಅಭಿರುಚಿ ಮೂಡಿಸುವಂತಾಗಲಿ ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಆಶಾ ಬೆಳ್ಳಾರೆರವರು ಹೇಳಿದರು.
ಅವರು ಇತ್ತೀಚೆಗೆ ಪುತ್ತೂರಿನ ಅಕ್ಷಯ ಕಾಲೇಜಿನಲ್ಲಿ ನಡೆದ ಕರ್ನಾಟಕ ಜಾನಪದ ಪರಿಷತ್ತು ಪುತ್ತೂರು ತಾಲೂಕು ಘಟಕದ ಪದಪ್ರಧಾನ ಸಮಾರಂಭದ ದಿಕ್ಸೂಚಿ ಭಾಷಣದಲ್ಲಿ ಮಾತನಾಡಿದರು. ಸಮಾರಂಭವನ್ನು ಉದ್ಘಾಟಿಸಿದ ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಕೊಡಿಯಾಲ ಬೈಲ್ ಮಾತನಾಡಿ, ಪುತ್ತೂರು ತಾಲೂಕು ಘಟಕವು ತನ್ನ ಅತ್ಯುತ್ತಮ ಕೆಲಸ ಕಾರ್ಯಗಳ ಮೂಲಕ ರಾಜ್ಯದಾದ್ಯಂತ ಹೆಸರು ಮಾಡಲಿ ಎಂದು ಹೇಳಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಅಕ್ಷಯ ಕಾಲೇಜಿನ ಅಧ್ಯಕ್ಷರಾದ ಜಯಂತ್ ನಡುಬೈಲು, ವಿದುಷಿ ನಯನಾ ವಿ.ರೈ ಕುದ್ಕಾಡಿ, ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ಉಮೇಶ್ ನಾಯಕ್, ಕೋಟಿ ಚೆನ್ನಯ ಕಂಬಳ ಸಮಿತಿ ಅಧ್ಯಕ್ಷರಾದ ಎನ್.ಚಂದ್ರಹಾಸ ಶೆಟ್ಟಿ, ಜಿಲ್ಲಾ ಘಟಕ ಪ್ರಧಾನ ಕಾರ್ಯದರ್ಶಿ ರಾಜೇಶ್ ಸ್ಕೈಲಾರ್ಕ್, ಅಕ್ಷಯ ಕಾಲೇಜಿನ ನಿರ್ದೇಶಕಿ ಕಲಾವತಿ ಜಯಂತ್, ಘಟಕದ ಗೌರವ ಸಲಹೆಗಾರರಾದ ಅಚ್ಚುತ ಮಣಿಯಾಣಿ ಅವರು ಉಪಸ್ಥಿತರಿದ್ದು ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ಘಟಕಾಧ್ಯಕ್ಷರಾದ ಸಂತೋಷ್ ಕುಮಾರ್ ರೈ ಅವರು ವಹಿಸಿಕೊಂಡಿದ್ದು, ಜಿಲ್ಲಾ ಘಟಕಾಧ್ಯಕ್ಷರು ನೂತನ ಘಟಕದ ಪದಾಧಿಕಾರಿಗಳಿಗೆ ಶಾಲು ಹಾಕಿ ಗೌರವಿಸಿ ಪದ ಪ್ರದಾನ ಮಾಡಿದರು. ಕೋಶಾಧಿಕಾರಿ ಗೋಪಾಲಕೃಷ್ಣ ಕೆ. ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿ ಸಂಪತ್ ಕೆ. ಪಕ್ಕಳ ಸ್ವಾಗತಿಸಿ, ಸಂಚಾಲಕರಾದ ದಾಮೋದರ ಪಾಟಾಳಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪಾಧ್ಯಕ್ಷ ಸುಧಾಕರ ಕುಲಾಲ್ ವಂದಿಸಿ, ಸಾಂಸ್ಕೃತಿಕ ಕಾರ್ಯದರ್ಶಿ ಪ್ರಭಾವತಿ ಕೆ. ಕಾರ್ಯಕ್ರಮ ನಿರೂಪಿಸಿದರು.