ಎಡಮಂಗಲ:2 ವರ್ಷಗಳ ಹಿಂದಿನ ಕಳವು ಪ್ರಕರಣ-ಆರೋಪಿಯ ಬಂಧನ-ಸೊತ್ತುಗಳ ಸ್ವಾಧೀನ-ಬೆಳ್ಳಾರೆ ಪೊಲೀಸರ ಕಾರ್ಯಾಚರಣೆ

0

ಕಾಣಿಯೂರು:ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ವರ್ಷಗಳ ಹಿಂದೆ ಮನೆಯೊಂದರಿಂದ ನಡೆದಿದ್ದ ಕಳ್ಳತನ ಪ್ರಕರಣದ ಆರೋಪಿಯನ್ನು ಬಂಧಿಸಿದ ಪೊಲೀಸರು,ಮನೆಯಿಂದ ಆರೋಪಿ ಕಳ್ಳತನ ಮಾಡಿದ್ದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.


2022ರ ಮಾರ್ಚ್ 23 ರಾತ್ರಿ 9 ಗಂಟೆಯಿಂದ ಮಾ.24ರ ಮುಂಜಾನೆ 2.15ರ ಮಧ್ಯೆ ಯಾರೋ ಕಳ್ಳರು,ಕಡಬ ತಾಲೂಕು ಎಡಮಂಗಲ ದಡ್ಡು ಎಂಬಲ್ಲಿರುವ ಜಗದೀಶ ಎಂಬವರ ಮನೆಯಲ್ಲಿ ಕೃತ್ಯ ನಡೆಸಲಾಗಿತ್ತು.ಮುಂಬಾಗಿಲ ಬಿಗವನ್ನು ಕಬ್ಬಿಣದ ಸರಳಿನಿಂದ ಮುರಿದು ಬಾಗಿಲು ತೆರೆದು ಮನೆಯ ಒಳಗೆ ಪ್ರವೇಶಿಸಿ ಅಡುಗೆ ಕೋಣೆಯ ಪಕ್ಕದ ಬೆಡ್ ರೂಂನಲ್ಲಿದ್ದ ಕಬ್ಬಿಣದ ಕಪಾಟಿನ ಬೀಗವನ್ನು ಅಲ್ಲೇ ಇದ್ದ ಕೀಯಿಂದ ತೆರೆದು ಕಪಾಟಿನೊಳಗಿದ್ದ ಸುಮಾರು 20 ಗ್ರಾಮ್ ತೂಕದ ಲಕ್ಷ್ಮೀಪೆಂಡೆಂಟ್, ಕೆಂಪು ಹವಳ ಇರುವ ಚಿನ್ನದ ಕನಕಾಂಬರ ಮಾಲೆ, ಸುಮಾರು 10 ಗ್ರಾಮ್ ತೂಕದ ಚಿನ್ನದ ಚೈನ್, 2 ಗ್ರಾಮ್ ತೂಕದ,ಕೆಂಪು ಹವಳವಿದ್ದ ಚಿನ್ನದ ಬೆಂಡೋಲೆ, 2 ಗ್ರಾಮ್ ತೂಕದ ಬಿಳಿ ಕಲ್ಲು ಇರುವ ಚಿನ್ನದ ಬೆಂಡೋಲೆ, 1 ಗ್ರಾಮ್ ತೂಕದ ಚಿನ್ನದ ಟಿಕ್ಕಿ, 2 ಗ್ರಾಮ್ ತೂಕದ ಚಿನ್ನದ ಉಂಗುರ ಹಾಗೂ 30 ಸಾವಿರ ರೂ.ನಗದು ಸೇರಿದಂತೆ ಒಟ್ಟು ರೂ.1,78,000 ಮೌಲ್ಯದ ಸೊತ್ತು ಕಳವು ಮಾಡಲಾಗಿತ್ತು.ಜಗದೀಶ್ ಅವರು ಈ ಕುರಿತು ನೀಡಿದ್ದ ದೂರಿನ ಮೇರೆಗೆ ಬೆಳ್ಳಾರೆ ಠಾಣೆಯಲ್ಲಿ (ಅ.ಕ್ರಮ.:22/2022)ಕಲಂ 457,380 ಐಪಿಸಿಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.ಪ್ರಕರಣದ ಆರೋಪಿಯಾಗಿರುವ ಬೆಳ್ತಂಗಡಿ ನೆರಿಯಾ ನಿವಾಸಿ ಶರತ್ (24ವ.)ಎಂಬಾತನನ್ನು ಬಂಧಿಸಿ,ಕಳವು ಮಾಡಿದ್ದ ಸೊತ್ತುಗಳನ್ನು ಪತ್ತೆಮಾಡಿ ಸ್ವಾಧೀನಪಡಿಸಿಕೊಳ್ಳಲಾಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.


ಜಿಲ್ಲಾ ಪೊಲೀಸ್ ಅಧಿಕ್ಷಕ ಸಿ.ಬಿ.ರಿಷ್ಯಂತ್,ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ ಜಗದೀಶ್ ಎಂ ಮತ್ತು ರಾಜೇಂದ್ರರವರುಗಳ ಮಾರ್ಗದರ್ಶನದಲ್ಲಿ, ಪುತ್ತೂರಿನ ಪ್ರಭಾರ ಡಿವೈಎಸ್ಪಿ ವಿಜಯಪ್ರಸಾದ್ ಮತ್ತು ಸುಳ್ಯ ವೃತ್ತ ನಿರೀಕ್ಷಕ ಸತ್ಯನಾರಾಯಣ ಕೆ.ರವರ ನೇತೃತ್ವದಲ್ಲಿ ನಡೆದ ಆರೋಪಿ ಪತ್ತೆ ಕಾರ್ಯಾಚರಣೆಯಲ್ಲಿ ಬೆಳ್ಳಾರೆ ಠಾಣಾ ಉಪನಿರೀಕ್ಷಕ ಸಂತೋಷ್ ಬಿ.ಪಿ, ಸಿಬ್ಬಂದಿಗಳಾದ ನವೀನ ಕೆ.,ಚಂದ್ರಶೇಖರ್ ಗೌಡ, ಸಂತೋಷ್ ಜಿ., ಜೀಪು ಚಾಲಕ ಪುರಂದರ ಹಾಗೂ ಬೆರಳುಮುದ್ರೆ ಘಟಕದ ಪ್ರಶಾಂತ್ ಹೊಸಮನಿ ಮತ್ತು ಸಚಿನ್ ಬಿ.ಬಿ.ರವರನ್ನೊಳಗೊಂಡ ವಿಶೇಷ ತನಿಖಾ ತಂಡವು ಕರ್ತವ್ಯ ನಿರ್ವಹಿಸಿತ್ತು.

LEAVE A REPLY

Please enter your comment!
Please enter your name here