ಸೆ.13: ಮಂಗಳೂರು ಕನ್ನಡದಲ್ಲಿ ತುಳುನಾಡ ಸೊಬಗಿನ ’ಕಲ್ಜಿಗ’ ಸಿನೆಮಾ ತೆರೆಗೆ

0

ಪುತ್ತೂರು: ಹಿಮಾನಿ ಫಿಲಂಸ್ ಬ್ಯಾನರ್ ನಡಿಯಲ್ಲಿ ಮಂಗಳೂರು ಕನ್ನಡದಲ್ಲಿ ತುಳುನಾಡಿನ ಸೊಬಗನ್ನು ಪರಿಚಯಿಸಿಕೊಂಡು ನಿರ್ಮಾಣಗೊಂಡಿರುವ ’ಕಲ್ಜಿಗ’ ಕನ್ನಡ ಸಿನೆಮಾ ಸೆ.13ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಪುತ್ತೂರಿನಲ್ಲೂ ಜಿ.ಎಲ್.ಒನ್ ಮಾಲ್‌ನಲ್ಲಿರುವ ಭಾರತ್ ಸಿನೀಮಾಸ್‌ನಲ್ಲಿ ಚಿತ್ರದ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ ಎಂದು ಕಲ್ಜಿಗ ಸಿನೆಮಾ ನಿರ್ದೇಶಕ ಸುಮನ್ ಸುವರ್ಣ ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.


ಆಧುನಿಕ ಶೈಲಿಯೊಂದಿಗೆ ಪ್ರಸ್ತುತ ವಿದ್ಯಾಮಾನದ ಕಥೆಯನ್ನು ತೋರಿಸುವ ಕೌತುಕ ಬೆರೆತ ಸೆಳೆತವೊಂದನ್ನು ಬಚ್ಚಿಟ್ಟುಕೊಂಡಂತಿರುವ ಈ ಚಿತ್ರದ ಟ್ರೈಲರ್ ಎ2 ಫಿಲಂಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿ ಜನರಿಂದ ಅದ್ಭುತ ಪ್ರತಿಕ್ರಿಯೆ ದೊರಕಿದೆ ಎಂದ ಅವರು ಕಲಿಯುಗದಲ್ಲಿ ದೈವ ದೇವರ ಪ್ರಾದಾನ್ಯತೆಯೊಂದಿಗೆ ಭಕ್ತಿಪ್ರದಾನವಾದ ಹಳ್ಳಿ ಸೊಬಗಿನ ಚಿತ್ರವಾಗಿದ್ದು, ಧರ್ಮದ ದಾರಿಯಲ್ಲಿ ಅಧರ್ಮದ ನೆರಳು ಬಿದ್ದ ನಂತರದಲ್ಲಿ ಘಟಿಸುವ ರೋಚಕ ಕಥನ ಕಲ್ಜಿಗದಲ್ಲಿದೆ ಎಂದ ಅವರು ಶರತ್ ಕುಮಾರ್ ಎ.ಕೆ. ಈ ಚಿತ್ರದ ನಿರ್ಮಾಪಕರಾಗಿದ್ದಾರೆ.

ಕಲ್ಜಿಗದ ಕಥೆ ಚಿತ್ರಕಥೆ ಸಂಭಾಷಣೆಯನ್ನು ನಿರ್ದೇಶಕರೇ ಬರೆದಿದ್ದಾರೆ. ಹಂಸಲೇಖ ಈ ಸಿನೆಮಾಕ್ಕೆ ಸಂಗೀತ ನಿರ್ದೇಶನ ನೀಡಿದ್ದಾರೆ. ನಟ ಅರ್ಜುನ್ ಕಾಪಿಕಾಡ್ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ಸುಶ್ಮಿತಾ ಭಟ್ ನಾಯಕಿಯಾಗಿದ್ದಾರೆ. ನಟರಾದ ಗೋಪಿನಾಥ್ ಭಟ್, ಜ್ಯೋತಿಷ್ ಶೆಟ್ಟಿ, ಮಾನಸಿ ಸುಧೀರ್, ವಿಜಯ್ ಶೋಭರಾಜ್ ಪಾವೂರ್, ಶ್ಲಾಘಾ ಸಾಲಿಗ್ರಾಮ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಸಾದ್ ಕೆ. ಶೆಟ್ಟಿಯವರ ಹಿನ್ನೆಲೆ ಸಂಗೀತ ಚಿತ್ರದ ವೈಶಿಷ್ಟ್ಯ ಎಂದರು.

