ಕೆಮ್ಮಾರ: ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ-ಮನೆ ಭಾಗಶಃ ಭಸ್ಮ | ರೂ.35 ಲಕ್ಷಕ್ಕೂ ಅಧಿಕ ಹಾನಿ

0
  • ಕಪಾಟು, ಕಿಟಕಿ, ಗೃಹೋಪಯೋಗಿ ವಸ್ತುಗಳು ಸುಟ್ಟು ಕರಕಲು
  • 2 ಕಡೆ ಗೋಡೆ ಬಿರುಕು
  • ನೆಲದ ಟೈಲ್ಸ್, ಗ್ರಾನೈಟ್ ಸಿಗಿತ
  • ಮನೆಯವರು ಪ್ರಾಣಾಪಾಯದಿಂದ ಪಾರು

ಉಪ್ಪಿನಂಗಡಿ: ಕೊಯಿಲ ಗ್ರಾಮದ ಕೆಮ್ಮಾರ ಶಾಲೆಯ ಬಳಿಯ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡು ಮನೆಯ ಒಳಭಾಗ ಸಂಪೂರ್ಣವಾಗಿ ಸುಟ್ಟುಹೋಗಿದೆ. ಇದರಿಂದ ಮನೆ ಭಾಗಶಃ ಹಾನಿಗೊಂಡಿದ್ದು ಲಕ್ಷಾಂತರ ರೂ.ನಷ್ಟ ಸಂಭವಿಸಿದೆ. ಘಟನೆ ಜೂ.30ರಂದು ಮಧ್ಯಾಹ್ನದ ಹೊತ್ತಿಗೆ ಸಂಭವಿಸಿದ್ದು, ಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕೆಮ್ಮಾರ ಶಾಲಾ ಬಳಿ ನಿವಾಸಿ ದಿ.ಇಬ್ರಾಹಿಂ ಹಾಜಿ ನೀರಾಜೆ ಇವರ ಪುತ್ರ ಅಬ್ದುಲ್ ರಹಿಮಾನ್ ಎಂಬವರ ಮನೆಯಲ್ಲಿ ಈ ಅವಘಡ ಸಂಭವಿಸಿದೆ. ಮನೆಯ ಮಾಸ್ಟರ್ ಬೆಡ್ ರೂಂನಲ್ಲಿ ಬೆಂಕಿ ಉರಿಯ ತೊಡಗಿ ಮನೆಯೊಳಗೆ ಆವರಿಸಿಕೊಂಡು ಮನೆಯೊಳಗೆ ಇದ್ದ ಕಪಾಟು, ಮಂಚ, ಕಿಟಕಿ, ಬಾಗಿಲು, ಫ್ರಿಜ್, ವಾಸಿಂಗ್ ಮೆಷಿನ್ ಸಹಿತ ಬಟ್ಟೆಗಳು, ಆಹಾರ ಸಾಮಾಗ್ರಿಗಳು, ಗೃಹೋಪಯೋಗಿ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಕರಟಿ ಹೋಗಿವೆ. ಮನೆಯ ಎದುರು ಭಾಗ ಹೊರತುಪಡಿಸಿ ಮನೆಯ ಸುತ್ತಲೂ ಬೆಂಕಿಯ ತಾಪಕ್ಕೆ ಗೋಡೆಯ ತುಂಬಾ ಹೊಗೆ ತುಂಬಿಕೊಂಡು ಮನೆ ಕಪ್ಪು ಬಣ್ಣಕ್ಕೆ ಬದಲಾಗಿದೆ. 2 ಕಡೆಯಲ್ಲಿ ಗೋಡೆ ಬಿರುಕು ಬಿಟ್ಟಿದೆ. ಬೆಂಕಿ ಉದ್ಭವಿಸಿದ ಕೋಣೆಯಲ್ಲಿ ಗ್ರಾನೈಟ್ ಮತ್ತು ಅಡುಗೆ ಕೋಣೆಯಲ್ಲಿ ನೆಲಕ್ಕೆ ಹಾಸಲಾದ ಟೈಲ್ಸ್ ಸಿಡಿದುಕೊಂಡಿದೆ. ಒಟ್ಟಾರೆಯಾಗಿ ಮನೆಯ ಸುತ್ತಲಿನ ಗೋಡೆ ಬಿಟ್ಟರೆ ಮನೆ ಸಂಪೂರ್ಣವಾಗಿ ಹಾನಿಗೊಂಡಿದೆ. ಇದರಿಂದಾಗಿ ಸುಮಾರು 35 ಲಕ್ಷ ರೂಪಾಯಿ ನಷ್ಟ ಸಂಭವಿಸಿರುವುದಾಗಿ ಅಬ್ದುಲ್ ರಹಿಮಾನ್ ಅವರು ಕಂದಾಯ ಇಲಾಖೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಮನೆಯವರು ಪ್ರಾಣಾಪಾಯದಿಂದ ಪಾರು:
ವರ್ಷದ ಹಿಂದೆ ಈ ಮನೆ ನಿರ್ಮಾಣ ಮಾಡಲಾಗಿತ್ತು. ಈ ದಿನ 10 ಗಂಟೆಯ ಹೊತ್ತಿಗೆ ಅಬ್ದುಲ್ ರಹಿಮಾನ್ ಮತ್ತು ಅವರ ಪತ್ನಿ ಮಕ್ಕಳು ಪತ್ನಿಯ ತವರು ಮನೆಗೆ ಹೋಗಿದ್ದರು. ಬಳಿಕ 10-30ರ ಹೊತ್ತಿಗೆ ತಂಗಿ ಮತ್ತು ಮಕ್ಕಳು ಕಡಬದ ಮರ್ದಾಳದಲ್ಲಿ ಸಂಬಂಧಿಯ ಮನೆಯಲ್ಲಿ ಕರ‍್ಯಕ್ರಮಕ್ಕೆ ತೆರಳಿದ್ದರು. ಹೀಗಾಗಿ ಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆಯಲ್ಲಿ ಅಬ್ದುಲ್ ರಹಿಮಾನ್ ಅವರ ತಾಯಿ ಸಕೀನ ಮಾತ್ರ ಇದ್ದು, ಮನೆಯೊಳಗೆ ಹೊಗೆ ತುಂಬುವುದನ್ನು ಗಮನಿಸಿ ಮನೆಯಿಂದ ಹೊರ ಬಂದು ಬೊಬ್ಬೆ ಹಾಕಿ ಪಕ್ಕದ ಮನೆಯವರನ್ನು ಕರೆದಿದ್ದು, ಪಕ್ಕದ ಮನೆಯವರು ಮನೆಯ ಸುತ್ತ ಹೊಗೆ ಆವರಿಸಿರುವುದನ್ನು ಗಮನಿಸಿ ಸ್ಥಳೀಯರಿಗೆ ಕರೆ ಮಾಡಿ ಮಾಹಿತಿ ನೀಡಿದರು. ತಕ್ಷಣ ಧಾವಿಸಿ ಬಂದ ಸಾಮಾಜಿಕ ಕರ‍್ಯಕರ್ತೆ ಸಲೀಕತ್, ಅಬೂಬಕ್ಕರ್, ರಿಯಾಝ್, ಜುನೈದ್ ಅವರು ಮನೆಯ ಬಳಿ ಬಂದು ಮನೆಯೊಳಗೆ ಇದ್ದ ವಿದ್ಯುತ್ ಸಂಪರ್ಕದ ಸ್ವಿಚ್ ತೆಗೆದು ಗ್ಯಾಸ್ ಸಂಕರ್ಪ ಕಡಿತಗೊಳಿಸಿ ಅದನ್ನು ಹೊರ ಹಾಕಿ ಸಂಭವನೀಯ ಭಾರೀ ದುರಂತವನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮಧ್ಯೆ ಪುತ್ತೂರುನಿಂದ ಅಗ್ನಿ ಶಾಮಕ ದಳದವರು ಆಗಮಿಸಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದರು.

