ಸೆ.15: ಪ್ರಜಾಪ್ರಭುತ್ವ ದಿನಕ್ಕೆ ಮಾನವ ಸರಪಳಿ

0


ಪ್ರಜಾಪ್ರಭುತ್ವದ ಮಹತ್ವ ಅರಿಯುವ ಮಾನವ ಸರಪಳಿಗೆ ಕೈ ಜೋಡಿಸಿ – ಶಾಸಕ ಅಶೋಕ್ ಕುಮಾರ್ ರೈ

ಪುತ್ತೂರು: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯ ಅಂಗವಾಗಿ, ಸೆ. 15ರಂದು ಕರ್ನಾಟಕದ ಉತ್ತರ ಭಾಗದಲ್ಲಿರುವ ಬೀದರ್ ಜಿಲ್ಲೆಯಿಂದ ದಕ್ಷಿಣದ ತುತ್ತತುದಿಯಲ್ಲಿರುವ ಚಾಮರಾಜ ನಗರ ಜಿಲ್ಲೆಯವರೆಗೆ ಅತಿ ದೊಡ್ಡ ಮಾನವ ಸರಪಳಿಯನ್ನು ನಿರ್ಮಿಸುವ ಮೂಲಕ ಹೊಸ ದಾಖಲೆಯನ್ನು ಬರೆಯಲು ಕರ್ನಾಟಕ ಸರ್ಕಾರ ನಿರ್ಧರಿಸಿದ್ದು, ಇದಕ್ಕೆ ಪೂರಕವಾಗಿ ಪುತ್ತೂರಿನಲ್ಲಿ ಕಬಕದಿಂದ ಕನಕಮಜಲು ತನಕ ಮಾನವ ಸರಪಳಿಯು ನಡೆಯಲಿದೆ. ಪ್ರಜಾಪ್ರಭುತ್ವದ ಮಹತ್ವ ಅರಿಯುವ ಮಾನವ ಸರಪಳಿಗೆ ಎಲ್ಲರು ಕೈ ಜೋಡಿಸುವಂತೆ ಶಾಸಕ ಅಶೋಕ್ ಕುಮಾರ್ ರೈ ಮನವಿ ಮಾಡಿದ್ದಾರೆ.


ಪುತ್ತೂರು ತಾ.ಪಂ ಸಭಾಂಗಣದಲ್ಲಿ ಸೆ.14ರಂದು ನಡೆದ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಪೂರ್ವ ಸಿದ್ಧತಾ ಸಭೆ ನಡೆಸಿದರು. ಮಾನವ ಸರಪಳಿಯ ಜವಾಬ್ದಾರಿ ಎಲ್ಲರಿಗೂ ಇದೆ. ಅತ್ಯಂತ ಯಶಸ್ವಿಯಾಗಿ ಈ ಕಾರ್ಯಕ್ರಮ ನಡೆಯಬೇಕು. ಈ ಕಾರ್ಯಕ್ರಮಕ್ಕೆ ಸುಮಾರು 15 ಸಾವಿರ ಮಕ್ಕಳು ಭಾಗವಹಿಸಲಿದ್ದಾರೆ. ಸಾರ್ವಜನಿಕು ಸೇರಿ ಒಟ್ಟಾಗಿ ಸುಮಾರು 30 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು. ಸಹಾಯಕ ಕಮೀಷನರ್ ಜುಬಿನ್ ಮೊಹಪಾತ್ರ ಅವರು ಮಾತನಾಡಿ ಘನಸರಕಾರದ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಎಲ್ಲರು ಸರಕಾರಿ ಅಧಿಕಾರಿಗಳೆಲ್ಲ ಬರಲೇ ಬೇಕು ಎಂದರು. ಪುತ್ತೂರು ಡಿವೈಎಸ್ಪಿ ಅರುಣ್ ನಾಗೇಗೌಡ ಅವರು ಮಾತನಾಡಿ, ಮಾನವ ಸರಪಳಿ ಕಾರ್ಯಕ್ರಮದಲ್ಲಿ ಪೊಲೀಸರಿಂದ ಸೂಕ್ತ ಸಂಚಾರ ನಿಯಂತ್ರಣ ಮಾಡಲಿದ್ದಾರೆ. ಪ್ರತಿ 2೦೦ ಮೀಟರ್‌ಗೆ ಒಬ್ಬೊಬ್ಬ ಸಿಬ್ಬಂದಿ ನೇಮಿಸಲಾಗುವುದು ಎಂದರು. ತಹಶೀಲ್ದಾರ್ ಪುರಂದರ ಹೆಗ್ಡೆ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ, ಕ್ಷೇತ್ರ ಶಿಕ್ಷಾಧಿಕಾರಿ ಲೋಕೇಶ್ ಎಸ್ ಆರ್, ಡಿವೈಎಸ್ಪಿ ಅರುಣ್ ನಾಗೇಗೌಡ, ಪೌರಾಯುಕ್ತ ಮಧು ಎಸ್ ಮನೋಹರ್, ಸಮಾಜ ಕಲ್ಯಾಣ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಕೃಷ್ಣ, ತಾಲೂಕು ಗ್ಯಾರೆಂಟಿ ಯೋಜನೆ ಅನುಷ್ಠಾನ ಉಮಾನಾಥ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಬ್ಯಾಂಡ್‌ಸೆಟ್, ಕೊಂಬು ಕಹಳೆ ವಿಶೇಷ
ಮಾನವ ಸರಪಳಿ ಕಾರ್ಯಕ್ರಮದ ಉದ್ಘಾಟನೆಗೆ ಬ್ಯಾಂಡ್ ಸೆಟ್ ಮತ್ತು ಕೊಂಬು ಕಹಳೆಯ ವಿಶೇಷ ನಾದ ಮೊಳಗಲಿದೆ. ಕಬಕದಿಂದ ಸಂಪ್ಯದ ತನಕ ಮಾನವ ಸರಪಳಿ ಇರುವ ಹಿನ್ನೆಲೆಯಲ್ಲಿ ಕಬಕ ಮತ್ತು ಸಂಪ್ಯದಲ್ಲಿ ಬ್ಯಾಂಡ್ ಸೆಟ್ ಮತ್ತ ಕೊಂಬುಕಹಳೆಯ ಸದ್ದು ಮೊಳಗಲಿದೆ. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವ ಅವರ ತೆರೆದ ಪ್ರಜಾಪ್ರಭುತ್ವದ ಧ್ವಜವನ್ನು ಹೊತ್ತ ವಾಹನ ಮಾನವ ಸರಪಳಿಯ ಉದ್ದಕ್ಕೂ ಸಂಚರಿಸಲಿದೆ.