ಸಚಿನ್ ಶೆಟ್ಟಿ ಛಾಯಾಗ್ರಹಣ, ಯಶ್ವಿನ್ ಕೆ. ಶೆಟ್ಟಿಗಾರ್ ಸಂಕಲನ ಈ ಚಿತ್ರಕ್ಕಿದೆ. ಕಾಂತಾರ ಖ್ಯಾತಿಯ ಸನಿಲ್ ಗುರು ಕ್ರಿಯೇಟಿವ್ ಹೆಡ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ರಾಧಾಕೃಷ್ಣ ಮಾಣಿಲ, ಪ್ರೊಡಕ್ಷನ್ ಮ್ಯಾನೇಜರ್ ಆಗಿ ಸಂದೀಪ್ ಶೆಟ್ಟಿ ಇದ್ದಾರೆ ಎಂದರು. ಗಿರ್ಗಿಟ್, ಸರ್ಕಸ್, ಗಮ್ಜಾಲ್ ಮುಂತಾದ ಚಿತ್ರಗಳಲ್ಲಿ ನಿರ್ದೇಶನ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದ ಸುಮನ್ ಸುವರ್ಣ ‘ಕಲ್ಜಿಗ’ದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಮಂಗಳೂರು, ಉಡುಪಿ ಸುತ್ತಮುತ್ತಲ ಪ್ರದೇಶಗಳಲ್ಲಿ ಕಲ್ಜಿಗ ಚಿತ್ರೀಕರಣ ನಡೆಸಲಾಗಿದೆ ಎಂದವರು ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಕಾರ್ಯಕಾರಿ ನಿರ್ಮಾಪಕ ರಾಧಾಕೃಷ್ಣ ಆಳ್ವ, ಚಿತ್ರದ ಹಂಚಿಕೆದಾರ ಬಾಲಕೃಷ್ಣ ರೈ ಕುಕ್ಕಾಡಿ ಉಪಸ್ಥಿತರಿದ್ದರು.

ಹಿನ್ನೆಲೆ ಸಂಗೀತದಲ್ಲಿ ತುಳುನಾಡಿನ ಶೈಲಿ ಬಳಕೆ:
ಚಿತ್ರದ ಹಿನ್ನೆಲೆ ಸಂಗೀತ ನೀಡಿದ ಉಪ್ಪಿನಂಗಡಿ ಮೂಲದ ಪ್ರಸಾದ್ ಕೆ.ಶೆಟ್ಟಿಯವರು ಮಾತನಾಡಿ ಕರಾವಳಿಯ ಸೊಗಡಿನ ಚಿತ್ರವಾದ್ದರಿಂದ ಇಲ್ಲಿನ ಸ್ಥಳೀಯ ಸಂಗೀತವನ್ನೇ ಇದರಲ್ಲಿ ಬಳಸಿದ್ದೇವೆ. ಡೋಲು, ತಾಸೆ, ನಾದಸ್ವರ, ಪಾಡ್ದನಗಳು ಸೇರಿದಂತೆ ಶೇ.70ರಷ್ಟು ತುಳುನಾಡಿಗೆ ಸಂಬಂಧಿಸಿದ ವಿಚಾರ ತೆಗೆದುಕೊಂಡು ತುಳುನಾಡಿ ಸಂಗೀತವನ್ನೇ ಬಳಸಿಕೊಂಡಿದ್ದೇವೆ. ಈ ರೀತಿಯ ಹಿನ್ನೆಲೆ ಸಂಗೀತ ಬೇರೆಲ್ಲೂ ಕಾಣಸಿಗಲು ಸಾಧ್ಯವಿಲ್ಲ ಎಂದರು.

LEAVE A REPLY

Please enter your comment!
Please enter your name here