ಗ್ರಾ.ಪಂ.ಅಧ್ಯಕ್ಷರು, ಕಂದಾಯ ಅಧಿಕಾರಿ ಭೇಟಿ:
ಘಟನಾ ಸ್ಥಳಕ್ಕೆ ಕೊಯಿಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ಸುಭಾಸ್, ಸದಸ್ಯ ನಝೀರ್ ಪೂರಿಂಗ, ಆತೂರು ಬದ್ರಿಯಾ ಮಸೀದಿ ಖತೀಬ್ ಜುನೈದ್ ಜಿಫ್ರಿ ತಂಙಳ್ ಮತ್ತಿತರರು ಭೇಟಿ ನೀಡಿ ಮನೆಯವರಿಗೆ ಸಾಂತ್ವಾನ ಹೇಳಿದರು. ಕೊಯಿಲ ಗ್ರಾಮಕರಣಿಕರಾದ ಶೇಷಾದ್ರಿ ಘಟನೆಯ ಪರಿಶೀಲನೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ.

ಸಿಡಿಲು ಬಡಿತ ಶಬ್ಧ ಕೇಳಿತ್ತು, ಬಳಿಕ ಏನು ನಡೆಯುತ್ತಿದೆ ಎಂದು ತೋಚುತ್ತಿರಲಿಲ್ಲ-ಸಕೀನ
ನಾನು ಮನೆಯ ಒಳಗಡೆ ಕೊನೆಯ ಕೋಣೆಯೊಂದರಲ್ಲಿ ಕೆಲಸದಲ್ಲಿ ನಿರತರಲಾಗಿದ್ದೆ. ಸಣ್ಣಗೆ ಮಳೆ ಬರುತ್ತಿತ್ತು, ಭಾರೀ ಸಿಡಿಲು ಬಡಿದ ಶಬ್ದವೊಂದು ಕೇಳಿಸಿತ್ತು. ಸ್ವಲ್ಪ ಹೊತ್ತಿನ ಬಳಿಕ ಮನೆಯೊಳಗೆ ಹೊಗೆ ತುಂಬತೊಡಗಿತು. ಮನೆಯೊಳಗೆ ಏನು ನಡೆಯುತ್ತಿದೆ ಎಂದು ತೋಚದೆ, ಮನೆಯಿಂದ ಹೊರ ಬರುವುದಕ್ಕೂ ದಾರಿ ಕಾಣದ ರೀತಿಯಲ್ಲಿ ಹೊಗೆ ಆವರಿಸಿಕೊಂಡಿತ್ತು. ಹೇಗೋ ಮನೆಯಿಂದ ಹೊರ ಬಂದೆ. ಅಲ್ಲಾಹು ನನ್ನ ಪ್ರಾಣವನ್ನು ಉಳಿಸಿದ ಎಂದು ಅಬ್ದುಲ್ ರಹಿಮಾನ್ ತಾಯಿ ಸಕೀನ ಅಳುತ್ತಲೇ ಘಟನೆ ವಿವರಿಸಿದರು.

LEAVE A REPLY

Please enter your comment!
Please enter your name here