ಮಾನವ ಸರಪಳಿ ಪಥ ವಿವರ:
ಕಬಕದಿಂದ ಮಾನವ ಸರಪಳಿ ಆರಂಭ, ಕನಕಮಜಲಿನಲ್ಲಿ ಸುಳ್ಯದವರಿಗೆ ಧ್ವಜ ಹಸ್ತಾಂತರದೊಂದಿಗೆ ಕೊನೆಯಾಗಲಿದೆ. ಬೆಳಿಗ್ಗೆ 8 ಗಂಟೆ ಸುಮಾರಿಗೆ ಮಕ್ಕಳನ್ನು ಕಬಕದಲ್ಲಿ ಜೋಡಿಸಿಕೊಂಡು ಸರಿಯಾಗಿ ಗಂಟೆ 9.30ಕ್ಕೆ ಮಾನವ ಸರಪಳಿಯ ಉದ್ಘಾಟನೆಯೊಂದಿಗೆ ಚಾಲನೆ ನೀಡಲಾಗುವುದು. ಬಂಟ್ವಾಳ ತಾಲೂಕಿನಿಂದ ಪುತ್ತೂರಿಗೆ ಧ್ವಜಹಸ್ತಾಂತರ ನಡೆಯಲಿದೆ. ಕಬಕದಿಂದ ಆರಂಭಗೊಂಡ ಮಾನವ ಸರಪಳಿ ಸಂಪ್ಯದ ತನಕ ಪೂರ್ಣಮಟ್ಟದ ಮಾನವ ಸರಪಳಿಯಾಗಿ ಮೂಡಿ ಬರಲಿದೆ. ಇದು ಇತಿಹಾಸದಲ್ಲೇ ಮೊದಲ ಬಾರಿ ದಾಖಲೆಯ ಮಾನವಸರಪಳಿಯಾಗಬೇಕು. ಸಂಪ್ಯದಿಂದ ಕುಂಬ್ರದ ತನಕ ಬೈಕ್ ರ‍್ಯಾಲಿ ನಡೆಯಲಿದೆ. ಕುಂಬ್ರದಿಂದ 1 ಕಿ.ಮೀ ಮಾನವ ಸರಪಳಿ ಬಳಿಕ ಕೌಡಿಚ್ಚಾರ್ ತನಕ ಬೈಕ್ ರ‍್ಯಾಲಿ. ಕೌಡಿಚ್ಚಾರ್‌ನಿಂದ 1 ಕಿ.ಮೀ ಮಾನವ ಸರಪಳಿ, ಅಲ್ಲಿಂದ ಕಾವು ತನಕ ಬೈಕ್ ರ‍್ಯಾಲಿ. ಕಾವು ನಿಂದ 1 ಕಿ.ಮೀ ಮಾನವ ಸರಪಳಿ ಅಲ್ಲಿಂದ ಕನಕಮಜಲು ತನಕ ಬೈಕ್ ರ‍್ಯಾಲಿ ನಡೆಯಲಿದೆ. ಅಲ್ಲಿ ಸುಳ್ಯ ಭಾಗದವರಿಗೆ ಪ್ರಜಾಪ್ರಭುತ್ವದ ವಿಶೇಷ ಧ್ವಜ ಹಸ್ತಾಂತರ ಮಾಡುವ ಮೂಲಕ ಪುತ್ತೂರು ತಾಲೂಕಿನ ಮಾನವ ಸರಪಳಿ ಕೊನೆಯಾಗಲಿದೆ. ಪ್ರತಿ ಜಂಕ್ಷನ್‌ನಲ್ಲಿ ನೊಡೇಲ್ ಅಧಿಕಾರಿಗಳ ಮೂಲಕ ವಿದ್ಯಾರ್ಥಿಗಳು ಸಂವಿಧಾನ ಪೀಟಿಕೆಯನ್ನು ಓದಲಿದ್ದಾರೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here